Homeಮುಖಪುಟಮಂಗಳೂರು ಬಾಂಬ್ ಪ್ರಕರಣ: ಮಾಧ್ಯಮಗಳ ಇಸ್ಲಾಮಫೋಬಿಯ ಮತ್ತು ಪೊಲೀಸರ ಪಕ್ಷಪಾತ

ಮಂಗಳೂರು ಬಾಂಬ್ ಪ್ರಕರಣ: ಮಾಧ್ಯಮಗಳ ಇಸ್ಲಾಮಫೋಬಿಯ ಮತ್ತು ಪೊಲೀಸರ ಪಕ್ಷಪಾತ

- Advertisement -
- Advertisement -

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಾಂಬ್ ಪತ್ತೆಯಾಗಿದೆ. ಕೂಡಲೇ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದವರು ಅದನ್ನು ಸುರಕ್ಷಿತವಾಗಿ ಸ್ಫೋಟಿಸಿ ಆತಂಕ ಹೋಗಲಾಡಿಸಿದರು. ಬಾಂಬ್‌ ಇಟ್ಟಿದ್ದ ಆರೋಪಿ ಎನ್ನಲಾದ ಆದಿತ್ಯ ರಾವ್‌ ಕೂಡ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಆ ಸಂದರ್ಭದಲ್ಲಿ ಕನ್ನಡದ ಕೆಲ ಮಾಧ್ಯಮಗಳು ನಡೆದುಕೊಂಡ ರೀತಿ ಅಸಹ್ಯ ಹುಟ್ಟಿಸುವಂತದ್ದು. ಒಂದು ಪಕ್ಷಕ್ಕೆ, ಒಂದು ಸಿದ್ದಾಂತಕ್ಕೆ ತಮ್ಮನ್ನು ತಾವು ಮಾರಿಕೊಂಡತೆ ಅವು ನಡೆದುಕೊಂಡಿದ್ದು ಪತ್ರಿಕೋದ್ಯಮದ ಎಲ್ಲಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿದಂತಿತ್ತು. ‘ಪೌರತ್ವಕ್ಕೆ ಪ್ರತಿಕಾರ’, ‘ಬಾಂಬ್‌ಗೂ ಪಿಎಫ್‌ಐ ಸಂಘಟನೆಗೂ ನಂಟು ಏಕಿರಬಾರದು’ ಎಂಬಂತಹ ವರದಿಗಳನ್ನು ಪ್ರಸಾರ ಮಾಡಿದ್ದವು.

ವಿಜಯ ಕರ್ನಾಟಕ ಪತ್ರಿಕೆಯಂತೂ ಪೌರತ್ವ ವಿರೋಧಿಸಿ ನಡೆದ ಗಲಭೆಯ ವೇಳೆ ಪೊಲೀಸ್ ಗೋಲಿಬಾರ್‌ಗೆ ಇಬ್ಬರು ಬಲಿಯಾದ ಬಳಿಕ ಮಂಗಳೂರಿನಲ್ಲಿ ದೊಡ್ಡಮಟ್ಟದ ದುಷ್ಕೃತ್ಯವೊಂದು ನಡೆಯುವ ಸಾಧ್ಯತೆಯಿತ್ತು. ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದು ಈ ದುಷ್ಕೃತ್ಯದ ಭಾಗವಾಗಿರಬಹುದೆಂದು ಶಂಕಿಸಲಾಗಿದೆ ಎಂದು ಕಪೋಲಕಲ್ಪಿತ ವರದಿಯನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು. ಆಮೂಲಕ ಗೋಲಿಬಾರ್‌ಗೆ ಬಲಿಯಾದವರು ಮುಸ್ಲಿಮರಾದ್ದರಿಂದ ಬಾಂಬ್ ಇಟ್ಟಿರುವವರು ಮುಸ್ಲಿಮರೆ ಎಂದು ಸಾರುವ ಉದ್ದೇಶ ಅದರಲ್ಲಿತ್ತು.

