ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಯಲ್ಲಿ ಕನಿಷ್ಠ 98 ಜನರು ಸಾವನ್ನಪ್ಪಿದ್ದಾರೆ ಮತ್ತು 310 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿದೆ.
ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿರ್ಧಾರ ಪ್ರಕಟವಾದ ಬಳಿಕ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಕಳೆದೊಂದು ತಿಂಗಳಿಂದ ಕಲಹ ನಡೆಯುತ್ತಿದ್ದು, ಸದ್ಯಕ್ಕೆ ಪರಿಸ್ಥಿತಿ ತುಸು ಸುಧಾರಿಸಿದಂತೆ ಕಾಣುತ್ತಿದೆ.
ಮಣಿಪುರದ ದೊಡ್ಡ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಕುಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೈತೇಯಿ ಸಮುದಾಯವು ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿದೆ.
ಪ್ರತಿಭಟನಾ ಮೆರವಣಿಗೆಯ ನಂತರ, ಈಶಾನ್ಯ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರಗಳು ವರದಿಯಾದವು. ರಾಜ್ಯದ ಶಾಸಕರು ಮತ್ತು ಸಚಿವರ ಮನೆಗಳ ಮೇಲೆ ದಾಳಿಗಳು ನಡೆದು ಪರಿಸ್ಥಿತಿ ಬಿಗಡಾಯಿಸಿತ್ತು.
ಶುಕ್ರವಾರ ಮುಖ್ಯಮಂತ್ರಿಗಳ ಕಚೇರಿ ಹೇಳಿಕೆ ನೀಡಿದ್ದು 37,450 ನಿವಾಸಿಗಳು ಪ್ರಸ್ತುತ 272 ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಕಳೆದ ಒಂದು ತಿಂಗಳಿನಿಂದ, ಮಣಿಪುರ ಪೊಲೀಸರು 3,734 ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ 65 ಜನರನ್ನು ಬಂಧಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನವಿಯ ನಂತರ ಹಲವು ಪ್ರತಿಭಟನಾಕಾರರು 150 ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ ಎಂದು ಮಣಿಪುರ ಪೊಲೀಸರು ಹೇಳಿದ್ದಾರೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಸ್ವಯಂ-ಲೋಡಿಂಗ್ ರೈಫಲ್ಗಳು, ಕಾರ್ಬೈನ್, ಎಕೆ ಮತ್ತು ಐಎನ್ಎಸ್ಎಎಸ್ ರೈಫಲ್ಗಳು, ಲೈಟ್ ಮೆಷಿನ್ ಗನ್ಗಳು, ಪಿಸ್ತೂಲ್ಗಳು, ಎಂ16 ರೈಫಲ್ಗಳು, ಸ್ಮೋಕ್ ಗನ್ಗಳು/ಟಿಯರ್ ಗ್ಯಾಸ್, ಸ್ಟನ್ ಗನ್ಗಳು ಮತ್ತು ಗ್ರೆನೇಡ್ ಲಾಂಚರ್ಗಳನ್ನು ಸರ್ಕಾರಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿರಿ: ತಪ್ಪಾದ ಹಳಿಯಲ್ಲಿ ಚಲಿಸುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್: ಅಧಿಕಾರಿಗಳು ಹೇಳುವುದೇನು?
ಯಾವುದೇ ವ್ಯಕ್ತಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊಂದಿದ್ದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ಎಚ್ಚರಿಸಿದೆ.
ಬಹುತೇಕ ಜಿಲ್ಲೆಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದು, ಸಮುದಾಯಗಳ ನಡುವಿನ ಸಂಘರ್ಷವನ್ನು ಬಗೆಹರಿಸಲು ನಾಗರಿಕ ಸಂಘಟನೆಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ಬಿಷ್ಣುಪುರ್ ಮತ್ತು ಫರ್ಜಾಲ್ನಲ್ಲಿ 12 ಗಂಟೆಗಳ ಕಾಲ, ಕಾಂಗ್ಪೋಕ್ಪಿಯಲ್ಲಿ 11 ಗಂಟೆಗಳ ಕಾಲ, ಚುರಾಚಂದ್ಪುರ ಮತ್ತು ಚಾಂಡೆಲ್ನಲ್ಲಿ 10 ಗಂಟೆಗಳ ಕಾಲ, ಜಿರಿಬಾಮ್ ಮತ್ತು ತೆನುಗೋಪಾಲ್ನಲ್ಲಿ 8 ಗಂಟೆಗಳ ಕಾಲ, ತೌಬಲ್ ಮತ್ತು ಕಾಕ್ಚಿಂಗ್ ಜಿಲ್ಲೆಗಳಲ್ಲಿ 7 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದೆ.
ಸೇನಾಪತಿ, ಉಖ್ರುಲ್, ಕಾಮ್ಜಾಂಗ್, ನೋನಿ ಮತ್ತು ತಮೆಂಗ್ಲಾಂಗ್ ಜಿಲ್ಲೆಗಳಲ್ಲಿ ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ.