Homeಚಳವಳಿಕುದುರೆ ವ್ಯಾಪಾರಕ್ಕೆ ಬಹಿರಂಗ ಎಂಟ್ರಿ ಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ

ಕುದುರೆ ವ್ಯಾಪಾರಕ್ಕೆ ಬಹಿರಂಗ ಎಂಟ್ರಿ ಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ

- Advertisement -
- Advertisement -

| ಜಿ.ಆರ್.ವಿದ್ಯಾರಣ್ಯ, ಮೈಸೂರು |

ಅರಬ್ಬೀಯರ ಕುದುರೆ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭದಾಯಕವಾಗಿರುವುದು ಭಾರತದ ರಾಜಕೀಯ ಕುದುರೆ ವ್ಯಾಪಾರ. ಇದರಲ್ಲಿ ಕೊಂಡುಕೊಳ್ಳುವವರಿಗೆ ಮತ್ತು ಮಾರುವವರಿಗಷ್ಟೇ ಅಲ್ಲ, ಕುದುರೆಗೂ ಸಹ ಹೆಚ್ಚಿನ ಲಾಭವಿದೆ. ಕುದುರೆ ವ್ಯಾಪಾರಕ್ಕೆ 1969ರಲ್ಲಿ ಬುನಾದಿ ಹಾಕಿದವರು ಹರಿಯಾಣಾದ ಗಯಾರಾಮ್. ಅವರು ಹದಿನೈದು ದಿನದಲ್ಲಿ ಮೂರು ಬಾರಿ ಪಕ್ಷ ಬದಲಾಯಿಸಿ, ಕೊನೆಗೆ ಕಾಂಗ್ರೆಸ್ಸಿಗೆ ಮರಳಿ ಬಂದು ಗಯಾರಾಮ್ ನಿಂದ ಆಯಾರಾಮ್ ಆದರು. ಅಂದಿನಿಂದಲೂ ಇಂತಹ ಕುದುರೆಗಳಿಗೆ “ಆಯಾರಾಮ್-ಗಯಾರಾಂ” ಎಂಬ ಹಣೆಪಟ್ಟಿಯೂ ಸಿಕ್ಕಿದೆ. ಇದೆಲ್ಲಾ ವೈಯುಕ್ತಿಕ ಮಟ್ಟದಲ್ಲಿ ಪ್ರಾರಂಭವಾಗಿ, ನಂತರ ಪಕ್ಷಗಳಿಗೆ ಹರಡಿ, ಒಂದು ಪಕ್ಷದ ಸರಕಾರವನ್ನು ಕೆಡಹುವ ಅಥವಾ ಇನ್ನೊಂದು ಗುಂಪಿನ ಸರಕಾರವನ್ನು ರಚಿಸುವ ಕುತಂತ್ರವಾಗಿ ರೂಪುಗೊಂಡಿತು. ಸಮ್ಮಿಶ್ರ ಸರಕಾರದ ಇಂದಿನ ಕಾಲದಲ್ಲಿ ಸರಕಾರಗಳು ಬಹಳ ಅಸ್ಥಿರವಾಗಿರುತವೆ. ಅಷ್ಟೇ ಅಲ್ಲ, ಬಹುಮತ ಇರುವ ಸರಕಾರಗಳಿಗೂ ಸಹ ಈ ಆತಂಕ ತಪ್ಪಿದ್ದಲ್ಲ. ಸರಕಾರದಲ್ಲಿ 15% ಶಾಸಕರಿಗೆ ಮಾತ್ರ ಸಚಿವ ಸ್ಥಾನ ಸಿಗುವ ಅವಕಾಶವಿರುವುದರಿಂದ ಮಿಕ್ಕವರು ಅತೃಪ್ತರಾಗಿರುವುದು ಸಹಜ. ಇದನ್ನು ದುರ್ಬಳಕೆ ಮಾಡಿಕೊಂಡು ಅವರಿಗೆ ಗಾಳ ಹಾಕುವುದು ಸರ್ವೇ ಸಾಮಾನ್ಯ. ಬಹುಮತದ ಸರಕಾರಗಳು ಕಡಿಮೆಯಾದಾಗನಿಂದಲೂ ಈ ವ್ಯಾಪಾರ ವೇಗ ಹಿಡಿದು, ಅದನ್ನು ನಿಯಂತ್ರಿಸಲು ಏನೇ ಸಂವಿಧಾನ ತಿದ್ದುಪಡಿ/ಕಾಯಿದೆಗಳು ಜಾರಿಗೆ ಬಂದರೂ ಇದರ ಹಾವಳಿ ಮಾತ್ರ ತಪ್ಪಿಲ್ಲ.

