Homeಮುಖಪುಟಮೈಕ್ರೋ ಆರ್‌ಎನ್‌ಎ ಸಂಶೋಧನೆಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಮೈಕ್ರೋ ಆರ್‌ಎನ್‌ಎ ಸಂಶೋಧನೆಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

- Advertisement -
- Advertisement -

ಕೋವಿಡ್-19 ಸಾಂಕ್ರಾಮಿಕವನ್ನು ತಡೆಗಟ್ಟಲು ಹಲವು ರೀತಿಯ ಲಸಿಕೆಗಳು ತಯಾರಾದವು. ಅವುಗಳಲ್ಲೊಂದು ಎಂಆರ್‌ಎನ್‌ಎ ಲಸಿಕೆ (mRNA vaccine). ಅಂತಹ ವಿಧಾನದಲ್ಲಿ ಎಂಆರ್‌ಎನ್‌ಎ (mRNA:messenger RNA) ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ಆ ತಂತ್ರಜ್ಞಾನವನ್ನು ಮೊದಲೇ ಶೋಧಿಸಿಕೊಟ್ಟಿದ್ದ ವಿಜ್ಞಾನಿಗಳಾದ ಡ್ರ್ಯೂ ವೈಸ್‌ಮ್ಯಾನ್ ಮತ್ತು ಕ್ಯಾಟಲಿನ್ ಕ್ಯಾರಿಕೋ ಅವರಿಗೆ 2023ರ ಶರೀರಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಕೊಡಲಾಯಿತು.

ಈ ವರ್ಷ, 2024ರ ಶರೀರಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ವಿಜ್ಞಾನದ ನೊಬೆಲ್ ಪ್ರಶಸ್ತಿಯು ಮೈಕ್ರೋ ಆರ್‌ಎನ್‌ಎ (microRNA: miRNA) ಮತ್ತದರ ಕಾರ್ಯಗಳನ್ನು ಸಂಶೋಧಿಸಿದ ಅಮೆರಿಕದ ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ವಿಕ್ಟರ್ ಆಂಬ್ರೋಸ್ ಮತ್ತು ಹಾರ್ವರ್ಡ್ ಮೆಡಿಕಲ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ಗ್ಯಾರಿ ರವ್ಕಿನ್ ಅವರಿಗೆ ನೀಡಲಾಗಿದೆ. ಪ್ರತಿಯೊಬ್ಬರಿಗೂ ಬಹುಮಾನದ ಮೊತ್ತವಾಗಿ ತಲಾ 11 ಲಕ್ಷ ಡಾಲರ್ (ಸುಮಾರು ರೂ. 9 ಕೋಟಿ 68 ಲಕ್ಷಗಳು) ಸಿಗಲಿದೆ. ಮೈಕ್ರೋ ಆರ್‌ಎನ್‌ಎವನ್ನು ಕಂಡುಹಿಡಿಯುವ ಮೂಲಕ ವಂಶವಾಹಿ ಕ್ರಿಯೆಗಳ ನಿಗ್ರಹಿಸುವಿಕೆಗೆ ಹೊಸ ಸಿದ್ಧಾಂತವನ್ನು ಇವರಿಬ್ಬರೂ ಕೊಟ್ಟಿದ್ದಾರೆ.

ಎಂಆರ್‌ಎನ್‌ಎ (ಮೆಸೆಂಜರ್ ರೈಬೋನ್ಯೂಕ್ಲಿಯಿಕ್ ಆಸಿಡ್: mRNA) ಮತ್ತು ಮೈಕ್ರೋ ಆರ್‌ಎನ್‌ಎ (ಮೈಕ್ರೋ ರೈಬೋನ್ಯೂಕ್ಲಿಯಿಕ್ ಆಸಿಡ್: miRNA) ಎರಡು ವಿಭಿನ್ನ ಆಣ್ವಿಕ (molecule)ಗಳಾಗಿವೆ ಎಂಬುದನ್ನು ಓದುಗರು ಮೊಟ್ಟಮೊದಲು ತಮ್ಮ ಗ್ರಹಿಕೆಗೆ ತಂದುಕೊಳ್ಳಬೇಕು. ಇನ್ನು miRNA ಆಣ್ವಿಕದ ಕಾರ್ಯವನ್ನು ಅರ್ಥೈಸಿಕೊಳ್ಳುವುದು ಕೂಡ ಸಾಮಾನ್ಯ ಓದುಗರಿಗೆ ತುಸು ಕಷ್ಟವೇ. ನೊಬೆಲ್ ಪ್ರಶಸ್ತಿ ದಕ್ಕಿಸಿಕೊಂಡ ಮೈಕ್ರೋ ಆರ್‌ಎನ್‌ಎ ಸಂಶೋಧನೆ ಮತ್ತದರ ಪ್ರಮುಖ ಕ್ರಿಯೆಗಳ ಕುರಿತು ಒಂದು ಸರಳ ಲೇಖನವಿದು.

