Homeಕರ್ನಾಟಕಬಿಲ್ಲವರ ಆಕ್ರೋಶಕ್ಕೆ ಮಣಿದ ಸರ್ಕಾರ: ನಾರಾಯಣ ಗುರು ಪಾಠ ‘ಸಮಾಜ ವಿಜ್ಞಾನ’ಕ್ಕೆ ಮರುಸೇರ್ಪಡೆ

ಬಿಲ್ಲವರ ಆಕ್ರೋಶಕ್ಕೆ ಮಣಿದ ಸರ್ಕಾರ: ನಾರಾಯಣ ಗುರು ಪಾಠ ‘ಸಮಾಜ ವಿಜ್ಞಾನ’ಕ್ಕೆ ಮರುಸೇರ್ಪಡೆ

- Advertisement -
- Advertisement -

ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯಕ್ಕೆ ನಾರಾಯಣ ಗುರು ಪಾಠವನ್ನು ಮರು ಸೇರ್ಪಡೆ ಮಾಡುವಂತೆ ಸರ್ಕಾರ ನೂತನ ಆದೇಶ ಹೊರಡಿಸಿದೆ. ಕರಾವಳಿ ಭಾಗದಲ್ಲಿ ಭುಗಿಲೆದ್ದಿದ್ದ ಬಿಲ್ಲವ ಸಮಾಜದ ಹೋರಾಟಕ್ಕೆ ಕೇಸರಿ ಪಡೆ ಮಣಿದಿದೆ.

ಅವ್ಯವಸ್ಥೆಗಳ ಆಗರವಾಗಿರುವ ಪಠ್ಯಪುಸ್ತಕ ಪರಿಷ್ಕರಣೆಯು, ಮುಗಿಯದ ಪುರಾಣವಾಗಿ ಮಾರ್ಪಟ್ಟಿದೆ. ಅಲ್ಲಿದ್ದದ್ದನ್ನು ಇಲ್ಲಿಗೆ, ಇಲ್ಲಿದ್ದಿದ್ದನ್ನು ಅಲ್ಲಿಗೆ ಸ್ಥಾನ ಪಲ್ಲಟ ಮಾಡುವಲ್ಲಿ ಸರ್ಕಾರ ಕಾಲ ಕಳೆಯುತ್ತಿದೆ. ಇಡೀ ಪಠ್ಯಪುಸ್ತಕವನ್ನೇ ರದ್ದು ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದ್ದರೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲಷ್ಟೇ ಮುಂದಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪರಿಷ್ಕರಣೆ ಸಮಿತಿಯು ಹತ್ತನೇ ತರಗತಿಯ ಸಮಾಜ ವಿಜ್ಞಾನದಲ್ಲಿದ್ದ ಶ್ರೀ ನಾರಾಯಣಗುರು ವಿಷಯಾಂಶವನ್ನು ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕಕ್ಕೆ ವರ್ಗಾಯಿಸಿತ್ತು. ಆದರೆ ಅದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕನ್ನಡ ಭಾಷಾ ವಿಷಯದಿಂದ ಪುನಃ ಸಮಾಜ ವಿಜ್ಞಾನಕ್ಕೆ ನಾರಾಯಣ ಗುರು ಪಠ್ಯ ವರ್ಗಾಯಿಸಿ ಸರ್ಕರ ಆದೇಶ ಹೊರಡಿಸಿದೆ.

“10ನೇ ತರಗತಿಯ ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ ಇರುವ ಶ್ರೀ ನಾರಾಯಣಗುರು ಅವರ ವಿಷಯಾಂಶಗಳನ್ನು 2022-23ನೇ ಸಾಲಿಗೆ ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನದಿಂದ ಕೈಬಿಟ್ಟು, ಹಿಂದಿನಂತೆ ಹತ್ತನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿ ಅಳವಡಿಸಿಕೊಂಡು ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ನಾರಾಯಣಗುರುಗಳ ಪಾಠವನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಶೀಲನಾ ಸಮಿತಿ ತೆಗೆದಿದ್ದರಿಂದ ಕರಾವಳಿ ಭಾಗದಲ್ಲಿ ಬಿಲ್ಲವ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್‌‌ ಪತ್ರವನ್ನೂ ಬರೆದಿದ್ದರು.

