Homeಮುಖಪುಟಮದುಮಗಳು ರಂಗದ ಹಿಂದಿನ ವಿಶ್ವಮಾನವ ಶಕ್ತಿ

ಮದುಮಗಳು ರಂಗದ ಹಿಂದಿನ ವಿಶ್ವಮಾನವ ಶಕ್ತಿ

- Advertisement -
- Advertisement -

ಇಲ್ಲಿ ಯಾರೂ ಮುಖ್ಯರಲ್ಲ,
ಯಾರೂ ಅಮುಖ್ಯರಲ್ಲ,
ಯಾವುದೂ ಯಃಕಶ್ಚಿತವಲ್ಲ…

ಈ ಮೇರು ತಾತ್ವಿಕತೆಯು ರೂಪತಾಳಿದ್ದು ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ. ವಿಶ್ವಮಾನವ ಸಂದೇಶವನ್ನು ಸಾರಿದ ಕುವೆಂಪುರವರ ಅತ್ಯುತ್ಕೃಷ್ಟ ಗದ್ಯಕೃತಿ ಮಲೆಗಳಲ್ಲಿ ಮದುಮಗಳು. ಇದು ಹಿರಿಯ ರಂಗಕರ್ಮಿ ಬಸವಲಿಂಗಯ್ಯನವರ ನಿರ್ದೇಶನದಲ್ಲಿ ರಂಗರೂಪಕವಾಗಿ ಅಹೋರಾತ್ರಿ ಸಾವಿರಾರು ಪ್ರೇಕ್ಷಕರ ಸಮ್ಮುಖ ನೂರಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು ಈಗ ಇತಿಹಾಸ. ಇದು ಕೇವಲ ಕನ್ನಡ ರಂಗಭೂಮಿ ಮಾತ್ರವೇ ಅಲ್ಲದೇ ಭಾರತೀಯ ರಂಗಭೂಮಿಯ ಇತಿಹಾಸದಲ್ಲೇ ಅಚ್ಚಳಿಯದ ದಾಖಲೆ.

ಓದುಗನಿಗೆ ಕಾದಂಬರಿ ಕಟ್ಟಿಕೊಡುವ ಲೋಕವೇ ಬೇರೆ, ಪ್ರೇಕ್ಷಕನಿಗೆ ರಂಗಪ್ರಯೋಗ ಕಟ್ಟಿಕೊಡುವ ಲೋಕವೇ ಬೇರೆ. ಹಾಗೆಯೇ ಈ ರಂಗಪ್ರಯೋಗದಲ್ಲಿ ಭಾಗಿಯಾಗುವ ಕಲಾವಿದರಿಗೆ ದೊರೆಯುವ ಅನುಭವ ಲೋಕವೇ ಇನ್ನೊಂದು ತೆರನಾದದ್ದು. ಹೀಗಿರುವಾಗ ಇಡೀ ರಂಗಪ್ರಯೋಗದಲ್ಲಿನ ಕೆಲವು ಅನುಭವಗಳು ಇದರಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕಲಾವಿದರಿಗೂ ಆಗಿದೆ ಎಂಬುದು ಅತಿಶಯೋಕ್ತಿ ಅಲ್ಲ.

