ಕಬ್ಬು ಬೆಳೆಗೆ ಸೂಕ್ತ ದರ ನಿಗದಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿರುವ ಘಟನೆ ಮಂಡ್ಯದಲ್ಲಿ ಬುಧವಾರ ನಡೆದಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಡ್ಯದ ವಿ.ಸಿ. ಫಾರ್ಮ್ ಗೇಟ್, ಮದ್ದೂರು, ಕಿರಂಗೂರ್ ಗೇಟ್, ಕೆ.ಆರ್. ಪೇಟೆ ಹಾಗೂ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿಗಳಲ್ಲಿ ರೈತರು ತಮ್ಮ ಕುರಿ, ಕೋಳಿ, ನಾಯಿ, ಹಸು ಹಾಗೂ ದನ-ಕರುಗಳನ್ನು ರಸ್ತೆಗಿಳಿಸಿ ಪ್ರತಿಭಟನೆ ನಡೆಸಿದರು.
ಮಂಡ್ಯದ ವಿ.ಸಿ. ಫಾರ್ಮ್ ಗೇಟ್ ಬಳಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ರೈತರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಇದರಿಂದಾಗಿ ರೈತರೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಪ್ರತಿಭಟನಾ ನಿರತ 150 ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಪ್ರತಿ ಟನ್ ಕಬ್ಬಿಗೆ 4500 ದರ ನಿಗದಿ (ಎಸ್ಎಪಿ) ಘೋಷಿಸಲು, ಕೃಷ್ಣರಾಜ ಸಾಗರ (ಕೆಆರ್ಎಸ್) ಸುತ್ತಮುತ್ತ ಶಾಶ್ವತ ಗಣಿಗಾರಿಕೆ ನಿಷೇಧ ಮಾಡಲು, ವಿದ್ಯುತ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಇನ್ನಿತರ 18 ಬೇಡಿಕೆಗಳ ಈಡೇರಿಕೆಗಾಗಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಈ ವೇಳೆ ಸರ್ಕಾರ ಪೊಲೀಸರನ್ನು ಬಿಟ್ಟು ಹೋರಾಟ ಹತ್ತಿಕ್ಕಲು ಯತ್ನಿಸಿದೆ. ಇದು ಖಂಡನೀಯವಾಗಿದೆ” ಎಂದು ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ, ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಮಧುಚಂದನ್ ಎಸ್ ಸಿ ಹೇಳಿದ್ದಾರೆ ಎಂದು ಈದಿನ.ಕಾಮ್ ವರದಿ ಮಾಡಿದೆ.
ಇದನ್ನೂ ಓದಿ: 90ರ ದಶಕದ ರಾಜಕೀಯ ಬೆಳವಣಿಗೆಗಳು ಮತ್ತು ರೈತರು
“ರೈತರ ಸಂಕಷ್ಟಕ್ಕೆ ಕಿವಿಯಾಗಬೇಕಾದ ಸರ್ಕಾರ ರೈತರನ್ನು ಬಂಧಿಸಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದೆ. ಆದರೆ ರಾಜ್ಯದ ಅನ್ನದಾತ ಈ ಎಲ್ಲ ಕುತಂತ್ರಗಳಿಗೆ ಬಗ್ಗುವುದಿಲ್ಲ. ನಮ್ಮ ಬೆಳೆಗೆ ನ್ಯಾಯಯುತ ಬೆಳೆ ನಿಗದಿ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ದೊಡ್ಡ ಮಟ್ಟದ ಹೋರಾಟ ಸಂಘಟಿಸಲಾಗುವುದು. ಅದರ ಪರಿಣಾಮವನ್ನು ರಾಜ್ಯ ಸರ್ಕಾರ ಎದುರು ನೋಡಲಿ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.