ಭಯೋತ್ಪಾದನ ಕೃತ್ಯಕ್ಕೆ ಜಯ ಸಿಗದು ಎಂಬ ಸಂಪಾದಕೀಯವನ್ನು ಬರೆದು ಈ ವಿಚಾರದ ಕುರಿತು ಪೂರ್ವನಿರ್ಧರಿತ ಅಭಿಪ್ರಾಯಕ್ಕೆ ಬಂದಿದ್ದನ್ನು ಸಾರಿತ್ತು. ಇನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಬಾಂಬ್ ಮಾತ್ರವಲ್ಲ ಅದನ್ನು ಇಟ್ಟ ಭಯೋತ್ಪಾದಕ ಶಕ್ತಿಗಳನ್ನು ಸಹ ಸಂಪೂರ್ಣವಾಗಿ ನಿಷ್ಕ್ರಿಯ ಮಾಡುತ್ತೇವೆ ಎಂದು ಘೋಷಿಸಿದ್ದರು.

ಬಾಂಬ್ ಎಂದ ಕೂಡಲೇ ಮುಸ್ಲಿಮರು ಎನ್ನುವಂತಹ ಮನೋಭಾವ ಮೂಡುವಂತೆ ಮಾಧ್ಯಮಗಳು ಮತ್ತು ಕೆಲ ಕೋಮುವಾದಿ ಪೊಲೀಸ್ ಅಧಿಕಾರಿಗಳು ದೀರ್ಘ ಅವಧಿಯಲ್ಲಿ ಬೆಳೆಸಿದ್ದಾರೆ. ಇದಕ್ಕಾಗಿಯೇ ಬಾಂಬ್ ಎಂದ ತಕ್ಷಣ ಬಹಳಷ್ಟು ಜನರು “ತನಿಖೆಯಲ್ಲಿ ಸಿಗುವ ಆರೋಪಿ ಮುಸ್ಲಿಮನಾಗಿದ್ದರೆ ಭಯೋತ್ಪಾದಕ ಎಂದು ಕರೆಸಿಕೊಳ್ಳುತ್ತಾನೆ, ಒಂದು ವೇಳೆ ಹಿಂದೂವಾಗಿದ್ದರೆ ಮಾನಸಿಕ ಅಸ್ವಸ್ಥನೆಂದು ಕರೆಸಿಕೊಳ್ಳುತ್ತಾನೆ” ಎಂದು ಟ್ರೋಲ್ ಮಾಡಿದ್ದರು.

ಆದರೆ ವಾಸ್ತವವೇನೆಂದರೆ ಸದ್ಯದ ಪೊಲೀಸ್ ತನಿಖೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಮಣಿಪಾಲದ ಮಣ್ಣಪಳ್ಳದ ಬಿ.ಕೃಷ್ಣಮೂರ್ತಿಯವರ ಮಗ ಆದಿತ್ಯ ರಾವ್ ಎಂದು ತಿಳಿದುಬಂದಿದ್ದಲ್ಲದೇ ಆತ ಪೊಲೀಸರೆದುರು ಶರಣಾಗಿದ್ದಾನೆ ಕೂಡ..

