Homeಕರ್ನಾಟಕಮಾರ್ಚ್ 2023ರ ಗೌರಿ ಲಂಕೇಶ್ ಹತ್ಯಾ ಪ್ರಕರಣ ವಿಚಾರಣಾ ವರದಿ

ಮಾರ್ಚ್ 2023ರ ಗೌರಿ ಲಂಕೇಶ್ ಹತ್ಯಾ ಪ್ರಕರಣ ವಿಚಾರಣಾ ವರದಿ

- Advertisement -
- Advertisement -

ಗೌರಿ ಲಂಕೇಶ್ ಹತ್ಯಾ ಪ್ರಕರಣದ ಮಾರ್ಚ್ ತಿಂಗಳ ವಿಚಾರಣೆಯು ಮಾರ್ಚ್ 13 ರಿಂದ 17 ರವರೆಗೆ ನಡೆಯಿತು. ಮೂವರು ಸಾಕ್ಷಿಗಳ ಪ್ರಧಾನ ಹೇಳಿಕೆ ಮತ್ತದರ ಮೇಲೆ ಆರೋಪಿ ಪರ ವಕೀಲರ ಪಾಟಿ ಸವಾಲುಗಳು ನಡೆದವು, ಹಾಗೂ ಬಾಕಿ ಉಳಿದಿದ್ದ ಇನ್ನಿಬ್ಬರು ಸಾಕ್ಷಿಗಳ ಹೇಳಿಕೆ ಮತ್ತು ಪಾಟಿ ಸವಾಲುಗಳು ಮುಂದುವರೆದವು.

ಬಾಲರಾಜ್:  CI- SIT ಟೀಮಿನ ಸದಸ್ಯರು.

ಇವರು 2018 ರ ಮೇ 23 ರಂದು ಆರೋಪಿ ಸುಜಿತ್ ಕುಮಾರ್ ಉಡುಪಿಯಲ್ಲಿ ವಾಸವಿದ್ದ ಮನೆಯನ್ನು ಪಂಚರ ಎದುರಿಗೆ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿ ತಪಾಸಣೆ ಮಾಡಿದ್ದರ ಬಗ್ಗೆ ಸಾಕ್ಷಿ ನುಡಿದರು. ಸುಜಿತ್ ಮನೆಯಲ್ಲಿ ಸುಜಿತ್ ಓಟರ್ ಕಾರ್ಡ್, ಕರ್ನಾಟಕ-ಮಹಾರಾಷ್ಟ್ರ ಭೂಪಟ, ಸನಾತನ ಸಂಸ್ಥೆಯ ಅಂಜಲಿ ಗಾಡ್ಗಿಲ್ ಎಂಬುವರು ಬರೆದ ಲೇಖನದ ಜೆರಾಕ್ಸ್ ಪ್ರತಿ, 18 ಮೊಬೈಲ್ ಸೆಟ್ಟುಗಳು ಮತ್ತು 15 ಮೊಬೈಲ್ ಪೌಚುಗಳು, ಹಾಗೂ ಮೂರು ಮೊಬೈಲ್ ಖರೀದಿಗೆ ಸಂಬಧಿಸಿದ ರಸೀದಿಗಳನ್ನು ವಶಪಡಿಸಿಕೊಂಡ ಬಗ್ಗೆ ಸಾಕ್ಷಿ ನುಡಿದರು. ಆ ದಿನ ರಸೀದೆಯಲ್ಲಿ ಇದ್ದ ವಿಳಾಸದ ಮೇರೆಗೆ ಉಡುಪಿ ಬಸ್‌ ಸ್ಟ್ಯಾಂಡ್‌ನಲ್ಲಿದ ಐ ಮೊಬೈಲ್ ಅಂಗಡಿ ಮತ್ತು ಮಣಿಪಾಲದ ಸಿಟಿ ಪಾಯಿಂಟ್ ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಖರೀದಿಯ ಮೂಲ ರಸೀದಿಯನ್ನು ವಶಪಡಿಸಿಕೊಂಡ ಬಗ್ಗೆ ಸಾಕ್ಷಿ ನುಡಿದರು.

