Homeಮುಖಪುಟಶ್ರದ್ಧಾಂಜಲಿ; ಅಗಲಿದ ಆತ್ಮೀಯ ಗೆಳೆಯ ಗಂಗಾಧರಮೂರ್ತಿ

ಶ್ರದ್ಧಾಂಜಲಿ; ಅಗಲಿದ ಆತ್ಮೀಯ ಗೆಳೆಯ ಗಂಗಾಧರಮೂರ್ತಿ

- Advertisement -
- Advertisement -

ಇನ್ನೂ ಒಂದು ವರ್ಷ ಮುಗಿದಿಲ್ಲ; ಇದು ಮೂರನೇ ಆಘಾತ. ಮೊದಲಿಗೆ ರಂಗಾರೆಡ್ಡಿ, ಎರಡು ತಿಂಗಳ ಹಿಂದೆ ಹೆಚ್.ವಿ.ವೇಣುಗೋಪಾಲ್, ಇದೀಗ ಗಂಗಾಧರ ಮೂರ್ತಿ; 1971ರಲ್ಲಿ ನಾನು ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕನ ಕೆಲಸಕ್ಕೆ ಸೇರಿದೆ. 1978 ಮತ್ತು ನಂತರ ಈ ಮೂವರು ನಮ್ಮ ಕಾಲೇಜಿನಲ್ಲಿ ಮೇಷ್ಟ್ರುಗಳಾದರು. 1992ರಲ್ಲಿ ನಾನು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿಗೆ ವರ್ಗವಾಗುವವರೆಗೆ ನಾವು ನಾಲ್ವರೂ ಮತ್ತು ಇತರ ಕೆಲವರು ಕಾಲೇಜಿನಲ್ಲಿ ಮತ್ತು ಹೊರಗಡೆ ಜತೆಗೇ ದುಡಿಯುತ್ತಿದ್ದೆವು. ರಂಗಾರೆಡ್ಡಿ ಕನ್ನಡ ಪಾಠ ಮಾಡಿದರೆ, ವೇಣುಗೋಪಾಲ್ ಸಂಸ್ಕೃತ, ಗಂಗಾಧರ ಮೂರ್ತಿಯವರು ಇಂಗ್ಲಿಷ್.

