Homeಮುಖಪುಟಕಾರ್ಯತಂತ್ರ ಮಾತ್ರವಲ್ಲ; ಮಾನವೀಯತೆಯೇ ಇಲ್ಲದ ಮೋದಿ ಸರಕಾರ

ಕಾರ್ಯತಂತ್ರ ಮಾತ್ರವಲ್ಲ; ಮಾನವೀಯತೆಯೇ ಇಲ್ಲದ ಮೋದಿ ಸರಕಾರ

ಈ ಸರಕಾರ ಮತ್ತೆ ಅಧಿಕಾರಕ್ಕೆ ಬಂದ ಒಂದೇ ವರ್ಷದ ಒಳಗೆ ಒಂದೇ ಹೊತ್ತಿಗೆ ಬಹುದೊಡ್ಡ ಸಂಖ್ಯೆಯ ಜನರಿಗೆ ಭಾರೀ ಸಂಕಷ್ಟಗಳನ್ನು ಒಡ್ಡಿದ ಮೂರನೆಯ ಅಧಿಕೃತ ಕೃತ್ಯವಿದು.

- Advertisement -
- Advertisement -

ಕೊರೊನಾ ಪಿಡುಗನ್ನು ಎದುರಿಸಲು ಹೇರಲಾದ ತಯಾರಿಯೇ ಇಲ್ಲದ ಸಂಪೂರ್ಣ ಲಾಕ್‌ಡೌನ್ ಸೇರಿದಂತೆ ನರೇಂದ್ರ ಮೋದಿ ಸರಕಾರವು ಈ ತನಕ ತೆಗೆದುಕೊಂಡ ನಿರಂಕುಶ ಕ್ರಮಗಳೆಲ್ಲವೂ ಕೋಟ್ಯಂತರ ಜನರಿಗೆ ಬಹಳಷ್ಟು ಸಂಕಟವನ್ನೊಡ್ಡಿವೆ. ಅರೆಬೆಂದ ನಿರ್ಧಾರಗಳನ್ನು ಜಾರಿ ಮಾಡುತ್ತಿರುವ ಸರಕಾರದ ಬಳಿ ನಿರ್ದಿಷ್ಟ ಕಾರ್ಯತಂತ್ರ ಇದ್ದಂತೆ ಕಾಣುವುದಿಲ್ಲ. ಅಷ್ಟೇ ಅಲ್ಲ, ಮಾನವೀಯತೆಯ ಲವಲೇಶವೂ ಕಾಣುವುದಿಲ್ಲ.

ಸಿದ್ಧಾರ್ಥ ಭಾಟಿಯಾ

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ರಾಷ್ಟ್ರೀಯ ಪೌರತ್ವ ನೋಂದಣಿ (ತಿದ್ದುಪಡಿ) ಕಾಯಿದೆಯ ಪ್ರಕ್ರಿಯೆಯು ಭಾರತದ ಲಕ್ಷಾಂತರ ಜನರನ್ನು ದೇಶರಹಿತರನ್ನಾಗಿ ಮಾಡಬಹುದಿತ್ತು. ಏಕಾಏಕಿಯಾಗಿ ಲಾಕ್‌ಡೌನ್ ಹೇರಲಾದ ಕೆಲವೇ ದಿನಗಳಲ್ಲಿ ಲೆಕ್ಕವೇ ಇಲ್ಲದಷ್ಟು ಭಾರತೀಯರು ಮನೆಯೇ ಇಲ್ಲದವರಾಗಿದ್ದಾರೆ. ತಾವು ಎಲ್ಲಿದ್ದೆವೋ ಅಲ್ಲಿಯೇ ಅವರು ವಸ್ತುಶಃ ಕಟ್ಟುಬಿದ್ದಿದ್ದಾರೆ; ಅವರಿಗೆ ಹೋಗಲು ಯಾವುದೇ ಜಾಗವಿಲ್ಲ. ಅವರು ತಮ್ಮ ಹಿಂದಿನ ವಾಸಸ್ಥಾನವನ್ನು ಬಿಟ್ಟುಹೋದವರು ಮತ್ತು ಅವರೀಗ ಹಳ್ಳಿಗಳಲ್ಲಿರುವ ತಮ್ಮ ಮನೆಗಳನ್ನು ತಲಪುವಂತಿಲ್ಲ. ಏಕೆಂದರೆ ರಾಜ್ಯಗಳು ತಮ್ಮ ಗಡಿಗಳನ್ನು ಮುಚ್ಚಿವೆ.

ಅವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಕೆಲವು ರಾಜಕಾರಣಿಗಳು ಬಯಸಿದ್ದಾರೆ. ಇನ್ನು, ಆಳುವ ಪಕ್ಷದ ಕೆಲವು ನಾಯಕರು ಈ ಬಡಪಾಯಿಗಳೇ ಇದಕ್ಕೆ ಹೊಣೆಗಾರರು ಮತ್ತು ಈ ಕಡ್ಡಾಯ ರಜೆಯ ಲಾಭಪಡೆದು ತಮ್ಮ ಮನೆಗಳಿಗೆ ಹೋಗಬಯಸುವ ಬೇಜವಾಬ್ದಾರಿ ಜನರು ಎಂದು ಭಾವಿಸಿದ್ದಾರೆ.

ಈ ವಲಸೆ ಕಾರ್ಮಿಕರ ಬಳಿ ಆಹಾರವಿಲ್ಲ, ಆಶ್ರಯವಿಲ್ಲ, ಆಶಾವಾದವೂ ಇಲ್ಲ. ಅವರಲ್ಲಿ ಅನೇಕರು ಕೆಲಸ ಕಳೆದುಕೊಂಡವರು; ಯಾಕೆಂದರೆ, ಅವರ ಸಂಬಳವನ್ನು ಮುಂದುವರಿಸಲು ಅವರ ಮಾಲಕರಿಗೆ ಸಾಧ್ಯವಿಲ್ಲ. ಇಂತಹಾ ಪರಿಸ್ಥಿತಿಯಲ್ಲಿ ಆಹಾರ ಕೊಳ್ಳಲಾಗಲಿ, ಬಾಡಿಗೆ ನೀಡಲಾಗಲಿ ಅವರಿಗೆ ಸಾಧ್ಯವಾಗುವಂತಿರಲಿಲ್ಲ. ತಾವು ಕಾಯಿಲೆ ಬೀಳಬಹುದು ಎಂಬ ಭಯವೂ ಅವರನ್ನು ಕಾಡುತ್ತಿರಬಹುದು. ಇಂತಹಾ ಸಂದರ್ಭದಲ್ಲಿ ತಾವು ಸುರಕ್ಷಿತವಾಗಿರಬಹುದಾದ ಒಂದೇ ಒಂದು ಸ್ಥಳಕ್ಕೆ- ಅಂದರೆ, ತಮ್ಮತಮ್ಮ ಮನೆಗಳಿಗೆ ಅವರು ಹೊರಟರು. ಆದರೀಗ ಗಡಿಗಳನ್ನು ಮುಚ್ಚಿರುವುದರಿಂದ ಅದೂ ದೂರದ ಕನಸಾಗಿದೆ. ಜನರ ಗುಂಪುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇವು ಮಾನವೀಯ ದುರಂತವೊಂದು ರೂಪುಗೊಳ್ಳುತ್ತಿರುವುದರ ಲಕ್ಷಣಗಳು.

ಇದು ಮೋದಿ ಉಂಟು ಮಾಡಿದ “ಸಾಮಾಜಿಕ ಅಂತರ”

