ವಿಶ್ವ ಹಿಂದೂ ಪರಿಷತ್ ಸದಸ್ಯರ ದೂರಿನ ಆಧಾರದ ಮೇಲೆ ಓಡಿಸ್ಸಾದ ಕಟಕ್ ಗ್ರಾಮದ 42 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರ ತಂಡ ಬಂಧಿಸಿ ವಿಚಾರಣೆಗೆ ತೆಗೆದುಕೊಂಡಿದೆ. ಈ ವ್ಯಕ್ತಿಯ ದೂರವಾಣಿ ಸಂಖ್ಯೆಯಿಂದ ವಿಎಚ್ಪಿ ಸದಸ್ಯನಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ದೂರು ನೀಡಲಾಗಿತ್ತು.
ಭುವನೇಶ್ವರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಕಟಕ್ನ ಸಲೆಪರ್ ಬಳಿಯ ಕುಸಂಬಿ ಗ್ರಾಮದ ನಿವಾಸಿ ಸಯೀದ್ ಹಸನ್ ಅಹ್ಮದ್ ಬಂಧಿತ ವ್ಯಕ್ತಿ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 507, 153 ಎ, 124 ಎ ಮತ್ತು 504 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವುಗಳಲ್ಲಿ, ಸೆಕ್ಷನ್ 124 ಎ ದೇಶದ್ರೋಹಕ್ಕೆ ಸಂಬಂಧಿಸಿದೆ.
ಇದನ್ನೂ ಓದಿ: ಡ್ರಗ್ಸ್ ದಂಧೆ: ಜಿಲ್ಲಾವಾರು ಮಾಹಿತಿ ಕೋರಿ ಗೃಹಸಚಿವರಿಗೆ ಪತ್ರ ಬರೆದ ಸಿದ್ಧರಾಮಯ್ಯ
ಜುಲೈ 10 ರಂದು ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಸಿಂಘವಾಲಿ ಅಹಿರ್ ಪೊಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಕುಲದೀಪ್ ಪಾಂಚಾಲ್ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿ, ಪೊಲೀಸರಿಂದ ಭದ್ರತೆ ಕೋರಿದ್ದರು. ಈಗ ಇದೇ ದೂರವಾಣಿ ಸಂಖ್ಯೆ ಅಹ್ಮದ್ಗೆ ಸೇರಿದ್ದು ಎಂದು ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಕರೆದೊಯ್ಯಲಾಗಿದೆ.
ಸಲೆಪುರ್ ಮಾರುಕಟ್ಟೆಯಲ್ಲಿ ಟಾರ್ಚ್ ಮತ್ತು ಪ್ಲಾಸ್ಟಿಕ್ ವಸ್ತುಗಳ ಸಣ್ಣ ಅಂಗಡಿಯನ್ನು ಹೊಂದಿರುವ ಅಹ್ಮದ್, ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ “ಅವಹೇಳನಕಾರಿ ಹೇಳಿಕೆಗಳನ್ನು” ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಯುಪಿಯ ಬಾಗ್ಪತ್ ಜಿಲ್ಲೆಯ ಇಬ್ಬರು ಪೊಲೀಸರ ತಂಡ ಓಡಿಸ್ಸಾದ ಸ್ಥಳೀಯ ಪೊಲೀಸರ ಸಹಾಯದಿಂದ ಅಹ್ಮದ್ನನ್ನು ಬಂಧಿಸಿ, ತದನಂತರ ಆತನನ್ನು ವಿಚಾರಣೆಗೆ ಕೋರಿ ಕಟಕ್ನಲ್ಲಿರುವ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ಮುಂದೆ ಹಾಜರುಪಡಿಸಿತು. ಸಿಜೆಎಂ ಆರೋಪಿಯನ್ನು ಸಲೆಪುರ್ನ ಜೆಎಂಎಫ್ಸಿ ಮುಂದೆ ಹಾಜರುಪಡಿಸಲು ಹೇಳಿತ್ತು. ಜೆಎಂಎಫ್ಸಿ ನ್ಯಾಯಾಲಯ ಯುಪಿ ಪೊಲೀಸರಿಗೆ ಅಹ್ಮದ್ಗೆ ನಾಲ್ಕು ದಿನಗಳ ವಿಚಾರಣೆ ನಡೆಸಲು ಅನುಮತಿ ನೀಡಿದೆ.
ಯುಪಿ ಪೊಲೀಸರ ಹೆಚ್ಚಿನ ತನಿಖೆಯ ನಂತರ ಅಹ್ಮದ್ ವಿರುದ್ಧ ಐಪಿಸಿಯ 153 ಎ, 124 ಎ ಮತ್ತು 504 ಸೆಕ್ಷನ್ ಅಡಿಯಲ್ಲಿ ಆರೋಪಗಳನ್ನು ಸೇರಿಸಲಾಗಿದೆ ಎಂದು ಸಲೆಪುರ್ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಝಾರ್ನಾ ಪ್ರಧಾನ್ ಹೇಳಿದ್ದಾರೆ.