ವಯಸ್ಸಿನಲ್ಲಿ ನನಗಿಂತಲೂ ಮೂರು ವರ್ಷ ಹಿರಿಯರಾದ ಗಂಗಾಧರಮೂರ್ತಿ ಮೈಸೂರಿನಲ್ಲಿ ಅಂಚೆ ಇಲಾಖೆಯ ಆರ್.ಎಂ.ಎಸ್.ನಲ್ಲಿ ಗೆಳೆಯರಾದ ಸಿರಿಮನೆ ನಾಗರಾಜರ ಹಿರಿಯ ಸಹೋದ್ಯೋಗಿಯಾಗಿ ದುಡಿಯುತ್ತಾ, ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವಿ ಪಡೆದು ನಮ್ಮ ಕಾಲೇಜಿಗೆ ಬಂದರು. ಆ ಹೊತ್ತಿಗಾಗಲೇ ಅವರು ಕಾರ್ಮಿಕ ಸಂಘಟನೆಯ ಭಾಗವಾಗಿದ್ದರು; ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರಲ್ಲದೆ, ಕರ್ನಾಟಕದ ಬೌದ್ಧಿಕ ವಲಯದಲ್ಲಿಯೂ ಹೆಸರು ಮಾಡಿದ್ದರು. ನಾನು ಆಂಧ್ರದಿಂದ ಬಂದು ಇನ್ನೂ ಕನ್ನಡದ ಮೇಲೆ ಸರಿಯಾದ ಹಿಡಿತ ಸಿಗದೆ ತೆಲುಗು-ಇಂಗ್ಲಿಷ್-ಕನ್ನಡಗಳ ನಡುವೆ ಹಾರಾಡುತ್ತಿದ್ದವನು; ಅವರಿಗೆ ಹೋಲಿಸಿದರೆ ಅನನುಭವಿ. ಆದರೆ ನನ್ನ ಚಿಂತನಾಕ್ರಮ, ವೈಚಾರಿಕ ನಿಲುವುಗಳು ಹಿಂದಿನಿಂದಲೂ ತೆಲುಗು, ಇಂಗ್ಲಿಷ್‌ನಲ್ಲಿನ ಪ್ರಗತಿಪರ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿದ್ದರಿಂದ ನಾವಿಬ್ಬರೂ ಬಹುಬೇಗನೆ ಬೌದ್ಧಿಕವಾಗಿ ಒಂದೇ ಧಾರೆಯ ಭಾಗವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ. ಅವರಿಗಿಂತ ಸೇವಾನುಭವದಲ್ಲಿ ನಾನು ಹಿರಿಯ ಅಥವಾ ಹೋರಾಟದ ಅನುಭವದಲ್ಲಿ, ಸಾಹಿತ್ಯ ಲೋಕದಲ್ಲಿ ಅವರು ನನಗಿಂತ ಹಿರಿಯ, ಪ್ರಖ್ಯಾತ ಅನ್ನುವ ಯಾವ ರೀತಿಯ ಹಮ್ಮುಬಿಮ್ಮುಗಳು ನಮ್ಮನ್ನು ಕಾಡಲಿಲ್ಲವಾದ್ದರಿಂದ, ಕಾಲೇಜಿನ ನಮ್ಮ ವಿಭಾಗದಲ್ಲಾಗಲಿ ಹೊರಗಡೆಯ ಸಾಮಾಜಿಕ ಕಾರ್ಯಕ್ರಮಗಳಲ್ಲಾಗಲಿ ಜತೆಜತೆಯಾಗಿ ನಡೆದೆವು.

ಅದೇ ಸಮಯದಲ್ಲಿ ಅಂದರೆ ಎಂಭತ್ತರ ದಶಕದ ಪ್ರಾರಂಭದಲ್ಲಿ ರಂಗ ಸಂಘಟನೆ ಸಮುದಾಯ ಹಾಗೂ ದಲಿತ ಸಂಘರ್ಷ ಸಮಿತಿಗಳು ಗೌರಿಬಿದನೂರಿಗೂ ಕಾಲಿಟ್ಟವು. ಅವುಗಳ ನಡುವೆ ಹೆಚ್ಚು ಸಮಯದ ಅಂತರವಿರಲಿಲ್ಲ. ಈ ಎರಡೂ ಸಂಘಟನೆಗಳಲ್ಲಿ ನಾವೆಲ್ಲರೂ ಗುರುತಿಸಿಕೊಂಡದ್ದಾಯಿತು. ಗಂಗಾಧರಮೂರ್ತಿಯವರು ದಸಂಸದ ಆರಂಭದ ದಿನಗಳಲ್ಲಿಯೇ ಅದಕ್ಕೆ ಬುನಾದಿ ಹಾಕಿದವರಲ್ಲಿ ಒಬ್ಬರಾಗಿದ್ದವರಿಂದ ನಮಗೆ ವಿಶೇಷವಾದ ಮಾರ್ಗದರ್ಶನ ಸಿಗುವುದು ಸಾಧ್ಯವಾಯಿತು. ನಾವುಗಳು ಸಮುದಾಯದ ರಂಗಚಟುವಟಿಕೆಗಳ ಭಾಗವಾಗಿ ಕೆಲವು ವಿದ್ಯಾರ್ಥಿಗಳ ಜತೆಗೆ ತಂಡವನ್ನೂ ಕಟ್ಟಿಕೊಂಡು ತಾಲೂಕಿನ ಹಲವು ಹಳ್ಳಿಗಳಲ್ಲಿ ಬೀದಿನಾಟಕಗಳನ್ನು ಆಡುತ್ತಿದ್ದೆವು.