ಹಾಗೆಯೇ 2018 ರ ಜುಲೈ 21 ರಂದು ಹುಬ್ಬಳ್ಳಿಗೆ ಹೋಗಿ ಬಾತ್ಮೀದಾರದ ಸಹಕಾರದೊಂದಿಗೆ ಆರೋಪಿಗಳಾದ ಅಮಿತ್ ಬಡ್ಡಿ ಮತ್ತು ಗಣೇಶ್ ಮಿಸ್ಕಿನ್ ಅವರುಗಳನ್ನು ಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿ, ಅಲ್ಲಿಂದ ಅವರನ್ನು ಬೆಂಗಳೂರಿಗೆ ಕರೆತಂದ ಬಗ್ಗೆಯೂ ಸಾಕ್ಷ್ಯ ನುಡಿದರು. ಹಾಗೂ ಸದರಿ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುತಿಸಿದರು.

ಪಾಟಿ ಸವಾಲು: ಆರೋಪಿ ಪರ ವಕೀಲ ಕೃಷ್ಣಮೂರ್ತಿಯವರು ಸಾಕ್ಷಿಯ ತಪಾಸಣೆ ಮಾಡುವಾಗ, ದಾಖಲು ಮಾಡುವಾಗ ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸದ ಬಗ್ಗೆ, ತಾವು ಸಹಿ ಮಾಡಿ ಪಡೆದುಕೊಂಡ ನೋಟೀಸಿನಲಿ ಕೈಬರಹದಿಂದ ಕೆಲವು ತಿದ್ದುಪಡಿ ಮಾಡಿರುವ ಬಗ್ಗೆ, ಹಾಗೂ ಸಾಕ್ಷಿಯ ಮೇಲೆ ಬೇರೆ ಪ್ರಕರಣದಲ್ಲಿ ಆರೋಪವಿರುವ ಬಗ್ಗೆ ಹಾಗೂ ಸಾಮಾನ್ಯವಾಗಿ ತಮ್ಮ ವ್ಯಾಪ್ತಿಯಲ್ಲಿ ಇಲ್ಲದ ಪ್ರಕರಣಗಳಲ್ಲಿ ತಲೆದೂರಿಸುತ್ತಾರೆ ಎಂಬ ಆರೋಪದ ಬಗ್ಗೆ ಪಾಟಿ ಸವಾಲು ಮಾಡಿದರು. ಹಾಗೂ ಅವರು ನುಡಿದ ಸಾಕ್ಷಿಗಳೆಲ್ಲವೂ ಸುಳ್ಳು ಎಂದು ಸವಾಲು ಹಾಕಿದರು. ಸಾಕ್ಷಿಯು ಅಲ್ಲಲ್ಲಿ ಕೈಬರಹದ ತಿದ್ದುಪಡಿ ಮಾಡಿರುವ ಬಗ್ಗೆ ಹಾಗೂ ಪಡೆದುಕೊಂಡ ನೋಟೀಸಿನಲ್ಲಿ ಕೆಲವು ನಿರ್ದಿಷ್ಟ ಸೂಚನೆಗಳು ಇಲ್ಲದಿರುವ ಬಗ್ಗೆ ಒಪ್ಪಿಕೊಂಡರೂ ಉಳಿದ ಎಲ್ಲಾ ಆರೋಪಗಳನ್ನು ನಿರಾಕರಿಸಿದರು.

