ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆ ಎತ್ತಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂತಹ ಘಟನೆಗಳನ್ನ ದೆಹಲಿಯ ನಿರ್ಭಯಾ ಕೇಸ್ನಂತೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.
“ಯುವತಿ ತನ್ನ ಸ್ನೇಹಿತನ ಜತೆ ವಾಯುವಿಹಾರಕ್ಕೆ ಅಲ್ಲಿಗೆ ಹೋಗಿದ್ದರು. ಆ ವೇಳೆ ಅತ್ಯಾಚಾರ ನಡೆದಿದೆ. ಮೈಸೂರು ಒಂದು ಸಾಂಸ್ಕೃತಿಕ ನಗರಿ ಜೊತೆಗೆ ಎಜುಕೇಷನ್ ಹಬ್ ಕೂಡ ಹೌದು. ಇಲ್ಲಿಗೆ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಇಂತಹ ನಗರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದು ಪ್ರವಾಸಿಗರ ಮೇಲೆ ಪರಿಣಾಮ ಬೀರುತ್ತೆ. ಈ ಘಟನೆಯಿಂದ ಜನ ಭಯಭೀತರಾಗಿದ್ದಾರೆ” ಎಂದಿದ್ದಾರೆ.
’ನಾನು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೆ. ನಮ್ಮ ಕಾಂಗ್ರೆಸ್ ನಿಂದ ಸತ್ಯಶೋಧನಾ ಸಮಿತಿ ರಚಿಸಿದ್ದವು. ಅವರು ಅಲ್ಲಿಗೆ ಹೋಗಿ ಪರಿಶೀಲಿಸಿ ಕೆಲ ಪ್ರಶ್ನೆಗಳನ್ನ ಎತ್ತಿದ್ದಾರೆ. ಇಂತಹ ಘಟನೆಗಳನ್ನ ದೆಹಲಿಯ ನಿರ್ಭಯಾ ಕೇಸ್ ನಂತೆ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಗಂಭೀರ ಪ್ರಕರಣದಲ್ಲೂ. ಕೇಸ್ ದಾಖಲಿಸಲು ಪೊಲೀಸರು ಏಕೆ ತಡ ಮಾಡಿದರು..? ಘಟನೆ ನಡೆದ 14 ರಿಂದ 15 ಗಂಟಗಳ ಬಳಿಕ ಎಫ್ಐಆರ್ ದಾಖಲಾಗಿದೆ. ಪೊಲೀಸರು ಅನಗತ್ಯವಾಗಿ ತಡ ಮಾಡಿದ್ದು ಏಕೆ..? ಯುವತಿಯ ಹೇಳಿಕೆಯನ್ನ ಕೂಡ ದಾಖಲಿಸಲಿಲ್ಲ’ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಚಾಣಕ್ಯ ವಿವಿ, ಮನುವಾದಿಗಳ ವಿಶ್ವವಿದ್ಯಾಲಯ ಇದರ ಸ್ಥಾಪನೆಗೆ ಅವಕಾಶ ನೀಡಬಾರದು: ಸಿದ್ದರಾಮಯ್ಯ
ಸಂತ್ರಸ್ತ ಯುವತಿ, ಮತ್ತು ಯುವಕನ ಮುಂದೆ ಆರೋಪಿಗಳ ಪರೇಡ್ ನಡೆಸಿಲ್ಲ. ಆರೋಪಿಗಳನ್ನ ಗುರುತಿಸುವ ಕೆಲಸ ಆಗಿಲ್ಲ. ‘ಸಂಜೆ ಬಳಿಕ ಯುವತಿ ಅಲ್ಲಿಗೆ ಹೋಗಿದ್ದು ಏಕೆ ಎಂದೂ ಗೃಹ ಸಚಿವರು ಪ್ರಶ್ನಿಸಿದ್ದಾರೆ. ಹೆಣ್ಣು ಮಕ್ಕಳು ಸಂಜೆ ಮೇಲೆ ಏಕೆ ಓಡಾಡಬಾರದು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದಾದ ಬಳಿಕ ರಾಜ್ಯದ ಇತರೆ ಕಡೆ ನಡೆದ ಅಪರಾಧ ಪ್ರಕರಣಗಳ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಆಗಸ್ಟ್ 24 ರಂದೇ ತುಮಕೂರಿನಲ್ಲಿ ದನ ಕಾಯುವ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ನಾಯ್ಡು ನಗರದಲ್ಲಿ ಹಾಸ್ಟೆಲ್ಗೆ ನುಗ್ಗುತ್ತಾರೆ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ನಡೆಸ್ತಾರೆ. ಯಾದಗಿರಿಯಲ್ಲಿ ಬೆತ್ತಲೆ ಮಾಡಿ ಸಿಗರೇಟ್ನಲ್ಲಿ ಸುಡ್ತಾರೆ, ಹೆಣ್ಣುಮಗಳ ಮೈ ಸುಡ್ತಾರೆ. ಇದು ಎಂಥಹ ಅಮಾನವೀಯ ಕೃತ್ಯ. ಸುದ್ದಿ ಪತ್ರಿಕೆಗಳಲ್ಲಿ ಬಂದ ಮೇಲೆ ಎಫ್ಐಆರ್ ಹಾಕುತ್ತಾರೆ” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾ ಸಂಕಷ್ಟ: ಮಗಳನ್ನು ನೇಣಿಗೇರಿಸಿ ತಾಯಿ ಆತ್ಮಹತ್ಯೆ ಯತ್ನ, ಮಗಳು ಸಾವು