Homeಮುಖಪುಟಶ್ರದ್ಧಾಂಜಲಿ; ಅಗಲಿದ ಆತ್ಮೀಯ ಗೆಳೆಯ ಗಂಗಾಧರಮೂರ್ತಿ

ಶ್ರದ್ಧಾಂಜಲಿ; ಅಗಲಿದ ಆತ್ಮೀಯ ಗೆಳೆಯ ಗಂಗಾಧರಮೂರ್ತಿ

- Advertisement -
- Advertisement -

ಇನ್ನೂ ಒಂದು ವರ್ಷ ಮುಗಿದಿಲ್ಲ; ಇದು ಮೂರನೇ ಆಘಾತ. ಮೊದಲಿಗೆ ರಂಗಾರೆಡ್ಡಿ, ಎರಡು ತಿಂಗಳ ಹಿಂದೆ ಹೆಚ್.ವಿ.ವೇಣುಗೋಪಾಲ್, ಇದೀಗ ಗಂಗಾಧರ ಮೂರ್ತಿ; 1971ರಲ್ಲಿ ನಾನು ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕನ ಕೆಲಸಕ್ಕೆ ಸೇರಿದೆ. 1978 ಮತ್ತು ನಂತರ ಈ ಮೂವರು ನಮ್ಮ ಕಾಲೇಜಿನಲ್ಲಿ ಮೇಷ್ಟ್ರುಗಳಾದರು. 1992ರಲ್ಲಿ ನಾನು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿಗೆ ವರ್ಗವಾಗುವವರೆಗೆ ನಾವು ನಾಲ್ವರೂ ಮತ್ತು ಇತರ ಕೆಲವರು ಕಾಲೇಜಿನಲ್ಲಿ ಮತ್ತು ಹೊರಗಡೆ ಜತೆಗೇ ದುಡಿಯುತ್ತಿದ್ದೆವು. ರಂಗಾರೆಡ್ಡಿ ಕನ್ನಡ ಪಾಠ ಮಾಡಿದರೆ, ವೇಣುಗೋಪಾಲ್ ಸಂಸ್ಕೃತ, ಗಂಗಾಧರ ಮೂರ್ತಿಯವರು ಇಂಗ್ಲಿಷ್.