ಮುಖ್ಯವಾಗಿ ಕುವೆಂಪು ಒಬ್ಬ ದಾರ್ಶನಿಕ ಕವಿ. ಅವರ ’ಜಡವೆಂಬುದು ಕೇವಲ ಜಡವಲ್ಲ ಮಾತು ಈ ಪ್ರಯೋಗದಲ್ಲಿ ಪ್ರಕೃತಿಯ ನಿತ್ಯ ಪ್ರಕ್ರಿಯೆಗಳಾದ ಮಳೆ, ಗಾಳಿ, ಕಲ್ಲು, ಮಣ್ಣು ಎಲ್ಲವೂ ಜೀವ ಪಡೆದು ನಾಟಕದಲ್ಲಿ ಸಜೀವ ಭಾಗಗಳಾಗಿ ಸಾಬೀತುಗೊಳ್ಳುತ್ತಿದ್ದವು. ಇದರೊಂದಿಗೆ ಪ್ರತಿಯೊಬ್ಬ ಕಲಾವಿದರು ಮುಖಾಮುಖಿಗೊಂಡೇ ತಮ್ಮತಮ್ಮ ಪಾತ್ರಗಳನ್ನು ನಿರ್ವಹಿಸಬೇಕಾಗಿತ್ತು. ಇದು ಗುತ್ತಿ ತನ್ನ ಅತ್ತೆ ಮಗಳನ್ನು ಹಾರಿಸಿಕೊಂಡು ಬರಲು ಹೋಗುವಾಗ ದನಗೋಳು ಮಳೆಯಲ್ಲಿ ದೀವರ ಮಕ್ಕಳು ಮೀನು ಹಿಡಿಯಲು ಹೋಗುವ ದೃಶ್ಯದ ಸಂದರ್ಭದಲ್ಲಿ ಆ ಸಂಗೀತ ಮತ್ತು ಮಳೆಯ ಶಬ್ದಗಳು ಪ್ರೇಕ್ಷಕರಿಗೆ ಮಲೆನಾಡಿನ ಅನುಭವ ನೀಡುತ್ತಿದ್ದರೆ, ಅದೇ ಸಂದರ್ಭದಲ್ಲಿ ರಂಗದ ಹಿಂದೆ ಇದ್ದ ಕಲಾವಿದರಿಗೂ ಆ ಅನುಭವವಾಗುತ್ತಿತ್ತು. ಹಾಗೆಯೇ ಗುತ್ತಿಯ ಛಲವನ್ನು ಹೆಚ್ಚಿಸುವ ಸಗಣಿ ಹುಳುಗಳು ಬಂದಾಗ ರಂಗಪ್ರಯೋಗದ ಜಾಗದಲ್ಲಿ ಇದ್ದಂತಹ ಸಣ್ಣ ಸಣ್ಣ ಹುಳು ಹುಪ್ಪಟೆಗಳು ಕೂಡ ಅಲ್ಲಿದ್ದ ಕಲಾವಿದರಿಗೆ ವಿಸ್ಮಯಕಾರಿಯಾಗಿ ಕಾಣುತ್ತಿದ್ದವು.

ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಕಾರಣದಿಂದಾಗಿ ಎಷ್ಟೋ ಪ್ರಯೋಗಗಳು ನಿಂತುಹೋಗಿವೆ. ಇಂತಹ ಮಳೆ ಸುರಿದಾಗ ಮುಖ್ಯವಾಗಿ ಕೆರೆ ಅಂಗಳದಲ್ಲಿ ಮಣ್ಣಿನಿಂದ ಮೇಲೆದ್ದು ಬಂದು ಕಾಲುಕಾಲಿಗೆ ಸಿಗುತ್ತಿದ್ದಂತಹ ಏಡಿಯ ಮರಿಗಳನ್ನು ಎಲ್ಲರೂ ವಿಸ್ಮಯದಿಂದಲೇ ಕಾಣುತ್ತಿದ್ದೆವು. ಏಕೆಂದರೆ ಇಷ್ಟು ದಿನ ಆ ಜಾಗದಲ್ಲಿ ಅವುಗಳ ಕುರುಹೇ ಕಾಣುತ್ತಿರಲಿಲ್ಲ. ಆದರೆ ಒಂದು ಜೋರು ಮಳೆಗೆ ಮಣ್ಣಿನಿಂದ ಮರಿಗಳು ಎದ್ದು ಬಂದು ಕೆರೆಯ ನೀರಿಗೆ ನಡೆದುಹೋಗುತ್ತಿದ್ದವು. ಎಷ್ಟೋ ಕಲಾವಿದರು ಅವುಗಳನ್ನು ಹಿಡಿದು ಜೇಬಿನಲ್ಲಿ ಇಟ್ಟ್ಟುಕೊಂಡು ಪ್ರದರ್ಶನದಲ್ಲಿ ಮತ್ತೊಬ್ಬ ಕಲಾವಿದರ ಕೈಗೆ ಕೊಟ್ಟು ತಮಾಷೆಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ ತಾವು ಆ ಪ್ರಕೃತಿಯ ಭಾಗವಾಗಿಯೇ ಬದುಕುತ್ತಿದ್ದರು.

ಅದೇ ರೀತಿಯಲ್ಲಿ ’ಮಸೇಕಲ್ಲು. ಕುವೆಂಪುರವರು ಮಸೇಕಲ್ಲಿನ ಮುಖಾಂತರ ತಲೆತಲೆಮಾರಿನ ಕತೆಗಳನ್ನು ಸುಬ್ಬಣ್ಣ ಹೆಗ್ಗಡೆಯ ಮೂಲಕ ಹೇಳಿಸುತ್ತಾರೆ. ಈ ಮಾತುಗಳನ್ನು ಸುಬ್ಬಣ್ಣ ಹೆಗ್ಗಡೆ ಹೇಳುವಾಗ ರಂಗದ ಹಿಂದೆ ಕುಳಿತ ಕಲಾವಿದರು ತಮಗೆ ಅರಿವಿಲ್ಲದೆಯೆ ತಾವುಗಳು ಕುಳಿತುಕೊಂಡಿರುವ ಕಲ್ಲುಗಳ ಬಗ್ಗೆ ಚಿಂತಿಸುತ್ತಿದ್ದರು. ಆ ಸಂದರ್ಭದಲ್ಲಿ ಕುವೆಂಪುರವರ ’ಶಿಲಾತಪಸ್ವಿ ಕವನವನ್ನು ಕೆಲವರು ನೆನೆಯುತ್ತಿದ್ದರು. ಇಲ್ಲಿ ಮತ್ತೊಂದು ಮಾತು ಹೇಳುವುದು ಉಚಿತ ಎನಿಸುತ್ತದೆ. ಅಲ್ಲಿದ್ದ ಯಾವ ಕಲಾವಿದರಿಗೂ ಯಾರು ಯಾವ ಜಾತಿ, ಯಾವ ಧರ್ಮ ಎಂದು ಗೊತ್ತಿರಲಿಲ್ಲ. ಎಲ್ಲರೂ ’ಮನುಷ್ಯಜಾತಿತಾನೊಂದೇ ವಲಂ’ ಎಂಬುದನ್ನು ನಂಬಿ ಒಟ್ಟಾಗಿ ಸೇರಿದ್ದವರು. ಹೀಗಿದ್ದರೂ ಹುಲಿಕಲ್ಲು ನೆತ್ತಿ ಹತ್ತುವಾಗ ಕುಸಿದು ಬಿದ್ದ ಸಮಯದಲ್ಲಿ ಸುಬ್ಬಣ್ಣ ಹೆಗ್ಗಡೆಗೆ ಆಸರೆಯಾಗಿ ಬಂದು, ತಮ್ಮ ಹೆಗಲನ್ನು ಕೊಟ್ಟು ದೊಡ್ಡಬೀರ ಮತ್ತು ಆತನ ಮಗ ಕರೆದುಕೊಂಡು ಹೋಗುವಾಗ ಇಷ್ಟು ದಿನ ಜಾತಿ ವ್ಯವಸ್ಥೆಯನ್ನು ಬಲವಾಗಿ ನಂಬಿದ್ದ ಸುಬ್ಬಣ್ಣ ಹೆಗ್ಗಡೆಗೆ ಮಾನವಧರ್ಮದ ಪರಿಚಯವಾಗುತ್ತಿತ್ತು. ಈ ಸಂದರ್ಭದಲ್ಲಿ ಎಷ್ಟೋ ಕಲಾವಿದರು ತಮ್ಮ ಪಕ್ಕದ ಕಲಾವಿದರ ಕೈಕೈ ಹಿಡಿದು ಗಟ್ಟಿ ಮಾಡಿಕೊಳ್ಳುತ್ತಿದ್ದುದು ಆಗಿದೆ. ಪ್ರತಿಯೊಬ್ಬರಲ್ಲೂ ಸುಪ್ತವಾಗಿ ಇದ್ದಂತಹ ವಿಶ್ವಮಾನವಗುಣ ಎದ್ದು ಹೊರಬಂದಂತೆ ಕಾಣುತ್ತಿತ್ತು. ಆಗ ಕುವೆಂಪುರವರ ವಿಶ್ವಮಾನವಗೀತೆಯ ’ನೂರು ಮತದ ಹೊಟ್ಟ ತೂರಿ, ಎಲ್ಲತತ್ವದೆಲ್ಲೆ ಮೀರಿ, ನಿರ್ದಿಗಂತವಾಗಿ ಏರಿ, ಓ ನನ್ನ ಚೇತನ ಆಗು ನೀ ಅನಿಕೇತನ’ ಸಾಲು ನೆನಪಾಗುತ್ತಿತ್ತು.