ಸಾಮಾನ್ಯ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಶರೀರಕ್ರಿಯಾ ವಿಜ್ಞಾನ, ಸೂಕ್ಷ್ಮಜೀವಿ ವಿಜ್ಞಾನ, ರಸಾಯನ ವಿಜ್ಞಾನ, ತಳಿ ವಿಜ್ಞಾನ, ಆಣ್ವಿಕ ಜೀವವಿಜ್ಞಾನ ಮುಂತಾದ ವಿಜ್ಞಾನದ ವಿದ್ಯಾರ್ಥಿಗಳು ಒಂದು ಸಿದ್ಧಾಂತವನ್ನು ಅತ್ಯಗತ್ಯವಾಗಿ ಓದಿದವರೇ ಆಗಿರುತ್ತಾರೆ. ಅಂತಹ ಸಿದ್ಧಾಂತವನ್ನು ಆಣ್ವಿಕ ಜೀವವಿಜ್ಞಾನದ ಕೇಂದ್ರ ಸಿದ್ಧಾಂತ Central Dogma of Molecular Biology) ಎಂದು ಕರೆಯಲಾಗಿದೆ. Dogma ಎಂಬ ಪದದ ಅರ್ಥವನ್ನು ಕನ್ನಡದಲ್ಲಿ ’ಸಿದ್ಧಾಂತ’ ಅಥವಾ ’ತತ’ ಎಂಬರ್ಥದಲ್ಲಿ ಬಳಸಬೇಕಿದೆ. ನಾವೀಗ ಮಾಲೆಕ್ಯುಲಾರ್ ಬಯಾಲಜಿ ಅಥವಾ ಬಯೋಟೆಕ್ನಾಲಜಿ (ಗಮನಸಿ ಐಟಿಬಿಟಿಯಲ್ಲಿ ಬಿಟಿ ಎಂದರೆ ಬಯೋಟೆಕ್ನಾಲಜಿ) ಎಂಬ ಪರ್ವಕಾಲದಲ್ಲಿದ್ದೇವೆ.

ಈ ’ಸಿದ್ಧಾಂತ’ದಂತೆ ಪ್ರತಿ ಜೀವಕೋಶದ ನ್ಯೂಕ್ಲಿಯಸ್‌ನಲ್ಲಿ ಬಹುಮುಖ್ಯ ಕ್ರಿಯೆಯು ಅಬಾಧಿತವಾಗಿ ನಡೆಯುತ್ತದೆ. ಅಲ್ಲಿರುವ DNA ಆಣ್ವಿಕವು RNA ಆಣ್ವಿಕ ಆಗುವ ಪ್ರಕ್ರಿಯೆಯನ್ನು ಪ್ರತಿಲೇಖನ (Transcription) ಎಂತಲೂ, RNA ಆಣ್ವಿಕವು Protein (ಸಸಾರಜನಕ) ಆಗುವ ಪ್ರಕ್ರಿಯೆಯನ್ನು ಅನುವಾದ/ನಿರ್ಮಿತಿ (Translation) ಎಂತಲೂ ಕರೆಯಲಾಗಿದೆ. ಇದೇ ಆ ಸಿದ್ಧಾಂತ. ಈ ಜೀವಕ್ರಿಯೆಯಲ್ಲಿ ಸಸಾರಜನಕದ ಸಂಶ್ಲೇಷಣೆಯಲ್ಲಿ ಆರ್‌ಎನ್‌ಎದ ಒಂದು ವಿಧವಾದ ಎಂಆರ್‌ಎನ್‌ಎ (mRNA:messenger RNA) ಪಾಲ್ಗೊಳ್ಳುತ್ತದೆ. mRNA ಅನ್ನು ನಿಗ್ರಹಿಸುವ ಒಂದು ಆಣ್ವಿಕವೇ ಮೈಕ್ರೋಆರ್‌ಎನ್‌ಎ (microRNA: miRNA). ಈ miRNA ಸಂಶೋಧನೆಗೆ 2024ರ ನೊಬೆಲ್ ಪ್ರಶಸ್ತಿ ಸಂದಿದೆ. ಇನ್ನು ಮೇಲೆ ’ಆಣ್ವಿಕ ಜೀವವಿಜ್ಞಾನದ ಕೇಂದ್ರ ಸಿದ್ಧಾಂತ’ವನ್ನು ತರಗತಿಗಳಲ್ಲಿ ಬೋಧಿಸುವಾಗ ಅದರಲ್ಲಿ ಮೈಕ್ರೋಆರ್‌ಎನ್‌ಎ ಪಾತ್ರ ಕುರಿತು ಒತ್ತುಕೊಟ್ಟು ವಿವರಿಸಲೇಬೇಕಿದೆ.