ಈ ಹೇಯ ವ್ಯವಹಾರದ ಇಂದಿನ ಮೇಲ್ಮಟ್ಟದ ವ್ಯಾಪಾರಿ ಭಾರತೀಯ ಜನತಾ ಪಕ್ಷ ಎಂದರೆ ತಪ್ಪಾಗಲಾರದು. ಈ ವ್ಯಾಪಾರ ಬಹಳ ಹಿಂದಿನಿಂದ ಉತ್ತರ ಭಾರತದ ರಾಜಕೀಯದಲ್ಲಿ ಪ್ರಚಲಿತವಿದ್ದರೂ ಸಹ ಇದನ್ನು ಕರ್ನಾಟಕದಲ್ಲಿ ಒಂದು ವ್ಯವಸ್ಥಿತ ಉದ್ದಿಮೆಯನ್ನಾಗಿ ಮಾಡಿದ ಶ್ರೇಯವೂ ಸಹ ಭಾಜಪಕ್ಕೆ ಸೇರುತ್ತದೆ. ಆಪರೇಷನ್ ಕಮಲ ಎಂಬ ಹೆಸರಿನಲ್ಲಿ ಪ್ರಾರಂಭವಾಗಿ, ರಾಜಕೀಯ ಭ್ರಷ್ಚಾಚಾರವನ್ನು ಉನ್ನತ ಮಟ್ಟಕ್ಕೆ ಏರಿಸಿದ ಶ್ರೇಯ ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ. ಚುನಾವಣೆಯಲ್ಲಿ ಎಷ್ಟೇ ಸ್ಥಾನ ಬರಲಿ ಹಣದ ಬಲದ ಮೇಲೆ ತಮ್ಮ ಸರಕಾರ ರಚಿಸಲು ಅಥವಾ ಬೇರೆ ಪಕ್ಷದ ಸರಕಾರ ಬೀಳಿಸಲು ಸಾಧ್ಯ ಎಂದು ಬಲವಾಗಿ ನಂಬಿ ಕಾರ್ಯಗತವಾಗಿರುವ ಪಕ್ಷ ಬಿಜೆಪಿ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸರಕಾರದ ಕೈಗೊಂಬೆಗಳಾಗಿ ಆಡುತ್ತಿರುವ ದೆಹಲಿ ಪೋಲೀಸ್, ಐಬಿ, ಲೋಕಾಯುಕ್ತ, ಆಯಕರ ವಿಭಾಗ, ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ಇಲಾಖೆ, ರಾಷ್ಟ್ರೀಯ ಅನ್ವೇಷಣ ಅಭಿಕರಣ ಮುಂತಾದ ಸ್ವಾಯುತ್ತ ರಾಜಕೀಯೇತರ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು, ಕುದುರೆ ವ್ಯಾಪಾರಕ್ಕಿಳಿದಿರುವ ಹೆಗ್ಗಳಿಕೆಯೂ ಸಹ ಬಿಜೆಪಿಯದ್ದಾಗಿರುತ್ತದೆ. ಇಲ್ಲಿ ಖರೀದಿಸಲ್ಪಟ್ಟ ಕುದುರೆಗಳು ಎಷ್ಟೇ ಹೀನಾಯ ಮಟ್ಟದ್ದಾಗಿದ್ದರೂ ಸಹ ಅವುಗಳು ಬಿಜೆಪಿ ಸೇರಿದ ಕೂಡಲೇ ಅವುಗಳ ಎಲ್ಲಾ ಪಾಪವೂ ಪರಿಹಾರವಾಗಿ, ಎಲ್ಲಾ ಆರೋಪಗಳೂ ಮಾಯವಾಗುತ್ತವೆ. ಭಾಜಪದ ನಾಯಕರನ್ನು ಈ ಹಿಂದೆ ಬಾಯಿಗೆ ಬಂದಂತೆ ಬೈದು, ಹೀಯಾಳಿಸಿದ್ದ ಕುದುರೆಗಳು ತಮ್ಮ ಹೊಸ ನಾಯಕರ ಪಾದವನ್ನು ನೆಕ್ಕುತ್ತಾ ಅವರ ಗುಣಗಾನ ಮಾಡಲು ಪ್ರಾರಂಭಿಸುತ್ತವೆ.