ಕುವೆಂಪುರವರು ಕಲಾವಿದರ ಮೇಲೆ ಎಷ್ಟು ಪ್ರಭಾವ ಬೀರಿದ್ದರು ಎಂಬುದಕ್ಕೆ ಮತ್ತೊಂದು ಉದಾಹಾರಣೆ ಎಂದರೆ ಅವರು ಪ್ರತಿಪಾದಿಸಿದ ಮಹತ್ವಾಕಾಂಕ್ಷೆಯ ’ಮಂತ್ರಮಾಂಗಲ್ಯ ವಿವಾಹ. ಇದರಿಂದ ಪ್ರೇರಣೆಯಾಗಿ ನಮ್ಮ ಕಲಾವಿದರಲ್ಲೇ ಐದು ಜೋಡಿಗಳು ಪ್ರೇಮ-ವಿವಾಹವಾಗಿದ್ದು ಸಂತಸದ ಸಂಗತಿ. ಇದು ಕೇವಲ ಕಲಾವಿದರು ಮಾತ್ರವಲ್ಲ ಎಷ್ಟೋ ಪ್ರೇಕ್ಷಕರಲ್ಲೂ ಕೂಡ ಪ್ರೇಮಾಂಕುರಕ್ಕೆ ಕಾರಣವಾಗಿ ಲೆಕ್ಕವಿಲ್ಲದಷ್ಟು ಮಂತ್ರಮಾಂಗಲ್ಯಗಳು ನಡೆದಿವೆ. ಅದು ಒತ್ತಟ್ಟಿಗಿರಲಿ, ಮದುಮಗಳು ರಂಗಪ್ರಯೋಗದ ಕಲಾವಿದ ತರುಣತರುಣಿಯರಲ್ಲಿ ಪ್ರೇಮಾಂಕುರವಾಗಿ ಅವರು ತಮ್ಮ ಮನೆಯವರ ಒಪ್ಪಿಗೆಯನ್ನು ಪಡೆದು ವಿವಾಹವಾಗಿದ್ದು, ಮತ್ತು ಅವರ ಮನೆಯವರು ಈ ವಿವಾಹಕ್ಕೆ ಬೆಂಗಾವಲಾಗಿ ನಿಂತಿದ್ದು ವಿಶೇಷಗಳಲ್ಲಿ ವಿಶೇಷ. ಅದರಲ್ಲೂ ಪ್ರತಿ ಎರಡು ಮೂರು ವರ್ಷಕ್ಕೆ ಕೆಲವು ಪ್ರದರ್ಶನಗಳಂತೆ ನಡೆಯುತ್ತಿದ್ದ ಮದುಮಗಳ ಪ್ರತಿ ದಿಬ್ಬಣದಲ್ಲೂ ಈ ರೀತಿಯ ಒಂದಲ್ಲ ಒಂದು ಪ್ರೇಮವಿವಾಹ ಮಂತ್ರಮಾಂಗಲ್ಯದ ಮೂಲಕ ಜರುಗುತಿತ್ತು.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಎಲ್ಲಕ್ಕೂ ಮುಖ್ಯವಾಗಿ ಮದುಮಗಳು ಶತಕದ ಸಂಭ್ರಮದ ನಂತರ ನಡೆದ ವಿವಾಹ ವಿಶೇಷಗಳಲ್ಲೇ ವಿಶೇಷ. ಐತ ಪಾತ್ರಧಾರಿ ’ಸ್ವಾಮಿ’ ಹಾಗೂ ಕಾವೇರಿ ಮತ್ತು ತಿಮ್ಮಿ ಪಾತ್ರವನ್ನು ನಿರ್ವಹಿಸಿದ್ದ ’ಮೀನಾಕ್ಷಿಯ ಪ್ರೇಮವಿವಾಹವು ಮದುಮಗಳು ರಂಗಭೂಮಿಯಲ್ಲೇ ಮಂತ್ರಮಾಂಗಲ್ಯದ ಮೂಲಕ ಜರುಗಿದ್ದು ಅವಿಸ್ಮರಣೀಯ. ಆಗ ಎಲ್ಲಾ ಕಲಾವಿದರು ತಮ್ಮ ಮನೆಯ ಮದುವೆಯೇ ಎಂಬಂತೆ ಸಂಭ್ರಮಿಸಿದರು. ಅಂದು ಹಬ್ಬದ ವಾತಾವರಣದಿಂದ ಇಡೀ ಮದುಮಗಳು ತಂಡ ತೇಲಾಡುತ್ತಿತ್ತು. ಆ ಮೂಲಕ ಕುವೆಂಪುರವರ ಚಿಂತನೆಗಳು ನಮ್ಮ ಬದುಕಿನ ದಾರಿದೀಪವಾಯಿತು.

