Homeಚಳವಳಿಕುದುರೆ ವ್ಯಾಪಾರಕ್ಕೆ ಬಹಿರಂಗ ಎಂಟ್ರಿ ಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ

ಕುದುರೆ ವ್ಯಾಪಾರಕ್ಕೆ ಬಹಿರಂಗ ಎಂಟ್ರಿ ಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ

- Advertisement -
- Advertisement -

| ಜಿ.ಆರ್.ವಿದ್ಯಾರಣ್ಯ, ಮೈಸೂರು |

ಅರಬ್ಬೀಯರ ಕುದುರೆ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭದಾಯಕವಾಗಿರುವುದು ಭಾರತದ ರಾಜಕೀಯ ಕುದುರೆ ವ್ಯಾಪಾರ. ಇದರಲ್ಲಿ ಕೊಂಡುಕೊಳ್ಳುವವರಿಗೆ ಮತ್ತು ಮಾರುವವರಿಗಷ್ಟೇ ಅಲ್ಲ, ಕುದುರೆಗೂ ಸಹ ಹೆಚ್ಚಿನ ಲಾಭವಿದೆ. ಕುದುರೆ ವ್ಯಾಪಾರಕ್ಕೆ 1969ರಲ್ಲಿ ಬುನಾದಿ ಹಾಕಿದವರು ಹರಿಯಾಣಾದ ಗಯಾರಾಮ್. ಅವರು ಹದಿನೈದು ದಿನದಲ್ಲಿ ಮೂರು ಬಾರಿ ಪಕ್ಷ ಬದಲಾಯಿಸಿ, ಕೊನೆಗೆ ಕಾಂಗ್ರೆಸ್ಸಿಗೆ ಮರಳಿ ಬಂದು ಗಯಾರಾಮ್ ನಿಂದ ಆಯಾರಾಮ್ ಆದರು. ಅಂದಿನಿಂದಲೂ ಇಂತಹ ಕುದುರೆಗಳಿಗೆ “ಆಯಾರಾಮ್-ಗಯಾರಾಂ” ಎಂಬ ಹಣೆಪಟ್ಟಿಯೂ ಸಿಕ್ಕಿದೆ. ಇದೆಲ್ಲಾ ವೈಯುಕ್ತಿಕ ಮಟ್ಟದಲ್ಲಿ ಪ್ರಾರಂಭವಾಗಿ, ನಂತರ ಪಕ್ಷಗಳಿಗೆ ಹರಡಿ, ಒಂದು ಪಕ್ಷದ ಸರಕಾರವನ್ನು ಕೆಡಹುವ ಅಥವಾ ಇನ್ನೊಂದು ಗುಂಪಿನ ಸರಕಾರವನ್ನು ರಚಿಸುವ ಕುತಂತ್ರವಾಗಿ ರೂಪುಗೊಂಡಿತು. ಸಮ್ಮಿಶ್ರ ಸರಕಾರದ ಇಂದಿನ ಕಾಲದಲ್ಲಿ ಸರಕಾರಗಳು ಬಹಳ ಅಸ್ಥಿರವಾಗಿರುತವೆ. ಅಷ್ಟೇ ಅಲ್ಲ, ಬಹುಮತ ಇರುವ ಸರಕಾರಗಳಿಗೂ ಸಹ ಈ ಆತಂಕ ತಪ್ಪಿದ್ದಲ್ಲ. ಸರಕಾರದಲ್ಲಿ 15% ಶಾಸಕರಿಗೆ ಮಾತ್ರ ಸಚಿವ ಸ್ಥಾನ ಸಿಗುವ ಅವಕಾಶವಿರುವುದರಿಂದ ಮಿಕ್ಕವರು ಅತೃಪ್ತರಾಗಿರುವುದು ಸಹಜ. ಇದನ್ನು ದುರ್ಬಳಕೆ ಮಾಡಿಕೊಂಡು ಅವರಿಗೆ ಗಾಳ ಹಾಕುವುದು ಸರ್ವೇ ಸಾಮಾನ್ಯ. ಬಹುಮತದ ಸರಕಾರಗಳು ಕಡಿಮೆಯಾದಾಗನಿಂದಲೂ ಈ ವ್ಯಾಪಾರ ವೇಗ ಹಿಡಿದು, ಅದನ್ನು ನಿಯಂತ್ರಿಸಲು ಏನೇ ಸಂವಿಧಾನ ತಿದ್ದುಪಡಿ/ಕಾಯಿದೆಗಳು ಜಾರಿಗೆ ಬಂದರೂ ಇದರ ಹಾವಳಿ ಮಾತ್ರ ತಪ್ಪಿಲ್ಲ.