ರಾಜಕೀಯ ಕುದುರೆಗಳು ಬಹುತೇಕ ಕಪ್ಪು ಬಣ್ಣದ್ದೇ ಆಗಿರುವುದರಿಂದ ಅವುಗಳನ್ನು ಖರೀದಿಸಲು ಪೆಟ್ಟಿಗೆ ತುಂಬ ಹಣವೇ ಬೇಕು ಎಂದೇನಿಲ್ಲ, ಕೆಲವೊಮ್ಮೆ ಹೆಸರಿಗೆ ತಕ್ಕಂತೆ ಬ್ಲ್ಯಾಕ್ ಮೇಲ್ ಮಾಡಲು ಅವರ ಹಿಂದಿನ ಅಪರಾಧಿಕ ಜೀವನದ ಜಾತಕ ಅಥವಾ ಆರ್ಥಿಕ ವ್ಯವಾಹರದ ದಾಖಲೆಗಳೂ ಸಹ ಉಪಯೋಗಕ್ಕೆ ಬರುತ್ತವೆ. ಕುದುರೆಗಳನ್ನು ಖೆಡ್ಡಾಗೆ ಕೆಡವಲು ಕೆಲವೊಮ್ಮೆ ಹನಿ ಟ್ರಾಪ್ ವಿಧಾನವನ್ನೂ ಬಳಸಲಾಗುತ್ತದೆ. ಕುದುರೆ ವ್ಯಾಪಾರ ಈಗ ಎಲ್ಲಾ ಪಕ್ಷಗಳಿಗೆ ತಲೆ ನೋವಾಗಿರುವ ತೂಗುಕತ್ತಿಯಾಗಿದೆ. ಪಕ್ಷದ ಕುದುರೆಗಳಿಗೆ ಒಂದು ತಂತ್ರವಾದರೆ ನಿರ್ದಲೀಯ ಕುದುರೆಗಳಿಗೆ ಬೇರೊಂದು ತಂತ್ರ, ಮುಖ್ಯವಾಗಿ ಹಣ ಮತ್ತು ಅಧಿಕಾರದ ಲಾಲಸೆ ಒಡ್ಡಬಹುದು. ಆದರೂ ಯಾವಾಗ, ಯಾವ ಕುದುರೆ ಯಾವ ಕಡೆಗೆ ಹಾರಬಹುದು ಎಂಬುದು ಊಹಿಸಲೂ ಅಸಾಧ್ಯ.