ಈ ಸರಕಾರ ಮತ್ತೆ ಅಧಿಕಾರಕ್ಕೆ ಬಂದ ಒಂದೇ ವರ್ಷದ ಒಳಗೆ ಒಂದೇ ಹೊತ್ತಿಗೆ ಬಹುದೊಡ್ಡ ಸಂಖ್ಯೆಯ ಜನರಿಗೆ ಭಾರೀ ಸಂಕಷ್ಟಗಳನ್ನು ಒಡ್ಡಿದ ಮೂರನೆಯ ಅಧಿಕೃತ ಕೃತ್ಯವಿದು. ಸ್ವಲ್ಪ ಹಿಂದೆ ಹೋದರೆ, ನೋಟು ಅಮಾನ್ಯೀಕರಣವನ್ನೂ ಈ ಪಟ್ಟಿಗೆ ಸೇರಿಸಿಕೊಳ್ಳಬಹುದು. ಈ  ಪ್ರತಿಯೊಂದು ನಿರಂಕುಶ ನಿರ್ಧಾರಗಳಲ್ಲಿ ಸಮಾನ ಅಂಶಗಳಿವೆ. ಅವೆಂದರೆ, ಯಾವುದೇ ಪೂರ್ವಯೋಜನೆ ಇಲ್ಲದಿರುವುದು ಮತ್ತು ಅಧ್ವಾನದ ಅನುಷ್ಟಾನ. ಇಲ್ಲಿ ಇನ್ನೊಂದು ಕಣ್ಣಿಗೆ ರಾಚುವ ಅಂಶವಿದೆ- ಅದೆಂದರೆ, ಮಾನವ ಸಂಕಷ್ಟಗಳ ಕುರಿತು ಸಂಪೂರ್ಣ ಅಸಡ್ಡೆ.

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯಂತಹ ಕೆಲವೇ ಕ್ರಮಗಳನ್ನು ಬಿಟ್ಟರೆ, ಭಾರತದಲ್ಲಿ ಸಾಮಾಜಿಕ ಸುರಕ್ಷೆಯ ಯಾವುದೇ ಬಲೆ ಅಥವಾ ವ್ಯವಸ್ಥೆ ಇಲ್ಲ. ಏನಾದರೊಂದು ಸ್ವಲ್ಪ ಮಟ್ಟಿಗೆ ಇದ್ದರೆ, ಅದೂ ಕೂಡಾ ಈಗ ಅಸ್ತವ್ಯಸ್ತಗೊಂಡಿದೆ. ಧೋರಣೆಗಳು ನಮ್ಮಲ್ಲಿ ಬಡವರ ಅಗತ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದೇ ಅಪರೂಪ. ಆದರೆ, ನಾವೀಗ ಸಂಪೂರ್ಣವಾದ ಅಸಹಾನುಭೂತಿಯನ್ನಷ್ಟೇ ನೋಡುತ್ತಿದ್ದೇವೆ. ಈ ಲಾಕ್‌ಡೌನ್‌ ನಂತರ ಅತ್ಯಂತ ಹೆಚ್ಚು ಸಂಕಷ್ಟಕ್ಕೆ ಒಳಗಾದವರನ್ನೇ ಸಮಾನ ಒಳಿತನ್ನು ಕುರಿತು ಯೋಚಿಸದ ದೇಶವಿರೋಧಿಗಳೆಂಬಂತೆ ಚಿತ್ರಿಸುವ ಘೋರ ಅಮಾವೀಯತೆಯನ್ನು ತೋರಿಸಲಾಗುತ್ತಿದೆ.

ಮೋದಿ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ಅಗತ್ಯವಾಗಿದ್ದು, ಅಂತಿಮವಾಗಿ ದೇಶಕ್ಕೆ ಲಾಭ ತಂದುಕೊಡುವಂತವುಗಳು ಎಂದು ಆತ ಮತ್ತಾತನ ಬೆಂಬಲಿಗರು ವಾದಿಸಬಹುದು. ಆ ಕುರಿತು ಅವರು ಆಗಲೇ ನ್ಯಾಯತೀರ್ಮಾನ ಮಾಡಿ ಆಗಿದೆ. ಆದರೂ, ನಾವು ಅವುಗಳನ್ನು ಒಂದೊಂದಾಗಿ ಮತ್ತು ಚುಟುಕಾಗಿ ಪರಿಶೀಲಿಸೋಣ.