ಕುವೆಂಪುರವರ ಸ್ತ್ರೀವಾದ ಅತ್ಯಂತ ಮಾನವೀಯ ಮೌಲ್ಯಗಳಿಂದ ಕೂಡಿರುವಂತಹದ್ದು. ಅವರ ಎರಡೂ ಕಾದಂಬರಿಗಳೂ ಹೆಣ್ಣನ್ನು ಕೇಂದ್ರವಾಗಿಸಿಕೊಂಡು ರಚಿಸಿದವು. ನಮ್ಮೊಳಗಿನ ಆಧುನಿಕತೆಯ ಭ್ರಮೆಯನ್ನು ಕೂಡ ಅವು ಮರು ವಿವೇಚನೆಗೆ ಒಳಪಡಿಸುತ್ತದೆ. ದೇಯಿ ಪಾತ್ರದ ಸಾವಿನಲ್ಲಿ ಚೀಂಕ್ರನ ವರ್ತನೆ. ಜೊತೆಗೆ ಕಾವೇರಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಸಾವಿಗೆ ಕಾರಣವಾಗುವ ಚೀಂಕ್ರ ಮತ್ತು ಅವನ ಸಹಚರರ ದೃಶ್ಯಗಳು ರಂಗದ ಮೇಲೆ ನಡೆಯುತ್ತಿದ್ದರೆ ರಂಗದ ಹಿಂದೆ ಇದ್ದಂತಹ ಹುಡುಗರಿಗೆ ತಮ್ಮೊಳಗಿನ ಗಂಡು ಅಹಂಗೆ ಪೆಟ್ಟು ಬಿದ್ದಂತಾಗಿ ಜಾಗೃತಗೊಳ್ಳುತ್ತಿದ್ದೆವು.