ಒಂದು ಮಟ್ಟಕ್ಕೆ ತಲುಪಿದ ನಂತರ ಮತ್ತು ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಇಲ್ಲದ ಹಿರಿಯ ರಾಜಕಾರಣಿಗಳು ತಮ್ಮ ಅನೈತಿಕ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವ ಸಲುವಾಗಿ, ಅಥವಾ ತಮ್ಮ ಮಕ್ಕಳ ಮುಂದಿನ ಭವಿಷ್ಯ ರೂಪಿಸುವ ಸಲುವಾಗಿ, ಕುದುರೆ ವ್ಯಾಪಾರದಲ್ಲಿ ಭಾಗಿಯಾಗುತ್ತಾರೆ.ಒಂದು ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವರಾಗಿ ಒಳ್ಳೆಯ ಹೆಸರು ಮಾಡಿದಂತಹ ವ್ಯಕ್ತಿ, ಎಲ್ಲಾ ಹಂತದಲ್ಲಿಯೂ ಪಕ್ಷದಿಂದ ಎಲ್ಲಾ ಸವಲತ್ತುಗಳನ್ನು ಭೋಗಿಸಿದ್ದ “ಕುದುರೆ” ಇನ್ನೊಂದು ಪಕ್ಷಕ್ಕೆ ಹಾರಿರುವುದು ವಿರಳವಾದರೂ ಸಹ ಇದು ನಮ್ಮ ಇಂದಿನ ರಾಜಕೀಯ ವ್ಯವಸ್ಥೆಯ ಅಧೋಗತಿಯನ್ನು ದರ್ಶಿಸುತ್ತದೆ. ಈ ತಂತ್ರಗಾರಿಕೆಯಿಂದ ಬಿಜೆಪಿ ಈಗಾಗಲೇ ಬಹುಮತ ಇಲ್ಲದಿದ್ದರೂ ಸಹ ಜಮ್ಮು-ಕಾಶ್ಮೀರ, ಬಿಹಾರ, ಮೇಘಾಲಯ, ಮಿಝೊರಾಮ್, ನಾಗಾಲ್ಯಾಂಡ್, ಗೋವಾ ರಾಜ್ಯದಲ್ಲಿ ಸರಕಾರ ರಚಿಸಲು ಸಾಧ್ಯವಾಯಿತು. ಕರ್ನಾಟಕದಲ್ಲೂ ಸಮಯಪ್ರಜ್ಞೆ ತೋರಿಸಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿಯವರು ತ್ವರಿತವಾಗಿ “ದೋಸ್ತಿ” ಮಾಡಿಕೊಳ್ಳದಿದ್ದರೆ ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಉಂಟಾಗುತ್ತಿತ್ತು. ದೋಸ್ತಿ ಒಳ್ಳೆಯದೋ ಕೆಟ್ಟದ್ದೋ ಬೇರೆ ವಿಷಯ.

ಕುದುರೆಗಳು ಒಂದು ರೀತಿಯ ಶೇರು ಮಾರುಕಟ್ಟೆಯ ಶೇರುಗಳಂತೆ. ಅವನ್ನು ಕೊಂಡುಕೊಳ್ಳಲೇ ಬೇಕೆಂದೇನಿಲ್ಲ, “ಧನವಂತರು” ಅದರಲ್ಲಿ ಆಸಕ್ತಿ ತೋರಿದರೂ ಸಾಕು, ಅವುಗಳ ಬೆಲೆ ಮೇಲೇರಲು ಪ್ರಾರಂಭವಾಗುತ್ತದೆ. ಕೂಡಲೇ ಪಕ್ಷದ ಚಾವಟಿಗಾರ (ವ್ಹಿಪ್ ಮಾಸ್ಟರ್) ಕುದುರೆಗಳನ್ನು ಲಾಯದಲ್ಲಿ ಕೂಡಿಹಾಕಲು