ಈ ಹೇಯ ವ್ಯವಹಾರದ ಇಂದಿನ ಮೇಲ್ಮಟ್ಟದ ವ್ಯಾಪಾರಿ ಭಾರತೀಯ ಜನತಾ ಪಕ್ಷ ಎಂದರೆ ತಪ್ಪಾಗಲಾರದು. ಈ ವ್ಯಾಪಾರ ಬಹಳ ಹಿಂದಿನಿಂದ ಉತ್ತರ ಭಾರತದ ರಾಜಕೀಯದಲ್ಲಿ ಪ್ರಚಲಿತವಿದ್ದರೂ ಸಹ ಇದನ್ನು ಕರ್ನಾಟಕದಲ್ಲಿ ಒಂದು ವ್ಯವಸ್ಥಿತ ಉದ್ದಿಮೆಯನ್ನಾಗಿ ಮಾಡಿದ ಶ್ರೇಯವೂ ಸಹ ಭಾಜಪಕ್ಕೆ ಸೇರುತ್ತದೆ. ಆಪರೇಷನ್ ಕಮಲ ಎಂಬ ಹೆಸರಿನಲ್ಲಿ ಪ್ರಾರಂಭವಾಗಿ, ರಾಜಕೀಯ ಭ್ರಷ್ಚಾಚಾರವನ್ನು ಉನ್ನತ ಮಟ್ಟಕ್ಕೆ ಏರಿಸಿದ ಶ್ರೇಯ ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ. ಚುನಾವಣೆಯಲ್ಲಿ ಎಷ್ಟೇ ಸ್ಥಾನ ಬರಲಿ ಹಣದ ಬಲದ ಮೇಲೆ ತಮ್ಮ ಸರಕಾರ ರಚಿಸಲು ಅಥವಾ ಬೇರೆ ಪಕ್ಷದ ಸರಕಾರ ಬೀಳಿಸಲು ಸಾಧ್ಯ ಎಂದು ಬಲವಾಗಿ ನಂಬಿ ಕಾರ್ಯಗತವಾಗಿರುವ ಪಕ್ಷ ಬಿಜೆಪಿ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸರಕಾರದ ಕೈಗೊಂಬೆಗಳಾಗಿ ಆಡುತ್ತಿರುವ ದೆಹಲಿ ಪೋಲೀಸ್, ಐಬಿ, ಲೋಕಾಯುಕ್ತ, ಆಯಕರ ವಿಭಾಗ, ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ಇಲಾಖೆ, ರಾಷ್ಟ್ರೀಯ ಅನ್ವೇಷಣ ಅಭಿಕರಣ ಮುಂತಾದ ಸ್ವಾಯುತ್ತ ರಾಜಕೀಯೇತರ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು, ಕುದುರೆ ವ್ಯಾಪಾರಕ್ಕಿಳಿದಿರುವ ಹೆಗ್ಗಳಿಕೆಯೂ ಸಹ ಬಿಜೆಪಿಯದ್ದಾಗಿರುತ್ತದೆ. ಇಲ್ಲಿ ಖರೀದಿಸಲ್ಪಟ್ಟ ಕುದುರೆಗಳು ಎಷ್ಟೇ ಹೀನಾಯ ಮಟ್ಟದ್ದಾಗಿದ್ದರೂ ಸಹ ಅವುಗಳು ಬಿಜೆಪಿ ಸೇರಿದ ಕೂಡಲೇ ಅವುಗಳ ಎಲ್ಲಾ ಪಾಪವೂ ಪರಿಹಾರವಾಗಿ, ಎಲ್ಲಾ ಆರೋಪಗಳೂ ಮಾಯವಾಗುತ್ತವೆ. ಭಾಜಪದ ನಾಯಕರನ್ನು ಈ ಹಿಂದೆ ಬಾಯಿಗೆ ಬಂದಂತೆ ಬೈದು, ಹೀಯಾಳಿಸಿದ್ದ ಕುದುರೆಗಳು ತಮ್ಮ ಹೊಸ ನಾಯಕರ ಪಾದವನ್ನು ನೆಕ್ಕುತ್ತಾ ಅವರ ಗುಣಗಾನ ಮಾಡಲು ಪ್ರಾರಂಭಿಸುತ್ತವೆ.