ಪ್ರತಿ ಜೀವಕೋಶದಲ್ಲಿ ಸಸಾರಜನಕದ ಉತ್ಪತ್ತಿಯು ನಿತ್ಯ ನಿರಂತರ ಕ್ರಿಯೆ. ಅಲ್ಲಿ ಸಾವಿರಾರು ರೀತಿಯ ಸಸಾರಜನಕಗಳು ಉತ್ಪತ್ತಿಯಾಗುತ್ತಿರುತ್ತವೆ. ದೇಹದ ವಿವಿಧ ಜೀವಕೋಶಗಳಲ್ಲಿ ಬೇರೆಬೇರೆ ರೀತಿಯ ಸಸಾರಜನಕಗಳು ಉತ್ಪತ್ತಿಯಾಗುತ್ತವೆ. ಉದಾಹರಣೆಗೆ, ಜಠರ, ಮಾಂಸಖಂಡ, ನರವ್ಯೂಹ, ಯಕೃತ್ತು, ಕರುಳು ಮುಂತಾದ ಜೀವಕೋಶಗಳಲ್ಲಿ ವಿಭಿನ್ನ ರೀತಿಯ ಪ್ರೋಟೀನುಗಳು ತಯಾರಾಗುತ್ತವೆ. ಇದಕ್ಕೆ ಮೂಲಭೂತವಾಗಿ ಡಿಎನ್‌ಎ ಕಾರಣ. ಇದು ಜೀನ್ ನಿಗ್ರಹದಿಂದ ಸಾಧ್ಯವಾಗುತ್ತದೆ. ಈ ಜೀನ್ ಅಥವಾ ವಂಶವಾಹಿ ನಿಗ್ರಹದಲ್ಲಿ ಏರುಪೇರಾದರೆ ಕ್ಯಾನ್ಸರ್, ಮಧುಮೇಹ, ಹೃದ್ರೋಗ, ನರ ದೌರ್ಬಲ್ಯಗಳು, ದೇಹ ಪ್ರತಿರಕ್ಷಣೆ ಕ್ರಿಯೆಗಳ ವ್ಯತ್ಯಾಸ ಮುಂತಾದ ಕಾಯಿಲೆಗಳು ಉದ್ಭವಿಸುತ್ತವೆ.

ವಂಶವಾಹಿಗಳ ನಿಗ್ರಹ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿರಬೇಕು. ಇಂತಹ ನಿಗ್ರಹಿಸುವ ಆಣ್ವಿಕೆಯೊಂದರ ಸಂಶೋಧನೆಯ ಬೆಳಕಿಂಡಿಯಲ್ಲಿ ಕಂಡುಕೊಂಡ ಬೆಳಕೇ ಮೈಕ್ರೋ ಆರ್‌ಎನ್‌ಎ (miRNA). ಇದೊಂದು ಅತಿಸಣ್ಣ ಆರ್‌ಎನ್‌ಎ. ಇದೊಂದು ನಾನ್ ಕೋಡಿಂಗ್ ಆರ್‌ಎನ್‌ಎ. ಇದರ ಉದ್ದದಲ್ಲಿ ಕೇವಲ 19 ರಿಂದ 22 ನ್ಯೂಕ್ಲಿಯೋಟೈಡ್‌ಗಳು ಇರುತ್ತವೆ. ಆದರೆ, ಎಂಆರ್‌ಎನ್‌ಎನಲ್ಲಿ ನೂರರಿಂದ ಸಾವಿರ ಸಂಖ್ಯೆಯಷ್ಟು ನ್ಯೂಕ್ಲಿಯೋಟೈಡ್‌ಗಳಿರುತ್ತವೆ.