ಕೆಲವು ಬಾರಿ ಈ ಪ್ರಯತ್ನಗಳು ನಮ್ಮನ್ನೆಲ್ಲರನ್ನೂ ಅಪಾಯದ ಅಂಚಿಗೂ ತಳ್ಳಿದ್ದಿದೆ. ಅಂಥ ಸಂದರ್ಭಗಳಲ್ಲಿ ಎಲ್ಲರೂ ಸಮಾನವಾಗಿ ಸಮಸ್ಯೆಗಳನ್ನ ಮತ್ತು ಸಂತೋಷಗಳನ್ನು ಹಂಚಿಕೊಳ್ಳುತ್ತಿದ್ದುದುಂಟು. ಅಂತೂ ಸಮಾಜದ ಒಳಿತಿಗಾಗಿ ಏನಾದರೂ ಮಾಡಬೇಕೆಂಬ ಉತ್ಸಾಹ ನಮ್ಮಲ್ಲಿ ತುಂಬಿತ್ತು, ನಮ್ಮೆಲ್ಲರ ಹಿರಿಯರಾದ ಬಿಜಿಎಂ ಅಲ್ಲಿ ನಮ್ಮ ದಾರಿದೀಪವಾಗಿದ್ದರು.

ದಸಂಸದ ಕಾರ್ಯಕಲಾಪಗಳ ಭಾಗವಾಗಿ ಹಳ್ಳಿಗಳಲ್ಲಿ, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗಾಗಿ ಕಾರ್ಯಕರ್ತರಿಗಾಗಿ ವಿಶೇಷ ತರಗತಿಗಳು ನಮ್ಮ ಕಾರ್ಯಸೂಚಿಯಲ್ಲಿ ಸೇರಿದ್ದವು. ಊರಿನ ಕೆಲವು ಉತ್ಸಾಹಿ ತರುಣರು ಸಹಸದಸ್ಯರಾಗಿದ್ದ ’ವಿಚಾರ ವೇದಿಕೆ’ಯಡಿ ಪ್ರತಿ ತಿಂಗಳಿನಲ್ಲಿ ಒಂದೆರಡು ಬಾರಿ ಹೊರಗಿನಿಂದ ತಜ್ಞರನ್ನು ಕರೆಸಿ ಉಪನ್ಯಾಸಗಳು, ಚರ್ಚೆಗಳು ಏರ್ಪಡಿಸುತ್ತಿದ್ದ ಕಾಲವದು. ಬಿಜಿಎಂ ಅವರಿಗಿದ್ದ ಸಂಪರ್ಕಗಳಿಂದಾಗಿ ಇಂತ ಚಿಂತಕರನ್ನು, ಸಾಹಿತಿಗಳನ್ನು ಕರೆಸುವುದು ನಮಗೆ ಕಷ್ಟವಾಗಲಿಲ್ಲ.

ಇದೆಲ್ಲದರ ಜತೆಗೆ ಆ ಸಮಯದಲ್ಲಿ ಅಲ್ಲಿ ಕಾಲೂರಬಯಸುತ್ತಿದ್ದ ಆರ್‌ಎಸ್‌ಎಸ್‌ಅನ್ನು ಸಹ ಬೌದ್ಧಿಕನೆಲೆಯಲ್ಲಿ ವಿರೋಧಿಸುವಲ್ಲಿ ಬಿಜಿಎಂ ಅವರ ಹಿಂದಿನ ಅನುಭವ ನಮ್ಮ ನೆರವಿಗಿತ್ತು. ಕಾಲೇಜಿನ ಒಳಗೂ ಸಹ ಕೆಲವು ಸಮಸ್ಯೆಗಳು ತಲೆ ಎತ್ತಿದಾಗ ಅದನ್ನು ಸಮನಾಗಿ ಎದುರಿಸಿ ಆಡಳಿತದ ನಿಷ್ಠೂರವನ್ನು ಅನುಭವಿಸಬೇಕಾಯಿತು.

