ಜಸ್ಟಿಸ್ ಎ.ಜೆ.ಸದಾಶಿವ ಆಯೋಗದ ವರದಿ ಅನ್ವಯ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ನಾಳೆ (ಫೆಬ್ರುವರಿ 14) ಬೃಹತ್ ಸಮಾವೇಶವನ್ನು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಹಮ್ಮಿಕೊಂಡಿದೆ.
“ಡಿಸೆಂಬರ್ 11ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಳೆದ 64 ದಿನಗಳಿಂದ ಹೋರಾಟ ನಡೆಯುತ್ತಿದ್ದು, 65ನೇ ದಿನಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಭೋವಿ, ಲಂಬಾಣಿ ಸಮುದಾಯಗಳನ್ನು ಹೊರತುಪಡಿಸಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಉಳಿದ ಎಲ್ಲಾ ಸಮುದಾಯಗಳು ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿವೆ. ಸಾವಿರಾರು ಜನ ಸೇರಲಿದ್ದಾರೆ” ಎಂದು ದಲಿತ ಮುಖಂಡರಾದ ಅಂಬಣ್ಣ ಅರೋಲಿಕರ್ ಅವರು ‘ನಾನುಗೌರಿ.ಕಾಂ’ಗೆ ತಿಳಿಸಿದರು.
“ಪರಿಶಿಷ್ಟ ಜಾತಿಯಲ್ಲಿನ ಅಸ್ಪೃಶ್ಯ ಸಮುದಾಯಗಳು ಒಂದಾಗಿವೆ ಎಂಬ ದೊಡ್ಡ ಸಂದೇಶವನ್ನು ನಾಳಿನ ಸಮಾವೇಶ ನೀಡುತ್ತಿದೆ. ಸಮಗಾರ, ಮೋಚಿ, ಡೋಹಾರ (ತ್ರಿಮಸ್ಥ) ಸಮುದಾಯದ ಮುಖಂಡರು ನಾಳಿನ ಸಮಾವೇಶದಲ್ಲಿ ಮಾತನಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.
“ಕೇವಲ ಎರಡು ಜಾತಿಗಳು ಒಳಮೀಸಲಾತಿಗಾಗಿ ಹೋರಾಡುತ್ತಿವೆ ಎಂಬ ತಪ್ಪು ಕಲ್ಪನೆ ರವಾನೆಯಾಗಿತ್ತು. ಆದರೆ ಈ ಮೂವತ್ತು ವರ್ಷಗಳ ಹೋರಾಟದ ಫಲವಾಗಿ ಎಲ್ಲ ಅಸ್ಪೃಶ್ಯ ಜಾತಿಗಳು ಈಗ ಒಳಮೀಸಲಾತಿಗೆ ಆಗ್ರಹಿಸುತ್ತಿರುವುದು ದೊಡ್ಡ ಬದಲಾವಣೆ. ಇದು ಖುಷಿಯ ಸಂಗತಿ. ಒಳಮೀಸಲಾತಿ ಜಾರಿಯಾಗುವುದಕ್ಕಿಂತ ಹೆಚ್ಚಿನ ಖುಷಿ ಈ ಅಸ್ಪೃಶ್ಯ ಸಮುದಾಯಗಳ ಒಗ್ಗಟ್ಟಿನಿಂದ ಸಿಕ್ಕಿದೆ. ಇದೊಂದು ದೊಡ್ಡ ಯಶಸ್ಸು” ಎಂದು ಬಣ್ಣಿಸಿದರು.
ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಕೇಂದ್ರ ಸರ್ಕಾರವು ಅನುಚ್ಛೇದ 341(3)ಕ್ಕೆ ಕೂಡಲೇ ತಿದ್ದುಪಡಿ ಮಾಡಬೇಕು ಎಂದು ನಾಳಿನ ಸಮಾವೇಶ ಆಗ್ರಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತ್ರಿಮತಸ್ಥರಿಗೆ (ಮೋಚಿ, ಡೋಹಾರ, ಸಮಗಾರ) ಅಭಿವೃದ್ಧಿ ನಿಗಮವನ್ನು ಕೂಡಲೇ ಸ್ಥಾಪಿಸಬೇಕು. ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿಯನ್ನು ಬಹಿರಂಗ ಮಾಡಿ ಯಥಾವತ್ತಾಗಿ ಜಾರಿ ಮಾಡಬೇಕು. ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಮತ್ತು ಛಲವಾದಿಗಳ ಜನಸಂಖ್ಯೆಗೆ ತಕ್ಕಂತೆ ತಲಾ 15 ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಕರ್ನಾಟಕ ರಾಜ್ಯದಲ್ಲಿರುವ 43 ಸಾವಿರ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ನ್ಯಾ. ಎ.ಜೆ. ಸದಾಶಿವ ಆಯೋಗದ ಪರ ಹೋರಾಟಗಾರರ ಮೇಲೆ ಹೂಡಿದ ರೌಡಿಶೀಟರ್ ಪ್ರಕರಣಗಳನ್ನು ರದ್ದುಪಡಿಸಬೇಕು. ದಲಿತ ಸಂಘಟಕರ ಮೇಲೆ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಬೇಕು. ಪರಿಶಿಷ್ಟ ಜಾತಿಗಳ ಉಪ ಹಂಚಿಕೆ ಅನುದಾನವನ್ನು ಒಳಮೀಸಲಾತಿ ಅನ್ವಯ 6 + 5+1+ 3 ಸೂತ್ರದಂತೆ ಹಂಚಿಕೆ ಮಾಡಬೇಕು. ಅನುದಾನ ದುರುಪಯೋಗಕ್ಕೆ ಕಾರಣವಾದ 7(D) ಯನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಲಾಗುತ್ತಿದೆ.