Homeಮುಖಪುಟನಾಗಾಲ್ಯಾಂಡ್‌: ಎಎಫ್‌ಎಸ್‌ಪಿಎ ಹಿಂಪಡೆಯಲು ಒತ್ತಾಯಿಸಿ ಮುಂದುವರಿದ ಹೋರಾಟ

ನಾಗಾಲ್ಯಾಂಡ್‌: ಎಎಫ್‌ಎಸ್‌ಪಿಎ ಹಿಂಪಡೆಯಲು ಒತ್ತಾಯಿಸಿ ಮುಂದುವರಿದ ಹೋರಾಟ

- Advertisement -
- Advertisement -

ನಾಗಾಲ್ಯಾಂಡ್‌ನಲ್ಲಿ ಅಮಾಯಕ ಜನರನ್ನು ಸೇನೆಯು ಹತ್ಯೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರವು ಕ್ಷಮೆ ಕೇಳಬೇಕು ಮತ್ತು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎಎಫ್‌ಎಸ್‌ಪಿಎ) ಹಿಂಪಡೆಯಬೇಕು ಎಂದು ಒತ್ತಾಯಿಸಿ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ತಿಜಿತ್‌ನ ಸಿವಿಲ್ ಸೊಸೈಟಿ ಕಾರ್ಯಕರ್ತರು ಶನಿವಾರ ಪ್ರತಿಭಟನಾ ರ್‍ಯಾಲಿ ನಡಸಿದ್ದಾರೆ.

ಈ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿರುವ ಪ್ರತಿಭಟನಾಕಾರರು, ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ತೀಝಿತ್ ಜನರು ಸುಮ್ಮನಿರುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

“ಭದ್ರತಾ ಪಡೆಗಳ ಹೊಂಚುದಾಳಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ಸರ್ಕಾರ ಇದುವರೆಗೆ ಕ್ಷಮೆ ಕೇಳಿಲ್ಲ. ಅಲ್ಲದೆ, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂತ್ರಸ್ತರು ಭದ್ರತಾ ಪಡೆಗಳು ಸಿಗ್ನಲ್ ನೀಡಲಿದಾಗ ನಿಲ್ಲಿಸಲಿಲ್ಲ ಎಂದು ಗೃಹ ಸಚಿವರು ಸುಳ್ಳು ಹೇಳಿದ್ದಾರೆ. ಸುಳ್ಳು ಹಬ್ಬಿಸುತ್ತಿರುವವರು ಯಾರು?” ಎಂದು ಪ್ರತಿಭಟನಾಕಾರರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎಎಫ್‌‌ಎಸ್‌ಪಿಎ ಸಮಸ್ಯೆಗೆ ಮೂಲ ಕಾರಣವಾಗಿದೆ. “ಈಶಾನ್ಯ ರಾಜ್ಯಗಳಲ್ಲಿರುವ ಎಎಫ್‌ಎಸ್‌ಪಿಎ ರದ್ದುಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ನಮಗೆ ಭದ್ರತಾ ಪಡೆಗಳ ಅಗತ್ಯವಿಲ್ಲ. ನಾವು ಸ್ವತಂತ್ರವಾಗಿ ಬದುಕಲು ಬಯಸುತ್ತೇವೆ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

 “ಭಾರತೀಯ ಸೈನಿಕರು ಅಮಾಯಕರನ್ನು ಕೊಲ್ಲುತ್ತಿದ್ದಾರೆ”, “ನಮಗೆ ನ್ಯಾಯ ಬೇಕು”, “ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು ಹಿಂಪಡೆಯಿರಿ”, “ಪ್ರಭುತ್ವ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಿ” ಇತ್ಯಾದಿ ಬ್ಯಾನರ್‌ಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು.

ಗಣಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನವನ್ನು ನಿಲ್ಲಿಸಲು ಭದ್ರತಾ ಸಿಬ್ಬಂದಿ ಕೇಳಿತು. ಆದರೆ, ಅದು ಪರಾರಿಯಾಗಲು ಯತ್ನಿಸಲಾಯಿತು. ಹೀಗಾಗಿ, ಈ ಘಟನೆ ಸಂಭವಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಸಂಸತ್ತಿನಲ್ಲಿ ಹೇಳಿದ್ದರು. ಇದು ನಾಗಾಲ್ಯಾಂಡ್‌ ಜನರನ್ನು ಮತ್ತಷ್ಟು ಕೆರಳಿಸಿದ್ದು, ಪ್ರತಿಭಟನೆಗಳು ಭುಗಿಲೆದ್ದಿವೆ. 


ಇದನ್ನೂ ಓದಿ: ನಾಗಾಲ್ಯಾಂಡ್ ಹತ್ಯಾಕಾಂಡ: ವಿಷಾದ ವ್ಯಕ್ತಪಡಿಸಿದ ಅಮಿತ್‌ ಶಾ


ಎಎಫ್‌ಎಸ್‌ಪಿಎ ರದ್ದುಗೊಳಿಸಲು ಹೆಚ್ಚಿದ ಒತ್ತಡ

ನಾಗಾಲ್ಯಾಂಡ್‌ನಲ್ಲಿ ನಡೆದ ನಾಗರಿಕ ಹತ್ಯೆಗಳ ನಡುವೆ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ-1958’(AFSPA) ಯನ್ನು ವಾಪಾಸು ಪಡೆಯಬೇಕು ಎಂದು ನಾಗಾಲ್ಯಾಂಡ್‌ ಮತ್ತು ಮೇಘಾಲಯ ಮುಖ್ಯಮಂತ್ರಿಗಳಿಬ್ಬರೂ ಇತ್ತೀಚೆಗೆ ಒತ್ತಾಯಿಸಿದ್ದಾರೆ. ವಿಶೇಷವಾಗಿ ಎರಡು ರಾಜ್ಯಗಳಲ್ಲೂ ಬಿಜೆಪಿ ಮೈತ್ರಿ ಸರ್ಕಾರವಿದೆ. ನಾಗರಿಕ ಹಕ್ಕುಗಳ ಹೋರಾಟಗಾರರು “ಕಠಿಣ” ಕಾನೂನನ್ನು ಹಿಂತೆಗೆದುಕೊಳ್ಳಬೇಕೆಂದು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಈ ಕಾಯ್ದೆಯ ಅಡಿಯಲ್ಲಿ ಭದ್ರತಾ ಪಡೆಗಳು ಮಿತಿ ಮೀರಿ ನಡೆಯುತ್ತಿವೆ ಎಂದು ಅವರು ಆರೋಪ ಮಾಡುತ್ತಲೇ ಇದ್ದಾರೆ.

ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ಅಥವಾ AFSPA ಹಲವಾರು ದಶಕಗಳಿಂದ ನಾಗಾಲ್ಯಾಂಡ್ ಮತ್ತು ಈಶಾನ್ಯದ ಭಾಗಗಳಲ್ಲಿ ಜಾರಿಯಲ್ಲಿದೆ. ವಿವಾದಿತ ಕಾನೂನಿನ ಅಡಿಯಲ್ಲಿ ಭದ್ರತಾ ಪಡೆಗಳು ರಾಜ್ಯದಲ್ಲಿ ಎಲ್ಲಿಯಾದರೂ ಕಾರ್ಯಾಚರಣೆಯನ್ನು ನಡೆಸಲು ಮತ್ತು ಯಾವುದೇ ಪೂರ್ವ ವಾರಂಟ್ ಇಲ್ಲದೆ ಯಾರನ್ನಾದರೂ ಬಂಧಿಸಬಹುದಾಗಿದೆ. ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ (ಇಂಫಾಲ್ ಮುನ್ಸಿಪಲ್ ಕೌನ್ಸಿಲ್ ಪ್ರದೇಶವನ್ನು ಹೊರತುಪಡಿಸಿ), ಅರುಣಾಚಲ ಪ್ರದೇಶದ ಚಾಂಗ್ಲಾಂಗ್, ಲಾಂಗ್ಡಿಂಗ್ ಮತ್ತು ತಿರಾಪ್ ಜಿಲ್ಲೆಗಳು ಮತ್ತು ಅಸ್ಸಾಂ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಎಂಟು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ AFSPA ಜಾರಿಯಲ್ಲಿದೆ.