ಪ್ರಾರಂಭಿಸುತ್ತಾನೆ. ಕೆಲವೊಮ್ಮೆ ಕುದುರೆಗಳು ತಾವಾಗಿಯೇ ಕೆನೆಯಲು ಪ್ರಾರಂಭಿಸುತ್ತವೆ, ಆಗ ಅವಕ್ಕೆ ಸರಿಯಾಗಿ ಹುಲ್ಲು, ಮೇವು ಹಾಕಬೇಕಾಗುತ್ತದೆ; ಇಲ್ಲದಿದ್ದಲ್ಲಿ ಸರಕಾರವನ್ನು ಕೆಡವಲು ಸದಾ ಸಿದ್ಧವಾಗಿರುವ ಇನ್ನೊಂದು ಪಕ್ಷ ತನ್ನ ಕೆಲಸ ಚುರುಕುಗೊಳಿಸಲು ಪ್ರಾರಂಭಿಸುತ್ತದೆ. ಈ ವ್ಯಾಪಾರಕ್ಕೆ ಇಷ್ಟೊಂದು ಭವಿಷ್ಯವಿರುವುದನ್ನು ಬಹಳ ಹಿಂದೆಯೇ ಗಮನಿಸಿದ ಹಲವು ಸಂಪನ್ಮೂಲ ರಾಜಕೀಯ ಮುಖಂಡರು ಇಂತಹ ಕುದುರೆಗಳನ್ನು ಕೂಡಿಹಾಕಲು ತಮ್ಮದೇ ಆದ ಪಂಚತಾರಾ ರಿಸಾರ್ಟ್ ಲಾಯಗಳನ್ನು ಪ್ರಾರಂಭಿಸಿದ್ದಾರೆ.

ಇಂತಹ ಕುದುರೆ ವ್ಯಾಪಾರದಲ್ಲಿ ಹೊಸದೊಂದು ಅಧ್ಯಾಯವನ್ನು ಇದೀಗ ದೇಶದ ಪ್ರಧಾನಿಯವರು ಸೇರಿಸಿದ್ದಾರೆ. ಒಂದು ಚುನಾಯಿತ ಸರಕಾರವನ್ನು, ಅದರ ಮುಖ್ಯಸ್ಥೆಯಾದ ಮಹಿಳಾ ಮುಖ್ಯಮಂತ್ರಿಯನ್ನು ಹೆದರಿಸಲು ಆ ಪಕ್ಷದ ಎಷ್ಟೋ ಕುದುರೆಗಳು ತಮ್ಮ ಸಂಪರ್ಕದಲ್ಲಿರುವುದಾಗಿಯೂ, ಲೋಕಸಭೆಯ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅಲ್ಲಿನ ರಾಜ್ಯ ಸರಕಾರ ಬೀಳುವುದಾಗಿಯೂ ಭವಿಷ್ಯ ನುಡಿದಿದ್ದಾರೆ. ಇದು ಕೇವಲ ಚುನಾವಣೆಯ ಪ್ರಚಾರದ ಭರದಲ್ಲಿ ಹೇಳಿದ “ಜುಮ್ಲಾ”ವೋ, ಬೆದರಿಕೆ ಸಂದೇಶವೋ, ಪ್ರಧಾನ ಮಂತ್ರಿಗಳ ಸೋಲಿನ ಭೀತಿಯೋ, ಚುನಾವಣೆ ಸಮಯದಲ್ಲಿ ಒಂದು ರಾಜ್ಯದ ರಾಜಕೀಯ ಪಕ್ಷದಲ್ಲಿ ಸಂದೇಹ ಮೂಡಿಸಿ ಒಳ ಜಗಳ ಪ್ರಾರಂಭಿಸುವ ಹುನ್ನಾರವೋ ಅಥವಾ ಬೇಹುಗಾರಿಕೆ ಸಂಸ್ಥೆಯನ್ನು ಬಳಸಿಕೊಂಡು, ಮಾಹಿತಿ ಸಂಗ್ರಹಿಸಿ, ಮಾಡಿರುವ ಭವಿಷ್ಯವಾಣಿಯೋ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಪ್ರಜಾಪ್ರಭುತ್ವ ಮತ್ತು ಭಾರತದ ರಾಜ್ಯ ಒಕ್ಕೂಟ ವ್ಯವಸ್ಥೆಗೆ ಅತ್ಯಂತ ಮಾರಕ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು.