ಇಂಜಿನಿಯರಿಂಗ್ ಓದಿರುವ ಆದಿತ್ಯರಾವ್ ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಗೆ ಪ್ರಯತ್ನಿಸಿ ವಿಫಲವಾಗಿದ್ದನಂತೆ. ಕೆಲಸ ಸಿಗದ ಬೇಸರದಲ್ಲಿ ಒಂದು ವರ್ಷದ ಹಿಂದೆಯೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿಬಾಂಬ್ ಕರೆ ಮಾಡಿ ಸಿಕ್ಕಿಬಿದ್ದಿದ್ದ. ಆ ಅಪರಾಧಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಆತನಿಗೆ ವಿಮಾನ ನಿಲ್ದಾಣ ಸಿಬ್ಬಂದಿ ಮತ್ತು ಅಥಾರಿಟಿಯ ಮೇಲೆ ದ್ವೇಷವಿತ್ತು. ಆ ಕಾರಣಕ್ಕಾಗಿಯೇ ಆತ ಮಂಗಳೂರಿನಲ್ಲಿ ಬಾಂಬ್ ಇಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಮಣಿಪಾಲದ ಮಣ್ಣಪಳ್ಳದಲ್ಲಿ ವಾಸವಾಗಿದ್ದ ಈತನ ಕುಟುಂಬ ಒಂದು ವಾರದ ಕೆಳಗೆ ತಾನೇ ಮಂಗಳೂರಿನ ಲೇಡಿಹಿಲ್ ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ. ಆದರೆ ಆ ಒಂದು ವಾರದಿಂದ ಆತ ತನ್ನ ಮನೆಗೆ ಹೋಗದೆ ಕಾಣೆಯಾಗಿದ್ದಾನೆ ಎಂದು ಪೊಲೀಸರೆದುರು ಆತನ ತಂದೆ ತಿಳಿಸಿದ್ದಾರೆ. ಇನ್ನು ಬಾಂಬ್ ಇಟ್ಟಿದ್ದ ಘಟನೆ ಬೆಳಿಗ್ಗೆ 9 ಗಂಟೆಗೆ ನಡೆದರೆ ಮಧ್ಯಾಹ್ನ 2.50ಕ್ಕೆ ಟರ್ಮಿನಲ್ ಮ್ಯಾನೇಜರ್‌ಗೆ ಬಂದ ಕರೆಯೊಂದರಲ್ಲಿ ನನಗೆ ಕೊಟ್ಟ ತೊಂದರೆಗೆ ನಾನು ಸುಮ್ಮನೆ ಬಿಡುವುದಿಲ್ಲ ಎಂಬ ಧಮಕಿ ಹಾಕಲಾಗಿದೆಯಂತೆ. ಆದಿತ್ಯರಾವ್‌ನನ್ನು ಹೋಲುವ ವ್ಯಕ್ತಿಯು ಮಂಗಳೂರಿನ ವಿಮಾನ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಈ ವಿಷಯ ಹೊರಬರುತ್ತಿದ್ದಂತೆಯೇ ಕನ್ನಡದ ಬಹುತೇಕ ಮುದ್ರಣ ಮಾಧ್ಯಮಗಳು ಮತ್ತು ಟಿವಿ ಚಾನೆಲ್‌ಗಳು ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಆರೋಪಿ ಮುಸ್ಲಿಮನಾಗಿರುತ್ತಾನೆ ಎಂದು ಹಂಬಲಿಸುತ್ತಿದ್ದ ಅವರಿಗೆ ಈ ‘ರಾವ್’ ಎಂಬ ಹೆಸರು ಕೇಳಿದೊಡನೆಯೆ ಗರಬಡಿದವರಂತಾಗಿರುವುದು ಕಂಡುಬಂದಿದೆ. ಅಲ್ಲಿಯವರೆಗೂ ಏರುಧ್ವನಿಯ ಸುದ್ದಿ ಪ್ರಸಾರ ಮಾಡುತ್ತಿದ್ದ ಅವರು ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ.