ದಸಂಸದ ಹೋರಾಟಗಳಲ್ಲಿ ಗೌರಿಬಿದನೂರು ತಾಲೂಕಿನಲ್ಲಿ ನಡೆದ ನಾಗಸಂದ್ರ ಭೂ ಹೋರಾಟ ಅತಿ ಮುಖ್ಯವಾದದ್ದು. ನಾಗಸಂದ್ರವೆಂಬ ಹಳ್ಳಿಯ ಭೂಮಾಲಿಕರ ಹತ್ತಿರ ಜೀತಕ್ಕಿದ್ದು, ಕನಿಷ್ಠ ಕೂಲಿಗೆ ದುಡಿಯುವ ಆಳುಗಳಾಗಿಯೇ ಇದ್ದವರಲ್ಲಿ ಅತಿ ಹೆಚ್ಚು ಜನರು ದಲಿತರು. ಘನತೆ ತುಂಬಿದ ಬದುಕಿಗಾಗಿ ಅಲ್ಲಿನ ಸುತ್ತಮುತ್ತಲಿನ ಈಚಲ ವನವನ್ನು ಕಡಿದು ಕೃಷಿಗೆ ಯೋಗ್ಯವಾಗಿಸಿ ಆಕ್ರಮಿಸುವುದು ಚಳವಳಿಯ ಯೋಜನೆಯಾಗಿತ್ತು. ಆ ಮೂಲಕ ಅವರು ಜೀತದಾಳು ಸ್ಥಿತಿಯಿಂದಲೂ ಬಿಡುಗಡೆಯಾಗಬಹುದೆಂಬ ಆಶಯ ದಲಿತ ಚಳವಳಿಯದ್ದಾಗಿತ್ತು. ಇದಕ್ಕೆ ಬಿಜಿಎಂರವರೇ ಮುಖ್ಯಮಾರ್ಗದರ್ಶಕರಾಗಿದ್ದರು; ನಾವು ಅದರ ಭಾಗಿಗಳು; ಪೊಲೀಸರ ಲಾಠಿ ಏಟಿನ ರುಚಿ ನೋಡಿದವರು ಯುವಕಾರ್ಯಕರ್ತರು; ಈಚಲ ವನದ ಜಾಗದಲ್ಲಿ ಬೇಸಾಯದ ಭೂಮಿ ಸಿದ್ಧವಾಯಿತು. ಶಂಭೂಕ ನಗರವೆಂಬ ಕಾಲೋನಿ ನಿರ್ಮಾಣವಾಯಿತು. ತಕ್ಷಣದಲ್ಲಿ ಯಶಸ್ವಿಯಾದೆವು. ಆದರೆ ನಂತರದ ಬೆಳವಣಿಗೆಗಳು ಭ್ರಮನಿರಸನ ಮೂಡಿಸುವಂಥವು.

ಈ ಎಲ್ಲ ಚಟುವಟಿಕೆಗಳ ನಡುವೆಯೂ ನಮ್ಮನಮ್ಮ ಬೌದ್ಧಿಕ, ಶೈಕ್ಷಣಿಕ ಕಾರ್ಯಗಳೂ ಮುಂದುವರಿದವು. ಅವರ ಬರಹಗಳು, ಅನುವಾದಗಳು ಹೊರಬಂದವು. ಜತೆಗೆ, ನಾವೂ ಸಹ ಬರಹದಲ್ಲಿ ತೊಡಗಿಕೊಳ್ಳುವಂತಾಯಿತು. ನಾನು ಮತ್ತು ಗಂಗಾಧರ ಮೂರ್ತಿಯವರು ಮಿಲ್ಟನ್‌ನ ಮಹಾಕಾವ್ಯದಂಥ ಇಂಗ್ಲಿಷ್ ಅಭಿಜಾತ ಸಾಹಿತ್ಯದ ಮರು ಓದಿನಲ್ಲಿಯೂ ಒಂದಾಗುತ್ತಿದ್ದೆವು. ಆ ಸಮಯದಲ್ಲಿ ಕಾಲೇಜಿನ ಗ್ರಂಥಾಲಯಕ್ಕಾಗಿ ಯುಜಿಸಿಯಿಂದ ದೊಡ್ಡಮೊತ್ತದ ಅನುದಾನ ದೊರಕಿದ್ದರಿಂದ ಒಂದು ಒಳ್ಳೆಯ ಇಂಗ್ಲಿಷ್ ವಿಭಾಗವನ್ನೂ ಗ್ರಂಥಾಲಯದ ಭಾಗವಾಗಿಸುವುದರಲ್ಲಿಯೂ ಅವರ ಪಾತ್ರ ದೊಡ್ಡದು.