ವಯಸ್ಸಿನಲ್ಲಿ ನನಗಿಂತಲೂ ಮೂರು ವರ್ಷ ಹಿರಿಯರಾದ ಗಂಗಾಧರಮೂರ್ತಿ ಮೈಸೂರಿನಲ್ಲಿ ಅಂಚೆ ಇಲಾಖೆಯ ಆರ್.ಎಂ.ಎಸ್.ನಲ್ಲಿ ಗೆಳೆಯರಾದ ಸಿರಿಮನೆ ನಾಗರಾಜರ ಹಿರಿಯ ಸಹೋದ್ಯೋಗಿಯಾಗಿ ದುಡಿಯುತ್ತಾ, ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವಿ ಪಡೆದು ನಮ್ಮ ಕಾಲೇಜಿಗೆ ಬಂದರು. ಆ ಹೊತ್ತಿಗಾಗಲೇ ಅವರು ಕಾರ್ಮಿಕ ಸಂಘಟನೆಯ ಭಾಗವಾಗಿದ್ದರು; ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರಲ್ಲದೆ, ಕರ್ನಾಟಕದ ಬೌದ್ಧಿಕ ವಲಯದಲ್ಲಿಯೂ ಹೆಸರು ಮಾಡಿದ್ದರು. ನಾನು ಆಂಧ್ರದಿಂದ ಬಂದು ಇನ್ನೂ ಕನ್ನಡದ ಮೇಲೆ ಸರಿಯಾದ ಹಿಡಿತ ಸಿಗದೆ ತೆಲುಗು-ಇಂಗ್ಲಿಷ್-ಕನ್ನಡಗಳ ನಡುವೆ ಹಾರಾಡುತ್ತಿದ್ದವನು; ಅವರಿಗೆ ಹೋಲಿಸಿದರೆ ಅನನುಭವಿ. ಆದರೆ ನನ್ನ ಚಿಂತನಾಕ್ರಮ, ವೈಚಾರಿಕ ನಿಲುವುಗಳು ಹಿಂದಿನಿಂದಲೂ ತೆಲುಗು, ಇಂಗ್ಲಿಷ್‌ನಲ್ಲಿನ ಪ್ರಗತಿಪರ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿದ್ದರಿಂದ ನಾವಿಬ್ಬರೂ ಬಹುಬೇಗನೆ ಬೌದ್ಧಿಕವಾಗಿ ಒಂದೇ ಧಾರೆಯ ಭಾಗವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ. ಅವರಿಗಿಂತ ಸೇವಾನುಭವದಲ್ಲಿ ನಾನು ಹಿರಿಯ ಅಥವಾ ಹೋರಾಟದ ಅನುಭವದಲ್ಲಿ, ಸಾಹಿತ್ಯ ಲೋಕದಲ್ಲಿ ಅವರು ನನಗಿಂತ ಹಿರಿಯ, ಪ್ರಖ್ಯಾತ ಅನ್ನುವ ಯಾವ ರೀತಿಯ ಹಮ್ಮುಬಿಮ್ಮುಗಳು ನಮ್ಮನ್ನು ಕಾಡಲಿಲ್ಲವಾದ್ದರಿಂದ, ಕಾಲೇಜಿನ ನಮ್ಮ ವಿಭಾಗದಲ್ಲಾಗಲಿ ಹೊರಗಡೆಯ ಸಾಮಾಜಿಕ ಕಾರ್ಯಕ್ರಮಗಳಲ್ಲಾಗಲಿ ಜತೆಜತೆಯಾಗಿ ನಡೆದೆವು.

ಅದೇ ಸಮಯದಲ್ಲಿ ಅಂದರೆ ಎಂಭತ್ತರ ದಶಕದ ಪ್ರಾರಂಭದಲ್ಲಿ ರಂಗ ಸಂಘಟನೆ ಸಮುದಾಯ ಹಾಗೂ ದಲಿತ ಸಂಘರ್ಷ ಸಮಿತಿಗಳು ಗೌರಿಬಿದನೂರಿಗೂ ಕಾಲಿಟ್ಟವು. ಅವುಗಳ ನಡುವೆ ಹೆಚ್ಚು ಸಮಯದ ಅಂತರವಿರಲಿಲ್ಲ. ಈ ಎರಡೂ ಸಂಘಟನೆಗಳಲ್ಲಿ ನಾವೆಲ್ಲರೂ ಗುರುತಿಸಿಕೊಂಡದ್ದಾಯಿತು. ಗಂಗಾಧರಮೂರ್ತಿಯವರು ದಸಂಸದ ಆರಂಭದ ದಿನಗಳಲ್ಲಿಯೇ ಅದಕ್ಕೆ ಬುನಾದಿ ಹಾಕಿದವರಲ್ಲಿ ಒಬ್ಬರಾಗಿದ್ದವರಿಂದ ನಮಗೆ ವಿಶೇಷವಾದ ಮಾರ್ಗದರ್ಶನ ಸಿಗುವುದು ಸಾಧ್ಯವಾಯಿತು. ನಾವುಗಳು ಸಮುದಾಯದ ರಂಗಚಟುವಟಿಕೆಗಳ ಭಾಗವಾಗಿ ಕೆಲವು ವಿದ್ಯಾರ್ಥಿಗಳ ಜತೆಗೆ ತಂಡವನ್ನೂ ಕಟ್ಟಿಕೊಂಡು ತಾಲೂಕಿನ ಹಲವು ಹಳ್ಳಿಗಳಲ್ಲಿ ಬೀದಿನಾಟಕಗಳನ್ನು ಆಡುತ್ತಿದ್ದೆವು.

