ಲೈಂಗಿಕ ಕಿರುಕುಳದ ಆರೋಪಿ, ಕುಸ್ತಿ ಫೆಡರೇಷನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ ಅವರು ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯ ಕೈಸರ್ಗಂಜ್ನಲ್ಲಿ ಬೃಹತ್ ರ್ಯಾಲಿಯನ್ನು ಭಾನುವಾರ ನಡೆಸಿದ್ದಾರೆ. ಅವರ ಬಂಧನಕ್ಕೆ ಒತ್ತಡ ಹೆಚ್ಚುತ್ತಿರುವದರಿಂದ ತಮ್ಮ ಶಕ್ತಿ ಪ್ರದರ್ಶನಕ್ಕಾಗಿಯೇ ಈ ರ್ಯಾಲಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಖ್ಯಾತ ಕುಸ್ತಿಪಟುಗಳು ಬ್ರಿಜ್ಭೂಷಣ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ದೇಶಾದ್ಯಂತ ಸುದ್ದಿಯಾಗಿದೆ. ಆದರೂ ಕೇಂದ್ರ ಸರ್ಕಾರ ಮಾತ್ರ ತಮ್ಮ ಸಂಸದನ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ ಇದೀಗ ಕೇಂದ್ರದ ಮೇಲೆ ಸಾಕಷ್ಟು ಒತ್ತಡ ಇರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವ ಎಲ್ಲ ಸಾಧ್ಯತೆಗಳಿವೆ ಹಾಗಾಗಿ ಅವರು ಇದೀಗ ಈ ಭಾಗದಲ್ಲಿ ತಮ್ಮ ಶಕ್ತಿ ಕುಂದಿಲ್ಲ ಎನ್ನುವ ಸಂದೇಶವನ್ನು ಬಿಜೆಪಿಗೆ ನೀಡುವ ಉದ್ದೇಶವೂ ಈ ರ್ಯಾಲಿಯ ಹಿಂದಿದೆ ಎಂದು ರಾಜಕೀಯ ವಿಶ್ಲೇಷಕರು ಹಾಗೂ ಸಿಂಗ್ ಅವರ ಆಪ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಒಂಬತ್ತು ವರ್ಷ ಪೂರೈಸಿದ್ದನ್ನು ಸಂಭ್ರಮಿಸಲು ಈ ರ್ಯಾಲಿಯನ್ನು ಆಯೋಜಿಸಿದ್ದಾಗಿ ಸಿಂಗ್ ಅವರು ಹೇಳಿದ್ದಾರೆ. ಆದರೆ ಇದು ಅವರ ಕ್ಷೇತ್ರದಲ್ಲಿ ತಮ್ಮ ಶಕ್ತಿ ಕುಂದಿಲ್ಲ ಎನ್ನುವ ಸಂದೇಶವನ್ನು ನೀಡಲು ಎನ್ನುವುದು ಹಲವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿಡಿಯೋ, ಫೋಟೊ, ವಾಟ್ಸ್ಆ್ಯಪ್ ಚಾಟ್ ಒದಗಿಸುವಂತೆ ಕುಸ್ತಿಪಟುಗಳಿಗೆ ಸಾಕ್ಷ್ಯ ಕೇಳಿದ ಪೊಲೀಸರು
ಈ ರ್ಯಾಲಿಯನ್ನ ಉದ್ದೇಶಿಸಿ ಮಾತನಾಡಿರುವ ಬ್ರಿಜ್ಭೂಷಣ್, ”ಕೆಲವು ಬಾರಿ ದುಃಖವನ್ನು, ಕೆಲವು ಬಾರಿ ನೋವನ್ನು ಅನುಭವಿಸಬೇಕಾಗುತ್ತದೆ, ಕೆಲವು ಸಲ ವಿಷವನ್ನೂ ಕುಡಿಯಬೇಕಾಗುತ್ತದೆ… ಆಗ ಮಾತ್ರವೇ ಈ ಜಗತ್ತಿನಲ್ಲಿ ಬದುಕಲು ಸಾಧ್ಯ” ಎಂಬ ಉರ್ದು ಕವಿತೆಯ ಸಾಲುಗಳ ಮೂಲಕ ಬ್ರಿಜ್ಭೂಷನ್ ಸಿಂಗ್ ಅವರು ತಮ್ಮ ಭಾಷಣವನ್ನು ಆರಂಭಿಸಿದರು.
