ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ವ್ಯವಸ್ಥೆಯನ್ನು, ವ್ಯಕ್ತಿಯನ್ನು ಟೀಕಿಸಿದ ಮಾತ್ರಕ್ಕೆ ಪೊಲೀಸರು ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ವಿಚಾರಣೆ ನಡೆಸಿರುವುದು ಖಂಡನೀಯ. ಯಾರೋ ಹೇಳಿದ ಮಾತ್ರಕ್ಕೆ ಹೀಗೆ ವಿಚಾರಣೆ ನಡೆಸುವುದಾದರೆ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಇಲ್ಲೇ ಗೂಟ ಹೊಡ್ಕಂಡ್ ಇರ್ತಾರಾ ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬರಿಗೂ ಅಭಿವ್ಯಕ್ತಿ, ವಾಕ್ ಸ್ವಾತಂತ್ರ್ಯಇದೆ. ರಾಜಕೀಯ ವ್ಯವಸ್ಥೆಯ ಕುರಿತು ರಾಜಕೀಯ ವ್ಯಕ್ತಿಗಳ ಬಗ್ಗೆ ಟೀಕೆ ಮತ್ತು ಪ್ರಶಂಸೆ ಮಾಡಲು ಹಕ್ಕು ಇದೆ. ವ್ಯವಸ್ಥೆ ಕೆಟ್ಟುಹೋಗಿರುವ ಬಗ್ಗೆ ಹಲವರಿಗೆ ನೋವಿದೆ. ಈ ಕುರಿತು ಅದು ವೇದಿಕೆಗಳಲ್ಲಿ ವ್ಯಕ್ತವಾಗುತ್ತಿದೆ. ಹಾಗೆಯೇ ಹಂಪಾ ನಾಗರಾಜಯ್ಯ ಕೂಡ ಟೀಕಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರನ್ನು ಕರೆದು ವಿಚಾರಣೆ ನಡೆಸಿರುವುದು ಸಾಹಿತಿಗಳಿಗೆ ಮಾಡಿರುವ ಅವಮಾನ. ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಂಪನಾ ವಿರುದ್ಧ ರಾಜ್ಯ ಸರಕಾರದ ಕ್ರಮ, ಕೀಚಕ ನಡೆಯ ಪ್ರತೀಕ – ಡಿ.ಕೆ. ಶಿವಕುಮಾರ್ ಟೀಕೆ
ಮಧುಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೆ.ಎನ್.ರಾಜಣ್ಣ, ಹಂಪ.ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಪಾರ ಸಾಹಿತ್ಯ ಸೃಷ್ಟಿಸಿದ್ದಾರೆ. ಅಂಥ ವ್ಯಕ್ತಿತ್ವವುಳ್ಳ ಅವರು ಈಗಿನ ವ್ಯವಸ್ಥೆ ಬಗ್ಗೆ ಬೇಸರದ, ನೋವಿನ ನುಡಿಗಳನ್ನಾಡಿದ್ದಾರೆ. ವ್ಯವಸ್ಥೆ ಬಗ್ಗೆ ಟೀಕಿಸಿದ್ದಾರೆ. ಈ ಬಗ್ಗೆ ಯಾರೋ ಒಬ್ಬ ವ್ಯಕ್ತಿ ಹೇಳಿದ ಎಂಬ ನೆಪವೊಡ್ಡಿ ಠಾಣೆಗೆ ಕರೆಸಿ ಅವಮಾನ ಮಾಡುವುದು ಅಕ್ಷಮ್ಯ ಎಂದು ಟೀಕಿಸಿದ್ದಾರೆ.
