ಕಾರ್ಮಿಕ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್. ಪಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಕಾರ್ಮಿಕ ಇಲಾಖೆಯಿಂದ ಮಣಿವಣ್ಣನ್ ಎತ್ತಂಗಡಿ ಮಾಡಿರುವುದರ ಹಿಂದೆ ದೊಡ್ಡ ಲಾಬಿ ಅಡಗಿದೆ. ಕಾರ್ಮಿಕರಿಗೆ ಕನಿಷ್ಠ ವೇತನ, ಲಾಕ್ಡೌನ್ ಸಂದರ್ಭದ ಸಂಬಳ ನೀಡುವಂತೆ ಮಣಿವಣ್ಣನ್ರವರಿ ಹಲವಾರು ಕೈಗಾರಿಕೋದ್ಯಮಿಗಳಿಗೆ ನೋಟಿಸ್ ನೀಡಿದ್ದರು. ಹೀಗಾಗಿ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಎರಡು ತಿಂಗಳಿಂದ ಸಂಬಳ ನೀಡಿಲ್ಲ, ಕುಟುಂಬ ನಿರ್ವಹಣೆಗೆ ತೊಂದರೆ ಆಗಿದೆ ಎಂದು 732 ಕಾರ್ಮಿಕರಿಂದ ಮಣಿವಣ್ಣನ್ ಗೆ ದೂರು ನೀಡಲಾಗಿತ್ತು ಎನ್ನಲಾಗುತ್ತಿದೆ. ಹಾಗಾಗಿ ದೂರಿನ ಹಿನ್ನೆಲೆಯಲ್ಲಿ ಎಲ್ಲಾ ಕೈಗಾರಿಕೆಗಳ ಮುಖ್ಯಸ್ಥರಿಗೆ ನೋಟಿಸ್ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಮಣಿವಣ್ಣನ್ ಸೂಚನೆ ನೀಡಿದ್ದರು. ಹಾಗಾಗಿ ಕೈಗಾರಿಕೋದ್ಯಮಿಗಳು ಇವರ ವರ್ಗಾವಣೆಗೆ ಒತ್ತಡ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಾಕ್ಡೌನ್ ತೆರವುಗೊಳಿಸುತ್ತಿರುವಾಗ ಕಾರ್ಮಿಕರೊಂದಿಗೆ ಮಾತನಾಡಿ ನಾವು ಸರಿಪಡಿಸುತ್ತೇವೆ. ನಮಗೆ ಮಣಿವಣ್ಣನ್ನವರಿಂದ ತೊಂದರೆಯಾಗುತ್ತಿದೆ ಎಂದು ಕೈಗಾರಿಕೋದ್ಯಮಿಗಳ ಸಂಘಟನೆ ಪ್ರಮುಖರು ಸಿಎಂಗೆ ದೂರು ನೀಡಿದ್ದು, ಅನಿವಾರ್ಯವಾಗಿ ಕೈಗಾರಿಕೋದ್ಯಮಿಗಳ ಒತ್ತಡಕ್ಕೆ ಸಿಲುಕಿದ ಸಿಎಂ ಮಣಿವಣ್ಣನ್ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂಬ ಆರೋಪ ಹರಿದಾಡುತ್ತಿದೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಮಣಿವಣ್ಣನ್ರವರ ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಲಿಂಗರಾಜು ಮಳವಳ್ಳಿ ಎಂಬುವವರು ಟೀಕೆ ಮಾಡಿದ್ದು ಹೀಗೆ..
“ಮಾಲೀಕರ ಪ್ರಕಾರ ಮಣಿವಣ್ಣನ್ರವರು ಮಾಡಿದ ಘನಘೋರ ತಪ್ಪುಗಳು:
1.ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆಯುವಂತಿಲ್ಲ ಎಂಬ ಆದೇಶ
2.ಕಾರ್ಮಿಕರಿಗೆ ರಜಾ ಸಹಿತ ಪೂರ್ತಿ ವೇತನ ನೀಡಬೇಕು ಎಂಬ ಆದೇಶ
3.ಕೆಲಸದಿಂದ ವಜಾಗೊಂಡಲ್ಲಿ ದೂರು ದಾಖಲಿಸಲು ಅವಕಾಶ ಕೊಟ್ಟಿದ್ದು
4.ಸಾಮಾಜಿಕ ಜಾಲತಾಣದಲ್ಲಿ ಮೇಲಿನ ಎಲ್ಲವನ್ನೂ ಹಂಚಿಕೊಂಡಿದ್ದು
5.ಕಾರ್ಮಿಕ ಸಂಘಟನೆಗಳ ಸಲಹೆ ಪಡೆದು ಕೋವಿಡ್ ಪರಿಹಾರ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದು
ಇದಕ್ಕಾಗಿ ‘ವರ್ಗಾವಣೆ ಪ್ರಶಸ್ತಿ’ ನೀಡಲಾಗಿದೆ.”
ಇನ್ನು ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯರವರ ಕಾರ್ಟೂನ್ ಒಂದು ಸಾಕಷ್ಟು ಸಂಖ್ಯೆಯಲ್ಲಿ ಷೇರ್ ಆಗುತ್ತಿದೆ.
ಇದನ್ನೂ ಓದಿ: ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ‘ಮಣಿವಣ್ಣನ್. ಪಿ’ ವರ್ಗಾವಣೆ