ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ಡಿಎ ಸರ್ಕಾರ 12 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದೆ ಅಥವಾ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ 2026ರ ಜೂನ್ 9ಕ್ಕೆ ಎರಡು ವರ್ಷಗಳು ಪೂರ್ಣಗೊಂಡಿವೆ.
ಬಿಜೆಪಿ ಮತ್ತು ಕೇಂದ್ರ ಸಚಿವರು ಈ ಮೈಲಿಗಲ್ಲನ್ನು “12 ವರ್ಷಗಳ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ”ಎಂಬ ಹೆಸರಿನಲ್ಲಿ ಆಚರಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ದೇಶದ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ನೀಡಲಾಗುತ್ತಿರುವ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಸಂಖ್ಯೆಯನ್ನು ಒಂಬತ್ತರಿಂದ ನಾಲ್ಕಕ್ಕೆ ಇಳಿಸಲಾಗಿದೆ ಎಂಬುವುದಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸೂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೋದಿ ಸರ್ಕಾರಕ್ಕೆ 12 ವರ್ಷ, 12 ರಿಂದ 4ಕ್ಕೆ ಇಳಿದ ಸಿಲಿಂಡರ್ಗಳ ಸಂಖ್ಯೆ
ಮೋದಿ ಸರ್ಕಾರ ಜೂನ್ 9, 2026ಕ್ಕೆ 12 ವರ್ಷಗಳನ್ನು ಪೂರೈಸಿದೆ. ಇದೇ ವೇಳೆ 12 ಇದ್ದ ಉಜ್ವಲ ಯೋಜನೆಯ ಸಿಲಿಂಡರ್ಗಳ ಸಂಖ್ಯೆ 4ಕ್ಕೆ ಇಳಿದಿದೆ.
2016ರಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದಾಗ, ಫಲಾನುಭವಿಗಳು ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್ಗಳನ್ನು ಪಡೆಯುತ್ತಾರೆ ಎಂದು ಸರ್ಕಾರ ಘೋಷಣೆ ಮಾಡಿತ್ತು. ಕಳೆದ ವರ್ಷ, ಈ ಸಂಖ್ಯೆಯನ್ನು 9ಕ್ಕೆ ಇಳಿಸಲಾಗಿತ್ತು. ಈಗ ಅದನ್ನು ನಾಲ್ಕಕ್ಕೆ ಇಳಿಸಲಾಗಿದೆ.
ಮೋದಿ ಸರ್ಕಾರ ಸಿಲಿಂಡರ್ಗಳ ಸಂಖ್ಯೆಯನ್ನು ಇಳಿಸಲು ಪಶ್ಚಿಮ ಏಷ್ಯಾ ಸಂಘರ್ಷದಿಂದ ಎಲ್ಪಿಜಿ ಪೂರೈಕೆಯಲ್ಲಿ ಅಡಚಣೆಯಾಗಿರುವುದೇ ಕಾರಣ ಎಂದು ಕೆಲ ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ಇದು ನಿಜವೇ ಆದರೆ, ಪಶ್ಚಿಮ ಏಷ್ಯಾ ಸಂಘರ್ಷದಿಂದ ನಮ್ಮ ದೇಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮೋದಿ ಕೈಯಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸುಳ್ಳಾ? ಎಂಬ ಪ್ರಶ್ನೆ ಮೂಡುತ್ತದೆ.
ಒಂದು ವೇಳೆ ಸಿಲಿಂಡರ್ಗಳ ಸಂಖ್ಯೆ ಇಳಿಕೆಗೆ ಪಶ್ಚಿಮ ಏಷ್ಯಾ ಸಂಘರ್ಷ ಕಾರಣವಲ್ಲ ಎಂದರೆ, ಇನ್ನೇನು ಕಾರಣ ಎಂಬುವುದನ್ನು ಸರ್ಕಾರ ಮತ್ತು ಅದನ್ನು ಸಮರ್ಥಿಸುವ ಬಿಜೆಪಿಗರು ಉತ್ತರಿಸಬೇಕಷ್ಟೆ.
2016 ರಿಂದ 10 ಕೋಟಿಗೂ ಹೆಚ್ಚು ಕುಟುಂಬಗಳು ಉಜ್ವಲ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಂಡಿವೆ. 2024-25 ಮತ್ತು 2025-26 ರ ಹಣಕಾಸು ವರ್ಷಗಳಲ್ಲಿ ಈ ಯೋಜನೆಯಡಿಯಲ್ಲಿ ಸಬ್ಸಿಡಿ ಹಂಚಿಕೆ ಸುಮಾರು 12,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಸಿಲಿಂಡರ್ ಕಡಿತ- ಕಾಂಗ್ರೆಸ್ ಟೀಕೆ
ಸಬ್ಸಿಡಿ ಸಿಲಿಂಡರ್ ಕಡಿತದಿಂದ ಫಲಾನುಭವಿ ಮಹಿಳೆಯರ ಮೇಲೆ ವರ್ಷಕ್ಕೆ 24,792 ಕೋಟಿ ರೂ. ಹೊರೆಯಾಗಲಿದೆ ಎಂದು ಕಾಂಗ್ರೆಸ್ ವಕ್ತಾರ ಸುರ್ಜೇವಾಲ ಹೇಳಿಕೆ ನೀಡಿದ್ದಾರೆ.
