ಈ ತಿಂಗಳ ಆರಂಭದಲ್ಲಿ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿ, ಬರ್ಬರವಾಗಿ ಕೊಲೆ ಮಾಡಲಾಗಿದ್ದ ಇಬ್ಬರು ಮಹಿಳೆಯರ ಮೃತದೇಹಗಳು ಪತ್ತೆಯಾಗಿ ಮಂಡ್ಯ ಜಿಲ್ಲೆಯಲ್ಲಿ ಆತಂಕ ಉಂಟಾಗಿತ್ತು. 15 ದಿನಗಳಾದರೂ ಪೊಲೀಸರು ಆರೋಪಿಯನ್ನಲ್ಲ, ಕೊಲೆಯಾದ ಮಹಿಳೆಯರು ಯಾರು ಎಂಬುದನ್ನೇ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಬರ್ಬರವಾಗಿ ಕೊಲೆಯಾದ ಅಪರಿಚಿತ ಮಹಿಳೆಯರ ಗುರುತು, ಸುಳಿವು ನೀಡಿದರೆ 1 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಮಂಡ್ಯ ಜಿಲ್ಲೆ ಪೊಲೀಸ್ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದಾರೆ.
ಜೂನ್ 7 ರಂದು ಪಾಂಡವಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೇಬಿ ಗ್ರಾಮದ ಕೆರೆಕೋಡಿ ಕಟ್ಟೆಯ ನಾಲೆಯಲ್ಲಿ ಸುಮಾರು 30 ರಿಮದ 32 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಹೊಟ್ಟೆ ಭಾಗದಿಂದ ಕೆಳಗೆ ಕತ್ತರಿಸಿದ ದೇಹದ ಭಾಗವನ್ನು ಚೀಲದಲ್ಲಿ ಕಟ್ಟಿ ನಾಲೆಗೆ ಎಸೆಯಲಾಗಿತ್ತು. ಎಲ್ಲಿಯೋ ಕೊಲೆ ಮಾಡಿ, ಮೃತದೇಹವನ್ನು ನಾಲೆಗೆ ಎಸೆದಿರುವ ಶಂಕೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!
ಅದೇ ದಿನ ಜೂನ್ 7 ರಂದು ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಅರೆ ಕೆರೆ ಗ್ರಾಮದ ಬಳಿಯ ಚಿಕ್ಕದೇವರಾಜ ನಾಲೆಯಲ್ಲಿ 40 ರಿಂದ 45 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ತೇಲಿ ಬಂದು ರೈತನ ಜಮೀನಿನಲ್ಲಿ ಸಿಕ್ಕಿತ್ತು.
ಈ ಎರಡು ಅರ್ಧ ಮೃತದೇಹಗಳು ಸಿಕ್ಕು 15 ದಿನಗಳಾದರೂ ಇನ್ನೂ ಪೊಲೀಸರಿಗೆ ಆರೋಪಿಗಳ ಸುಳಿವು ಹೋಗಲಿ ಮೃತ ಮಹಿಳೆಯರು ಯಾರು ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸುಳಿವು ನೀಡಿದವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ.
ಮಹಿಳೆಯರ ಗುರುತು, ಹೆಸರು, ವಿಳಾಸ, ಆರೋಪಿಗಳ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡಿ, ಅವರ ಮಾಹಿತಿಗಳ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿ ನೀಡುವವರು, ಪೊಲೀಸ್ ಕಂಟ್ರೋಲ್ ರೂಂ. 0823 2-224888, 9480804800 ಡಿವೈಎಸ್ಪಿ ಶ್ರೀರಂಗಪಟ್ಟಣ ಉಪವಿಭಾಗ 9480804821, ಪಿ.ಐ ಪಾಂಡವಪುರ ಠಾಣೆ – 9480804858 ಹಾಗೂ ಸಿ.ಪಿ.ಐ ಕೆ. ಆರ್.ಸಾಗರ ವೃತ್ತ 9480804832 ಇಲ್ಲಿಗೆ ಸಂಪರ್ಕಿಸಬಹುದು.
ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಹತ್ಯೆ: ನಾಲೆಯಲ್ಲಿ ತೇಲಿ ಬಂದ ಅರ್ಧ ಕತ್ತರಿಸಿದ ಮಹಿಳೆಯರ ಮೃತದೇಹಗಳು