ಸೀನೋರಾಬ್ಡಿಟಿಸ್ ಎಲಿಗೆನ್ಸ್ ಎಂಬ ಮಾದರಿ ಜೀವಿಯಲ್ಲಿ ಅಧ್ಯಯನ

ಮೈಕ್ರೋ ಆರ್‌ಎನ್‌ಎ ಎಂದರೆ ಪುಟ್ಟ ಆರ್‌ಎನ್‌ಎ. ಇದನ್ನು ಆವಿಷ್ಕರಿಸಲು ಪ್ರೊ. ವಿಕ್ಟರ್ ಆಂಬ್ರೋಸ್ ಮತ್ತು ಪ್ರೊ. ಗ್ಯಾರಿ ರವ್ಕಿನ್ ಅವರು ಬಳಸಿಕೊಂಡಿದ್ದು ಸೀನೋರಾಬ್ಡಿಟಿಸ್ ಎಲಿಗೆನ್ಸ್ (Caenorhabditis elegans)ಎಂಬ ಒಂದು ದುಂಡುಹುಳವನ್ನು. ಅದೊಂದು ನೆಮಟೋಡ್. ಅದು ಅತಿ ಚಿಕ್ಕ ಹುಳು. ಅದರ ಉದ್ದ ಕೇವಲ ಒಂದು ಮಿಲಿಮೀಟರ್! ಅದರ ಜೀವಿತಾವಧಿ 12 ರಿಂದ 18 ದಿನಗಳು. ಹಲವು ಜೆನೆಟಿಕ್ಸ್ ಅಧ್ಯಯನದಲ್ಲಿ ಈ ದುಂಡುಹುಳುವನ್ನು ಸಾಮಾನ್ಯ ’ಮಾದರಿ ಪ್ರಯೋಗಜೀವಿ’ಯಾಗಿ ಬಳಸಲಾಗುತ್ತದೆ. ಅದರ ಅಧ್ಯಯನಗಳಲ್ಲಿ ಕಂಡುಬರುವ ಅಂಶಗಳನ್ನು ಇತರೆ ಬಹುಕೋಶಿಜೀವಿಗಳಿಗೆ ಹಾಗೂ ಮಾನವರಿಗೆ ಅನ್ವಯಿಸಬಹುದಾಗಿದೆ.

ಅಮೆರಿಕದ ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಾಬರ್ಟ್ ಹೊರ್ವಿಟ್ಜ್ ಅವರ ಪ್ರಯೋಗಾಲಯವು ಸೀನೋರಾಬ್ಡಿಟಿಸ್ ಎಲಿಗೆನ್ಸ್ ಹುಳುವನ್ನು ಬಳಸಿಕೊಂಡು ಕೈಗೊಳ್ಳಲಾಗುತ್ತಿದ್ದ ತಳಿವಿಜ್ಞಾನದ ಸಂಶೋಧನೆಗಳಿಗೆ ಹೆಸರುವಾಸಿಯಾಗಿತ್ತು. ಅಲ್ಲಿ ಸಂಶೋಧನೆ ಕೈಗೊಂಡಿದ್ದ ಸಿಡ್ನಿ ಬ್ರೆನ್ನರ್ ಮತ್ತು ರಾಬರ್ಟ್ ಹೊರ್ವಿಟ್ಜ್ ಅವರಿಗೆ 2002ರಲ್ಲಿ ನೊಬೆಲ್ ಪುರಸ್ಕಾರ ಬಂದಿತ್ತು. ಅದೇ ಪ್ರಯೋಗಾಲಯದಲ್ಲಿ ಆಂಬ್ರೋಸ್ ಮತ್ತು ರವ್ಕಿನ್ ಅವರು ಸೀನೋರಾಬ್ಡಿಟಿಸ್ ಎಲಿಗೆನ್ಸ್ ಜೀವಿಯ ವಂಶವಾಹಿಯ ಅಧ್ಯಯನಕ್ಕೆ ಜೊತೆಯಾದರು. ಲಿನ್-4 ಮತ್ತು ಲಿನ್-14 ಎಂಬ ವಿಭಿನ್ನ ಮ್ಯೂಟೆಂಟ್ ದುಂಡುಹುಳುಗಳಲ್ಲಿ ಸಂಶೋಧನೆ ನಡೆಸಿದರು.

