Homeಮುಖಪುಟಇಲ್ಲಿ ಯಾರೂ ಕಾಳಜಿ ವಹಿಸುತ್ತಿಲ್ಲ; ಕೊರೊನಾದಿಂದ ಮೃತಪಟ್ಟ ಪತ್ರಕರ್ತನ ಕೊನೆಯ ಸಂದೇಶ

ಇಲ್ಲಿ ಯಾರೂ ಕಾಳಜಿ ವಹಿಸುತ್ತಿಲ್ಲ; ಕೊರೊನಾದಿಂದ ಮೃತಪಟ್ಟ ಪತ್ರಕರ್ತನ ಕೊನೆಯ ಸಂದೇಶ

- Advertisement -
- Advertisement -

“ಇಲ್ಲಿ ಐಸಿಯು ಉತ್ತಮವಾಗಿಲ್ಲ. ದಯವಿಟ್ಟು, ನಾವು ಖಾಸಗಿ ಆಸ್ಪತ್ರೆಗೆ ಹೋಗೋಣ. ಇಲ್ಲಿ ಯಾರೂ ಕಾಳಜಿ ವಹಿಸುತ್ತಿಲ್ಲ.”

ಇದು ಕಳೆದ ವಾರ ಕೊರೊನಾ ವೈರಸ್‌ಗೆ ಬಲಿಯಾದ ಹೈದರಾಬಾದ್‌ನ ಪತ್ರಕರ್ತ ಮನೋಜ್ ಕುಮಾರ್(33) ಕಳುಹಿಸಿದ ಕೊನೆಯ ಸಂದೇಶಗಳಲ್ಲಿ ಒಂದು. ಅವರು ಸರ್ಕಾರಿ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಜೂನ್ 6 ರಂದು ಮಧ್ಯಾಹ್ನ 3.46 ಕ್ಕೆ ಈ ಸಂದೇಶವನ್ನು ಅವರ ಸಹೋದರ ಸಾಯಿನಾಥ್ ಅವರಿಗೆ ಕಳುಹಿಸಿದ 24 ಗಂಟೆಯ ಒಳಗಾಗಿ ಅವರು ಮೃತಪಟ್ಟಿದ್ದಾರೆ.

ಈ ಒಂದು ಸಂದೇಶ, ಮನೋಜ್ ಅನುಭವಿಸುತ್ತಿದ್ದ ಹತಾಶೆಯನ್ನು ತೋರಿಸುತ್ತದೆ. ಅವರು ಆಮ್ಲಜನಕ ಬೇಕೆಂದು ಕೇಳಿದಾಗ ಆಸ್ಪತ್ರೆಯ ಕಡೆಯಿಂದ ಸರಿಯಾದ ಪ್ರತಿಕ್ರಿಯೆ ಬರದೇ ಇರುವ ಕಾರಣ, ತನ್ನ ಸಹೋದರನಿಗೆ “ದಯವಿಟ್ಟು, ನಾವು ಇಲ್ಲಿಂದ ಹೋಗೋಣ” ಎಂದು ಸಂದೇಶ ಕಳುಹಿಸಿದ್ದರು.

ಕೊರೊನಾ ವೈರಸ್ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ನೋಡಲ್ ಕೇಂದ್ರವಾಗಿರುವ ಗಾಂಧಿ ಆಸ್ಪತ್ರೆಯ ಕೊರೊನಾ ವಾರ್ಡ್‌ನ ಅವ್ಯವಸ್ಥೆಯನ್ನು ಎತ್ತಿ ತೋರಿಸುವ ವೀಡಿಯೊವನ್ನು ಸಾಯಿನಾಥ್ ಬಿಡುಗಡೆ ಮಾಡಿದಂತೆಯೇ ಈ ಚಾಟ್‌ಗಳನ್ನೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಸಾಯಿನಾಥ್ ಕೂಡಾ ಮನೋಜ್ ಜೊತೆ ಕೊರೊನಾ ವೈರಸ್‌ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಪ್ರಸ್ತುತ ಹೋಂ ಕ್ವಾರಂಟೈನ್‌ನಲ್ಲಿರುವ ಸಾಯಿನಾಥ್ ಸೋಮವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಸಾಯಿನಾಥ್ ವೀಡಿಯೊಗಳಲ್ಲಿ ದಾಖಲಾಗಿರುವಂತೆ ಘಟನೆಗಳ ಅನುಕ್ರಮವನ್ನು ಎತ್ತಿ ತೋರಿಸುತ್ತಾ, “ಜೂನ್ 3 ರಂದು ಬೆಳಿಗ್ಗೆ 11 ಗಂಟೆಗೆ ಮನೋಜ್‌ನಲ್ಲಿ ಸೋಂಕಿನ ಲಕ್ಷಣ ಗೋಚರಿಸಿದರಿಂದ ನಾವು ಜ್ವರ ಆಸ್ಪತ್ರೆಗೆ ಹೋದೆವು. ಮಧ್ಯಾಹ್ನ 3 ಗಂಟೆ ಸುಮಾರಿಗೆ ನಮ್ಮಿಬ್ಬರನ್ನು ಪರೀಕ್ಷೆ ನಡೆಸಲಾಯಿತು. ನಂತರ ನಾವು ಮನೆಗೆ ಹೋದೆವು. ಅದೇ ದಿನ ರಾತ್ರಿ 10 ಗಂಟೆಯ ನಂತರ ನಾವಿಬ್ಬರೂ ಕೊರೊನಾ ಪಾಸಿಟಿವ್ ಎಂದು ಕರೆ ಬಂದು, ನಾವು ತಕ್ಷಣ ಜ್ವರ ಆಸ್ಪತ್ರೆಗೆ ಹೋದೆವು. ಮುಂಜಾನೆ 1 ರ ಹೊತ್ತಿಗೆ ನಮ್ಮನ್ನು ಏಳನೇ ಮಹಡಿಯಲ್ಲಿರುವ ವಾರ್ಡ್‌ಗೆ ಸ್ಥಳಾಂತರಿಸಲಾಯಿತು.” ಎಂದು ಹೇಳಿದ್ದಾರೆ.


