ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಬುಧವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬಿಷ್ಣುಪುರ್ ಜಿಲ್ಲೆಯ ತಮ್ನಾಪೋಕ್ಪಿ ತಪ್ಪಲಿನಲ್ಲಿ ವ್ಯಕ್ತಿಯೊಬ್ಬರು ಗುಂಡಿಗೆ ಬಲಿಯಾಗಿದ್ದಾರೆ.
ಬುಧವಾರ ಬೆಳಿಗ್ಗೆ ಉಗ್ರರು ಗುಂಡಿನ ದಾಳಿ ನಡೆಸಿದಾಗ ವ್ಯಕ್ತಿ ಬಲಿಯಾಗಿದ್ದಾನೆ. ಗಾಯಗೊಂಡಿದ್ದ ಅವರನ್ನು ಇಂಫಾಲ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.
ಹತ್ಯೆಗೀಡಾದ ವ್ಯಕ್ತಿಯನ್ನು ಚುರಾಚಂದ್ಪುರದ ಥೆಂಗ್ರಾ ಲೈರಾಕ್ನ ತೋಯಿಜಮ್ ಚಂದ್ರಮಣಿ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಮೊಯಿರಾಂಗ್ನ ನಿರಾಶ್ರಿತ ಶಿಬಿರದಲ್ಲಿ ತಂಗಿದ್ದರು ಎಂದು ವರದಿಯಾಗಿದೆ.
ಬಿಷ್ಣುಪುರ್ ಜಿಲ್ಲೆಯಲ್ಲೂ ಉದ್ವಿಗ್ನತೆ ಭುಗಿಲೆದ್ದಿದೆ. ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದಾಸ್ ಕೊಂತೌಜಮ್ ಅವರ ಮನೆಯನ್ನು ಧ್ವಂಸಗೊಳಿಸಲಾಗಿದೆ.
ಬುಧವಾರ ಸಂಜೆ ನಿಂಗ್ತೌಖೋಂಗ್ ಪಟ್ಟಣದಲ್ಲಿರುವ ಸಚಿವರ ನಿವಾಸಕ್ಕೆ ಗುಂಪೊಂದು ನುಗ್ಗಿತು. ಘಟನೆ ನಡೆದಾಗ ಸ್ವತಃ ಸಚಿವರಾಗಲೀ ಅವರ ಕುಟುಂಬದವರಾಗಲೀ ಮನೆಯಲ್ಲಿ ಇರಲಿಲ್ಲ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ತಿಳಿಸಿದೆ.
ಬಿಷ್ಣುಪುರ್ ಜಿಲ್ಲೆಯಲ್ಲಿ ಮತ್ತೆ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಕರ್ಫ್ಯೂವನ್ನೂ ನಾಲ್ಕು ಗಂಟೆಗಳ ಕಾಲ ಮುಂದುವರಿಸಲಾಗಿದೆ.
ಎಸ್ಟಿ ಮೀಸಲಾತಿ ವಿಚಾರವಾಗಿ ಮಣಿಪುರ ಹೊತ್ತಿ ಉರಿಯುತ್ತಿದೆ. ಮೇ 3 ರಂದು ಕುಕಿಗಳು ಮತ್ತು ಮೈಥೇಯಿ ನಡುವಿನ ಜನಾಂಗೀಯ ಹಿಂಸಾಚಾರ ಉಲ್ಬಣಗೊಂಡ ನಂತರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ಗೆ ಸಲಹೆ ನೀಡಲು ಮಣಿಪುರಕ್ಕೆ ಕಳುಹಿಸಲಾದ ಮಾಜಿ ಸಿಆರ್ಪಿಎಫ್ ಡಿಜಿ ಕುಲ್ದೀಪ್ ಸಿಂಗ್ ಪ್ರತಿಕ್ರಿಯಿಸಿದ್ದು, “ಇತ್ತೀಚಿನ ಹಿಂಸಾಚಾರವು ಮಂಗಳವಾರ ಮತ್ತು ಬುಧವಾರ ರಾತ್ರಿ ಪ್ರಾರಂಭವಾಯಿತು” ಎಂದು ಮಾಹಿತಿ ನೀಡಿದ್ದಾರೆ.
ಬಿಷ್ಣುಪುರ್ ಜಿಲ್ಲೆಯ ಟ್ರೋಂಗ್ಲಾಬಿ ಪ್ರದೇಶದಲ್ಲಿ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಎರಡೂ ಸಮುದಾಯಗಳಿಗೆ ಸೇರಿದ ಹೆಚ್ಚಿನ ಮನೆಗಳು ಬೆಂಕಿಗಾಹುತಿಯಾಗಿವೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
“ಬೆಳಿಗ್ಗೆ 9.30ರ ಸುಮಾರಿಗೆ ಬಿಷ್ಣುಪುರದ ಟ್ರೋಂಗ್ಲಾಬಿ ಪ್ರದೇಶದಲ್ಲಿ ಜನರ ಗುಂಪಿನ ಮೇಲೆ ಉಗ್ರಗಾಮಿಗಳು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆದಲ್ಲೇ ಮೃತಪಟ್ಟಿದ್ದಾರೆ.”