ಕಪ್ಪು ಹಣವನ್ನು ನಿವಾರಿಸಲು ಅಮಾನ್ಯೀಕರಣ ಅತ್ಯಗತ್ಯವಾಗಿತ್ತು ಎಂದು ವಾದಿಸಲಾಯಿತು. (ಅದು ಹೇಗೆ ಭಯೋತ್ಪಾದನೆಯ ಬೆನ್ನು ಮೂಳೆ ಮುರಿಯಲಿದೆ ಎಂದೂ ಹೇಳಲಾಯಿತು. ವಾಸ್ತವವಾಗಿ ಆ ಬಳಿಕವೇ ಅನೇಕ ಗಂಭೀರ ಭಯೋತ್ಪಾದಕ ದಾಳಿಗಳು ನಡೆದದ್ದು!) ಅದರ ಪರಿಣಾಮ ಏನಾಯಿತು ಎಂಬುದನ್ನು ನಾವೆಲ್ಲರೂ ಕಂಡಿದ್ದೇವೆ- ಅಲ್ಪಾವಧಿಗೆ ಮಾತ್ರವಲ್ಲ; ದೀರ್ಘಾವಧಿಗೂ ಕೂಡಾ. ಅದರಿಂದ ಬಡವರೇ ಅತ್ಯಂತ ಹೆಚ್ಚು ಬಾಧಿತರಾದರು. ಈಗಲೂ ನಗದು ವ್ಯವಹಾರ ಮತ್ತು ಕಪ್ಪು ಹಣ ಹಾಗೆಯೇ ಇದೆ. ಹಾಗಿರುವಾಗ ಮೋದಿ ಜನರಿಗೆ ವ್ಯರ್ಥವಾಗಿ ಅಷ್ಟೊಂದು ಪೀಡೆ ನೀಡಿದ್ದಾದರೂ ಏಕೆ?

ಮೋದಿಯ ನೋಟು ಅಮಾನ್ಯೀಕರಣದ ಅಮಾನವೀಯತೆ

ಕಾಶ್ಮೀರದಲ್ಲಿ ಸಂವಿಧಾನದ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಹೇರಲಾಯಿತು. ಇಂಟರ್ನೆಟ್ ಕೂಡಾ ಸ್ಥಗಿತಗೊಳಿಸಲಾಯಿತು. ಇದನ್ನು ಮೋದಿಯ ಮೇಲೆ ಅಂತಹಾ ಪ್ರೀತಿ ಇಲ್ಲದವರು ಕೂಡಾ ಕೇವಲ ಹುಸಿ ದೇಶಪ್ರೇಮದ ಬಲೆಗೆ ಬಿದ್ದು ಹೊಗಳಿದರು. ಆದರೆ, ಇದು ಮತ್ತೆ ಎಪ್ಪತ್ತು ಲಕ್ಷ ಜನಸಾಮಾನ್ಯರಿಗೆ ಇನ್ನಿಲ್ಲದ ಸಂಕಷ್ಟವನ್ನು ತಂದೊಡ್ಡಿತು.

ಮೋದಿಯ ಕಾಶ್ಮೀರ ಲಾಕ್‌ಡೌನ್ ಅಮಾನವೀಯತೆ

“ಕಾಶ್ಮೀರವು ಕೊನೆಗೂ ಭಾರತದ ಭಾಗವಾಯಿತು” ಎಂದು ಹೊರಗೆ ಕುಳಿತು, ಅತಿರೇಕದ ಹುಸಿ ದೇಶಪ್ರೇಮ ತೋರುವ ಅನಿವಾಸಿ ಭಾರತೀಯರು ಘೋಷಿಸಿದರೂ, ಈ ಕ್ರಮವು ವ್ಯಾಪಕವಾದ ಅಂತರರಾಷ್ಟ್ರೀಯ ಖಂಡನೆಗೆ ಗುರಿಯಾಯಿತು. ಜಗತ್ತಿಗೆ ಕಾಶ್ಮೀರದ ಮೇಲೆ ಭಾರತದ ಹಕ್ಕಿನ ಕುರಿತು ಎಂದಿಗೂ ಸಂಪೂರ್ಣವಾಗಿ ಮನವರಿಕೆ ಆಗಿರಲಿಲ್ಲ. ಆದರೆ, ನಿಯಮಿತ ಚುನಾವಣೆಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳು ಈ ನಿಟ್ಟಿನಲ್ಲಿ ಭಾರತದ ನಿಲುವಿಗೆ ಬಲ ಒದಗಿಸಿದ್ದವು. ಈ ಹೊತ್ತಿನಲ್ಲಿ, ಚುನಾಯಿತ ಜನಪ್ರತಿನಿಧಿಗಳನ್ನೇ ಯಾವುದೇ ಆರೋಪ ಇಲ್ಲದೇ ತಿಂಗಳುಗಟ್ಟಲೆ ಬಂಧನದಲ್ಲಿ ಇರಿಸಿರುವಾಗ, ನಮಗೀಗ ಯಾವ ನೈತಿಕತೆ ಉಳಿದಿದೆ?