ಓದಿ: ದುಡ್ಡು ಕಟ್ಟಲಾಗದಿದ್ದರೆ ಸತ್ತೋಗಿ; ಕೊರೊನಾ ಸಮಯದಲ್ಲೂ ರಕ್ತ ಹೀರುತ್ತಿರುವ ಫೈನಾನ್ಸ್‌ಗಳು


ಪ್ರವೇಶ ಪಡೆದ ನಂತರ ಅವರಿಗೆ ಬೆಡ್‌ಶೀಟ್, ಸೋಪ್ ಬಾರ್ ಮತ್ತು ಮಲ್ಟಿ-ವಿಟಮಿನ್ ಟ್ಯಾಬ್ಲೆಟ್‌ಗಳ ಜೊತೆಗೆ ಕೆಲವು ಟೂತ್‌ಪೇಸ್ಟ್ ನೀಡಲಾಗಿದೆ ಎಂದು ಹೇಳಿದ ಸಾಯಿನಾಥ್, “ನಾವು ವಾರ್ಡ್‌ಗೆ ಕಾಲಿಟ್ಟ ಸಮಯದಿಂದ ಸರಿಯಾದ ಸೌಲಭ್ಯಗಳಿಲ್ಲ. ರೋಗಿಗಳಿಗೆ ಮಾಹಿತಿ ನೀಡುವ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳಲಿಲ್ಲ” ಎಂದು ಆರೋಪಿಸಿದ್ದಾರೆ.

“ಅದೇ ರಾತ್ರಿ ಮನೋಜ್‌ಗೆ ಉಸಿರಾಟದ ತೊಂದರೆಯಾಗಿ, ಅಲ್ಲಿ ಯಾರಿಗಾದರೂ ತಿಳಿಸುತ್ತೇನೆ ಎಂದರೂ ವಾರ್ಡ್‌ನಲ್ಲಿ ಅಥವಾ ಲಾಬಿಯಲ್ಲಿ ಯಾರೂ ಇರಲಿಲ್ಲ. ನಾನು ಹೊರಗೆ ಹೋಗಿ ನೋಡಿದಾಗ ಕೂಡ ಸ್ವಚ್ಚತಾ ಸಿಬ್ಬಂದಿ ಮಾತ್ರ ಇದ್ದರು. ನಾವು ಹೊರಗೆ ಹೋಗುವಂತಿಲ್ಲ ಮತ್ತು ವೈದ್ಯರು ಮರುದಿನ ಬರುತ್ತಾರೆ ಎಂದು ಅವರು ಹೇಳಿದರು” ಎಂದು ಸಾಯಿನಾಥ್ ಹೇಳಿದ್ದಾರೆ.

