ಯಾವುದೇ ಧಾರ್ಮಿಕ ಅಥವಾ ರಾಜಕೀಯ ಸಂಘಟನೆಗಳು ಶಾಂತಿ ಕದಡಲು, ಕೋಮು ದ್ವೇಷವನ್ನು ಹರಡಲು ಮತ್ತು ಕರ್ನಾಟಕಕ್ಕೆ ಅಪಖ್ಯಾತಿ ತರಲು ಪ್ರಯತ್ನಿಸಿದರೆ, ನಮ್ಮ ಸರ್ಕಾರವು ಅವುಗಳನ್ನು ಕಾನೂನುಬದ್ಧವಾಗಿ ಎದುರಿಸಲು ಅಥವಾ ನಿಷೇಧಿಸಲು ಹಿಂಜರಿಯುವುದಿಲ್ಲ. ಅದು ಆರ್ಎಸ್ಎಸ್ ಅಥವಾ ಇನ್ನಾವುದೇ ಸಂಘಟನೆಯಾಗಿದ್ದರೂ ಸರಿಯೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಹಿಜಾಬ್ ಬ್ಯಾನ್ ಆದೇಶ, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಮತ್ತು ಕೃಷಿ ಕಾಯ್ದೆಗಳನ್ನು ಮರು ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ.
ಕರ್ನಾಟಕದ ಹಿರಿಮೆಗೆ ಹಿನ್ನಡೆ ತರುವ ಎಲ್ಲಾ ಕಾರ್ಯಕಾರಿ ಆದೇಶಗಳು, ಸರ್ಕಾರಿ ಆದೇಶಗಳು ಮತ್ತು ಮಸೂದೆಗಳನ್ನು ನಾವು ಪರಿಶೀಲಿಸುತ್ತೇವೆ. ರಾಜ್ಯದ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿದೆ ಎಂದು ಅವರು ಹೇಳಿದ್ದಾರೆ.
“ಕರ್ನಾಟಕದಲ್ಲಿ ಅಶಾಂತಿ ಮತ್ತು ವೈಷಮ್ಯದ ಬೀಜಗಳನ್ನು ಬಿತ್ತಲು ಹೊರಟಿರುವ ಯಾವುದೇ ಧಾರ್ಮಿಕ, ರಾಜಕೀಯ ಅಥವಾ ಸಾಮಾಜಿಕ ಸಂಘಟನೆಯನ್ನು ಸಹಿಸಲಾಗುವುದಿಲ್ಲ. ನಾವು ಅವುಗಳನ್ನು ಕಾನೂನು ಮತ್ತು ಸಾಂವಿಧಾನಿಕವಾಗಿ ಎದುರಿಸುತ್ತೇವೆ. ಅದು ಬಜರಂಗದಳ, ಪಿಎಫ್ಐ ಅಥವಾ ಯಾವುದೇ ಇತರ ಸಂಘಟನೆಯಾಗಿರಲಿ. ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆ ಅವುಗಳನ್ನು ನಿಷೇಧಿಸಲು ಹಿಂಜರಿಯುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅಶ್ವಥ್ ನಾರಾಯಣ್ರವರ ಮೇಲಿನ ಎಫ್ಐಆರ್ ಬಗ್ಗೆ ಮಾತನಾಡಿರುವ ಅವರು, “ಬಿಜೆಪಿಯು ಲೂಸ್ ಫಿರಂಗಿಗಳಾಗಿ ಮಾರ್ಪಟ್ಟಿದೆ. ಅವರು ತಮ್ಮ ನಾಲಿಗೆ ಮತ್ತು ಮೆದುಳಿನ ನಡುವಿನ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಅವರು ಮಾತನಾಡುವ ಮೊದಲು ಯೋಚಿಸುವುದಿಲ್ಲ. ತಾವು ಏನು ಮಾತನಾಡಿದರೂ ತಪ್ಪಿಸಿಕೊಳ್ಳಬಹುದು ಎಂದು ಅವರು ಭಾವಿಸುತ್ತಾರೆ. ಕರ್ನಾಟಕದಲ್ಲಿ ಅದು ಇನ್ನು ಮುಂದೆ ನಡೆಯುವುದಿಲ್ಲ. ಬಿಜೆಪಿಯವರು ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ಜನರು ಬಹಳ ಜಾಗರೂಕರಾಗಿರಬೇಕು. ಅವರ ಮಾತನಾಡುವ ಹಕ್ಕಿನ ಬಗ್ಗೆ ನಮಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ನೀವು ಸಿಎಂ ಅಥವಾ ಸಿಎಂ ಕಚೇರಿಯನ್ನು ಕೀಳಾಗಿಸಿ ಮಾತನಾಡಿದರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಹತ್ಯೆಗೆ ಕರೆ: ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಎಫ್ಐಆರ್