ಕೆಲವು ಬಾರಿ ಈ ಪ್ರಯತ್ನಗಳು ನಮ್ಮನ್ನೆಲ್ಲರನ್ನೂ ಅಪಾಯದ ಅಂಚಿಗೂ ತಳ್ಳಿದ್ದಿದೆ. ಅಂಥ ಸಂದರ್ಭಗಳಲ್ಲಿ ಎಲ್ಲರೂ ಸಮಾನವಾಗಿ ಸಮಸ್ಯೆಗಳನ್ನ ಮತ್ತು ಸಂತೋಷಗಳನ್ನು ಹಂಚಿಕೊಳ್ಳುತ್ತಿದ್ದುದುಂಟು. ಅಂತೂ ಸಮಾಜದ ಒಳಿತಿಗಾಗಿ ಏನಾದರೂ ಮಾಡಬೇಕೆಂಬ ಉತ್ಸಾಹ ನಮ್ಮಲ್ಲಿ ತುಂಬಿತ್ತು, ನಮ್ಮೆಲ್ಲರ ಹಿರಿಯರಾದ ಬಿಜಿಎಂ ಅಲ್ಲಿ ನಮ್ಮ ದಾರಿದೀಪವಾಗಿದ್ದರು.

ದಸಂಸದ ಕಾರ್ಯಕಲಾಪಗಳ ಭಾಗವಾಗಿ ಹಳ್ಳಿಗಳಲ್ಲಿ, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗಾಗಿ ಕಾರ್ಯಕರ್ತರಿಗಾಗಿ ವಿಶೇಷ ತರಗತಿಗಳು ನಮ್ಮ ಕಾರ್ಯಸೂಚಿಯಲ್ಲಿ ಸೇರಿದ್ದವು. ಊರಿನ ಕೆಲವು ಉತ್ಸಾಹಿ ತರುಣರು ಸಹಸದಸ್ಯರಾಗಿದ್ದ ’ವಿಚಾರ ವೇದಿಕೆ’ಯಡಿ ಪ್ರತಿ ತಿಂಗಳಿನಲ್ಲಿ ಒಂದೆರಡು ಬಾರಿ ಹೊರಗಿನಿಂದ ತಜ್ಞರನ್ನು ಕರೆಸಿ ಉಪನ್ಯಾಸಗಳು, ಚರ್ಚೆಗಳು ಏರ್ಪಡಿಸುತ್ತಿದ್ದ ಕಾಲವದು. ಬಿಜಿಎಂ ಅವರಿಗಿದ್ದ ಸಂಪರ್ಕಗಳಿಂದಾಗಿ ಇಂತ ಚಿಂತಕರನ್ನು, ಸಾಹಿತಿಗಳನ್ನು ಕರೆಸುವುದು ನಮಗೆ ಕಷ್ಟವಾಗಲಿಲ್ಲ.

ಇದೆಲ್ಲದರ ಜತೆಗೆ ಆ ಸಮಯದಲ್ಲಿ ಅಲ್ಲಿ ಕಾಲೂರಬಯಸುತ್ತಿದ್ದ ಆರ್‌ಎಸ್‌ಎಸ್‌ಅನ್ನು ಸಹ ಬೌದ್ಧಿಕನೆಲೆಯಲ್ಲಿ ವಿರೋಧಿಸುವಲ್ಲಿ ಬಿಜಿಎಂ ಅವರ ಹಿಂದಿನ ಅನುಭವ ನಮ್ಮ ನೆರವಿಗಿತ್ತು. ಕಾಲೇಜಿನ ಒಳಗೂ ಸಹ ಕೆಲವು ಸಮಸ್ಯೆಗಳು ತಲೆ ಎತ್ತಿದಾಗ ಅದನ್ನು ಸಮನಾಗಿ ಎದುರಿಸಿ ಆಡಳಿತದ ನಿಷ್ಠೂರವನ್ನು ಅನುಭವಿಸಬೇಕಾಯಿತು.