ಜೂನ್ 4 ರ ಮುಂಜಾನೆ ತನ್ನ ಸಹೋದರನ ಪರಿಸ್ಥಿತಿ ಹದಗೆಟ್ಟಿದ್ದನ್ನು ನೋಡಿ ಸಹಿಸಿಕೊಳ್ಳಲಾರದೆ ವೈದ್ಯರಿಗೆ ತಿಳಿಸಲು ಪ್ರಯತ್ನಿಸಿದೆ. ನನ್ನ ಸಹೋದರ ಪತ್ರಕರ್ತನಾಗಿರುವುದರಿಂದ ಅವರ ಕೆಲವು ಸಹೋದ್ಯೋಗಿಗಳನ್ನು ಸಂಪರ್ಕಿಸಿ, ಆಸ್ಪತ್ರೆಯ ಅಧೀಕ್ಷಕರ ಮೇಲೆ ಒತ್ತಡ ಹೇರಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಯು ಅವರನ್ನು ಐಸಿಯುಗೆ ಸ್ಥಳಾಂತರಿಸುವುದಾಗಿ ತಿಳಿಸಿದರು. ಆದರೆ ಸುಮಾರು 4 ಗಂಟೆಗಳು ಕಳೆದರೂ ಅದು ನಡೆಯದಿದ್ದಾಗ ಕಾರಣ ಕೇಳಿದೆ. ಆಸ್ಪತ್ರೆಯ ಐಸಿಯುವಿನಲ್ಲಿ ಸಾಕಷ್ಟು ಹಾಸಿಗೆಗಳಿಲ್ಲ ಎಂದು ಅವರು ಹೇಳಿದರು. ಆಮ್ಲಜನಕದ ಸಿಲಿಂಡರ್ ಅನ್ನು ವಾರ್ಡ್‌ನಲ್ಲಿಯೇ ಇಡಬಹುದೇ ಎಂದು ಕೇಳಿದರೆ ಅಲ್ಲಿ ಅದು ಕೂಡ ಲಭ್ಯವಿಲ್ಲ ಎಂದು ಹೇಳಿದರು. ಇದು ಇಲ್ಲಿಯ ಪರಿಸ್ಥಿತಿ, ” ಎಂದು ಸಾಯಿನಾಥ್ ಹೇಳಿದ್ದಾರೆ.

“ಜೂನ್ 4 ರಂದು ಸಂಜೆ 4 ಗಂಟೆ ಸುಮಾರಿಗೆ ಅವರು ಅವನನ್ನು ವಾರ್ಡ್‌ನಿಂದ ಹೊರಗೆ ಕರೆದೊಯ್ದು ಸುಮಾರು 1.5 ಗಂಟೆಗಳ ಕಾಲ, ಗಾಲಿಕುರ್ಚಿಯಲ್ಲಿ ಕೂರಿಸಿದ್ದಾರೆ ಹಾಗೂ ಅವನಿಗೆ ಚಿಕಿತ್ಸೆ ನೀಡಲಿಲ್ಲ” ಎಂದು ಸಾಯಿನಾಥ್  ಆರೋಪಿಸಿದ್ದಾರೆ.

ಈ ಸಮಯದಲ್ಲಿಯೇ ಮನೋಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ತನ್ನ ಸಹೋದರನಿಗೆ ಸಂದೇಶ ಕಳುಹಿಸಿದ್ದಾನೆಂದು ಹೇಳಲಾಗಿದೆ. ಮಾಧ್ಯಮಗಳಲ್ಲಿ ಮನೋಜ್ ಅವರ ಸ್ನೇಹಿತರು ಆರೋಗ್ಯ ಸಚಿವರಿಗೆ ಕರೆ ಮಾಡಿದ ನಂತರವೇ ಅವರು ಮನೋಜ್ ನನ್ನು ಸರಿಯಾಗಿ ನೋಡಿಕೊಳ್ಳಲು ಪ್ರಾರಂಭಿಸಿದರು ಹಾಗೂ ಅವರನ್ನು ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಿದರು ಎಂದು ಸಾಯಿನಾಥ್ ಹೇಳಿದ್ದಾರೆ.

ಜೂನ್ 7 ರ ಬೆಳಿಗ್ಗೆ 9.30 ರ ಸುಮಾರಿಗೆ ನಿಮ್ಮ ಸೋದರ ವೆಂಟಿಲೇಟರ್‌ಗೆ ಸ್ಥಳಾಂತರವಾಗಿದ್ದಾರೆ ಎಂದು ಆಸ್ಪತ್ರೆಯಿಂದ ಸಾಯಿನಾಥ್‌‌ಗೆ ಕರೆ ಬಂದಿದ್ದು, ಅದಾಗಿ ಸ್ವಲ್ಪ ಹೊತ್ತಿಗೆ ಸಹೋದರ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಇಲಾಖೆ ಕರೆ ಮಾಡಿದೆ. ಆದರೆ ಯಾವುದೇ ವೈದ್ಯರು ತನಗೆ ಮಾಹಿತಿ ನೀಡಿರಲಿಲ್ಲ ಎಂದು ಸಾಯಿನಾಥ್ ಹೇಳುತ್ತಾರೆ. “ಆಸ್ಪತ್ರೆಯ ಪರಿಸ್ಥಿತಿ ಹೀಗಿದೆ. ನಮ್ಮಂತವರೇ ಚಿಕಿತ್ಸೆಗೆ ಒತ್ತಡ ಹೇರಬೇಕಾಗುವ ಪರಿಸ್ಥಿತಿ ಇದೆ. ಇನ್ನು ಸಾಮಾನ್ಯ ಜನರಿಗೆ ಇದು ತುಂಬಾ ಕಷ್ಟ” ಎಂದು ಅವರು ಹೇಳಿದ್ದಾರೆ.