ರಾಜಕೀಯ ಕುದುರೆಗಳು ಬಹುತೇಕ ಕಪ್ಪು ಬಣ್ಣದ್ದೇ ಆಗಿರುವುದರಿಂದ ಅವುಗಳನ್ನು ಖರೀದಿಸಲು ಪೆಟ್ಟಿಗೆ ತುಂಬ ಹಣವೇ ಬೇಕು ಎಂದೇನಿಲ್ಲ, ಕೆಲವೊಮ್ಮೆ ಹೆಸರಿಗೆ ತಕ್ಕಂತೆ ಬ್ಲ್ಯಾಕ್ ಮೇಲ್ ಮಾಡಲು ಅವರ ಹಿಂದಿನ ಅಪರಾಧಿಕ ಜೀವನದ ಜಾತಕ ಅಥವಾ ಆರ್ಥಿಕ ವ್ಯವಾಹರದ ದಾಖಲೆಗಳೂ ಸಹ ಉಪಯೋಗಕ್ಕೆ ಬರುತ್ತವೆ. ಕುದುರೆಗಳನ್ನು ಖೆಡ್ಡಾಗೆ ಕೆಡವಲು ಕೆಲವೊಮ್ಮೆ ಹನಿ ಟ್ರಾಪ್ ವಿಧಾನವನ್ನೂ ಬಳಸಲಾಗುತ್ತದೆ. ಕುದುರೆ ವ್ಯಾಪಾರ ಈಗ ಎಲ್ಲಾ ಪಕ್ಷಗಳಿಗೆ ತಲೆ ನೋವಾಗಿರುವ ತೂಗುಕತ್ತಿಯಾಗಿದೆ. ಪಕ್ಷದ ಕುದುರೆಗಳಿಗೆ ಒಂದು ತಂತ್ರವಾದರೆ ನಿರ್ದಲೀಯ ಕುದುರೆಗಳಿಗೆ ಬೇರೊಂದು ತಂತ್ರ, ಮುಖ್ಯವಾಗಿ ಹಣ ಮತ್ತು ಅಧಿಕಾರದ ಲಾಲಸೆ ಒಡ್ಡಬಹುದು. ಆದರೂ ಯಾವಾಗ, ಯಾವ ಕುದುರೆ ಯಾವ ಕಡೆಗೆ ಹಾರಬಹುದು ಎಂಬುದು ಊಹಿಸಲೂ ಅಸಾಧ್ಯ.