1992ರಲ್ಲಿ ಬೆಂಗಳೂರಿಗೆ ವರ್ಗವಾಗಿ ಮತ್ತೆ 2002ರಲ್ಲಿ ಅದೇ ಕಾಲೇಜಿಗೆ ಪ್ರಿನ್ಸಿಪಾಲನಾಗಿ ಹಿಂದಿರುಗಿ ಒಂದು ವರ್ಷವಿದ್ದಾಗಲೂ ನಮ್ಮ ಸ್ನೇಹ ಹಿಂದಿನಂತೆಯೇ ಮುಂದುವರಿಯಿತು.

ಈ ಎಲ್ಲದರ ನಡುವೆ ಕೆಲವರ್ಷಗಳಿಂದ ಅವರ ಆರೋಗ್ಯ ಕ್ಷೀಣಿಸುತ್ತಲೇ ಬಂದಿದ್ದೂ ನಮಗೆ ತಿಳಿದಿತ್ತು. ಅವರ ಸಂಗಾತಿ ಗೌರಮ್ಮನವರು ಅವರನ್ನು ಒಂದು ಮಗುವಿನಂತೆ ನೋಡಿಕೊಂಡಿದ್ದರಿಂದ ಕೊನೆಯವರೆಗೂ ತಮ್ಮ ಅನಾರೋಗ್ಯವನ್ನೂ ನಿಭಾಯಿಸುವುದು ಸಾಧ್ಯವಾಯಿತು. ತಮ್ಮ ಉಸಿರು ನಿಂತ ಮೇಲೂ ಇತರರಿಗೆ ಉಪಕಾರವಾಗಲೆಂಬ ಉದ್ದೇಶದಿಂದ ಬೆಂಗಳೂರು ಮೆಡಿಕಲ್ ಕಾಲೇಜಿಗೆ ದೇಹವನ್ನು ದಾನವನ್ನಾಗಿ ಕೊಡುವ ಅವರ ಇಚ್ಛೆಯನ್ನು ಕುಟುಂಬದವರು ಪೂರೈಸಿದ್ದಾರೆ. ಅವರ ಕಣ್ಣುಗಳು ಮತ್ತು ಇತರ ಅಂಗಗಳು ಬೇರೆ ಯಾರಲ್ಲಿಯೋ ಮನೆ ಮಾಡಿರುತ್ತವೆ. ಅವರು ಮತ್ತೆ ಹುಟ್ಟಿಬರಬೇಕಾಗಿಲ್ಲ; ಆ ನಂಬಿಕೆಯೂ ಅವರಿಗಿರಲಿಲ್ಲ. ಅವರ ಆಶಯಗಳು, ಆದರ್ಶಗಳು ಇಂದಿನ ಪೀಳಿಗೆಯವರಿಗೆ ಅನುಕರಣೀಯವೆಂದು ಕಂಡರೆ ಅವರ ಜೀವನ ಸಾರ್ಥಕ.


ಇದನ್ನೂ ಓದಿ: ಮರುಓದು: ಪ್ರೊ.ಬಿ.ಗಂಗಾಧರ ಮೂರ್ತಿಯವರು ಅನುವಾದಿಸಿರುವ ‘ದೇಶವಿಭಜನೆಯ ವಾಸ್ತವ ಸತ್ಯಗಳು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...