ರಾಜ್ಯದಲ್ಲಿ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಮೇಲೆ 10 ಸಾವಿರಕ್ಕೂ ಅಧಿಕ SC/ST ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸದನದಲ್ಲಿ ಮಾಹಿತಿ ನೀಡಿದ್ದಾರೆ.
ಗುರುವಾರ ಪರಿಷತ್ತಿನ ಪ್ರಶೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ಡಿ.ತಿಮ್ಮಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2018-23ರ ತನಕ ವರ್ಷದಿಂದ ವರ್ಷಕ್ಕೆ ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅದೇ ರೀತಿ ಚಾರ್ಜ್ ಶೀಟ್ಗಳನ್ನು ದಾಖಲು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
”ರಾಜ್ಯದಲ್ಲಿ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಮೇಲೆ 10,883 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 8,457 ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹಾಗೆಯೇ 1,542 ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಲಾಗಿದೆ” ಎಂದು ತಿಳಿಸಿದ್ದಾರೆ.
”ಈ ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆಗೆ ಹಾಜರಾಗುವ ಸಂತ್ರಸ್ತರು ಮತ್ತು ಸಾಕ್ಷಿದಾರರಿಗೆ ಪ್ರಯಾಣ ಭತ್ಯೆ ದಿನಭತ್ತೆ, ಸಾಕ್ಷಿದಾರರಿಗೆ ಆಹಾರ ಭತ್ತೆ, ವಿಶೇಷ ವೈದ್ಯಕೀಯ ಔಷಧಿ ಹಾಗೂ ಇನ್ನಿತರ ವೆಚ್ಚದ ದರವನ್ನು ಪರಿಷ್ಕರಿಸಲಾಗಿದೆ. ಸಾಕ್ಷಿದಾರರಿಗೆ ಭತ್ತೆಗಳನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಜಿಲ್ಲೆಗಳ ಜಂಟಿ ಮತ್ತು ಉಪನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ” ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
SC/ST ಕಾಯಿದೆ:
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ, 1989ಅನ್ನು ಭಾರತದ ಸಂಸತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ ದೌರ್ಜನ್ಯಗಳು ಮತ್ತು ದ್ವೇಷದ ಅಪರಾಧಗಳನ್ನು ತಡೆಗಟ್ಟಲು ಜಾರಿಗೆ ತಂದಿದೆ . ಈ ಕಾಯಿದೆಯನ್ನು SC/ST ಕಾಯಿದೆ ಅಂತಲೇ ಕರೆಯಲಾಗುತ್ತದೆ. ‘ದೌರ್ಜನ್ಯ ಕಾಯ್ದೆ’ ಅಂತಲೂ ಕರೆಯಲಾಗುತ್ತದೆ .
ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ ಮೇಲೆ ನಿರಂತರವಾದ ಅವಮಾನಗಳು ಮತ್ತು ದೌರ್ಜನ್ಯಗಳು ನಡೆಯುತ್ತಿರುವ ಕಾರಣ ಈ ಅಪರಾಧಗಳನ್ನು ಗುರುತಿಸಿ, ಸಂಸತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯಿದೆ, 1989 ಅನ್ನು ಅಂಗೀಕರಿಸಿತು. ಈ ಕಾಯಿದೆಯನ್ನು 11 ಸೆಪ್ಟೆಂಬರ್ 1989 ರಂದು ಭಾರತದ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು ಮತ್ತು 30 ಜನವರಿ 1990 ರಂದು ಅಧಿಸೂಚಿಸಲಾಯಿತು.
ಇದನ್ನೂ ಓದಿ: ಸಾಗರದ ದಲಿತ ವಿದ್ಯಾರ್ಥಿನಿ ಪ್ರಕರಣ; ವಸತಿ ಶಾಲೆ ಮುಖ್ಯಸ್ಥನ ವಿರುದ್ಧ ‘ಪೋಕ್ಸೋ’, ‘ಅಟ್ರಾಸಿಟಿ’ ಕೇಸ್ ದಾಖಲು