ಈಗ ಅಸಲಿ ವಿಷಯಕ್ಕೆ ಬರುವುದಾದರೆ ಆದಿತ್ಯ ರಾವ್‌ಗೂ ಪೌರತ್ವ ವಿರೋಧಿ ಹೋರಾಟಕ್ಕೂ ಏನು ಸಂಬಂಧ? ಈತ ಬಾಂಬ್ ಇಟ್ಟಿರುವುದು ಪೌರತ್ವಕ್ಕೆ ಪ್ರತೀಕಾರ ಹೇಗಾಗುತ್ತದೆ? ಒಂದು ಸಮುದಾಯವನ್ನು, ಒಂದು ಭಿನ್ನಾಭಿಪ್ರಾಯವಿಟ್ಟುಕೊಂಡು ಹೋರಾಟ ಮಾಡುತ್ತಿರುವವರ ಮೇಲೆ ಯಾವುದೇ ಸಾಕ್ಷಿ ಇಲ್ಲದೇ ಗೂಬೆ ಕೂರಿಸಿದ ಮಾಧ್ಯಮಗಳು ನೀತಿ ಸಂಹಿತೆಯನ್ನು ಈ ರೀತಿ ಕೈಬಿಟ್ಟಿರುವುದು ಏತಕ್ಕಾಗಿ? ಈ ಮಾಧ್ಯಮಗಳು ತಮ್ಮ ತಪ್ಪಿನಿಂದ ಪಾಠ ಕಲಿತು ಕ್ಷಮಾಪಣೆಯನ್ನು ಪ್ರಕಟಿಸುತ್ತವೆಯೇ? ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲವೆಂದು ಸಂಕಲ್ಪ ಮಾಡುತ್ತದೆಯೆಂದು ನಾವು ನಿರೀಕ್ಷಿಸಬಹುದೇ?

ಈಗ ಪೊಲೀಸರ ವಿಷಯಕ್ಕೆ ಬರೋಣ.

ಬೆಂಗಳೂರಿನಲ್ಲಿ ಪೌರತ್ವ ಕಾಯ್ದೆಯ ಪರ ಪ್ರತಿಭಟನೆಯಲ್ಲಿ ಹಿಂದೂ ಮುಖಂಡರ ಕೊಲೆಗೆ ಸ್ಕೆಚ್ ಹಾಕಿದ್ದರು, ಅವರು ಎಸ್‌ಡಿಪಿಐ ಸಂಘಟನೆಗೆ ಸೇರಿದವರು, ಅವರಿಗೆ ಹಣ ಬರುತ್ತದೆ ಎಂದು ಬೆಂಗಳೂರು ನಗರ ಕಮಿಷನರ್ ಪತ್ರಿಕಾಗೋಷ್ಟಿಯಲ್ಲಿ ಘೋಷಿಸಿದ್ದರು. ಆದರೆ ಎಫ್‌ಐಆರ್‌ನಲ್ಲಿಯಾಗಲಿ, ಆರೋಪಿತರ ಹೇಳಿಕೆಗಳಲ್ಲಾಗಲೀ ಅವರ ಟಾರ್ಗೆಟ್ ಆಗಿ ಯಾವುದೇ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಿಲ್ಲ. ಇಂಥವರೇ ಟಾರ್ಗೆಟ್ ಆಗಿದ್ದರು ಎಂದು ಹೇಳಲಾದ ವ್ಯಕ್ತಿಗಳು ಆಗಲೇ ಹುತಾತ್ಮರಂತೆ ಹೇಳಿಕೆಯನ್ನು ಕೊಟ್ಟೂ ಆಗಿತ್ತು. ಇದನ್ನೇ ಮುಂದುವರೆಸಿ ಪಿಎಫ್‌ಐ ನಿಷೇಧ ಎಂಬ ಟೈಟಲ್ ಸಹಾ ಬಂದಾಗಿತ್ತು. ವಾಸ್ತವದಲ್ಲಿ ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ಅದಕ್ಕೆ ತೀರ್ಮಾನವಾಗಿತ್ತು ಎಂಬುದನ್ನು ಬಿಟ್ಟರೆ ಅದಿನ್ನೂ ಫೈಲ್ ಸಮೇತ ಕೇಂದ್ರ ಸರ್ಕಾರಕ್ಕೆ ಹೋಗಿ, ಕೇಂದ್ರವು ಅಂತಹ ನಿಷೇಧ ಮಾಡಬೇಕಷ್ಟೇ.