ದಸಂಸದ ಹೋರಾಟಗಳಲ್ಲಿ ಗೌರಿಬಿದನೂರು ತಾಲೂಕಿನಲ್ಲಿ ನಡೆದ ನಾಗಸಂದ್ರ ಭೂ ಹೋರಾಟ ಅತಿ ಮುಖ್ಯವಾದದ್ದು. ನಾಗಸಂದ್ರವೆಂಬ ಹಳ್ಳಿಯ ಭೂಮಾಲಿಕರ ಹತ್ತಿರ ಜೀತಕ್ಕಿದ್ದು, ಕನಿಷ್ಠ ಕೂಲಿಗೆ ದುಡಿಯುವ ಆಳುಗಳಾಗಿಯೇ ಇದ್ದವರಲ್ಲಿ ಅತಿ ಹೆಚ್ಚು ಜನರು ದಲಿತರು. ಘನತೆ ತುಂಬಿದ ಬದುಕಿಗಾಗಿ ಅಲ್ಲಿನ ಸುತ್ತಮುತ್ತಲಿನ ಈಚಲ ವನವನ್ನು ಕಡಿದು ಕೃಷಿಗೆ ಯೋಗ್ಯವಾಗಿಸಿ ಆಕ್ರಮಿಸುವುದು ಚಳವಳಿಯ ಯೋಜನೆಯಾಗಿತ್ತು. ಆ ಮೂಲಕ ಅವರು ಜೀತದಾಳು ಸ್ಥಿತಿಯಿಂದಲೂ ಬಿಡುಗಡೆಯಾಗಬಹುದೆಂಬ ಆಶಯ ದಲಿತ ಚಳವಳಿಯದ್ದಾಗಿತ್ತು. ಇದಕ್ಕೆ ಬಿಜಿಎಂರವರೇ ಮುಖ್ಯಮಾರ್ಗದರ್ಶಕರಾಗಿದ್ದರು; ನಾವು ಅದರ ಭಾಗಿಗಳು; ಪೊಲೀಸರ ಲಾಠಿ ಏಟಿನ ರುಚಿ ನೋಡಿದವರು ಯುವಕಾರ್ಯಕರ್ತರು; ಈಚಲ ವನದ ಜಾಗದಲ್ಲಿ ಬೇಸಾಯದ ಭೂಮಿ ಸಿದ್ಧವಾಯಿತು. ಶಂಭೂಕ ನಗರವೆಂಬ ಕಾಲೋನಿ ನಿರ್ಮಾಣವಾಯಿತು. ತಕ್ಷಣದಲ್ಲಿ ಯಶಸ್ವಿಯಾದೆವು. ಆದರೆ ನಂತರದ ಬೆಳವಣಿಗೆಗಳು ಭ್ರಮನಿರಸನ ಮೂಡಿಸುವಂಥವು.

ಈ ಎಲ್ಲ ಚಟುವಟಿಕೆಗಳ ನಡುವೆಯೂ ನಮ್ಮನಮ್ಮ ಬೌದ್ಧಿಕ, ಶೈಕ್ಷಣಿಕ ಕಾರ್ಯಗಳೂ ಮುಂದುವರಿದವು. ಅವರ ಬರಹಗಳು, ಅನುವಾದಗಳು ಹೊರಬಂದವು. ಜತೆಗೆ, ನಾವೂ ಸಹ ಬರಹದಲ್ಲಿ ತೊಡಗಿಕೊಳ್ಳುವಂತಾಯಿತು. ನಾನು ಮತ್ತು ಗಂಗಾಧರ ಮೂರ್ತಿಯವರು ಮಿಲ್ಟನ್‌ನ ಮಹಾಕಾವ್ಯದಂಥ ಇಂಗ್ಲಿಷ್ ಅಭಿಜಾತ ಸಾಹಿತ್ಯದ ಮರು ಓದಿನಲ್ಲಿಯೂ ಒಂದಾಗುತ್ತಿದ್ದೆವು. ಆ ಸಮಯದಲ್ಲಿ ಕಾಲೇಜಿನ ಗ್ರಂಥಾಲಯಕ್ಕಾಗಿ ಯುಜಿಸಿಯಿಂದ ದೊಡ್ಡಮೊತ್ತದ ಅನುದಾನ ದೊರಕಿದ್ದರಿಂದ ಒಂದು ಒಳ್ಳೆಯ ಇಂಗ್ಲಿಷ್ ವಿಭಾಗವನ್ನೂ ಗ್ರಂಥಾಲಯದ ಭಾಗವಾಗಿಸುವುದರಲ್ಲಿಯೂ ಅವರ ಪಾತ್ರ ದೊಡ್ಡದು.