ಕುಕಿ ಪ್ರಾಬಲ್ಯದ ಕಾಂಗ್ಪೋಕ್ಪಿ ಜಿಲ್ಲೆಯ ಗಡಿಯಲ್ಲಿರುವ ಇಂಫಾಲ್ ವೆಸ್ಟ್ನ ಸಿಂಗ್ಡಾದಲ್ಲಿ, ಶಂಕಿತ ಉಗ್ರಗಾಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೈಥೇಯಿ ನಿವಾಸಿಯೊಬ್ಬರು ಗಾಯಗೊಂಡಿದ್ದಾರೆ.
ಮೇ 3ರಂದು ರಾಜ್ಯದಲ್ಲಿ ಹಿಂಸಾತ್ಮಕ ಘರ್ಷಣೆಗಳು ಆರಂಭವಾದವು. 70 ಕ್ಕೂ ಹೆಚ್ಚು ಜನರು ಈ ಹಿಂಸಾಚಾರದಲ್ಲಿ ಈವರೆಗೆ ಹತರಾಗಿದ್ದಾರೆ, ಸುಮಾರು 200 ಜನರು ಗಾಯಗೊಂಡಿದ್ದಾರೆ ಮತ್ತು 40,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ.
ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈಥೇಯಿ ಸಮುದಾಯ ಬೇಡಿಕೆ ಇಟ್ಟಿತ್ತು. ಇದನ್ನು ಗೌಹಾಟಿ ಹೈಕೋರ್ಟ್ ಬೆಂಬಲಿಸಿತು. ಆನಂತರದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಮಣಿಪುರದ ಗುಡ್ಡಗಾಡು ಬುಡಕಟ್ಟು ಜನಾಂಗದವರು ಬಹುಸಂಖ್ಯಾತ ಮೈಥೇಯಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನವನ್ನು ನೀಡುವುದು ಅನ್ಯಾಯವೆಂದು ಭಾವಿಸಿದ್ದಾರೆ. ಇದರಿಂದಾಗಿ ಉದ್ಯೋಗಗಳು ಮತ್ತು ಶಿಕ್ಷಣದ ಅವರ ಹಕ್ಕು ಪಲ್ಲಟಗೊಳ್ಳುತ್ತದೆ ಎಂಬುದು ಕುಕಿ ಸಮುದಾಯದ ವಾದ.
ಪ್ರಸ್ತುತ ಸೇನೆ ಮತ್ತು ಅಸ್ಸಾಂ ರೈಫಲ್ಸ್ನ ಸುಮಾರು 10,000 ಸಿಬ್ಬಂದಿ, ಸಿಆರ್ಪಿಎಫ್ ಮತ್ತು ಗಡಿ ಭದ್ರತಾ ಪಡೆ ಬಿಎಸ್ಎಫ್ನ 7,000 ಸಿಬ್ಬಂದಿ ಮಣಿಪುರದಲ್ಲಿ ಇದ್ದಾರೆ.
ಇದನ್ನೂ ಓದಿರಿ: ಸಿದ್ದರಾಮಯ್ಯ ಹತ್ಯೆಗೆ ಕರೆ: ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಎಫ್ಐಆರ್
ದೆಹಲಿಯಲ್ಲಿರುವ ಕೇಂದ್ರ ಸಚಿವ ರಾಜ್ಕುಮಾರ್ ರಂಜನ್ ಸಿಂಗ್ ಅವರ ನಿವಾಸದಲ್ಲಿ ಮೈಥೇಯಿ ಮತ್ತು ಕುಕಿ ಎರಡೂ ಸಮುದಾಯಗಳ ಚಿಂತಕರು ಭೇಟಿಯಾಗಿ ಮಾತನಾಡಿರುವುದಾಗಿ ವರದಿಯಾಗಿದೆ. ಮಣಿಪುರದ ಏಕೈಕ ಸಂಸದ ಲೋರ್ಹೋ ಎಸ್. ಫೋಜ್ ಕೂಡ ಸಭೆಯಲ್ಲಿ ಪಾಲ್ಗೊಂಡರು ಎಂದು ಎನ್ಡಿಟಿವಿ ತಿಳಿಸಿದೆ.
“ಮೈಥೇಯಿ ಮತ್ತು ಕುಕಿ ಸಮುದಾಯಗಳ ತಲಾ ಹತ್ತು ಮಂದಿ ಚಿಂತಕರು ಇದ್ದರು. ಮಣಿಪುರದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಹೇಗೆ ತರುವುದು ಮತ್ತು ಮುಂದಿನ ದಾರಿ ಹೇಗಿರಬೇಕು ಎಂದು ಚರ್ಚಿಸಿದ್ದಾರೆ.
ಮಣಿಪುರದ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯ ಬಗ್ಗೆ ಚಿಂತಕರು ಮಾತನಾಡಿದ್ದಾರೆ. ಇದನ್ನು ಕಳೆದುಕೊಳ್ಳಲು ಬಿಡಬಾರದೆಂದು ಚಿಂತಿಸಿದ್ದಾರೆ” ಎಂದು ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ‘ಎನ್ಡಿಟಿವಿ’ಗೆ ತಿಳಿಸಿದ್ದಾರೆ.