“ಸಮಾಜ ಸುಧಾರಕ ನಾರಾಯಣಗುರು ಅವರ ಪಠ್ಯವನ್ನು ಸಮಾಜ ವಿಜ್ಞಾನ ವಿಷಯಕ್ಕೆ ವರ್ಗಾಯಿಸಿ” ಎಂದು ಸುನಿಲ್‌ಕುಮಾರ್‌ ಮನವಿ ಮಾಡಿದ್ದರು.

ಬಿಲ್ಲವ ಸಮಾಜದ ನಿರಂತರ ಪ್ರತಿರೋಧದ ಹೊರತಾಗಿಯೂ ಈ ಕುರಿತು ಸರ್ಕಾರ ಮೌನ ವಹಿಸಿತ್ತು. ಕನ್ನಡ ಭಾಷಾ ವಿಷಯದಲ್ಲಿ ನಾರಾಯಣಗುರುಗಳ ಪಾಠವಿದೆ ಎಂದು ಸಬೂಬು ಹೇಳುತ್ತಿತ್ತು. ಆದರೆ ಸಮಾಜ ವಿಜ್ಞಾನದಲ್ಲಿ ಪಾಠವಿದ್ದರೆ ಎಲ್ಲ ವಿದ್ಯಾರ್ಥಿಗಳು ಓದಲು ಸಾಧ್ಯವಾಗುತ್ತದೆ ಎಂದು ಸಮುದಾಯದ ಮುಖಂಡರು ಹೇಳುತ್ತಲೇ ಬಂದಿದ್ದರು. ಬೃಹತ್ ಹೋರಾಟವನ್ನು ಬಿಲ್ಲವ ಸಮುದಾಯ ಕೈಗೊಂಡಿತ್ತು.

ಇದನ್ನೂ ಓದಿರಿ: ಕಾರ್ಕಳ: ಗೋಡ್ಸೆ ಬೋರ್ಡ್ ತೆರವು; ರಸ್ತೆಗೆ ನಾರಾಯಣಗುರುಗಳ ಹೆಸರಿಡುವಂತೆ ಕಾಂಗ್ರೆಸ್ ಆಗ್ರಹ

ಈ ಹಿಂದೆ ಗಣರಾಜ್ಯೋತ್ಸವ ಟ್ಯಾಬ್ಲೋ ವಿಚಾರದಲ್ಲಿಯೂ ನಾರಾಯಣಗುರುಗಳಿಗೆ ಕೇಂದ್ರ ಸರ್ಕಾರ ಅವಮಾನ ಮಾಡಿತ್ತು. ಇದರ ನಡುವೆ ಪಠ್ಯ ಕೈಬಿಡಲಾಗಿತ್ತು. ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ್ಯನವರ ಹೆಸರಿಡಬೇಕು, ಬಿಲ್ಲವ ಅಭಿವೃದ್ದಿ ಮಂಡಳಿ ರಚಿಸಬೇಕು, ಬಿಲ್ಲವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿ ಹಲವು ಸೌಲಭ್ಯಗಳಿಗಾಗಿ ಬಿಲ್ಲವ ಸಮಾಜ ಹೋರಾಟ ಮಾಡುತ್ತಲೇ ಬಂದಿದೆ. ಆದರೆ ಇವೆಲ್ಲಕ್ಕೂ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಬಿಲ್ಲವ ಮುಖಂಡರನ್ನು ಕೆರಳಿಸಿತ್ತು. ಹಾಗಾಗಿ ಬಿಲ್ಲವ ಸಂಘ ಸಂಸ್ಥೆಗಳು ರಿಲೇ ರೀತಿಯ ಪಾದಯಾತ್ರೆ, ಹೆದ್ದಾರಿ ಬಂದ್ ಸೇರಿದಂತೆ 50 ದಿನಗಳವರೆಗೆ ನಿರಂತರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದವು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಕಂಕನಾಡಿ ಗರಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಚಿತ್ತರಂಜನ್ ಕೆ, ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಶ್ರೀಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶೈಲೇಂದ್ರ ಬೈ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಸೇರಿದಂತೆ ನೂರಾರು ಹೋರಾಟಗಾರರು, ಮುಖಂಡರು ಸರ್ಕಾರದ ವಿರುದ್ಧ ಗುಡುಗಿದ್ದರು. ಈ ಹಿನ್ನೆಲೆಯಲ್ಲಿ ಆದೇಶ ಹೊರಬಿದ್ದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...