Homeಮುಖಪುಟಮೋದಿ ವಿರುದ್ಧ ವಾರಣಾಸಿಯಲ್ಲೇ ಕಣಕ್ಕಿಳಿಯುತ್ತಾರಾ ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ ಜೋಷಿ?

ಮೋದಿ ವಿರುದ್ಧ ವಾರಣಾಸಿಯಲ್ಲೇ ಕಣಕ್ಕಿಳಿಯುತ್ತಾರಾ ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ ಜೋಷಿ?

- Advertisement -
- Advertisement -

ಟೈಟಲ್ ನೋಡಿ ಆಶ್ಚರ್ಯವೆನಿಸಬಹುದಾದ ಈ ಸುದ್ದಿ ಈಗ ಕೇವಲ ತೆರೆಮರೆಯಲ್ಲಿ ಉಳಿದಿಲ್ಲ. ಅದಾಗಲೇ ದೇಶದ ಪ್ರಮುಖ ಸುದ್ದಿ ಚಾನೆಲ್‍ನ ವೆಬ್‍ಸೈಟ್‍ನಲ್ಲಿ ಬಂದಾಗಿದೆ.

ನಿನ್ನೆಯಷ್ಟೇ ಬಿಜೆಪಿ ಭೀಷ್ಮ ಎನ್ನುವ ವಿಶೇಷಣದ ಅಡ್ವಾಣಿಯವರು ತಮ್ಮ ಬ್ಲಾಗ್‍ನಲ್ಲಿ ‘ನಮ್ಮನ್ನು ರಾಜಕೀಯವಾಗಿ ವಿರೋಧಿಸುವವರು ದೇಶದ್ರೋಹಿಗಳಾಗುವುದಿಲ್ಲ, ನಮ್ಮ ಶತ್ರುಗಳೂ ಅಲ್ಲ, ಕೇವಲ ರಾಜಕೀಯ ಎದುರಾಳಿಗಳಷ್ಟೇ. ನಮ್ಮ ಭಾರತದ ಪ್ರಜಾಪ್ರಭುತ್ವ ನೆಲೆ ನಿಂತಿರುವುದೇ ಬಹುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ. ಈ ಪ್ರಜಾಪ್ರಭುತ್ವವೇ ಯಾವತ್ತೂ ಬಿಜೆಪಿ ಪಕ್ಷದ ಹೆಗ್ಗುರುತು” ಎಂದು ಬರೆದಿದ್ದರು. ಪ್ರಸ್ತುತ ಬಿಜೆಪಿಯ ಹಿರಿಯ ನಾಯಕರು ಮುಖ್ಯವಾಗಿ ಮೋದಿಯವರು, ತಮ್ಮ ರಾಜಕೀಯ ವಿರೋಧಿಗಳ, ನಿರ್ದಿಷ್ಟವಾಗಿ ಕಾಂಗ್ರೆಸ್ ನಾಯಕರ ದೇಶಪ್ರೇಮವನ್ನು ಪ್ರಶ್ನಿಸುತ್ತಾ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಹಾಗೂ ಪಕ್ಷದೊಳಗೆ ಮೋದಿ-ಶಾ ಜೋಡಿ ಸರ್ವಾಧಿಕಾರಿಗಳಾಗಿ ಬೆಳೆದಿರುವ ಸನ್ನಿವೇಶದಲ್ಲಿ ಅಡ್ವಾಣಿಯವರ ಈ ಹೇಳಿಕೆ ಮೋದಿಯವರಿಗೆ ಕೊಟ್ಟ ಟಾಂಗ್ ಎಂತಲೇ ವಿಶ್ಲೇಷಣೆಗೆ ಒಳಪಡುತ್ತಿದೆ. ಮೋದಿ-ಅಮಿತ್ ಶಾ ಜೋಡಿ ತಮ್ಮನ್ನು ಮೂಲೆಗುಂಪು ಮಾಡಿದ್ದಕ್ಕೆ ಪ್ರತಿಯಾಗಿ ಈ ಹಿರಿಯ ನಾಯಕ ಚುನಾವಣೆಯ ಸಮಯದಲ್ಲಿ ಹೀಗೆ ಬರೆದಿರುವುದರಲ್ಲಿ ಹೆಚ್ಚೇನು ಅನುಮಾನವಿಲ್ಲ. ಇದು ಸಮರೋತ್ಸಾಹದಲ್ಲಿರುವ ಗುಜರಾತಿ ಜೋಡಿಗೆ ಭರ್ಜರಿ ಹಿನ್ನಡೆಯನ್ನೇ ಉಂಟು ಮಾಡುತ್ತಿದೆ.

ಅಡ್ವಾಣಿಯವರ ರೆಬೆಲ್ ಇಶ್ಯೂ ತಣ್ಣಗಾಗುವ ಮೊದಲೇ ಈಗ ಮತ್ತೊಬ್ಬ ಹಿರಿಯ ನಾಯಕ ಮುರುಳಿ ಮನೋಹರ್ ಜೋಷಿಯವರಿಂದಲೂ ಬಿಜೆಪಿಗೆ ಆಘಾತಕರವಾದ ಸುದ್ದಿ ಹೊರಬಿದ್ದಿದೆ. ಮೋದಿ-ಶಾ ಬಿಜೆಪಿಯೊಳಗೆ ಮುಂಚೂಣಿಗೆ ಬಂದ ಕ್ಷಣದಿಂದಲೂ ಪ್ರತಿರೋಧ ತೋರುತ್ತಲೇ ಬಂದಿದ್ದ ಮತ್ತು ಆ ಕಾರಣಕ್ಕೆ ಹೀನಾಯವಾಗಿ ಮೂಲೆ ಗುಂಪಾಗಿಸಲ್ಪಟ್ಟ ಜೋಷಿಯವರು ಇದೀಗ ಮೋದಿ ವಿರುದ್ಧ ವಾರಣಾಸಿಯಲ್ಲಿ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ ಎಂಬ ಸುದ್ದಿ ಬರೆದಿರುವುದು ಪ್ರಸಿದ್ಧ ಪತ್ರಕರ್ತೆ ಸ್ವಾತಿ ಚತುರ್ವೇದಿ. ಈಗಾಗಲೇ ಕಾಂಗ್ರೆಸ್‍ನ ಹಿರಿಯ ನಾಯಕರು ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮಾತ್ರವಲ್ಲದೆ, ಇತರೆ ಪಕ್ಷಗಳ ನಾಯಕರೂ ಜೋಷಿಯವರನ್ನು ಸಂಪರ್ಕಿಸಿದ್ದು ಅವರು ವಾರಣಾಸಿಯಿಂದ ಸ್ಪರ್ಧಿಸಲು ಇಚ್ಛಿಸಿದರೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಬೆಂಬಲ ಸೂಚಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಾಯಕರಲ್ಲಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಹೆಸರೂ ಕೇಳಿಬರುತ್ತಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಎಸ್‍ಪಿ ಮೈತ್ರಿ ಮಾಡಿಕೊಂಡಿರುವುದರಿಂದ ಜೋಷಿಗೆ ಮಾಯಾವತಿಯವರ ಬೆಂಬಲವೂ ಸಿಕ್ಕಂತಾಗುತ್ತದೆ.

ಜೋಷಿಯವರು ಈ ಮಾತುಕತೆಗೆ ಪೂರಕವಾಗಿ ಸ್ಪಂದಿಸಿದ್ದಾರಾದರೂ, ಮೊದಲಿಗೆ ವಾರಾಣಾಸಿಗಿಂತ ಬೇರೆಡೆ ಸ್ಪರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ವಾರಾಣಾಸಿ, ಈ ಮೊದಲು ಮುರುಳಿ ಮನೋಹರ್ ಜೋಷಿ ಸಂಸದನಾಗಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಆದರೆ 2014ರಲ್ಲಿ ಮೋದಿಯವರು ವಾರಾಣಾಸಿಯಿಂದ ಸ್ಪರ್ಧಿಸಲು ನಿರ್ಧರಿಸಿದಾಗ ಜೋಷಿಯವರಿಗೆ ಕಾನ್ಪುರ ಕ್ಷೇತ್ರದ ಟಿಕೆಟ್ ನೀಡಲಾಗಿತ್ತು. ಆಗಲೇ ತನ್ನ ಕ್ಷೇತ್ರವನ್ನು ಮೋದಿಯವರಿಗೆ ಬಿಟ್ಟುಕೊಡಲು ಸಣ್ಣಗೆ ಪ್ರತಿರೋಧ ಒಡ್ಡಿದ್ದ ಅವರು ಆರೆಸೆಸ್ ನಾಯಕರ ಮಧ್ಯಸ್ಥಿಕೆಯಿಂದ ಬಿಟ್ಟುಕೊಟ್ಟಿದ್ದರು. ಆದರೆ ಈ ಬಾರಿ ಟಿಕೆಟ್ ನೀಡುವಾಗ ಬಿಜೆಪಿ ಪಕ್ಷವು ಎಲ್.ಕೆ.ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಷಿಯವರಿಗೆ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಅಡ್ವಾಣಿಯವರು ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರವನ್ನು ಸ್ವತಃ ಅಮಿತ್ ಶಾ ತಮ್ಮ ಬಳಿಯೇ ಉಳಿಸಿಕೊಂಡರೆ, ಮುರುಳಿ ಮನೋಹರ್ ಜೋಷಿಯವರು ಹಾಲಿ ಸಂಸದರಾಗಿರುವ ಕಾನ್ಪುರದಿಂದ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಮಂತ್ರಿ ಸತ್ಯದೇವ್ ಪಚೌರಿಯನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

1992ರಲ್ಲಿ ಮೋದಿ ಮತ್ತು ಜೋಶಿಯವರು

ವಾಜಪೇಯಿಯವರ ಜೊತೆಗೂಡಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅಡ್ವಾಣಿ ಮತ್ತು ಜೋಷಿ ಇಬ್ಬರೂ ಮಹತ್ವದ ಪಾತ್ರ ನಿಭಾಯಿಸಿದಂತವರು. 1977ರಲ್ಲಿ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಾಗ ಜನಸಂಘದಿಂದ ಸಚಿವರಾಗುವ ಅರ್ಹತೆಯಲ್ಲಿ ಇದ್ದವರು ವಾಜಪೇಯಿ ಮತ್ತು ಅಡ್ವಾಣಿ. ಜೋಷಿಯವರನ್ನು ಆಗ ಜನತಾ ಪಕ್ಷದ ಸಂಸದೀಯ ಪಕ್ಷದ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಇನ್ನು ಬಿಜೆಪಿ ದೇಶದಲ್ಲಿ ಬಲವಾಗಿ ಬೇರೂರಲು ಕಾರಣವಾದದ್ದು ಅಡ್ವಾಣಿಯವರ ಕುಖ್ಯಾತ ರಥಯಾತ್ರೆ ಮತ್ತು ಅವರದೇ ನೇತೃತ್ವದಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣಗಳು. ಜೋಷಿ ಇವರಿಬ್ಬರ ನಂತರದ ಮೂರನೇ ಸ್ಥಾನದಲ್ಲಿದ್ದ ನಾಯಕ. ವಾಜಪೇಯಿಯವರ ಹದಿಮೂರು ದಿವಸದ ಸರ್ಕಾರದಲ್ಲಿ ಗೃಹಮಂತ್ರಿಯಾಗುವಷ್ಟು, ಆನಂತರದ ಎನ್‍ಡಿಎ ಸರ್ಕಾರದಲ್ಲಿ ಮಾನವ ಸಂಪನ್ಮೂಲದಂತಹ ಪ್ರಭಾವಿ ಖಾತೆಯ ಸಚಿವರಾಗುವಷ್ಟು ಜೋಷಿ ಬಿಜೆಪಿಯೊಳಗೆ ವರ್ಚಸ್ಸು ಹೊಂದಿದ್ದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

ಅಂತವರನ್ನು ಮೋದಿ-ಶಾ ಜೋಡಿ ಇತ್ತೀಚಿನ ದಿನಗಳಲ್ಲಿ ನಡೆಸಿಕೊಂಡ ರೀತಿ ಮಾತ್ರ ತುಂಬಾ ಅವಮಾನಕರದ್ದಾಗಿತ್ತು. ಅದರ ವಿರುದ್ಧ ಅಡ್ವಾಣಿಯವರು ಒಂದಷ್ಟು ಮಟ್ಟಿಗಿನ ಸಹನೆ ತೋರಿದರಾದರು ಮುರುಳಿ ಮನೋಹರ್ ಜೋಷಿ ಪ್ರತಿಯಾಡುತ್ತಲೇ ಬಂದಿದ್ದರು. 2014ರ ಚುನಾವಣೆ ಸಂದರ್ಭದಲ್ಲೇ ಇಡೀ ದೇಶಾದ್ಯಂತ ಮೋದಿ ಅಲೆ ಇದೆ ಎಂಬ ವಾದ ಎನ್ನುತ್ತಿದ್ದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ “ದೇಶದಲ್ಲಿ ಮೋದಿ ಅಲೆ ಇಲ್ಲ, ಇರೋದು ಬಿಜೆಪಿ ಅಲೆ. ಮೋದಿ ಕೇವಲ ಪಕ್ಷದ ಪ್ರಧಾನಿ ಅಭ್ಯರ್ಥಿ ಅಷ್ಟೆ” ಎಂದು ನೇರವಾಗಿ ಹೇಳಿದ್ದ ಜೋಷಿಯವರು, ಅಷ್ಟರಲ್ಲಾಗಲೇ ಬಿಜೆಪಿಯಿಂದ ಟಿಕೆಟ್ (ಬಾರ್ಮರ್ ಕ್ಷೇತ್ರ) ನಿರಾಕರಿಸಲ್ಪಟ್ಟಿದ್ದ ಮತ್ತೊಬ್ಬ ಹಿರಿಯ ನಾಯಕ ಜಸ್ವಂತ್ ಸಿಂಗ್‍ರ ಕುರಿತು “ಅವರಿಗೆ ಟಿಕೆಟ್ ನೀಡಬಾರದೆನ್ನುವುದು ಪಕ್ಷದೊಳಗೆ ಚರ್ಚೆಯೇ ಆಗಿರಲಿಲ್ಲ” ಎನ್ನುವ ಮೂಲಕ ಅದು ಮೋದಿ-ಶಾ ಜೋಡಿಯ ಏಕಪಕ್ಷೀಯ ನಿರ್ಧಾರ ಎಂದು ಟೀಕಿಸಿದ್ದರು. ಅಲ್ಲದೇ 2018ರಲ್ಲಿ `ಪವರ್ ಪೊಲಿಟಿಕ್ಸ್’ ಎಂಬ ನಿಯತಕಾಲಿಕೆಯಲ್ಲಿ ‘ರಾಜಧರ್ಮ’ ತಲೆಬರಹದಲ್ಲಿ ಲೇಖನವೊಂದನ್ನು ಬರೆದಿದ್ದ ಜೋಷಿ, ಇಡೀ ಲೇಖನವನ್ನು ಮೋದಿ-ಶಾ ಸರ್ವಾಧಿಕಾರವನ್ನು ಟೀಕಿಸಲು ದುಡಿಸಿಕೊಂಡಿದ್ದರು. ‘ವಾಲ್ಮೀಕಿಯ ಪ್ರಕಾರ ರಾಜನಾದವನು ಸರ್ವಾಧಿಕಾರಿಯಾಗಿರಬಾರದು. ರಾಜನಾದವನು ಆಡಳಿತವನ್ನು ನಡೆಸಲು ಮಂತ್ರಿಗಳ, ವಿದ್ವಾಂಸರ, ಸೇನಾ ಅಧಿಕಾರಿಗಳ ಸಲಹೆ ಕೇಳುತ್ತಿದ್ದುದನ್ನು ರಾಮಾಯಣದಲ್ಲಿ ನಾವು ಕಾಣಬಹುದು’ ಎಂಬ ಒಂದು ಸಾಲೇ ಇಡೀ ಲೇಖನಕ್ಕೆ ಹಿಡಿದ ಕನ್ನಡಿಯಂತಿದೆ. ಜೋಷಿಯವರ ವ್ಯಕ್ತಿತ್ವ ಹೀಗಿದ್ದುದರಿಂದಲೇ ಆರೆಸ್ಸೆಸ್ ನಾಯಕರು ಮೋದಿ-ಷಾ ಜೋಡಿಗೆ, ಜೋಷಿಯವರ ವಿಚಾರದಲ್ಲಿ ಎಚ್ಚರಿಸಿದ್ದರಂತೆ.

ಇದೀಗ ಸಿಡಿದೆದ್ದಿರುವ ಜೋಷಿಯವರನ್ನು ಆರೆಸ್ಸೆಸ್ ತಣ್ಣಗೆ ಮಾಡುತ್ತದಾ ಅಥವಾ ಮೋದಿಯ ವಿರುದ್ಧ ತಮ್ಮ ಸ್ವಂತ ಕ್ಷೇತ್ರ ವಾರಣಾಸಿಯಿಂದ ಸ್ಪರ್ಧೆ ಮಾಡಲು ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...