ಮಹಾರಾಷ್ಟ್ರ ಸರ್ಕಾರಕ್ಕೆ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ ಸೇರ್ಪಡೆಗೊಂಡಂತೆ ಸಿಎಂ ಏಕನಾಥ್ ಶಿಂಧೆಯವರ ಶಿವಸೇನೆ ಬಣದ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನಾ ಶಾಸಕ ಸಂಜಯ್ ಶಿರ್ಸಾತ್ ಮಾತನಾಡಿ, “ಪಕ್ಷದ ಕೆಲವು ನಾಯಕರು ಅಜಿತ್ ಪವಾರ್ ಅವರ ಎನ್ಸಿಪಿ ಬಣವನ್ನು ಸರ್ಕಾರಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಅಸಮಾಧಾನ ಹೊಂದಿದ್ದಾರೆ” ಎಂದು ಹೇಳಿದ್ದಾರೆ.
“ರಾಜಕೀಯದಲ್ಲಿ ನಮ್ಮ ಎದುರಾಳಿ ಗ್ಯಾಂಗ್ ನಮ್ಮೊಂದಿಗೆ ಸೇರಲು ಬಯಸಿದಾಗ, ನಾವು ಅವರನ್ನು ತೆಗೆದುಕೊಳ್ಳಬೇಕು. ಹಾಗಾಗಿ ಬಿಜೆಪಿ ಅವರನ್ನು ಬರಮಾಡಿಕೊಂಡಿದೆ. ಆದರೆ ಎನ್ಸಿಪಿ ಶಾಸಕರು ನಮ್ಮೊಂದಿಗೆ ಸೇರಿಕೊಂಡ ನಂತರ ನಮ್ಮ ಗುಂಪಿನಲ್ಲಿರುವ ಜನರು ಅಸಮಾಧಾನಗೊಂಡಿದ್ದಾರೆ. ಏಕೆಂದರೆ ನಮ್ಮ ಕೆಲವು ಶಾಸಕರಿಗೆ ಅವರು ಬಯಸಿದ ಸ್ಥಾನಗಳು ಸಿಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಶಿಂಧೆ ಸೇನೆಯ ಶಾಸಕರು ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
#WATCH | Shiv Sena (Eknath Shinde) leader Sanjay Shirsat, says "In politics when our rival gang wants to join us, we have to take them in and that is what BJP did. After NCP joined us, people in our group were upset because some of our leaders will not get their desired position.… pic.twitter.com/IBLDV8i2Eg
— ANI (@ANI) July 5, 2023
ಮಹಾರಾಷ್ಟ್ರದಲ್ಲಿ 43 ಸಚಿವ ಸ್ಥಾನಗಳಿವೆ. ಅದರಲ್ಲಿ ಇದುವರೆಗೂ ಬಿಜೆಪಿಯ 10 ಸಚಿವರು ಮತ್ತು ಶಿಂಧೆ ಶಿವಸೇನೆ ಬಣದ 10 ಸಚಿವರುಗಳು ಇದ್ದರು. ಇನ್ನು 23 ಸ್ಥಾನಗಳು ಖಾಲಿ ಇದ್ದವು. ಅವುಗಳಲ್ಲಿ ಕನಿಷ್ಟ 11 ಸಚಿವ ಸ್ಥಾನಗಳು ಶಿಂಧೆಯ ಶಿವಸೇನೆ ಶಾಸಕರಿಗೆ ಸಿಗುತ್ತವೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಆ 23ರಲ್ಲಿ ಸದ್ಯ ಏಕಾಏಕಿ 9 ಸಚಿವ ಸ್ಥಾನಗಳು ಅಜಿತ್ ಪವಾರ್ ಬಣಕ್ಕೆ ದಕ್ಕಿವೆ. ಹಾಗಾಗಿ ಕೇವಲ 14 ಸ್ಥಾನಗಳು ಮಾತ್ರ ಖಾಲಿ ಇದ್ದು ಶಿಂಧೆ ಬಣಕ್ಕೆ 5 ಸಚಿವ ಸ್ಥಾನ ಸಿಗುವುದೇ ದೊಡ್ಡದು ಎನ್ನಲಾಗಿದೆ. ಇದು ಅವರ ಬಣದಲ್ಲಿ ಕಿತ್ತಾಟಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅಜಿತ್ ಪವಾರ್ ಅವರು ಶಿವಸೇನೆ ಶಾಸಕರಿಗೆ ಅನುದಾನ ನೀಡುವುದರಲ್ಲಿ ತಾರತಮ್ಯ ಮಾಡುತ್ತಿದ್ದರು ಎಂದು ಹಲವು ಶಾಸಕರು ದೂರಿದ್ದರು. ತಾವು ಎಂವಿಎ ಸರ್ಕಾರದಿಂದ ಹೊರಬರಲು ಅದು ಸಹ ಒಂದು ಕಾರಣ ಎಂದು ಹೇಳಿದ್ದರು. ಆದರೆ ಈಗ ಅದೇ ಅಜಿತ್ ಪವಾರ್ ಶಿಂಧೆ ಸಂಪುಟದಲ್ಲಿಯೂ ಹಣಕಾಸು ಸಚಿವರಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಶಿಂಧೆ ಬಣದ ಶಿವಸೇನೆ ಶಾಸಕರಿಗೆ ಇರಿಸು ಮುರಿಸು ಉಂಟು ಮಾಡಿದೆ.
ಇದನ್ನೂ ಓದಿ; ವಿಪಕ್ಷಗಳ ಮೈತ್ರಿ: ಬಿಜೆಪಿಯನ್ನು 2024ರಲ್ಲಿ ಅಧಿಕಾರದಿಂದ ದೂರವಿಡಲಿದೆಯೇ?