ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯವರ ಸಹೋದರಿ ವೈ.ಎಸ್ ಶರ್ಮಿಳಾರವರು ಇಂದು ಹೈದರಾಬಾದ್ನಲ್ಲಿ ಹೊಸ ಪಕ್ಷ ಘೋಷಿಸಲಿದ್ದಾರೆ. ಕಳೆದ ಏಪ್ರಿಲ್ನಲ್ಲಿಯೇ ಪಕ್ಷ ಸ್ಥಾಪನೆಗೆ ಪ್ರಯತ್ನ ನಡೆಸಿದ್ದ ಅವರು ಇಂದು ತಮ್ಮ ತಂದೆಯ ಜನ್ಮದಿನದ ಅಂಗವಾಗಿ ಹೊಸ ಪಕ್ಷಕ್ಕೆ ಚಾಲನೆ ನೀಡಲಿದ್ದಾರೆ.
ಸಾಂಕ್ರಾಮಿಕ ಕಾರಣದಿಂದ ಕೆಲವೇ ಜನ ಭಾಗವಹಿಸುವ ಇಂದಿನ ಕಾರ್ಯಕ್ರದಲ್ಲಿ ಪಕ್ಷದ ಪ್ರಣಾಳಿಕೆ ಮತ್ತು ಧ್ವಜ ಬಿಡುಗಡೆ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ. ಶರ್ಮಿಳಾರವರ ತಾಯಿ ವೈ.ಎಸ್ ವಿಜಯಮ್ಮ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಹೈದರಾಬಾದ್ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ತಮ್ಮ ಪಕ್ಷದ ಚಟುವಟಿಕೆಗಳನ್ನು ತೆಲಂಗಾಣ ರಾಜ್ಯಕ್ಕೆ ಸೀಮಿತಗೊಳಿಸಲಿದ್ದಾರೆಯೇ ಅಥವಾ ಆಂಧ್ರ ಪ್ರದೇಶಕ್ಕೂ ವಿಸ್ತರಿಸಲಿದ್ದಾರೆಯೇ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. “ನಾನು ಇಲ್ಲಿಯೇ ಹುಟ್ಟಿದ್ದೇನೆ, ಇಲ್ಲಿಯೇ ಬೆಳಿದಿದ್ದೇನೆ, ನನ್ನ ಮಕ್ಕಳಿಗೆ ಇಲ್ಲಿಯೇ ಜನ್ಮ ನೀಡಿದ್ದೇನೆ. ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಅರಿವಿವೆ” ಎಂದು ಶರ್ಮಿಳಾ ತಿಳಿಸಿದ್ದಾರೆ. ತಮ್ಮ ಸಹೋದರಿಯ ಈ ನಡೆ ಕುರಿತು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅಂತರ ಕಾಯ್ದುಕೊಂಡಿದ್ದಾರೆ.
ತಮ್ಮ ತಂದೆ ವೈ.ಎಸ್ ರಾಜಶೇಖರ್ ರೆಡ್ಡಿಯವರ ಆಡಳಿತವನ್ನು ಮರುಸ್ಥಾಪಿಸುವುದು ನನ್ನ ಗುರಿ ಎಂದು ಶರ್ಮಿಳಾ ಹೇಳಿದ್ದಾರೆ. ತೆಲಂಗಾಣದಲ್ಲಿ ಪ್ರಬಲ ವಿರೋಧ ಪಕ್ಷವಿಲ್ಲ. ಖಾಲಿ ಇರುವ ಉದ್ಯೋಗಗಳನ್ನು ತುಂಬಿಲ್ಲ ಎಂದು ಕೆ.ಸಿ.ಆರ್ ಸರ್ಕಾರವನ್ನು ಟೀಕಿಸಿದ್ದಾರೆ. ಅಲ್ಲದೇ ತಾನು ಸ್ವತಂತ್ರವಾಗಿ ಜನರಿಗಾಗಿ ಕೆಲಸ ಮಾಡುತ್ತೇನೆಯೇ ಹೊರತು ಟಿಆರ್ಎಸ್, ಬಿಜೆಪಿಗಾಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ನಾಲ್ವರಿಗೆ ಮೋದಿ ಸಂಪುಟದಲ್ಲಿ ಸ್ಥಾನ: ಡೀಟೈಲ್ಸ್ ಇಲ್ಲಿದೆ