ಮುಕುಂದ ವಿ: ಬಿಬಿಎಂಪಿ ಯಲ್ಲಿ ಎಸ್‌ಡಿಎ

ಇವರು 2018 ರ ಜೂನ್ 7 ರಂದು ಪೊಲೀಸರ ಕೋರಿಕೆ ಮೇರೆಗೆ ಮೇಲಧಿಕಾರಿಗಳು ಆದೇಶಿಸಿದ್ದರಿಂದ ತನಿಖೆಯಲ್ಲಿ ಪಂಚರಾಗಿ ಸಹಕರಿಸಿದ ಬಗ್ಗೆ ಸಾಕ್ಷಿ ನುಡಿದರು. ಜೂನ್ 7 ರಂದು ಸಿಐಡಿ ಕಚೇರಿಯಲ್ಲಿ ಆರೋಪಿ ಸುಜಿತ್ ಕುಮಾರ್ ಅವರ ಧ್ವನಿ ಮಾದರಿ ಮತ್ತು ಆರೋಪಿ ಸುಜಿತ್ ಕುಮಾರ್ ಮತ್ತು ಮತ್ತೊಬ್ಬ ಆರೋಪಿ ಮನೋಹರ್ ಅವರ ಕೈಬರಹದ ಮಾದರಿಗಳನ್ನು ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿ ಪೊಲೀಸರು ಪಡೆದುಕೊಂಡ ಬಗ್ಗೆ ಸಾಕ್ಷಿ ನುಡಿದರು. ಅದಕ್ಕೆ ಸಬಂಧಿಸಿದಂತೆ ತಾವು ಧೃಢಪಡಿಸಿ ನೀಡಿದ ಹೇಳಿಕೆ ಮತ್ತು ಸಹಿಗಳನ್ನು ಗುರುತಿಸಿದರು. ಮತ್ತು ವಿಡಿಯೋ ಕಾನ್ಫರೆನ್ಸಿನ ಮೂಲಕ ಆರೋಪಿ ಸುಜಿತ್ ಮತ್ತು ಮನೋಹರ್ ಅವರನ್ನು ಗುರುತಿಸಿದರು.

ಪಾಟಿ ಸವಾಲು: ಆರೋಪಿ ಪರ ವಕೀಲರು ಸಾಕ್ಷಿಯು ಪಂಚರಾಗಿ ಸಹಕರಿಸಲು ಅನುಸರಿಸಬೇಕಿದ್ದ ಪ್ರಕ್ರಿಯೆಗಳಲ್ಲಿ ಇರುವ ಲೋಪಗಳ ಬಗ್ಗೆ ಪ್ರಶ್ನಿಸಿದರು. ಹಾಗೂ ಸುಳ್ಳು ಸಾಕ್ಷ್ಯ ಹೇಳುತ್ತಿರುವುದಾಗಿ ಸವಾಲು ಮಾಡಿದರು. ಸಾಕ್ಷಿಯು ಅದನ್ನು ನಿರಾಕರಿಸಿದರು. ಧ್ವನಿ ಮುದ್ರಿಕೆಗಳ ಕಾಪಿಯನ್ನು ತಮಗೆ ಇನ್ನೂ ಒದಗಿಸದೇ ಇರುವುದರಿಂದ ಸಾಕ್ಷಿಯು ಅದನ್ನು ಧ್ರುಡೀಕರಿಸುವ ಬಗ್ಗೆ ಆರೋಪಿ ಪರ ವಕೀಲರು ತಕರಾರು ಮಾಡಿದರು. ಆದರೆ ಈಗಾಗಲೇ ಧ್ವನಿ ಮುದ್ರಿತ ಕಾಪಿಗಳನ್ನು ಡಿಫೆನ್ಸ್ ವಕೀಲರಿಗೆ ನೀಡದಿದ್ದಲ್ಲಿ ಅದರೊಳಗಿನ ಕಂಟೆಂಟ್ ಅನ್ನು ನ್ಯಾಯಾಲಯ ಮಾನ್ಯ ಮಾಡುವುದಿಲ್ಲ ಎಂದು ನೀಡಿರುವ ಆದೇಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಪ್ರವೀಣ್ ಕುಮಾರ್: ಕಡಬಗೆರೆ ಗ್ರಾಮ ಪಂಚಾಯತಿ ಸೆಕ್ರೆಟರಿ

