ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹರವರು ಕೆಲಸದ ನಿಮಿತ್ತ ಇಂದು ವಿಧಾನಸೌಧಕ್ಕೆ ಹೋಗಲು ಮುಂದಾದಾಗ ಅವರನ್ನು ಸಿಬ್ಬಂದಿ ತಡೆದು ವಾಪಸ್ ಕಳಿಸಿದ ಘಟನೆ ಜರುಗಿದೆ. ಇದಕ್ಕೆ ಮುಖ್ಯ ಕಾರಣ ಅವರು ಮಾಸ್ಕ್ ಧರಿಸದೇ ಬಂದಿದ್ದಾಗಿದೆ.
ಮಾಸ್ಕ್ ಧರಿಸದೆ ವಿಧಾನಸೌಧಕ್ಕೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರನ್ನು ಆರೋಗ್ಯ ಸಿಬ್ಬಂದಿ ತಡೆದಿದ್ದಾರೆ. ವಿಧಾನಸೌಧದ ಪಶ್ಚಿಮ ಗೇಟ್ ಬಳಿ ಇದ್ದ ಆರೋಗ್ಯ ಸಿಬ್ಬಂದಿ ಪ್ರತಾಪ್ ಸಿಂಹ ಅವರ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸ್ ಮಾಡುವ ಸಿಬ್ಬಂದಿಗಳು ಸಂಸದರಿಗೆ ಮಾಸ್ಕ್ ಧರಿಸುವಂತೆ ಒತ್ತಾಯಿಸಿದರು. ಮಾಸ್ಕ್ ಧರಿಸದೆ ವಿಧಾನಸೌಧ ಬಳಿ ಬಂದಿರುವುದಕ್ಕೆ ತಪಾಸಣಾ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧ ಮಾತ್ರವಲ್ಲ ಮನೆಯಿಂದ ಹೊರಬರಬೇಕಾದರೆ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಈ ಕುರಿತು ಪ್ರತಿ ದಿನ ಎಲ್ಲೆಡೆ ಪ್ರಚಾರ ಮಾಡಲಾಗುತ್ತಿದೆ. ನಿನ್ನೆ ತಾನೇ ರಾಜ್ಯದಲ್ಲಿ ಮಾಸ್ಕ್ ದಿನ ಆಚರಿಸಲಾಗಿದೆ. ಇಷ್ಟೆಲ್ಲಾ ತಿಳಿದಿದ್ದರೂ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಮಾಸ್ಕ್ ಧರಿಸದೇ ವಿಧಾನಸೌಧದ ಬಳಿ ಹೇಗೆ ಬಂದರು ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿರುವುದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ವಿಧಾನ ಸೌಧ ಪ್ರವೇಶಿಸಲಾಗದೇ ವಾಪಸ್ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಕೊರೋನಾ ವೈರಸ್ ಶಕ್ತಿಸೌಧಕ್ಕೆ ಕಾಲಿಟ್ಟಿದೆ. ಅಲ್ಲಿನ ಆಹಾರದ ವಿಭಾಗದ ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಲಾಗಿದೆ ಅಲ್ಲದೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಗಂಡನಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದ ಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳಿಗೆ ಕೊರೋನಾ ಭೀತಿ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಸಂಸದರು ಎಚ್ಚರಿಕೆಯಿಂದ ಇರಬೇಕು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.
ಇಂತಹ ಸಂಸದನನ್ನು ಪಡೆದವರೇ ದನ್ಯರು.