ಇದನ್ನೂ ಓದಿ: ಜಾನ್ ಹಾಪ್‌ಫೀಲ್ಡ್ & ಜೆಫ್ರಿ ಹಿಂಟನ್ ಅವರಿಗೆ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ

ಪ್ರೊ. ವಿಕ್ಟರ್ ಆಂಬ್ರೋಸ್ ಅವರು ಸಿ. ಎಲಿಗೆನ್ಸ್‌ನಲ್ಲಿಯ ಜೀನ್‌ಅನ್ನು ಕ್ಲೋನ್ ಮಾಡಿದರು. ಅಂತಹ ಕ್ಲೋನ್ ಮಾಡಿದ ಜೀನ್ ಉದ್ದಳತೆ ತೀರಾ ಚಿಕ್ಕದಾಗಿತ್ತು. ಅದನ್ನು ಮೈಕ್ರೋ ಆರ್‌ಎನ್‌ಎ ಎಂದು ಕರೆದರು. ಪ್ರೊ. ಗ್ಯಾರಿ ರವ್ಕಿನ್ ಅವರು ಎಂಐಟಿಯಲ್ಲಿ ತಳಿವಿಜ್ಞಾನದ ಪ್ರಯೋಗಾಲಯ ಸ್ಥಾಪಿಸಿದ್ದ ರಾಬರ್ಟ್ ಹೊರ್ವಿಟ್ಜ್ ಅವರ ಶಿಷ್ಯ. ರವ್ಕಿನ್ ಅವರು ಮ್ಯುಟೇಷನ್‌ಗೊಳಿಸಿದ ಸೀನೋರಾಬ್ಡಿಟಿಸ್ ಎಲಿಗೆನ್ಸ್‌ನಲ್ಲಿ ಮೈಕ್ರೋ ಆರ್‌ಎನ್‌ಎನಿಂದಾಗುವ ಜೀನ್ ನಿಗ್ರಹ ಗುಣವನ್ನು ಅಧ್ಯಯನ ಮಾಡಿದರು. ಇವರಿಬ್ಬರ ಸಂಶೋಧನಾ ಲೇಖನಗಳು ಮೊಟ್ಟಮೊದಲಿಗೆ 1993ರಲ್ಲಿ ಸೆಲ್ (Cell) ಜರ್ನಲ್‌ನಲ್ಲಿ ಪ್ರತ್ಯೇಕವಾಗಿ ಅಕ್ಕಪಕ್ಕದ ಪುಟಗಳಲ್ಲಿ ಪ್ರಕಟವಾದವು.

ಮೈಕ್ರೋ ಆರ್‌ಎನ್‌ಎ ಕುರಿತ ಮಾಹಿತಿಯು 2000ನೇ ಇಸವಿಯ ನಂತರ ಪ್ರಕಟಗೊಂಡ ಅಂತಾರಾಷ್ಟ್ರೀಯ ಗುಣಮಟ್ಟದ ಪಠ್ಯಪುಸ್ತಕಗಳಲ್ಲಿ ಜಾಗ ಪಡೆದುಕೊಂಡಿತು. ಶಿಕ್ಷಕರು ಈ ಕುರಿತು ಬೋಧಿಸತೊಡಗಿದರು. ಆದರೆ, ಈ ವಿಶಿಷ್ಟ ಸಂಶೋಧನೆಗೆ ನೊಬೆಲ್ ಸಿಕ್ಕಿದ್ದು ಇದೀಗ 2024ರಲ್ಲಿ.