ಇವರು ಪೊಲೀಸರ ಕೋರಿಕೆ ಮೇರೆಗೆ ಕಡಬಗರೆ ಗ್ರಾಮ ಪಂಚಾಯತಿಯ ಪಿಡಿಒ ಅವರಿಂದ ನಿರ್ದೇಶಿತನಾಗಿ ಪೊಲೀಸರ ತನಿಖೆಗೆ ಜೂನ್ 7 ರಂದು ಪಂಚರಾಗಿ ಸಹಕರಿಸಿದ ಬಗ್ಗೆ ಸಾಕ್ಷ್ಯ ನುಡಿದರು. ಪೊಲೀಸರೊಂದಿಗೆ ಸೀಗೆ ಹಳ್ಳಿ ಗೇಟ್ ಬಳಿ ಇರುವ ಸುರೇಶ್ ಎಂಬುವರ ಮನೆಯ ಮೊದಲ ಮಹಡಿಯಲ್ಲಿ ಆರೋಪಿ ತಾನು ವಾಸವಿದ್ದುದಾಗಿ ಪೊಲೀಸರು ಕರೆದುಕೊಂಡು ಬಂದಿದ್ದ ಆರೋಪಿ ಅಮೋಲ್ ಕಾಳೆ ಹೇಳಿದ್ದಾಗಿ ಸಾಕ್ಷಿ ನುಡಿದರು. ಆದರೆ ಮನೆಯ ತಪಾಸನೆಯ ಪಂಚನಾಮೆಗೆ ಸಹಿ ಹಾಕಲು ಆರೋಪಿ ನಿರಾಕರಿಸಿದ ಬಗೆಗೂ ಹೇಳಿಕೆ ನೀಡಿದರು. ಆ ನಂತರ ಸಾಯಿ ಲಕ್ಷ್ಮಿ ಲೇ ಔಟ್ ಬಳಿ ಇದ್ದ ಅಂಗಡಿ ಮಳಿಗೆಯಲ್ಲಿ ಒಂದೆರೆಡು ದಿನ ವಾಸವಿದ್ದ ಬಗ್ಗೆ ಆರೋಪಿ ಅಮೋಲ್ ಕಾಳೆ ಹೇಳಿದರೂ ನಂತರ ನಡೆದ ಅಂಗಡಿಯ ಪಂಚನಾಮೆಗೆ ಸಹಿ ಹಾಕಲು ಒಪ್ಪಲಿಲ್ಲ. ಆ ಪ್ರತಿಯೊಂದು ಕಡೆಯಲ್ಲೂ ಪೊಲಿಸರು ತಮ್ಮೆಲ್ಲರನ್ನು ಒಟ್ಟಾಗಿಸಿ ಫ಼ೋಟೊ ತೆಗೆದ ಬಗ್ಗೆ ಹೇಳಿದರು ಮತ್ತು ಅದನ್ನು ಗುರುತಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಅಮೋಲ್ ಕಾಳೆಯನ್ನು ಗುರುತಿಸಿದರು. ಖುದ್ದಾಗಿ ತೋರಿಸಿದರೆ ಸುರೇಶ್ ಅವರನ್ನು ಗುರುತಿಸುವುದಾಗಿ ಹೇಳಿದರು. ಪ್ರಾಸಿಕ್ಯುಷನ್ ವಕೀಲರು ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದು ಹಾಜರು ಮಾಡುವಂತೆ ಆದೇಶಿಸಲು ಕೋರಿದರು. ಮರುದಿನ ಖುದ್ದು ಹಾಜರಾದ ಆರೋಪಿಗಳ ಹತ್ತಿರ ಹೋಗಿ ಸಾಕ್ಷಿಯು ಆರೋಪಿ ಸುರೇಶ್ ಅವರನ್ನು ಗುರುತಿಸಿದರು. ಸಂಬಂಧಪಟ್ಟ ಆರೋಪಿ ತಾನು ಸುರೇಶ್ ಎಂದು ಒಪ್ಪಿಕೊಂಡರು.