“ಮೋದಿ ನೇತೃತ್ವದ ಸರ್ಕಾರ ತನ್ನನ್ನು ತಾನು ಮಹಿಳಾ ಕಲ್ಯಾಣದ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಿದ್ದರೂ, ಬಡ ಗೃಹಿಣಿಯರನ್ನು ನಿರ್ಲಕ್ಷಿಸುತ್ತಿದೆ. ಸರ್ಕಾರ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಸ್ಥಿರವಾಗಿ ಹಿಂಪಡೆಯುತ್ತಿದೆ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ನೀಡಿದ್ದ ಭರವಸೆಯನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
“2016ರಲ್ಲಿ ಉಜ್ವಲ ಯೋಜನೆಯು ಮಹಿಳೆಯರಿಗೆ ಹೊಗೆಯುಗುಳುವ ಕಟ್ಟಿಗೆ ಒಲೆಗಳಿಂದ ಮುಕ್ತಿ ನೀಡಲಿದೆ ಎಂದು ಮೋದಿ ಹೇಳಿದ್ದರು. ವರ್ಷಕ್ಕೆ 12 ಸಬ್ಸಿಡಿ ಸಹಿತ ಸಿಲಿಂಡರ್ಗಳನ್ನು ಪೂರೈಸಲಾಗುವುದು ಎಂದು ಭರವಸೆಯನ್ನೂ ನೀಡಲಾಗಿತ್ತು. ಆದರೆ, ಕಳೆದ ವರ್ಷ ಈ ಸಂಖ್ಯೆಯನ್ನು 12ರಿಂದ 9ಕ್ಕೆ ಇಳಿಕೆ ಮಾಡಲಾಯಿತು. ಇದೀಗ 2026ರಲ್ಲಿ ಸಬ್ಸಿಡಿ ಸಹಿತ ಸಿಲಿಂಡರ್ಗಳ ಸಂಖ್ಯೆಯನ್ನು 9ರಿಂದ 4ಕ್ಕೆ ಇಳಿಕೆ ಮಾಡಲಾಗಿದೆ. ಕ್ಲಪ್ತವಾಗಿ ಹೇಳುವುದಾದರೆ, 12 ಸಿಲಿಂಡರ್ಗಳನ್ನು ಪೂರೈಸುವ ಭರವಸೆ ನೀಡಲಾಗಿತ್ತು. ಆದರೆ, ಆ ಸಂಖ್ಯೆ ಇದೀಗ ಕೇವಲ 4ಕ್ಕೆ ಇಳಿಕೆಯಾಗಿದೆ” ಎಂದು ಖರ್ಗೆ ಬೊಟ್ಟು ಮಾಡಿದ್ದಾರೆ.
“ಪದೇ ಪದೇ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಏರಿಕೆ ಮಾಡುತ್ತಿರುವುದರಿಂದ, ಫಲಾನುಭವಿಗಳ ಪಾಲಿಗೆ ಎಲ್ಪಿಜಿ ಸಿಲಿಂಡರ್ ದುಬಾರಿಯಾಗಿ ಪರಿಣಮಿಸಿದೆ ಎಂದೂ ಅವರು ದೂರಿದ್ದಾರೆ. ಬಲವಂತವಾಗಿ ಸಿಲಿಂಡರ್ ಗಳನ್ನು ಕೈಬಿಡುವಂತೆ ಮಾಡಲಾಗುತ್ತಿದೆ. ಇದರಿಂದ ತಾಯಂದಿರು ಹಾಗೂ ಸಹೋದರಿಯರು ಸಾಂಪ್ರದಾಯಿಕ ಒಲೆಗಳಿಗೆ ಮೊರೆ ಹೋಗುವ ಅನಿವಾರ್ಯತೆಗೆ ತುತ್ತಾಗಿದ್ದಾರೆ. ಅವರ ಕಷ್ಟಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಮೋದಿ ಸರ್ಕಾರ, ಅಧಿಕಾರದ ಮದವೇರಿಸಿಕೊಂಡಿದೆ!” ಎಂದು ಅವರು ತೀಕ್ಷ್ಣ ಟೀಕಾಪ್ರಹಾರ ನಡೆಸಿದ್ದಾರೆ.