ಇದೇ ರೀತಿ ನಮ್ಮದೇ ತಂಡದ ಕಲಾವಿದೆ ’ಮಾದೇವಿ’ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಇಂದಿಗೂ ತಂಡದ ಪ್ರತಿ ಕಲಾವಿದನಿಗೂ ಮರೆಯಲಾಗದ ನೋವಿನ ಸಂಗತಿಯಾಗಿದೆ. ಅಲ್ಲದೇ ಪ್ರತಿ ಸರಣಿಯಲ್ಲೂ ನಮ್ಮ ಒಂದು ಪ್ರದರ್ಶನವನ್ನು ಮಾದೇವಿಗೆ ಅರ್ಪಿಸುತ್ತ್ತಿದ್ದವು. ಅದೇನೇ ಇರಲಿ ಕಾವೇರಿ ಸಾವಿನ ನಂತರ ಬರುತ್ತಿದ್ದ ಡಾ.ಕೆ.ವೈ ನಾರಾಯಣಸ್ವಾಮಿಯವರು ರಚಿಸಿದ ’ದೇವರೆಂಬುದು ಒಂದು ಉರುಳು, ಸಿಲುಕಿದೆ ಅದರಲಿ ಮನುಜನ ಕೊರಳು, ಆ ಮತ ಈ ಮತ ಎನ್ನುವುದು ಅದರ ನೆರಳು, ನಾಮವ ನೇಮವ ಕೊರಕಲು ದಾಟಿ ನೀ ವಿಶ್ವ ಪಥಕೆ ಮರಳು ಮರಳು…’ ಗೀತೆ ಎಲ್ಲರನ್ನು ವಿಶ್ವಮಾನವತತ್ವದೆಡೆಗೆ ಕರೆಯುತ್ತಿತ್ತು.

ಒಟ್ಟಿನಲ್ಲಿ ನಾಟಕ ಮುಗಿದು ಎಲ್ಲಾ ಕಲಾವಿದರು ತಮ್ಮತಮ್ಮ ಮನೆಗಳಿಗೆ ಹೊರಡುವಾಗ ಎಲ್ಲರಿಗೂ ಏನೋ ಕಳೆದುಕೊಳ್ಳುತ್ತಿರುವ ದುಃಖದೊಂದಿಗೆ ಕುವೆಂಪುರವರ ’ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ ಎಂಬ ಮುನ್ನುಡಿಯು ಅಕ್ಷರಶಃ ಅರಿವಿಗೆ ಬಂದೇ ಬರುತ್ತಿತ್ತು. ಇದರೊಂದಿಗೆ ಇಂತಹ ರಂಗಪ್ರಯೋಗದ ಭಾಗವಾಗಿದ್ದಕ್ಕೆ ಎಲ್ಲರಲ್ಲೂ ಧನ್ಯತೆಯ ಭಾವವೊಂದು ಮೂಡುತಿತ್ತು. ಹೀಗೆ ವಿಶ್ವದ ಮೂಲೆಮೂಲೆಗೂ ರಂಗಭೂಮಿ ಒಂದಲ್ಲ ಒಂದು ರೀತಿ ಮಾನವೀಯತೆಯ ಔಷಧಿಯನ್ನು ಉಣಿಸುತ್ತಿದೆ. ಹೀಗಿರುವಾಗ ವಿಶ್ವಮಾನವನ ಮೇರುಕೃತಿ ಮದುಮಗಳು ರಂಗಪ್ರಯೋಗದ ಮೂಲಕ ವಿಶ್ವಮಾನವ ಸಂದೇಶ ಕಲಾವಿದರ ಎದೆಗೆ ಇಳಿದಿರುವುದರಲ್ಲಿ ಅಚ್ಚರಿಯಿಲ್ಲ.

ಪುನೀತ್ ಕುಮಾರ್

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ, ರಂಗನಟ. ನಾಟಕಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಇವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ ಪಾದ್ರಿ ಜೀವರತ್ನಯ್ಯ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: Too Much Democracy: ಹೆಚ್ಚು ಪ್ರಜಾಪ್ರಭುತ್ವಕ್ಕೆ ಅತಿ ಪ್ರಜಾಪ್ರಭುತ್ವವೇ ಪರಿಹಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...