ಒಂದು ಮಟ್ಟಕ್ಕೆ ತಲುಪಿದ ನಂತರ ಮತ್ತು ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಇಲ್ಲದ ಹಿರಿಯ ರಾಜಕಾರಣಿಗಳು ತಮ್ಮ ಅನೈತಿಕ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವ ಸಲುವಾಗಿ, ಅಥವಾ ತಮ್ಮ ಮಕ್ಕಳ ಮುಂದಿನ ಭವಿಷ್ಯ ರೂಪಿಸುವ ಸಲುವಾಗಿ, ಕುದುರೆ ವ್ಯಾಪಾರದಲ್ಲಿ ಭಾಗಿಯಾಗುತ್ತಾರೆ.ಒಂದು ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವರಾಗಿ ಒಳ್ಳೆಯ ಹೆಸರು ಮಾಡಿದಂತಹ ವ್ಯಕ್ತಿ, ಎಲ್ಲಾ ಹಂತದಲ್ಲಿಯೂ ಪಕ್ಷದಿಂದ ಎಲ್ಲಾ ಸವಲತ್ತುಗಳನ್ನು ಭೋಗಿಸಿದ್ದ “ಕುದುರೆ” ಇನ್ನೊಂದು ಪಕ್ಷಕ್ಕೆ ಹಾರಿರುವುದು ವಿರಳವಾದರೂ ಸಹ ಇದು ನಮ್ಮ ಇಂದಿನ ರಾಜಕೀಯ ವ್ಯವಸ್ಥೆಯ ಅಧೋಗತಿಯನ್ನು ದರ್ಶಿಸುತ್ತದೆ. ಈ ತಂತ್ರಗಾರಿಕೆಯಿಂದ ಬಿಜೆಪಿ ಈಗಾಗಲೇ ಬಹುಮತ ಇಲ್ಲದಿದ್ದರೂ ಸಹ ಜಮ್ಮು-ಕಾಶ್ಮೀರ, ಬಿಹಾರ, ಮೇಘಾಲಯ, ಮಿಝೊರಾಮ್, ನಾಗಾಲ್ಯಾಂಡ್, ಗೋವಾ ರಾಜ್ಯದಲ್ಲಿ ಸರಕಾರ ರಚಿಸಲು ಸಾಧ್ಯವಾಯಿತು. ಕರ್ನಾಟಕದಲ್ಲೂ ಸಮಯಪ್ರಜ್ಞೆ ತೋರಿಸಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿಯವರು ತ್ವರಿತವಾಗಿ “ದೋಸ್ತಿ” ಮಾಡಿಕೊಳ್ಳದಿದ್ದರೆ ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಉಂಟಾಗುತ್ತಿತ್ತು. ದೋಸ್ತಿ ಒಳ್ಳೆಯದೋ ಕೆಟ್ಟದ್ದೋ ಬೇರೆ ವಿಷಯ.

ಕುದುರೆಗಳು ಒಂದು ರೀತಿಯ ಶೇರು ಮಾರುಕಟ್ಟೆಯ ಶೇರುಗಳಂತೆ. ಅವನ್ನು ಕೊಂಡುಕೊಳ್ಳಲೇ ಬೇಕೆಂದೇನಿಲ್ಲ, “ಧನವಂತರು” ಅದರಲ್ಲಿ ಆಸಕ್ತಿ ತೋರಿದರೂ ಸಾಕು, ಅವುಗಳ ಬೆಲೆ ಮೇಲೇರಲು ಪ್ರಾರಂಭವಾಗುತ್ತದೆ. ಕೂಡಲೇ ಪಕ್ಷದ ಚಾವಟಿಗಾರ (ವ್ಹಿಪ್ ಮಾಸ್ಟರ್) ಕುದುರೆಗಳನ್ನು ಲಾಯದಲ್ಲಿ ಕೂಡಿಹಾಕಲು