ಪಾಟಿ ಸವಾಲು : ಆರೋಪಿ ಪರ ವಕೀಲರು ಸರ್ಕಾರಿ ಸಿಬ್ಬಂದಿಯಾಗಿ ಪೊಲಿಸ್ ಪಂಚನಾಮೆಗೆ ಸಹಕರಿಸುವ ಮುನ್ನ ಪಾಲಿಸ ಬೇಕಾದ ಪ್ರಕ್ರಿಯೆಗಳಲ್ಲಿ ಇರುವ ಲೋಪಗಳ ಬಗ್ಗೆ, ಹಾಗೂ ಅದರಲ್ಲಿ ಇರುವ ಕೈಬರಹ ತಿದ್ದುಪಡಿಗಳ ಬಗ್ಗೆ ಪ್ರಶ್ನಿಸಿದರು. ಸುಳ್ಳು ಸಾಕ್ಷ್ಯ ನುಡಿಯುತ್ತಿದೀರಿ ಎಂದು ಆರೋಪಿಸಿದರು. ಅವೆಲ್ಲವನ್ನು ಸಾಕ್ಷಿಯು ನಿರಾಕರಿಸಿದರು.

ರವಿಕುಮಾರ್: ಡಿವಿಆರ್ ಪಂಚನಾಮೆಯ ಸಾಕ್ಷಿ

ಇವರು ಎಮ್‌ಎನ್‌ಸಿ ಗಳಿಗೆ ಫುಡ್ ಸಪ್ಲೈ ಮಾಡುವ ಬಿಸಿನೆಸ್ ನಲ್ಲಿದ್ದು 2017 ರ ಸೆಪ್ಟೆಬರ್ 5ರ ಮಧ್ಯರಾತ್ರಿ ಟೀ ಕುಡಿಯಲು ರಾಜರಾಜೇಶ್ವರಿ ನಗರದ ಬಳಿ ನಿಂತಿದ್ದಾಗ ಪೊಲೀಸರ ಕೋರಿಕೆ ಮೇರೆಗೆ ಅವರು ವಶಪಡಿಸಿಕೊಂಡಿದ್ದ ಸಿಸಿಟಿವಿಗಳ ಡಿವಿಆರ್ ಗಳ ಪಂಚನಾಮೆಗೆ ಸಾಕ್ಷಿಯಾದ ಬಗ್ಗೆ ಹೇಳಿದರು.

ಪಾಟಿ ಸವಾಲು: ಮುಂದುವರೆದ ಇವರ ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಮುಖ್ಯವಾಗಿ ಪ್ರದರ್ಶಿತವಾದ ಡಿವಿಆರ್ ರೆಕಾರ್ಡ್ ನಲ್ಲಿ ಸೆಪ್ಟೆಂಬರ್ 5 ರ ರಾತ್ರಿ 7-7.30 ರವರೆಗಿನ ರೆಕಾರ್ಡಿಂಗ್ ನೋಡಿದಾಗ ಸಮಯ 7.19ಕ್ಕೆ ಗೌರಿಯವರು ಗೇಟನ್ನು ತೆರೆಯುತ್ತಿರುವ ದೃಶ್ಯವಿದೆ. ಆಗ ಅವರ ಮೇಲೆ ದಾಳಿ ನಡೆದಿಲ್ಲ ಅಲ್ಲವೇ ಎಂದು ಕೇಳಿದಾಗ ಹೌದು ಎಂದು ನುಡಿದರು. ಹಾಗೆಯೇ ತಮ್ಮ ವ್ಯವಹಾರಕ್ಕೆ ಪೊಲೀಸರಿಂದ ಸಹಾಯ ಬೇಕಾಗುತ್ತದೆ ಎಂಬ ಕಾರಣಕ್ಕೆ ಸುಳ್ಳು ಸಾಕ್ಷಿ ನುಡಿಯುತ್ತಿದೀರ ಎಂಬ ಆರೋಪವನ್ನು ನಿರಾಕರಿಸಿದರು.