ಮೈಕ್ರೋಆರ್‌ಎನ್‌ಎದಿಂದಾಗುವ ಬಹುಪಯೋಗಿ ಕಾರ್ಯಗಳು

ಜೀನ್‌ಗಳ ಅಭಿವ್ಯಕ್ತಿ (Gene Expression) ಕಾರ್ಯವನ್ನು ಮೈಕ್ರೋ ಆರ್‌ಎನ್‌ಎ ನಿಗ್ರಹಿಸುತ್ತದೆ. ಎಂಆರ್‌ಎನ್‌ಎ ಜೊತೆಗೆ ಕೂಡಿಕೊಂಡು ಸಸಾರಜನಕದ ಉತ್ಪತ್ತಿಯನ್ನು ಹದ್ದುಬಸ್ತಿನಲ್ಲಿಡುತ್ತದೆ. ಕೊಂಚ ಪ್ರಮಾಣದಲ್ಲಿ ಎಂಆರ್‌ಎನ್‌ಎ ಅವನತಿಗೆ ಕಾರಣವಾಗುತ್ತದೆ. ಜೀವಕೋಶಗಳ ಉತ್ಪತ್ತಿ ಮತ್ತು ಅಭಿವೃದ್ಧಿಯನ್ನು ತಕ್ಕಮಟ್ಟಿಗೆ ನಿಗ್ರಹಿಸುತ್ತದೆ. ಜೀವಕೋಶಗಳು ಸಾಯುವಂತೆ (ಅಪಾಪ್ಟೋಸಿಸ್) ಮಾಡುತ್ತದೆಯಾದ್ದರಿಂದ ಕ್ಯಾನ್ಸರ್ ಬರದಂತೆ ತಡೆಯಲು ಉಪಕಾರಿ. ದೇಹದ ಚಯಾಪಚಯ ಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತದೆ. ಕೋಶಗಳಲ್ಲಿ ಸಮತೋಲನದ ಶಕ್ತಿ ಪರಿಸರವನ್ನು ಕಾಪಾಡುತ್ತದೆ. ಒಟ್ಟಿನಲ್ಲಿ ಮೈಕ್ರೋ ಆರ್‌ಎನ್‌ಎ ಕಾರ್ಯವು ಎಂಆರ್‌ಎನ್‌ಎ ವಿರುದ್ಧವಾಗಿರುತ್ತದೆ (ಮೈಕ್ರೋ ಆರ್‌ಎನ್‌ಎ ವರ್ಸಸ್ ಎಂಆರ್‌ಎನ್‌ಎ). ಅವು ಒಂದಕ್ಕೊಂದು ಶತ್ರುಗಳು. ಇದನ್ನು ಪೋಸ್ಟ್ ಟ್ರಾನ್ಸ್-ಕ್ರಿಪ್ಷನಲ್ ಜೀನ್ ರೆಗ್ಯುಲೇಷನ್ ಎಂದು ಕರೆಯಲಾಗಿದೆ. ಮೈಕ್ರೋ ಆರ್‌ಎನ್‌ಎ ಹಲವು ಶರೀರಕ್ರಿಯೆಗಳನ್ನು ಸಮತೋಲನದಲ್ಲಿಡಲು ಅಗತ್ಯವಾಗಿದೆ.

ಸುಮಾರು 400 ರೀತಿಯ ಸಸಾರಜನಕಗಳ ಉತ್ಪತ್ತಿಯನ್ನು ಮೈಕ್ರೋಆರ್‌ಎನ್‌ಎ ನಿಗ್ರಹಿಸುತ್ತದೆ. ಹೀಗೆ ನಿಗ್ರಹಿಸಲಿಲ್ಲವೆಂದರೆ, ಅನಗತ್ಯವಾಗಿ ಯಥೇಚ್ಛವಾಗಿ ಸಸಾರಜನಕ, ಕಿಣ್ವ, ಪ್ರೋಟೀನ್ ಹಾರ್ಮೋನುಗಳು ತಯಾರಾಗಿ ಶರೀರಕ್ರಿಯೆಗಳು ಹಾಗೂ ಜೀವರಾಸಾಯನಿಕ ಕ್ರಿಯೆಗಳು ಹಾದಿ ತಪ್ಪುತ್ತವೆ. ಕನಿಷ್ಠ ಒಂದು ಸಾವಿರ ವಿವಿಧ ರೀತಿಯ ಮೈಕ್ರೋಆರ್‌ಎನ್‌ಎಗಳು ಪ್ರಾಣಿಗಳಲ್ಲಿ ಅಷ್ಟೇ ಅಲ್ಲದೆ ಸಸ್ಯಗಳಲ್ಲೂ ತಯಾರಾಗುತ್ತವೆ.