“ AFSPA ರದ್ದುಗೊಳಿಸಬೇಕು” ಎಂದು ಕಾನ್ರಾಡ್ ಕೆ ಸಂಗ್ಮಾ ಟ್ವೀಟ್‌ ಮಾಡಿದ್ದಾರೆ, ಅವರ ಪಕ್ಷವು ಬಿಜೆಪಿಯ ಮಿತ್ರ ಪಕ್ಷವಾಗಿದೆ. ಮುಖ್ಯಮಂತ್ರಿಯ ಬೇಡಿಕೆಗೆ ರಾಜ್ಯ ಕಾಂಗ್ರೆಸ್ ಕೂಡ ಬೆಂಬಲಿಸಿದ್ದು, ಈ ಕುರಿತು ಸಮಾಲೋಚನೆಗಾಗಿ ಸಭೆ ಕರೆಯುವಂತೆ ಒತ್ತಾಯಿಸಿದೆ.

ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಅವರು AFSPA ವಿಸ್ತರಣೆಗಾಗಿ ಒಕ್ಕೂಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಇದು ಗೊಂದಲದ ಪ್ರದೇಶ ಎಂದು ಪ್ರತಿಪಾದಿಸಿ ಪ್ರತಿ ವರ್ಷ ಒಕ್ಕೂಟ ಸರ್ಕಾರ ನಾಗಾಲ್ಯಾಂಡ್‌ನಲ್ಲಿ ಎಎಫ್‌ಎಸ್‌ಪಿಎ ಅನ್ನು ವಿಸ್ತರಿಸುತ್ತದೆ. ಆದರೆ ಎಲ್ಲಾ ಸಶಸ್ತ್ರ ಗುಂಪುಗಳು ಕದನ ವಿರಾಮ ಮತ್ತು ಶಾಂತಿ ಮಾತುಕತೆಯ ಭಾಗವಾಗಿದೆ. ಹಾಗಾದರೆ ಅದನ್ನು ವಿಸ್ತರಿಸುವುದು ಯಾಕೆ?” ಎಂದು ಕೇಳಿದ್ದಾರೆ.

“ಎಎಫ್‌ಎಸ್‌ಪಿಎ ಸಶಸ್ತ್ರ ಪಡೆಗಳಿಗೆ ವಿನಾಯಿತಿ ನೀಡುತ್ತದೆ…ಈ ಕಾನೂನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿಯೂ ಚರ್ಚೆಯಾಗುತ್ತಿದೆ. ನಾವು ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಬಹಳಷ್ಟು ಜನರು ಎಎಫ್‌ಎಸ್‌ಪಿಎ ತೆಗೆದುಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ನಾಗಾಲ್ಯಾಂಡ್ ಹತ್ಯಾಕಾಂಡ: ಈಶಾನ್ಯ ಭಾರತದಲ್ಲಿ AFSPA ರದ್ದತಿ ಹೋರಾಟಕ್ಕೆ ಮತ್ತಷ್ಟು ಧ್ವನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಲ್‌ ಜಝೀರಾ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಅಧಿಕಾರಿಗಳು

0
ಗಾಝಾದಲ್ಲಿ ಇಸ್ರೇಲ್ ನಡೆಸಿದ ಕ್ರೌರ್ಯವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದ ಅಲ್‌ ಜಝೀರಾ ಸುದ್ದಿವಾಹಿನಿಯನ್ನು ಇಸ್ರೇಲ್‌ ಈ ಹಿಂದೆ ದೇಶದಲ್ಲಿ ನಿರ್ಬಂಧ ವಿಧಿಸಿತ್ತು. ಇದೀಗ ಇಸ್ರೇಲ್‌ನಲ್ಲಿನ ಅಲ್‌ಜಝೀರಾ ಕಚೇರಿಗೆ ಇಸ್ರೇಲ್‌ ಅಧಿಕಾರಿಗಳು ದಾಳಿ ನಡೆಸಿದ್ದು,...