ಪ್ರಾರಂಭಿಸುತ್ತಾನೆ. ಕೆಲವೊಮ್ಮೆ ಕುದುರೆಗಳು ತಾವಾಗಿಯೇ ಕೆನೆಯಲು ಪ್ರಾರಂಭಿಸುತ್ತವೆ, ಆಗ ಅವಕ್ಕೆ ಸರಿಯಾಗಿ ಹುಲ್ಲು, ಮೇವು ಹಾಕಬೇಕಾಗುತ್ತದೆ; ಇಲ್ಲದಿದ್ದಲ್ಲಿ ಸರಕಾರವನ್ನು ಕೆಡವಲು ಸದಾ ಸಿದ್ಧವಾಗಿರುವ ಇನ್ನೊಂದು ಪಕ್ಷ ತನ್ನ ಕೆಲಸ ಚುರುಕುಗೊಳಿಸಲು ಪ್ರಾರಂಭಿಸುತ್ತದೆ. ಈ ವ್ಯಾಪಾರಕ್ಕೆ ಇಷ್ಟೊಂದು ಭವಿಷ್ಯವಿರುವುದನ್ನು ಬಹಳ ಹಿಂದೆಯೇ ಗಮನಿಸಿದ ಹಲವು ಸಂಪನ್ಮೂಲ ರಾಜಕೀಯ ಮುಖಂಡರು ಇಂತಹ ಕುದುರೆಗಳನ್ನು ಕೂಡಿಹಾಕಲು ತಮ್ಮದೇ ಆದ ಪಂಚತಾರಾ ರಿಸಾರ್ಟ್ ಲಾಯಗಳನ್ನು ಪ್ರಾರಂಭಿಸಿದ್ದಾರೆ.

ಇಂತಹ ಕುದುರೆ ವ್ಯಾಪಾರದಲ್ಲಿ ಹೊಸದೊಂದು ಅಧ್ಯಾಯವನ್ನು ಇದೀಗ ದೇಶದ ಪ್ರಧಾನಿಯವರು ಸೇರಿಸಿದ್ದಾರೆ. ಒಂದು ಚುನಾಯಿತ ಸರಕಾರವನ್ನು, ಅದರ ಮುಖ್ಯಸ್ಥೆಯಾದ ಮಹಿಳಾ ಮುಖ್ಯಮಂತ್ರಿಯನ್ನು ಹೆದರಿಸಲು ಆ ಪಕ್ಷದ ಎಷ್ಟೋ ಕುದುರೆಗಳು ತಮ್ಮ ಸಂಪರ್ಕದಲ್ಲಿರುವುದಾಗಿಯೂ, ಲೋಕಸಭೆಯ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅಲ್ಲಿನ ರಾಜ್ಯ ಸರಕಾರ ಬೀಳುವುದಾಗಿಯೂ ಭವಿಷ್ಯ ನುಡಿದಿದ್ದಾರೆ. ಇದು ಕೇವಲ ಚುನಾವಣೆಯ ಪ್ರಚಾರದ ಭರದಲ್ಲಿ ಹೇಳಿದ “ಜುಮ್ಲಾ”ವೋ, ಬೆದರಿಕೆ ಸಂದೇಶವೋ, ಪ್ರಧಾನ ಮಂತ್ರಿಗಳ ಸೋಲಿನ ಭೀತಿಯೋ, ಚುನಾವಣೆ ಸಮಯದಲ್ಲಿ ಒಂದು ರಾಜ್ಯದ ರಾಜಕೀಯ ಪಕ್ಷದಲ್ಲಿ ಸಂದೇಹ ಮೂಡಿಸಿ ಒಳ ಜಗಳ ಪ್ರಾರಂಭಿಸುವ ಹುನ್ನಾರವೋ ಅಥವಾ ಬೇಹುಗಾರಿಕೆ ಸಂಸ್ಥೆಯನ್ನು ಬಳಸಿಕೊಂಡು, ಮಾಹಿತಿ ಸಂಗ್ರಹಿಸಿ, ಮಾಡಿರುವ ಭವಿಷ್ಯವಾಣಿಯೋ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಪ್ರಜಾಪ್ರಭುತ್ವ ಮತ್ತು ಭಾರತದ ರಾಜ್ಯ ಒಕ್ಕೂಟ ವ್ಯವಸ್ಥೆಗೆ ಅತ್ಯಂತ ಮಾರಕ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು.