ಪ್ರಕಾಶ್: ಎಸಿಪಿ- 2017 ಸೆಪ್ಟೆಂಬರ್ 5-7 ರವರೆಗೆ ಪ್ರಕರಣದ ತನಿಖಾಧಿಕಾರಿಯಾಗಿದ್ದವರು

ಮುಂದುವರೆದ ಈ ಸಾಕ್ಷಿಯ ವಿಚಾರಣೆಯಲ್ಲಿ ಸಾಕ್ಷಿಯು ತಾವು ವಶಪಡಿಸಿಕೊಂಡ ಡಿವಿಆರ್ ಇಂದ ಪ್ರದರ್ಶಿಸಲಾದ ದೃಶ್ಯದಲ್ಲಿ ಗೌರಿ ಲಂಕೇಶ್ ಗೇಟನ್ನು ತೆರೆಯುತ್ತಿರುವುದು, ಆಗ ಕಾರಿನ ಒಂದು ಸಿಂಗಲ್ ಲೈಟ್ ಆನ್ ಆಗಿರುವುದು ಮತ್ತು ಅಪರಿಚಿತನೊಬ್ಬ ಬಂದು ಗೌರಿ ಲಂಕೇಶ್ ಗೆ ಶೂಟ್ ಮಾಡಿ ಹೋಗುತ್ತಿರುವುದು ಕಂಡುಬರುತ್ತದೆಂದು ಗುರುತಿಸಿದರು. ಮತ್ತು ಈ ಪುರಾವೆಯನ್ನು ದಾಖಲಿಸಲಾಯಿತು….

ಪಾಟಿ ಸವಾಲು: ಆರೋಪಿ ಪರ ವಕೀಲರು ಪ್ರಧಾನವಾಗಿ

ಗೌರಿ ಲಂಕೇಶರ ಸಾವನ್ನು ಖಚಿತ ಪಡಿಸಿಕೊಳ್ಳದೆ ದೇಹವನ್ನು ಶವಾಗಾರಕ್ಕೆ ಕಳಿಸಿದ ಬಗ್ಗೆ,

ಪೊಲೀಸರ ವರದಿಯಲ್ಲಿ ನಮೂದಾಗಿದ್ದ ಸಮಯದಂತೆ ಸಿಸಿಟಿವಿ ಡಿವಿಆರ್ ನಲ್ಲಿ ಇಲ್ಲದಿರುವ ಬಗ್ಗೆ,

ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸದ ಬಗ್ಗೆ ಪ್ರಶ್ನಿಸಿದರು.

ಸಾಕ್ಷಿಯು ತಾನು2017 ರ ಸೆಪ್ಟೆಂಬರ್ 5 ರ ರಾತ್ರಿಯಿಂದ 7 ರ ಬೆಳಿಗ್ಗೆಯವರೆಗೆ ಕೇವಲ ತಾತ್ಕಾಲಿಕ ತನಿಖಾಧಿಕಾರಿಯಾಗಿದ್ದರಿಂದ ನಂತರದ ವಿವರಗಳನ್ನು ಗಮನಿಸದ ಬಗ್ಗೆ ಮತ್ತು ಪೊಲೀಸ್ ನಿಯಮಾವಳಿಗಳ ಪ್ರಕಾರ ನಡೆದುಕೊಂಡಿರುವ ಬಗ್ಗೆ ಸಾಕ್ಷಿ ನುಡಿದರು. ಸಾಮಾನ್ಯವಾಗಿ ಡಿವಿಅರ್ ನಲ್ಲಿ ನಮೂದಾಗಿರುವ ಸಮಯಕ್ಕೂ ನೈಜ ಸಮಯಕ್ಕೂ ವ್ಯತ್ಯಾಸವಿರುವ ಬಗ್ಗೆಯೂ ಹೇಳಿದರು.