ನ್ಯಾಯಾಲಯದ ಆದೇಶದಂತೆ ಅಸ್ಸಾಮಿನಲ್ಲಿ ನಡೆದ ಇಡೀ ಎನ್‌ಆರ್‌ಸಿ ಪ್ರಕ್ರಿಯೆಯು ಉಂಟುಮಾಡಿದ ಮಹಾ ಗೊಂದಲ, ಗೋಜಲುಗಳು ಅದರ ಪರಿಣಾಮಗಳ ಬಗ್ಗೆ ಮೋದಿ ಸರಕಾರಕ್ಕೆ ಮನವರಿಕೆ ಮಾಡಬೇಕಾಗಿತ್ತು. ಆದರೆ, ಅದಕ್ಕೆ ಬದಲಾಗಿ ಸರಕಾರವು ಅದನ್ನು ಇಡೀ ದೇಶದಲ್ಲಿ ನಡೆಸುವುದಾಗಿ ಘೋಷಿಸಿತು. ಪರಿಣಾಮವಾಗಿ ಅಸ್ಸಾಮಿನಲ್ಲಿ 19 ಲಕ್ಷ ಜನರು ಈಗ ಭಾರತೀಯ ಪೌರತ್ವ ಕಳೆದುಕೊಳ್ಳುವ ಭಯವನ್ನು ಎದುರಿಸುತ್ತಿರುವುದು ಮಾತ್ರವಲ್ಲ; ಲಕ್ಷಾಂತರ ಇತರ ಭಾರತೀಯರೂ ಇದೇ ಪರಿಸ್ಥಿತಿಯನ್ನು ಎದುರು ನೋಡುತ್ತಿದ್ದಾರೆ.

ಅಸ್ಸಾಮಿನ ಎನ್‌ಆರ್‌ಸಿ ಬಂಧನ ಕೇಂದ್ರಗಳ ಅಮಾನವೀಯತೆ

ಇದು ದೇಶದಾದ್ಯಂತ ಹುಟ್ಟುಹಾಕಿದ ವ್ಯಾಪಕ ಪ್ರತಿಭಟನೆಗಳು ಸರಕಾರಕ್ಕೆ ಈ ವಿನಾಶಕಾರಿ ಕ್ರಮವನ್ನು ಹಿಂತೆಗೆದುಕೊಳ್ಳಲು ಪ್ರೇರಣೆ ನೀಡಬೇಕಾಗಿತ್ತು. ಆದರೆ, ಯಾವುದನ್ನೂ ಯೋಚಿಸದೇ ಮುಂದಡಿಯಿಟ್ಟು, ನಂತರ ಕೂಡಾ ಎಂದಿಗೂ ಮರುಚಿಂತನೆ ಮಾಡದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇದನ್ನು ಮಾಡುವ. ಸಾಧ್ಯತೆಯಿಲ್ಲ. ಏಕೆಂದರೆ, ಸರಕಾರದ ಮೇಲಿನ ಕ್ರಮಗಳೆಲ್ಲವುಗಳಲ್ಲಿ ಕೇವಲ ಪೂರ್ವಯೋಜನೆ ಮಾತ್ರವಲ್ಲ; ಎಳ್ಳಷ್ಟು ಮಾನವೀಯತೆಯೂ ಕಾಣುವುದಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನೀವು ಅವರ ಸ್ಥಾನ ದಲ್ಲಿ ಆಲೋಚನೆ ಮಾಡಿ ನಿಮ್ಮ ಮನಸಿಗೆ ಬಂದಿದ್ದವು ಬರೆದು ಹಾಕಬೇಡಿ ಅವರು ಏನು ಅಂತ ಜನಕ್ಕೆ ಗೊತ್ತು

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...