“ನಿಮ್ಮ ಶಾಸಕರು ನಮ್ಮ ಹಿಡಿತದಲ್ಲಿದ್ದಾರೆ” ಎಂಬ ಹೇಳಿಕೆ ಓರ್ವ ದೇಶದ ಪ್ರಧಾನಿಯ ಬಾಯಿಯಿಂದ ಬರುವ ಮಾತಲ್ಲ; ಇದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ. ಈ ಹಿಂದೆಯೂ ನಮ್ಮ ಪ್ರಧಾನಿ ದೇಶದ ಪರಮಾಣು ಅಸ್ತ್ರದ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು. ಪ್ರಧಾನ ಮಂತ್ರಿಗಳು ದೇಶದ ಸಂವಿಧಾನದ ನಿಜವಾದ ಚೌಕೀದಾರ್ ಆಗಿದ್ದಲ್ಲಿ ಅವರು ಈ ಕುತಂತ್ರದಲ್ಲಿ ಭಾಗಿಯಾಗದೇ, ಬಹಿರಂಗವಾಗಿ ಶಾಸಕರ ಹೆಸರನ್ನು ಹೇಳಬೇಕಿತ್ತು. ಇತ್ತೀಚೆಗೆ ಭಾಜಪದ ಹಿರಿಯ ನಾಯಕ ಆಡ್ವಾಣಿಯವರ ಮಾತಿನಂತೆ “ದೇಶ ಮೊದಲು, ಪಕ್ಷ ನಂತರ, ವೈಯುಕ್ತಿಕ ಸ್ವಾರ್ಥ ಕೊನೆಗೆ” ಎಂಬುದು ಏನಾದರೂ ಭಾರತೀಯ ಜನತಾ ಪಕ್ಷದ ವೇದವಾಕ್ಯವಾಗಿದ್ದಲ್ಲಿ ಪ್ರಧಾನಿಗಳು ದೇಶದ ಹಿತವನ್ನು ಎತ್ತಿ ಹಿಡಿದು,ಈ ಕುದುರೆಗಳ ವ್ಯಾಪಾರದ ಆಟವನ್ನು ನಿಲ್ಲಿಸಬೇಕಿತ್ತು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಎಲಾ ಪಕ್ಷಗಳೂ ಸಹ ಪ್ರಧಾನಿಗಳ ಈ ಬೇಜವಾಬ್ದಾರಿಯುತ ಹೇಳಿಕೆಯನ್ನು ತೀವ್ರವಾಗಿ ಖಂಡಿಸಬೇಕು. ರಾಜ್ಯ ಸರಕಾರಗಳು ಅಸ್ಥಿರವಾದಷ್ಟೂ ಆಡಳಿತ ವ್ಯವಸ್ಥೆ ಕುಸಿಯುತ್ತದೆ. ಸರಕಾರಿ ಅಧಿಕಾರಿಗಳು ಅಂಕುಶವಿಲ್ಲದವರಂತೆ ವರ್ತಿಸುತ್ತಾ, ಜನ ಸಾಮಾನ್ಯರ ಕೆಲಸ ಬಿಟ್ಟು ತಮ್ಮ ಸ್ವಂತ ಗೂಡನ್ನು ಬೆಚ್ಚಗೆ ಮಾಡಿಕೊಳ್ಳುವ ಕೆಲಸದಲ್ಲಿ ಮಗ್ನರಾಗುತ್ತಾರೆ. ಭ್ರಷ್ಟಾಚಾರ ತಾಂಡವವಾಡುತ್ತದೆ. ಜನರ ಹಾಹಾಕಾರ ಮುಗಿಲಿಗೇರುತ್ತದೆ. ಹಾಗಾಗದಿರಲಿ ಎಂದು ಆಶಿಸುತ್ತಾ ಈ ಕುದುರೆ ವ್ಯಾಪಾರಕ್ಕೆ ಕಡಿವಾಣ ಹಾಕುವ ವ್ಯವಸ್ಥೆ ಜನರೇ ಕಂಡುಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...