ಹಂಪನಾ ಯಾವುದೇ ಅಪರಾಧ ಮಾಡಿಲ್ಲ. ಸಾಹಿತಿಗಳು ಸಮಾಜವನ್ನು ಸೂಕ್ಷ್ಮದೃಷ್ಟಿಯಿಂದ ನೋಡುವ ಮನಸ್ಸುಳ್ಳವರು. ಅವರನ್ನು ಹೀಗೆ ಠಾಣೆಗೆ ಕರೆಸುವಂತಹ ತಪ್ಪು ಮಾಡಿದ್ದು ಕೂಡಲೇ ಸರ್ಕಾರ ಇದಕ್ಕೆ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಜನವರಿ 20ರಂದು ಬೆಂಗಳೂರಿನ ಕಾಂಗ್ರೆಸ್ ರೈತರ ಬೃಹತ್ ಮೆರವಣಿಗೆ ನಡೆಸಿತ್ತು. ಆ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಇದು ಸಹಜ ಕೂಡ. ಬಿಜೆಪಿ ಪ್ರತಿಭಟನೆಗಳಲ್ಲಿ ಇಂತಹ ಘಟನೆಗಳು ನಡೆದಿಲ್ಲವೇ? ಎಂದು ಪ್ರಶ್ನಿಸಿರುವ ರಾಜಣ್ಣ, ಸೌಮ್ಯರೆಡ್ಡಿ ಅವರ ಮೇಲೆ ಪ್ರಕರಣ ದಾಖಲಿಸಿರುವುದಕ್ಕೆ ಸಿಡಿಮಿಡಿ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಿರಿಯ ಸಾಹಿತಿ, ನಾಡೋಜ ಹಂಪನಾರನ್ನು ಠಾಣೆಗೆ ಕರೆಸಿ ಪೊಲೀಸ್ ವಿಚಾರಣೆ: ವ್ಯಾಪಕ ಖಂಡನೆ
ಪ್ರತಿಭಟನೆಯ ವೇಳೆ ಕರ್ತವ್ಯದಲ್ಲಿದ್ದ ಹೋಂಗಾರ್ಡ್ ಒಬ್ಬರಿಂದ ದೂರು ಪಡೆದು ಸೌಮ್ಯರೆಡ್ಡಿ ಮೇಲೆ ಕೇಸು ಹಾಕಿದ್ದಾರೆ. ಸೆಕ್ಸನ್- 323 ನೂಕಾಟ, ಸೆಕ್ಷನ್ 353 ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ. ಮೇಲಿನವರ ಮಾತು ಕೇಳಿಕೊಂಡು ಪೊಲೀಸರು ಹೀಗೆ ಕೇಸು ಹಾಕುವುದಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ ಇಲ್ಲೇ ಗೂಟ ಹೊಡ್ಕಂಡ್ ಕೂತಿರ್ತಾರಾ ಎಂದು ಲೇವಡಿ ಮಾಡಿದರು.
ಹೋಂಗಾರ್ಡ್ ಯಾವ ಸರ್ಕಾರಿ ಅಧಿಕಾರಿ. ಇದು ಅರ್ಥವಾಗಬೇಕಲ್ಲವೇ ಪೊಲೀಸರಿಗೆ? ಇವರಿಗೇ ಮಾನ ಮರ್ಯಾದೆ ಇಲ್ಲ. ಸೌಮ್ಯರೆಡ್ಡಿ ಮೇಲೆ ಹಾಕಿರುವ ಕೇಸನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ರಾಜ್ಯ ಸರ್ಕಾರ ಮತ್ತು ವ್ಯವಸ್ಥೆಯೇ ಕಾರಣ ಆಗುತ್ತದೆ ಎಂದು ಎಚ್ಚರಿಸಿದರು.
ಕಮಲ್ ಪಂಥ್ ಇರಬಹುದು, ಮತ್ತೊಬ್ಬರು ಇರಬಹುದು. ಇವರೆಲ್ಲಾ ಏನು ತಿಳಿದುಕೊಂಡಿದ್ದಾರೆ. ಐಪಿಎಸ್ ಅಂದರೆ ಸಂವಿಧಾನ, ಕಾನೂನು ಪ್ರಕಾರ ಕೆಲಸ ಮಾಡಬೇಕು. ಯಾರೋ ಒಬ್ಬ ಕೂತ್ಕೊಂಡು ಅವನ ತೀಟೆ ತೀರಿಸಿಕೊಳ್ಳೋಕೆ ಹೇಳಿದ ಅಂತಾ ಕೆಲಸ ಮಾಡೋದಾದ್ರೆ ಅಂಥವರು ನಾಲಾಯಕ್. ಯಡಿಯೂರಪ್ಪ ಆಗಲಿ, ಮೋದಿ ಆಗಲಿ ಇಲ್ಲೇ ಇರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಬದಲಾವಣೆ ಬಯಸಿದರೆ ಅದು ಆಗ್ತದೆ. ವ್ಯವಸ್ಥೆಯಲ್ಲಿ ಜನರ ಸ್ವಾಸ್ಥ್ಯ, ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಇದನ್ನು ಮರೆಯಬಾರದು. ಯಾರನ್ನೋ ಖುಷಿಪಡಿಸಲು ಈ ರೀತಿ ಕ್ರಮ ತೆಗೆದುಕೊಳ್ಳುವ ಪ್ರವೃತ್ತಿ ಒಳ್ಳೆಯದಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಜನರು ಆಡಳಿತದ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಡೈನಾಮೈಟ್ ಸ್ಫೋಟ: ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ, ತನಿಖೆಗೆ ಆದೇಶ
