2022ರ ಅಂತ್ಯದ ವೇಳೆಗೆ ದೇಶಾದ್ಯಂತ 5,000 ಕ್ಕೂ ಹೆಚ್ಚು ಜನ ವಿಚಾರಣಾಧೀನ ಖೈದಿಗಳು ಜಾಮೀನು ಸಿಕ್ಕರೂ ಸಹ ಬಿಡುಗಡೆಯಾಗಿಲ್ಲ ಎಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ. ಹಣದ ಬಾಂಡ್, ಶ್ಯೂರಿಟಿ ಇತ್ಯಾದಿ ಜಾಮೀನು ಷರತ್ತುಗಳನ್ನು ಪೂರೈಸಲು ಸಾಧ್ಯವಾಗಿಲ್ಲವಾದ್ದರಿಂದ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಎರಡಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಹೊಂದಿರುವವರು ಸಹ ಬಿಡುಗಡೆಯಾಗಿಲ್ಲ.
ಕಳೆದ ವರ್ಷದ ನವೆಂಬರ್ 29 ರಂದು ಸುಪ್ರೀಂ ಕೋರ್ಟ್ ಜಾಮೀನು ಷರತ್ತುಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಮಾಹಿತಿಯನ್ನು ಒದಗಿಸುವಂತೆ ರಾಜ್ಯಗಳಿಗೆ ನಿರ್ದೇಶಿಸಿದ ನಂತರ ಈ ಡೇಟಾವನ್ನು ಒದಗಿಸಲಾಗಿದೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ರಾಜ್ಯ ಪ್ರಾಧಿಕಾರಗಳಿಗೆ ಈ ಕುರಿತು ಮಾಹಿತಿ ಸಂಗ್ರಹಿಸುವಂತೆ ಸೂಚಿಸಿತ್ತು. ಅಲ್ಲದೆ ಆ ರೀತಿಯ ವಿಚಾರಣಾಧೀನ ಖೈದಿಗಳಿಗೆ ಕಾನೂನು ನೆರವು ನೀಡಲು ಪ್ರೊಗ್ರೆಸ್ ಕಾರ್ಡ್ ತಯಾರಿಸಲು ಮುಂದಾಗಿತ್ತು. ಅದರಂತೆ 2,357 ಕೈದಿಗಳಿಗೆ ಕಾನೂನು ನೆರವು ನೀಡಲಾಗಿದೆ ಮತ್ತು ಅವರಲ್ಲಿ 1,147 ಕೈದಿಗಳನ್ನು ಈಗ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.
ಬಿಡುಗಡೆಯಾಗದ ಅತಿ ಹೆಚ್ಚಿನ ವಿಚಾರಣಾಧೀನ ಖೈದಿಗಳು ಮಹಾರಾಷ್ಟ್ರ ಮತ್ತು ದೆಹಲಿಗಳಲ್ಲಿದ್ದಾರೆ. ಮಹಾರಾಷ್ಟ್ರದ ಖೈದಿಗಳಿಗೆ ಶ್ಯೂರಿಟಿ ನೀಡಲು ಯಾರು ಮುಂದೆ ಬಾರದಿರುವುದು ಸಮಸ್ಯೆಯಾದರೆ, ದೆಹಲಿಯ ಹೆಚ್ಚಿನ ಖೈದಿಗಳು ಒಂದಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.
ದೇಶಾದ್ಯಂತ ಸುಮಾರು 1,300 ಜೈಲುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ದತ್ತಾಂಶ ಕೇಂದ್ರದ ಇ-ಜೈಲು ಸಾಫ್ಟ್ವೇರ್ ನಲ್ಲಿ ಈಗ ಜಾಮೀನಿನ ದಿನಾಂಕವನ್ನು ಜೈಲು ಅಧಿಕಾರಿಗಳು ನಮೂದಿಸಬೇಕಾಗಿದೆ. ಹಾಗಾಗಿ ಜಾಮೀನು ಪಡೆದ 7 ದಿನಗಳ ಒಳಗೆ ಬಿಡುಗಡೆಯಾಗದಿದ್ದರೆ ಅದು ಎಚ್ಚರಿಕೆಯ ಕರೆಗಂಟೆ ಬಾರಿಸುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಹೇಳಿದೆ.
ಇದನ್ನೂ ಓದಿ: ದಾಖಲೆ ಕುಸಿತ ಕಂಡ ಅದಾನಿ; ಸಾಲ ನೀಡಿರುವ ವಿವರ ಒದಗಿಸುವಂತೆ ಬ್ಯಾಂಕುಗಳಿಗೆ RBI ಸೂಚನೆ