”ದೇವರು ಇಚ್ಛಿಸಿದ್ದು ನಡೆದೇ ತೀರುತ್ತದೆ ಅಂದಮೇಲೆ ಅದರ ಕುರಿತು ವಾದ ಮಾಡಿ ಪ್ರಯೋಜನವೇನು?” ಎನ್ನುವ ‘ರಾಮಚರಿತ ಮಾನಸ’ದ ಸಾಲುಗಳನ್ನೂ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಈ ರೀತಿ ಅರ್ಥವಿಲ್ಲದೇ ಮಾತನಾಡಿದ ಬ್ರಿಜ್ಭೂಷಣ್ ತಮ್ಮ ಭಾಷಣದಲ್ಲಿ ಒಮ್ಮೆಯೂ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯ ಪ್ರಸ್ತಾಪವನ್ನು ಮಾಡಲಿಲ್ಲ. ಹಾಗೆಯೇ ತಮ್ಮ ಮೇಲಿನ ಆರೋಪಕ್ಕೆ ಸಮಜಾಯಿಷಿಯನ್ನೂ ನೀಡಲಿಲ್ಲ. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಾ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಈ ಬೃಹತ್ ರ್ಯಾಲಿಯಲ್ಲಿ ಮಧ್ಯಪ್ರದೇಶದ ಸಚಿವ, ಉತ್ತರ ಪ್ರದೇಶದ ಐವರು ಶಾಸಕರ ಜೊತೆಗೆ ಬಿಜೆಪಿ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ, ತಾನು ಕೈಸರ್ಗಂಜ್ ಲೋಕಸಭಾ ಕ್ಷೇತ್ರದಿಂದಲೇ ಮತ್ತೊಮ್ಮೆ ಲೋಕಸಭೆಗೆ ಸ್ಪರ್ಧಿಸುತ್ತೇನೆ ಎಂದು ಲೈಂಗಿಕ ಕಿರುಕುಳದ ಆರೋಪಿ, ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ಭೂಷನ್ ಶರಣ್ ಸಿಂಗ್ ಹೇಳಿದರು.
ಕುಸ್ತಿಪಟುಗಳ ಪ್ರತಿಭಟನೆಗೆ ರೈತ ಸಂಘಟನೆಗಳು, ಬೇರೆ ಕ್ರೀಡಾಪಟುಗಳು ಬೆಂಬಲ ಸೂಚಿಸುತ್ತಿರುವುದರಿಂದ ಕೇಂದ್ರ ಸಕಾರ್ರರದ ಮೇಲೆ ಒತ್ತಡ ಹೆಚ್ಚಾಗಿದೆ. ಇತ್ತಿಚೆಗೆ ಕ್ರೀಡಾಸಚಿವ ಅನುರಾಗ ಠಾಕೂರ್ ಅವರು ಜೂ.15ರೊಳಗೆ ತನಿಖೆ ಮುಗಿಸುವ ಭರವಸೆ ನೀಡಿದ್ದಾರೆ. ಹಾಗಾಗಿ ಕ್ರಮ ತೆಗೆದುಕೊಂಡರೆ ಬ್ರಿಜ್ಭೂಷಣ್ ಸಿಂಗ್ ಅವರು, ಪಕ್ಷ ಬಿಡುವ ಯೋಚನೆಯಲ್ಲೂ ಇದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರಿಜ್ಭೂಷಣ್ ಸಿಂಗ್ ಅವರು ಈ ಹಿಂದೆ ಬೇರೆ ಪಕ್ಷದಲ್ಲಿದ್ದರು. ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಸಂಬಂಧ ಅವರ ವಿರುದ್ಧ ಕ್ರಮ ಕೈಗೊಂಡರೆ ಅವರು ಬಿಜೆಪಿಯನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಬಿಜೆಪಿಯ ಕೆಲ ನಾಯಕರು ಹೇಳಿದ್ದಾರೆ. ಬ್ರಿಜ್ಭೂಷಣ್ ಅವರು ಕೆಲವು ದಿನಗಳ ಹಿಂದೆ ಇದಕ್ಕೆ ಪುಷ್ಟಿ ನೀಡುವಂತಹ ಒಂದು ಹೇಳಿಕೆ ನೀಡಿದ್ದರು.
”ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಯಾಕೆಂದರೆ ಅವರಿಗೆ ‘ಸತ್ಯ’ ತಿಳಿದಿದೆ. ಅಖಿಲೇಶ್ನನ್ನು ನಾನು ಆತನ ಸಣ್ಣ ವಯಸ್ಸಿನಿಂದ ನೋಡುತ್ತಿದ್ದೇನೆ. ಉತ್ತರ ಪ್ರದೇಶದ ಶೇ 80ರಷ್ಟು ಕುಸ್ತಿಪಟುಗಳು ಸಮಾಜವಾದಿ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ” ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು.