ಶಾಲಾ ಶಿಕ್ಷಕನನ್ನು ಗುಂಡಿಕ್ಕಿ ಕೊಂದ ವ್ಯಕ್ತಿಯೊಬ್ಬನನ್ನು ಜನರು ಪೊಲೀಸರ ಸಮ್ಮುಖದಲ್ಲಿಯೇ ಥಳಿಸಿ, ಕೊಲೆ ಮಾಡಿರುವ ಘಟನೆ ಪೂರ್ವ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ. ಜನರು ಕೋಲು, ಬಡಿಗೆಗಳಿಂದ ವ್ಯಕ್ತಿಗೆ ಹೊಡೆಯುತ್ತಿರುವುದು, ಸುತ್ತಲೂ ಪೊಲೀಸರು ನಿಂತಿರುವ ವಿಡಿಯೋ ವೈರಲ್ ಆಗಿದೆ.
ಗಲಭೆ ನಡೆದ ಸ್ಥಳದಲ್ಲಿ ಹಲವಾರು ಪೊಲೀಸರು ಹಾಜರಿದ್ದರು. ಕೆಲವರು ಮಾತ್ರ ದಾಳಿ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆ ವ್ಯಕ್ತಿ ನೆಲಕ್ಕೆ ಬಿದ್ದರೂ ಸಹ ಜನ ಮಾತ್ರ ಹೊಡೆಯುವುದನ್ನು ನಿಲ್ಲಿಸಲಿಲ್ಲ. ವ್ಯಕ್ತಿಯ ತಲೆಯಿಂದ ರಕ್ತ ಬರುವವರೆಗೂ ಹೊಡೆದು ಸಾಯಿಸಿದ್ದಾರೆ.
ಪೊಲೀಸರ ಪ್ರಕಾರ ಮೃತ ಆರೋಪಿ ಗೋರಖ್ಪುರದವರು. ಆತನ ಮೆಲೆ ತನ್ನ ತಂದೆಯ ಬಂದೂಕನ್ನು ಬಳಸಿ ಶಿಕ್ಷಕನನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂಬ ಆರೋಪವಿದೆ. ಈತ ಸುಧೀರ್ ಕುಮಾರ್ ಸಿಂಗ್ ಎಂಬುವರನ್ನು ಭೇಟಿಯಾಗಲು ಬಂದಿದ್ದ. ತಾನು ಸಿಂಗ್ ಅವರ ಹಿರಿಯ ಸಹೋದರನ ಸ್ನೇಹಿತ ಎಂದು ಮನೆಯಲ್ಲಿ ಕುಳಿತು ಚಹಾ ಸೇವಿಸಿದ್ದ. ಸಿಂಗ್ ಸ್ನಾನ ಮಾಡಿ ಹೊರಗೆ ಬರುತ್ತಿದ್ದಂತೆ ಅವರ ಮೇಲೆ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ ಎಂದು ಕುಶಿನಗರ ಪೊಲೀಸ್ ಅಧೀಕ್ಷಕ ವಿನೋದ್ ಕುಮಾರ್ ಮಿಶ್ರಾ ಹೇಳಿದರು.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ರಿಯಾ ಜೊತೆ ಮಾಧ್ಯಮಗಳ ನಡೆ ಖಂಡನೀಯ
ಘಟನೆಯ ನಂತರ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಆದರೆ ಮನೆಯ ಹೊರಗೆ ಜನಸಮೂಹವಿದ್ದರಿಂದ ಆತ ಟೆರೇಸ್ ಮೇಲೆ ಹತ್ತಿದ್ದನು. ತನ್ನ ಬಳಿ ಇದ್ದ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ. ಆಗ ಸ್ಥಳೀಯರು ಪೊಲೀಸರನ್ನು ಕರೆದರು. ಪೊಲೀಸರು ಶರಣಾಗುವಂತೆ ಹೇಳಿದರೂ, ಕೆಳಗಿಳಿದು ಕೋಣೆಯಲ್ಲಿ ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದ, ತಕ್ಷಣ ಜನರ ಗುಂಪೊಂದು ದಾಳಿ ಮಾಡಿ ಆತನನ್ನು ಪೊಲೀಸರು ತಲುಪುವ ಮುನ್ನವೇ ಕೊಂದರು ಎಂದು ಮಿಶ್ರಾ ಹೇಳಿದ್ದಾರೆ.
ಆದರೆ ಸ್ಥಳೀಯರ ಪ್ರಕಾರ ಶಿಕ್ಷಕರ ಮೇಲೆ ಗುಂಡು ಹಾರಿಸಿದ ನಂತರ, ಆತ ಮನೆಯ ಟೆರೇಸ್ ಹತ್ತಿ ಗುಂಡು ಹಾರಿಸಿದನು. ಪೊಲೀಸರು ಬಂದಾಗ, ಶರಣಾಗತಿಯಲ್ಲಿ ಕೈ ಎತ್ತಿದ್ದ. ಪೊಲೀಸರು ಅವರನ್ನು ಕೆಳಕ್ಕೆ ಇಳಿಸಿ ಪೊಲೀಸ್ ವಾಹನದಲ್ಲಿ ಕೂರಿಸುತ್ತಿದ್ದಾಗ ಗ್ರಾಮಸ್ಥರು ಆತನನ್ನು ಎಳೆದುಕೊಂಡು ಹೋಗಿ ಹಲ್ಲೆ ಮಾಡಿದರು ಎಂದಿದ್ದಾರೆ.
ತಮ್ಮ ಮುಂದೆಯೇ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ದಾಳಿ ನಡೆಯುತ್ತಿದ್ದರು ಪೊಲೀಸರು ಏನು ಮಾಡದೆ ಇದ್ದರು. ಆದರೆ ಹೇಳಿಕೆಯಲ್ಲಿ ಮಾತ್ರ ನಾವು ತಲುಪುವ ಮುನ್ನವೇ ಘಟನೆ ನಡೆದುಹೋಯಿತು ಎಂದು ತಮ್ಮದೇನು ತಪ್ಪಿಲ್ಲ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಘಟನೆ ನಂತರ ಸಿಕ್ಕಿರುವ ವಿಡಿಯೋದಲ್ಲಿ ಪೊಲೀಸರಿರುವುದು, ಅವರ ಮುಂದೆಯೇ ಹಲ್ಲೆ ನಡೆಯುತ್ತಿರುವುದು ಕಾಣಬಹುದಾಗಿದೆ.