1992ರಲ್ಲಿ ಬೆಂಗಳೂರಿಗೆ ವರ್ಗವಾಗಿ ಮತ್ತೆ 2002ರಲ್ಲಿ ಅದೇ ಕಾಲೇಜಿಗೆ ಪ್ರಿನ್ಸಿಪಾಲನಾಗಿ ಹಿಂದಿರುಗಿ ಒಂದು ವರ್ಷವಿದ್ದಾಗಲೂ ನಮ್ಮ ಸ್ನೇಹ ಹಿಂದಿನಂತೆಯೇ ಮುಂದುವರಿಯಿತು.

ಈ ಎಲ್ಲದರ ನಡುವೆ ಕೆಲವರ್ಷಗಳಿಂದ ಅವರ ಆರೋಗ್ಯ ಕ್ಷೀಣಿಸುತ್ತಲೇ ಬಂದಿದ್ದೂ ನಮಗೆ ತಿಳಿದಿತ್ತು. ಅವರ ಸಂಗಾತಿ ಗೌರಮ್ಮನವರು ಅವರನ್ನು ಒಂದು ಮಗುವಿನಂತೆ ನೋಡಿಕೊಂಡಿದ್ದರಿಂದ ಕೊನೆಯವರೆಗೂ ತಮ್ಮ ಅನಾರೋಗ್ಯವನ್ನೂ ನಿಭಾಯಿಸುವುದು ಸಾಧ್ಯವಾಯಿತು. ತಮ್ಮ ಉಸಿರು ನಿಂತ ಮೇಲೂ ಇತರರಿಗೆ ಉಪಕಾರವಾಗಲೆಂಬ ಉದ್ದೇಶದಿಂದ ಬೆಂಗಳೂರು ಮೆಡಿಕಲ್ ಕಾಲೇಜಿಗೆ ದೇಹವನ್ನು ದಾನವನ್ನಾಗಿ ಕೊಡುವ ಅವರ ಇಚ್ಛೆಯನ್ನು ಕುಟುಂಬದವರು ಪೂರೈಸಿದ್ದಾರೆ. ಅವರ ಕಣ್ಣುಗಳು ಮತ್ತು ಇತರ ಅಂಗಗಳು ಬೇರೆ ಯಾರಲ್ಲಿಯೋ ಮನೆ ಮಾಡಿರುತ್ತವೆ. ಅವರು ಮತ್ತೆ ಹುಟ್ಟಿಬರಬೇಕಾಗಿಲ್ಲ; ಆ ನಂಬಿಕೆಯೂ ಅವರಿಗಿರಲಿಲ್ಲ. ಅವರ ಆಶಯಗಳು, ಆದರ್ಶಗಳು ಇಂದಿನ ಪೀಳಿಗೆಯವರಿಗೆ ಅನುಕರಣೀಯವೆಂದು ಕಂಡರೆ ಅವರ ಜೀವನ ಸಾರ್ಥಕ.


ಇದನ್ನೂ ಓದಿ: ಮರುಓದು: ಪ್ರೊ.ಬಿ.ಗಂಗಾಧರ ಮೂರ್ತಿಯವರು ಅನುವಾದಿಸಿರುವ ‘ದೇಶವಿಭಜನೆಯ ವಾಸ್ತವ ಸತ್ಯಗಳು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...