ಇದನ್ನೂ ಓದಿ: ’ರಾಗಿಣಿ ಬಿಜೆಪಿ ಸದಸ್ಯರಲ್ಲ; ಅವರ ಕಾರ್ಯಚಟುವಟಿಕೆಗಳಿಗೆ ಪಕ್ಷ ಹೊಣೆಯಾಗದು: ಬಿಜೆಪಿ
ಆದರೆ ಅಹ್ಮದ್ ಅವರ ತಂದೆ, ನಿವೃತ್ತ ಶಾಲಾ ಶಿಕ್ಷಕ ಸೈಯದ್ ರಹೀದ್ ಅಹ್ಮದ್, ಪಂಚಲ್ ಅವರ ದೂರಿನಲ್ಲಿ ಉಲ್ಲೇಖಿಸಿರುವ ಮೊಬೈಲ್ ಸಂಖ್ಯೆ ಅವರ ಮಗನಿಗೆ ಸೇರಿದೆ, ಆದರೆ ತನ್ನ ಮಗ ನಿರಪರಾಧಿ ಎಂದು ಹೇಳಿದ್ದಾರೆ. ಅವರು ಯಾರಿಗೂ ಬೆದರಿಕೆ ಹಾಕಿಲ್ಲ. ನಮ್ಮ ಪ್ರದೇಶದಲ್ಲಿ ನನ್ನ ಮಗನ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಬಾಗ್ಪತ್ ಮತ್ತು ಸಲೆಪುರ್ ಪರಸ್ಪರ ಎಷ್ಟು ದೂರವಿದೆ ಎಂದು ಯೋಚಿಸಿ ಎಂದಿದ್ದಾರೆ.
ಇನ್ನು ಆಶ್ಚರ್ಯಕರ ಸಂಗತಿಯೆಂದರೆ, ಸ್ಥಳೀಯ ಪೊಲೀಸರು ಈ ಪ್ರಕರಣದ ಬಗ್ಗೆ ಗಮನಹರಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಕಟಕ್ ಪೊಲೀಸ್ ಅಧೀಕ್ಷಕ (ಗ್ರಾಮೀಣ), ಬಿ. ಜುಗಲ್ ಕಿಶೋರ್ ಅವರು ಅಹ್ಮದ್ ವಿರುದ್ಧದ ಪ್ರಕರಣದ ವಿವರಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಯುಪಿ ಪೊಲೀಸರು ಬಂಧಿಸಿರುವ ಅಹ್ಮದ್ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಯಾವುದೇ ದೊಡ್ಡ ದೂರುಗಳು ಬಂದಿಲ್ಲ ಎಂದು ತಿಳಿದುಬಂದಿದೆ. ಅವರ ಮುಸ್ಲಿಂ ಕುಟುಂಬವು ಈ ಪ್ರದೇಶದಲ್ಲಿ ಹೆಸರಾಂತ ಕುಟುಂಬವಾಗಿದೆ. ಅಹ್ಮದ್ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ ಎಂದು ಸಲೇಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಿಹಾರ್ ಮಲ್ಲಿಕ್ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ: ಬ್ರೆಜಿಲ್ ಹಿಂದಿಕ್ಕಿ ಎರಡನೆ ಸ್ಥಾನಕ್ಕೆ ಏರಿದ ಭಾರತ
ಸಾಮಾಜಿಕ ಕಾರ್ಯಕರ್ತ ಬಿಡ್ಯುತ್ ಮೊಹಂತಿ ಅವರು ಅಹ್ಮದ್ ಅವರ ಬಂಧನವನ್ನು ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣ ಎಂದು ಕಿಡಿಕಾರಿದ್ದಾರೆ.
ಇದರ ಜೊತೆಗೆ 2015 ರಲ್ಲಿ ದೆಹಲಿ ಮತ್ತು ಒಡಿಶಾ ಪೊಲೀಸರ ಜಂಟಿ ತಂಡವು 37 ವರ್ಷದ ಮುಸ್ಲಿಂ ಪಾದ್ರಿಯನ್ನು ಅಲ್-ಖೈದಾದೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಬಂಧಿಸಿತ್ತು ಎಂಬುದು ಹಲವರಿಗೆ ನೆನಪಿದೆ. ಅರೇಬಿಕ್ ಮತ್ತು ಇಸ್ಲಾಮಿಕ್ ಅಧ್ಯಯನದಲ್ಲಿ ಪಿಎಚ್ಡಿ ಪದವಿ ಪಡೆದ ಮೌಲಾನಾ ಅಬ್ದುಲ್ ರೆಹಮಾನ್ ಅವರನ್ನು ಕಟಕ್ನ ಜಗತ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಸ್ಚಿಮಾ ಕಚ್ಚಾ ಗ್ರಾಮದಿಂದ ಬಂಧಿಸಲಾಗಿತ್ತು.
ಈಗ ಸಯೀದ್ ಹಸನ್ ಅಹ್ಮದ್ ಬಂಧನ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಸ್ಥಳೀಯ ಪೊಲೀಸರ ಪ್ರಕಾರ ಆತನ ವಿರುದ್ಧ ಈವರೆಗೂ ಯಾವುದೇ ಪ್ರಕರಣಗಳಿಲ್ಲ. ನನ್ನ ಮಗ ನಿರಪರಾಧಿ ಎಂದು ತಂದೆ ಹೇಳಿಕೊಳ್ಳುತ್ತಿದ್ದಾರೆ. ಆದರೆ ಉತ್ತರ ಪ್ರದೇಶ ಪೊಲೀಸರು ಮಾತ್ರ ಸೆಕ್ಷನ್ 507 ಹಾಕಿದ್ದಾರೆ. ನಂತರ ಸೆಕ್ಷನ್ 124 ಎ ದೇಶದ್ರೋಹಕ್ಕೆ ಸಂಬಂಧಿಸಿದ ಪ್ರಕರಣವನ್ನು ಅಹ್ಮದ್ ಮೇಲೆ ಹಾಕಿದ್ದಾರೆ.