“ನಿಮ್ಮ ಶಾಸಕರು ನಮ್ಮ ಹಿಡಿತದಲ್ಲಿದ್ದಾರೆ” ಎಂಬ ಹೇಳಿಕೆ ಓರ್ವ ದೇಶದ ಪ್ರಧಾನಿಯ ಬಾಯಿಯಿಂದ ಬರುವ ಮಾತಲ್ಲ; ಇದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ. ಈ ಹಿಂದೆಯೂ ನಮ್ಮ ಪ್ರಧಾನಿ ದೇಶದ ಪರಮಾಣು ಅಸ್ತ್ರದ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು. ಪ್ರಧಾನ ಮಂತ್ರಿಗಳು ದೇಶದ ಸಂವಿಧಾನದ ನಿಜವಾದ ಚೌಕೀದಾರ್ ಆಗಿದ್ದಲ್ಲಿ ಅವರು ಈ ಕುತಂತ್ರದಲ್ಲಿ ಭಾಗಿಯಾಗದೇ, ಬಹಿರಂಗವಾಗಿ ಶಾಸಕರ ಹೆಸರನ್ನು ಹೇಳಬೇಕಿತ್ತು. ಇತ್ತೀಚೆಗೆ ಭಾಜಪದ ಹಿರಿಯ ನಾಯಕ ಆಡ್ವಾಣಿಯವರ ಮಾತಿನಂತೆ “ದೇಶ ಮೊದಲು, ಪಕ್ಷ ನಂತರ, ವೈಯುಕ್ತಿಕ ಸ್ವಾರ್ಥ ಕೊನೆಗೆ” ಎಂಬುದು ಏನಾದರೂ ಭಾರತೀಯ ಜನತಾ ಪಕ್ಷದ ವೇದವಾಕ್ಯವಾಗಿದ್ದಲ್ಲಿ ಪ್ರಧಾನಿಗಳು ದೇಶದ ಹಿತವನ್ನು ಎತ್ತಿ ಹಿಡಿದು,ಈ ಕುದುರೆಗಳ ವ್ಯಾಪಾರದ ಆಟವನ್ನು ನಿಲ್ಲಿಸಬೇಕಿತ್ತು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಎಲಾ ಪಕ್ಷಗಳೂ ಸಹ ಪ್ರಧಾನಿಗಳ ಈ ಬೇಜವಾಬ್ದಾರಿಯುತ ಹೇಳಿಕೆಯನ್ನು ತೀವ್ರವಾಗಿ ಖಂಡಿಸಬೇಕು. ರಾಜ್ಯ ಸರಕಾರಗಳು ಅಸ್ಥಿರವಾದಷ್ಟೂ ಆಡಳಿತ ವ್ಯವಸ್ಥೆ ಕುಸಿಯುತ್ತದೆ. ಸರಕಾರಿ ಅಧಿಕಾರಿಗಳು ಅಂಕುಶವಿಲ್ಲದವರಂತೆ ವರ್ತಿಸುತ್ತಾ, ಜನ ಸಾಮಾನ್ಯರ ಕೆಲಸ ಬಿಟ್ಟು ತಮ್ಮ ಸ್ವಂತ ಗೂಡನ್ನು ಬೆಚ್ಚಗೆ ಮಾಡಿಕೊಳ್ಳುವ ಕೆಲಸದಲ್ಲಿ ಮಗ್ನರಾಗುತ್ತಾರೆ. ಭ್ರಷ್ಟಾಚಾರ ತಾಂಡವವಾಡುತ್ತದೆ. ಜನರ ಹಾಹಾಕಾರ ಮುಗಿಲಿಗೇರುತ್ತದೆ. ಹಾಗಾಗದಿರಲಿ ಎಂದು ಆಶಿಸುತ್ತಾ ಈ ಕುದುರೆ ವ್ಯಾಪಾರಕ್ಕೆ ಕಡಿವಾಣ ಹಾಕುವ ವ್ಯವಸ್ಥೆ ಜನರೇ ಕಂಡುಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...