ಬೆಂಗಳೂರಿನಲ್ಲಿನ ಸ್ಲಂಗಳಲ್ಲಿ ಬಾಂಗ್ಲಾದವರಿದ್ದಾರೆ ಎಂದು ಬಿಜೆಪಿ ಸಂಸದರ ಮಾಲೀಕತ್ವದ ಚಾನೆಲ್ ನಕಲಿ ಸ್ಟಿಂಗ್ ಒಂದನ್ನು ನಡೆಸಿತು. ಕೂಡಲೇ ಹಿಂದು ಮುಂದು ನೋಡದೇ ಉತ್ತರ ಕರ್ನಾಟಕದ ಮತ್ತು ಪೂರ್ವ ಭಾರತದ ಕೂಲಿ ಜನರು ವಾಸವಿದ್ದ ಗುಡಿಸಲುಗಳನ್ನು ನೆಲಸಮ ಮಾಡಿದ್ದ ಪೊಲೀಸ್ ಇಲಾಖೆಯ ಕಮಿಷನರ್ ಭಾಸ್ಕರ್‌ರಾವ್‌ರನ್ನು ಯಾರಾದರೂ ಬಿಜೆಪಿ ಪಕ್ಷದ ವಕ್ತಾರರಾ ಎಂದು ಕೇಳಿದರೆ ಏನು ಹೇಳುತ್ತಾರೆ?

ಬಾಂಬ್ ಇಟ್ಟವರು ಯಾರಾದರೂ ಸರಿಯೇ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ, ಭದ್ರತೆಯನ್ನು ಹೆಚ್ಚಿಸಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂಬ ಮಾತುಗಳನ್ನು ಆಡುವುದು ಸಮಂಜಸ. ಅದನ್ನು ದಾಟಿ ಕೋಮುಗಳಿಗೆ ಸಂಬಂಧ ಕಲ್ಪಿಸಿ ಹೇಳಿಕೆಗಳನ್ನು ನೀಡಲಾಗುತ್ತದೆ.

ಮಂಗಳೂರಿನಲ್ಲಿ ಪೌರತ್ವ ಕಾಯ್ದೆಯ ವಿರುದ್ಧ ಹೋರಾಟದಲ್ಲಿ ಇಬ್ಬರು ಮುಸ್ಲಿಮರನ್ನು ಗುಂಡಿಟ್ಟು ಹತ್ಯೆ ಮಾಡಿದ ಪೊಲೀಸರು ಅದಕ್ಕೆ ಕಾರಣವಾದ ಘಟನಾವಳಿಯ ಕುರಿತೂ ಸಮರ್ಪಕ ಪುರಾವೆಗಳನ್ನು ಒದಗಿಸಲು ವಿಫಲವಾಗಿದ್ದಾರೆ. ಆದರೆ ಬಾಂಬ್ ಎಂದ ಕೂಡಲೇ ಒಂದು ಕಡೆ ಕೈ ತೋರಿಸುತ್ತಾರೆ.. ವಾಸ್ತವ ಗೊತ್ತಾದಾಗ ಪೆಚ್ಚುಮೋರೆ ಹಾಕಿ ಕೂರುತ್ತಾರೆ ಅಷ್ಟೇ.

ಪ್ರತಿಭಟಿಸುತ್ತಿರುವವರ ಬಟ್ಟೆ ನೋಡಿದರೆ ಸಾಕು ಅವರು ಯಾರು ಎಂಬುದು ಗೊತ್ತಾಗುತ್ತದೆ ಎಂದು ಹೇಳುವ ಪ್ರಧಾನಿ ಇರುವ ರಾಷ್ಟ್ರವಿದು. ಮಾಧ್ಯಮಗಳು ಅಂತಹ ಪ್ರಧಾನಿಗೆ ಪ್ರಶ್ನೆ ಹಾಕುವ ಬದಲು ಪ್ರಧಾನಿಯ ವಿರುದ್ಧ ಮಾತಾಡುವವರ ಮೇಲೆ ದಾಳಿ ನಡೆಸಲು ಕಥೆಗಳನ್ನು ಹೊಸೆಯುತ್ತಿರುತ್ತವೆ. ಹೀಗಿರುವಾಗ ನಾವು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...