ಭ್ರೂಣಾವಸ್ಥೆಯಲ್ಲಿಯೂ ಕೂಡ ಈ ಮೈಕ್ರೋಆರ್‌ಎನ್‌ಎಗಳು ವಿವಿಧ ಕೋಶಗಳಲ್ಲಿ ತಯಾರಾಗಿ ಅಂಗ ರಚನೆಗೆ ಪೂರಕವಾಗಿ ವರ್ತಿಸುತ್ತವೆ. ಒಂದು ನಿರ್ದಿಷ್ಟ ಮೈಕ್ರೋಆರ್‌ಎನ್‌ಎ ಆಣ್ವಿಕವು ಒಂದಕ್ಕಿಂತ ಹೆಚ್ಚು ರೀತಿಯ ಎಂಆರ್‌ಎನ್‌ಎವನ್ನು ನಿಗ್ರಹಿಸುತ್ತವೆ.

ವೈದ್ಯಕೀಯ ನೊಬೆಲ್ ಬಹುಮಾನ ಪಡೆದ ಪ್ರೊ. ವಿಕ್ಟರ್ ಆಂಬ್ರೋಸ್ ಅವರಿಗೀಗ 71 ವರ್ಷ ವಯಸ್ಸು. ಜಗತ್ತಿನಲ್ಲಿಯೇ ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿದೆ ಎಂಬ ಖ್ಯಾತಿಯನ್ನು ಗಳಿಸಿರುವ ಅಮೆರಿಕದ ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಡಾಕ್ಟೊರಲ್ ಪದವಿ ಪಡೆದು ಅಲ್ಲಿಯೇ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನೂ ಕೈಗೊಂಡರು. ತದನಂತರ ಹಾರ್ವರ್ಡ್ ವಿವಿಯಲ್ಲಿ ಸಂಶೋಧನೆ ಮುಂದುವರಿಸಿದರು. ಈಗ ತಮ್ಮ ಮಾತೃಸಂಸ್ಥೆಯಾದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಪ್ರೊ. ಗ್ಯಾರಿ ರವ್ಕಿನ್ ಅವರಿಗೆ 72 ವರ್ಷ ವಯಸ್ಸು. ಹಾರ್ವರ್ಡ್ ವಿವಿಯಿಂದ ಡಾಕ್ಟೋರಲ್ ಪದವಿ ಪಡೆದು ಎಂಐಟಿಯಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನು ಪ್ರೊ. ವಿಕ್ಟರ್ ಆಂಬ್ರೋಸ್ ಅವರೊಂದಿಗೆ ಕೈಗೊಂಡರು. ಅವರೀಗ ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ತಳಿವಿಜ್ಞಾನದ ಪ್ರಾಧ್ಯಾಪಕರು.

ಉಪಸಂಹಾರ: ನಮ್ಮ ದೇಹದ ಪ್ರತಿ ಜೀವಕೋಶದಲ್ಲಿ ತಯಾರಾಗಿ, ಆರ್‌ಎನ್‌ಎವನ್ನು ತಹಬಂದಿಯಲ್ಲಿಟ್ಟು, ವಂಶವಾಹಿಗಳನ್ನು ನಿಗ್ರಹಿಸುವ ಮೈಕ್ರೋಆರ್‌ಎನ್‌ಎ ಎಂಬ ಆಣ್ವಿಕವು ನಮ್ಮ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಆಣ್ವಿಕವಾಗಿದೆ. ಮೈಕ್ರೋಆರ್‌ಎನ್‌ಎ ಕ್ರಿಯೆಗಳ ಜ್ಞಾನವನ್ನಾಧರಿಸಿ ಹಲವು ಕಾಯಿಲೆಗಳಿಗೆ ಹೊಸ ಔಷಧಿಗಳನ್ನು ಆವಿಷ್ಕರಿಸುವ ಪ್ರಯತ್ನವು ಒಂದು ದಶಕದಿಂದ ನಡೆಯುತ್ತಿದೆ. ಕ್ಲಿನಿಕಲ್ ಟ್ರಯಲ್‌ಗಳಲ್ಲಿರುವ ಹೊಸ ಔಷಧಗಳು ಮುಂದೊಂದು ದಿನ ಹಲವು ಕಾಯಿಲೆಗಳಿಗೆ ದಿವ್ಯ ಔಷಧಿಗಳಾಗಬಹುದಾಗಿವೆ.

ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ
ಹಿರಿಯ ಪ್ರಾಧ್ಯಾಪಕರು ಪಶುವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...