ಮಣಿಪುರದಲ್ಲಿ ಕೆಲ ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ಮುಂದುವರೆದಿದ್ದು, ಪಶ್ಚಿಮ ಇಂಫಾಲ ಜಿಲ್ಲೆಯ ಲಾಂಫೀಲ್ನಲ್ಲಿರುವ ಮಣಿಪುರದ ಸಚಿವೆ ನೆಮ್ಯಾ ಕಿಪ್ಗೆನ್ ಅವರ ಅಧಿಕೃತ ನಿವಾಸಕ್ಕೆ ಬುಧವಾರ ರಾತ್ರಿ ಅಪರಿಚಿತರು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಪೂರ್ವ ಇಂಫಾಲದ ಖಾಮೆಲಾಕ್ ಗ್ರಾಮದಲ್ಲಿ ಬುಧವಾರ ಶಂಕಿತ ಉಗ್ರರು ನಡೆಸಿದ ದಾಳಿ ವೇಳೆ 9 ಮಂದಿ ಮೃತಪಟ್ಟು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆ ಬೆನ್ನಲ್ಲೇ ಸಚಿವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ತಿಂಗಳು ಲೋಕೋಪಯೋಗಿ ಸಚಿವರ ಮನೆಯ ಮೇಲೆ ಇದೇ ರೀತಿ ದಾಳಿ ಮಾಡಲಾಗಿತ್ತು.
ಕೈಗಾರಿಕಾ ಸಚಿವೆ ನೆಮ್ಚಾ ಕಿಪ್ಗೆನ್ ಅವರಿಗೆ ಸೇರಿದ ಲಾಂಫೀಲ್ ಪ್ರದೇಶದಲ್ಲಿರುವ ಸರ್ಕಾರಿ ನಿವಾಸಕ್ಕೆ ಬುಧವಾರ ರಾತ್ರಿ ಬೆಂಕಿ ಹಚ್ಚಲಾಗಿದೆ. ಸಚಿವೆ ಕಿಪ್ಗೆನ್ ಕುಕಿ ಸಮುದಾಯದ ನಾಯಕಿಯಾಗಿದ್ದಾರೆ. ಈ ಕೃತ್ಯ ನಡೆದ ವೇಳೆ ಸಚಿವೆ ಮನೆಯಲ್ಲಿ ಇರಲಿಲ್ಲ. ಅಧಿಕೃತ ಪ್ರವಾಸದ ಕಾರಣದಿಂದ ಹೊರಗಿದ್ದರು. ಈ ವೇಳೆ ಈ ದುಷ್ಕೃತ್ಯ ನಡೆಸಲಾಗಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಯಾವುದೇ ಸಂಘಟನೆ ಘಟನೆಯ ಹೊಣೆ ಹೊತ್ತುಕೊಂಡಿಲ್ಲ.
ಇದನ್ನೂ ಓದಿ: ಮಣಿಪುರ ಹಿಂಸಾಚಾರದಲ್ಲಿ 253 ಚರ್ಚ್ಗಳಿಗೆ ಬೆಂಕಿ; ಜ್ಞಾಪಕ ಪತ್ರ ಸಲ್ಲಿಕೆ
ಮಣಿಪುರದಲ್ಲಿ ನಡೆದಿರುವ ಹಿಂಸಾಚಾರದ ಭಾಗವಾಗಿ ಕೆಲವು ಸಂಘಟನೆಗಳು ಸಚಿವೆ ಮನೆಯನ್ನು ಗುರಿಯಾಗಿರಿಸಿಕೊಂಡಿದ್ದರು. ಬುಧವಾರ ಸಂಜೆ ನಂತರ ಜಮಾಯಿಸಿದ ಕೆಲವರು ಬೆಂಕಿ ಹಚ್ಚಿದ್ದಾರೆ. ಭದ್ರತಾ ಸಿಬ್ಬಂದಿ ನೋಡುವಷ್ಟರಲ್ಲಿ ಘಟನೆ ನಡೆದಿದ್ದು, ದುಷ್ಕೃತ್ಯ ಎಸಗಿದವರ ಪತ್ತೆಗೆ ಬಲೆ ಬೀಸಲಾಗಿದೆ.
ಮಣಿಪುರದಲ್ಲಿ ಮೈತಿ ಮತ್ತು ಕುಕಿ ಸಮುದಾಯದ ನಡುವೆ ಒಂದು ತಿಂಗಳಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 310 ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಸೇನೆ ಮತ್ತು ಅರೆ ಪಡೆಗಳನ್ನು ನಿಯೋಜಿಸಲಾಗಿದೆ.
ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯ ಮೇ 3ರಂದು ಮೆರವಣಿಗೆ ಆಯೋಜಿಸಿತ್ತು. ಆ ಬಳಿಕ ಮಣಿಪುರದಲ್ಲಿ ಘರ್ಷಣೆಗಳು ಭುಗಿಲೆದ್ದಿವೆ.
ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತಿ ಸಮುದಾಯ, ಇಂಫಾಲದ ಕಣಿವೆಗಳಲ್ಲಿ ಹೆಚ್ಚಾಗಿ ನೆಲಿಸಿವೆ. ಬುಡಕಟ್ಟು ಜನಾಂಗಗಳಾದ ನಾಗಾಗಳು ಮತ್ತು ಕುಕಿಗಳು ಶೇಕಡಾ 40 ರಷ್ಟಿದ್ದು, ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಕಳೆದ 24 ಗಂಟೆಯಲ್ಲಿ ನಡದಿರುವ ಹಿಂಸಾಚಾರಗಳಲ್ಲಿ ಒಬ್ಬ ಮಹಿಳೆಯೂ ಸೇರಿ 9 ಜನ ಮೃತಪಟ್ಟಿದ್ದಾರೆ. ಹಲವರು ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಮೇನ್ ಲೋಕ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದರು. ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನ ಮಣಿಪುರದಲ್ಲಿಯೇ ಬೀಡು ಬಿಟ್ಟು ಶಾಂತಿ ಸ್ಥಾಪನೆಗೆ ಹಲವು ಸುತ್ತಿನ ಸಭೆಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಆದಿವಾಸಿ ಸಮುದಾಯಗಳ ಪ್ರಮುಖರೊಂದಿಗೆ ನಡೆಸಿದ್ದರು. ಮಣಿಪುರದಲ್ಲಿ ಮತ್ತೆಶುರುವಾಗಿರುವ ಹಿಂಸಾಚಾರ ಪ್ರಕರಣಗಳು ಶಾಂತಿ ಮರುಸ್ಥಾಪಿಸುವ ಪ್ರಯತ್ನಕ್ಕೆ ಹಿನ್ನಡೆ ತಂದಿವೆ.