ಎನ್ಸಿಪಿ ಮುಖ್ಯಸ್ಥ, ಶರದ್ ಪವಾರ್ ವಿರುದ್ಧವೇ ಬಂಡಾಯವೆದ್ದಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮ ಪರವಾಗಿರುವ ಶಾಸಕರ ಸಂಖ್ಯಾಬಲ ಪ್ರದರ್ಶನ ಮಾಡಿದ್ದಾರೆ.
ಬುಧವಾರ ಮುಂಬೈನಲ್ಲಿ ಕರೆದಿದ್ದ ಪಕ್ಷದ ಸಭೆಯಲ್ಲಿ 53 ಎನ್ಸಿಪಿ ಶಾಸಕರ ಪೈಕಿ 29 ಶಾಸಕರು ಹಾಜರಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಲ್ಲದೆ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಅಜಿತ್ ಪವಾರ್ ಅವರು ಹೇಳಿದ್ದಾರೆ. ಉಪನಗರ ಬಾಂದ್ರಾದಲ್ಲಿ ನಡೆಯುತ್ತಿರುವ ಅಜಿತ್ ಪವಾರ್ ಶಕ್ತಿ ಪ್ರದರ್ಶನದ ಸಭೆಯಲ್ಲಿ ಎಂಟು ಎನ್ಸಿಪಿ ಎಂಎಲ್ಸಿಗಳ ಪೈಕಿ ಐವರು ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅನಂತ್ ಕಲ್ಸೆ ಪ್ರಕಾರ, ಅಜಿತ್ ಪವಾರ್ ಅವರ ಬಣ ಅನರ್ಹತೆಯಿಂದ ತಪ್ಪಿಸಲು ಕನಿಷ್ಠ 36 ಶಾಸಕರ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಅವರು ಎನ್ಸಿಪಿಯ ಬಹುಪಾಲು ಶಾಸಕರ ಬೆಂಬಲ ತಮಗೆ ಇದೆ ಎಂಬುದನ್ನು ಸಾಬೀತುಪಡಿಸಲು ಮುಂಬೈನ ಬಾಂದ್ರಾದಲ್ಲಿ ಸಭೆ ಕರೆದಿದ್ದರು. ಇದಕ್ಕೆ ಪ್ರತಿಯಾಗಿ ಶರದ್ ಪವಾರ್ ಅವರು ದಕ್ಷಿಣ ಮುಂಬೈನ ಯಶವಂತರಾವ್ ಚವಾಣ್ ಸೆಂಟರ್ ನಲ್ಲಿ ಪಕ್ಷದ ನಾಯಕರ ಸಭೆ ಕರೆದಿದ್ದರು.
ಶರದ್ ಪವಾರ್ ಅವರ ಸಭೆಯಲ್ಲಿ 13 ಶಾಸಕರು ಭಾಗವಹಿಸಿದ್ದಾರೆ ಎನ್ನಲಾಗಿದೆ. ಅನಿಲ್ ದೇಶ್ಮುಖ್, ಅಶೋಕ್ ಪವಾರ್, ರೋಹಿತ್ ಪವಾರ್, ಕಿರಣ್ ಲಹ್ಮತೆ ಸೇರಿದಂತೆ ಕೆಲವೇ ಮಂದಿ ಶರದ್ ಪವಾರ್ ಅವರಿಗೆ ಬೆಂಬಲ ತೋರಿಸಿದ್ದಾರೆ. ಈ ಸಭೆಗೆ ಎನ್ಸಿಪಿಯ ಎಲ್ಲಾ ಶಾಸಕರೂ ಹಾಜರಾಗಬೇಕು ಎಂದು ಪಕ್ಷದ ಮುಖ್ಯ ವಿಪ್ ಜಿತೇಂದ್ರ ಅವ್ಹಾದ್ ಅವರು ವಿಪ್ ಜಾರಿ ಮಾಡಿದ್ದರು.
ಐದು ಸಂಸದರಾದ ಶ್ರೀನಿವಾಸ್ ಪಾಟೀಲ್(ಲೋಕಸಭೆ), ಸುಪ್ರಿಯಾ ಸುಳೆ(ಲೋಕಸಭೆ), ಅಮೋಲ್ ಕೋಲ್ಹೆ (ಲೋಕಸಭೆ), ಫೌಜಿಯಾ ಖಾನ್ (ರಾಜ್ಯಸಭೆ) ವಂದನಾ ಚವಾಣ್ (ರಾಜ್ಯಸಭೆ) ಮತ್ತು ಮೂವರು ಎಂಎಲ್ಸಿಗಳಾದ ಶಶಿಕಾಂತ್ ಶಿಂಧೆ, ಬಾಬಾಜಾನಿ ದುರಾನಿ, ಏಕನಾಥ್ ಖಡ್ಸೆ ಅವರು ಸಹ ಶರದ್ ಪವಾರ್ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಕ್ಕೆ ಅಜಿತ್ ಪವಾರ್ ಎನ್ಸಿಪಿ ಬಣ ಸೇರ್ಪಡೆ: ಶಿಂಧೆ ಶಿವಸೇನೆ ಶಾಸಕರಲ್ಲಿ ಭುಗಿಲೆದ್ದ ಅಸಮಾಧಾನ