 

ಇಷ್ಟೇ ಅಲ್ಲದೆ ಸ್ಥಳೀಯ ಮಾಧ್ಯಮಗಳ ಮತ್ತೊಂದು ವೀಡಿಯೊದಲ್ಲಿ ಗಾಂಧಿ ಆಸ್ಪತ್ರೆಯ ವಾರ್ಡ್‌ನ ಒಂದು ಮೂಲೆಯಲ್ಲಿ ಸಿರಿಂಜಿನ ಪಕ್ಕದಲ್ಲೇ ನೀರಿನ ಬಾಟಲಿಗಳು ಇರುವುದನ್ನು ತೋರಿಸಲಾಗಿದೆ. ಹಲವಾರು ವಸ್ತುಗಳು ನೆಲದ ಮೇಲೆ ಹರಡಿಕೊಂಡಿವೆ.

ಆದರೆ ಇದನ್ನು ತೆಲಗಾಂಣ ಸರ್ಕಾರ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.

ರಾಜ್ಯ ಸರ್ಕಾರ ಯಾರನ್ನೂ ನೇರವಾಗಿ ಹೆಸರಿಸದೆ ಸೋಮವಾರ ಮುಖ್ಯಮಂತ್ರಿ ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು “ಗಾಂಧಿ ಆಸ್ಪತ್ರೆ ಕೊರೊನಾ ವೈರಸ್ ರೋಗಿಗಳಿಂದ ತುಂಬಿಹೋಗಿದೆ ಎಂದು ಕೆಲವರು ಸುಳ್ಳು ಹರಡುತ್ತಿದ್ದಾರೆ. ಕೆಲವು ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಈ ನಕಲಿ ಸುದ್ದಿಯನ್ನು ವರದಿ ಮಾಡುತ್ತಿವೆ. ಆದರೆ ಇದೊಂದು ಸುಳ್ಳು ಸುದ್ದಿಯಾಗಿದೆ. ಗಾಂಧಿ ಆಸ್ಪತ್ರೆಯಲ್ಲಿ, 2,150 ರೋಗಿಗಳಿಗೆ ಚಿಕಿತ್ಸೆ ನೀಡಲು ಸೌಲಭ್ಯವಿದ್ದು, ಆಮ್ಲಜನಕ ಪೂರೈಕೆ ಸೌಲಭ್ಯದೊಂದಿಗೆ 1,000 ಹಾಸಿಗೆಗಳನ್ನು ಹೊಂದಿದೆ. ಅದಲ್ಲದೆ ಆಸ್ಪತ್ರೆಯಲ್ಲಿ ಕೇವಲ 247 ಕೊರೊನ ರೋಗಿಗಳಿದ್ದಾರೆ” ಎಂದಿದೆ.

ಇದಕ್ಕೂ ಮುಂಚೆ ಹೇಳಿಕೆ ಕೊಟ್ಟಿದ್ದ ಗಾಂಧಿ ಆಸ್ಪತ್ರೆಯ ಅಧೀಕ್ಷಕ ರಾಜ ರಾವ್, “ಮನೋಜ್ ಅವರಿಗೆ ವೈದ್ಯರು, ಅರಿವಳಿಕೆ ತಜ್ಞರು ಮತ್ತು ಶ್ವಾಸಕೋಶ ತಜ್ಞರು ಸೇರಿದಂತೆ ವೈದ್ಯರ ತಂಡವು ಚಿಕಿತ್ಸೆ ನೀಡಿದೆ. ಆದರೆ ಅವರಿಗೆ ಜೂನ್ 7 ರಂದು ಹೃದಯಾಘಾತವಾಗಿ ಮೃತಪಟ್ಟರು” ಎಂದಿದ್ದರು.


ಓದಿ: ಮುಂಬೈಯಲ್ಲಿ ಕೊರೊನಾ ಸೋಂಕಿತ ಶವ ಆಸ್ಪತ್ರೆಯಿಂದ ನಾಪತ್ತೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...