ಮತ್ತು ಗೌರಿಯವರ ಸಾವನ್ನು ಖಚಿತಪಡಿಸಿಕೊಳ್ಳದೆ ಶವಾಗಾರಕ್ಕೆ ಕಳಿಸಲಾಯಿತೆಂಬ ಮತ್ತು ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂಬ ಆರೋಪವನ್ನು ನಿರಾಕರಿಸಿದರು.

ಈ ಸಾಕ್ಷಿಯ ಪಾಟಿ ಸವಾಲು ಮುಂದುವರೆಯಲಿದೆ.
ಮುಂದಿನ ವಿಚಾರಣೆ 2023ರ ಮೇ 8 ಕ್ಕೆ ನಿಗದಿಯಾಗಿದೆ.

ಈ ಮಧ್ಯೆ ಗೌರಿಯವರು ಶೂಟ್ ಆದ ದೃಷ್ಯಾವಳಿಯನ್ನು ಕಾರಾಗೃಹದಲ್ಲಿರುವ ಆರೋಪಿಗಳಿಗೆ ತೋರಿಸಿ ಅವರೊಂದಿಗೆ ಸಮಾಲೋಚನೆ ಮಾಡಲು ಆರೋಪಿ ಪರ ವಕೀಲರು ಅವಕಾಶ ಕೋರಿದರು. ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಅವರಿಗೆ ಅವಕಾಶ ನೀಡಿತು.

ಈಗಾಗಲೇ ತಿಳಿಸಿದಂತೆ ಪೊಲೀಸ್ ಅಧಿಕಾರಿಗಳ ವಿಶೇಷ ಕೋರಿಕೆಯ ಮೇರೆಗೆ ಕಳೆದ ತಿಂಗಳಿಂದ ಗೌರಿ ಲಂಕೇಶ್ ಹತ್ಯಾ ವಿಚಾರಣೆಯು ಇನ್- ಕ್ಯಾಮೆರಾ – ಗೋಪ್ಯವಾಗಿ ನಡೆಯುತ್ತಿದೆ. ಅಂದರೆ ವಿಚಾರಣೆ ನಡೆಯುವಾಗ ಸಾರ್ವಜನಿಕರಿಗೆ ಮತ್ತು ಪತ್ರಕರ್ತರಿಗೆ ಪ್ರವೇಶವಿರುವುದಿಲ್ಲ.

ಈ ವರದಿಯನ್ನು, ಕೋರ್ಟ್ ವೆಬ್ ಸೈಟಿನಲ್ಲಿರುವ ಸಾಕ್ಷಿಗಳ deposition ಗಳನ್ನೂ ಮತ್ತು ಆರೋಪಿ ಪರ ವಕೀಲರಾದ ಕೃಷ್ಣಮೂರ್ತಿ ಪಿ. ಮತ್ತು ಸರ್ಕಾರಿ ವಕೀಲರಾದ ಬಾಲನ್ ಅವರು ಕೊಟ್ಟ ಮಾಹಿತಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.

  • ಶಿವಸುಂದರ್

ಇದನ್ನೂ ಓದಿ: ‘ನ್ಯಾಯಾಲಯಗಳಲ್ಲಿ ಮುಚ್ಚಿದ ಲಕೋಟೆ ವ್ಯವಹಾರ ಕೊನೆಗೊಳಿಸಿ’: ಸರ್ಕಾರದ ಉನ್ನತ ವಕೀಲರಿಗೆ ಸಿಜೆಐ ಚಾಟಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...