Homeಮುಖಪುಟಅಣೆಕಟ್ಟು ಕಟ್ಟುವುದಷ್ಟೇ ಅಲ್ಲದೆ, ಶಿಲ್ಪಕಲೆ, ಭಾಷೆಗಳ ಸೇತುವೆಯಾಗಿಯೂ ದುಡಿದ ತಮಿಳು ಭಾಷಿಕ ಸಮುದಾಯ

ಅಣೆಕಟ್ಟು ಕಟ್ಟುವುದಷ್ಟೇ ಅಲ್ಲದೆ, ಶಿಲ್ಪಕಲೆ, ಭಾಷೆಗಳ ಸೇತುವೆಯಾಗಿಯೂ ದುಡಿದ ತಮಿಳು ಭಾಷಿಕ ಸಮುದಾಯ

ತಮಿಳಿನಲ್ಲಿ “ತಮಿಳ್ ವಾಳ್ಗ ತಮಿಳ್ ವಳರ್ಗ” ಎಂಬ ವಾಕ್ಯವಿದೆ. ಇದರಿಮದ ಪ್ರೇರೇಪಣೆಗೊಂಡಿದ್ದ ಬಿಎಂ ಶ್ರೀಕಂಠಯ್ಯ “ಸಿರಿ ಗನ್ನಡಂ ಗೆಲ್ಗೆ, ಸಿರಿ ಗನ್ನಡಂ ಬಾಳ್ಗೆ” ಎಂಬ ಘೋಷಣೆ ಕೊಟ್ಟರು.

- Advertisement -
- Advertisement -

ಕರ್ನಾಟಕ ಬಹುಭಾಷಿಕರ ಬೀಡು. ಹಲವು ಭಾಷಿಕರ ಕೊಡುಗೆ ಕರ್ನಾಟಕ ಮತ್ತು ಕನ್ನಡ ಅಸ್ಮಿತೆಯೊಂದಿಗೆ ತಳುಕು ಹಾಕಿಕೊಂಡಿದೆ. ಕರ್ನಾಟಕವೆಂದರೆ ತಮಿಳರನ್ನೂ ಒಳಗೊಂಡಂತೆ ಕನ್ನಡಕ್ಕೆ ಕೊಡುಗೆ ನೀಡಿದ ಎಲ್ಲರನ್ನೂ ಒಳಗೊಳ್ಳುವುದೇ ಆಗಿದ್ದು, ಆ ನಿಟ್ಟಿನಲ್ಲಿ ತಮಿಳರ ಕೊಡುಗೆ ಏನು? ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ತಮಿಳರ ಸಾಧನೆಗಳೆನು?

ಕನ್ನಡ-ತಮಿಳು ಸಾಹಿತ್ಯಿಕ ಸೇತುಬಂಧ

“ತಮಿಳಿಗೂ ಕನ್ನಡ ಸಾಹಿತ್ಯಕ್ಕೂ ಅನಾದಿ ಕಾಲದಿಂದಲೂ ಸಾಕಷ್ಟು ಸಂಬಂಧವಿದೆ. ಪ್ರಾಚೀನ ತಮಿಳಿನ ಜನಪ್ರಿಯ ಕೃತಿಯಾದ ತೊಲ್ಕಾಪ್ಪಿಯಂ ಆರಂಭವಾಗುವುದೇ “ವಡವೇಂಗಡಂ ತೆನ್ ಕುಮರಿ” ಎಂಬ ಸಾಲುಗಳೊಂದಿಗೆ. ಅಂದರೆ ಇದರ ಅರ್ಥ ಕಾವೇರಿಯಿಂದ ಗೋದಾವರಿಯವರೆಗೆ ಎಂಬುದೇ ಆಗಿದೆ. ಇನ್ನು ಕನ್ನಡದ ಮೊದಲ ಕೃತಿ ಕವಿರಾಜಮಾರ್ಗ ಆರಂಭವಾಗುವುದು ಸಹ “ಕಾವೇರಿಯಿಂದ ಗೋದಾವರಿಯವರೆಗೆ” ಎಂಬ ಅದೇ ಸಾಲಿನಿಂದಲೇ. ಹೀಗಾಗಿ ಪ್ರಾಚೀನ ಕಾಲದ ದ್ರಾವಿಡ ಭಾಷೆಗಳ ಸಾಹಿತ್ಯಗಳು ಒಂದೇ ರೀತಿಯ ಆಲೋಚನೆಗಳಿಂದಲೇ ಕೂಡಿವೆ” ಎನ್ನುತ್ತಾರೆ ತಮಿಳಿನ ಆಧುನಿಕ ಲೇಖಕರಲ್ಲಿ ಪ್ರಮುಖ ಚಿಂತಕ ಮತ್ತು ಕಾದಂಬರಿಕಾರರಾದ ಪ್ರೊ. ಕಾರ್ಲೋಸ್.

ಇದಲ್ಲದೆ, ನಡುಗನ್ನಡ ಕಾವ್ಯದ ಛಂದಸ್ಸಿನ ದೇಶೀಯ ಕಾವ್ಯ ಪದ್ಧತಿಯ ಬಹುಮುಖ್ಯ ಪ್ರಕಾರವಾದ “ರಗಳೆ ಸಾಹಿತ್ಯ” ಮತ್ತು ಇದೇ ಕಾಲದ ಭಕ್ತಿ ಸಾಹಿತ್ಯದಲ್ಲೂ ತಮಿಳು ಮೂಲದ ಶೈವ ಸಾಹಿತ್ಯದ ಕೊಡುಗೆ ಅಪಾಯ. ಶೈವ ಪರಂಪರೆಯ ನಾಯನ್ಮಾರ್ಗಳ್ ಮತ್ತು ವೈಷ್ಣವ ಪರಂಪರೆಯ ಆಳ್ವಾರ್ಗಳ್ ಪ್ರಭಾವ ಕನ್ನಡದ ನಡುಗನ್ನಡ ಸಾಹಿತ್ಯದಲ್ಲಿ ಅಧಿಕವಾಗಿದೆ ಎಂಬುದರ ಕುರಿತು ಸಾಕಷ್ಟು ಸಂಶೋಧನೆಗಳನ್ನು ನಡೆಸಲಾಗಿದೆ. ಕನ್ನಡ ಭಕ್ತಿ ಸಾಹಿತ್ಯದಲ್ಲಿ ತಮಿಳು ಮೂಲದ ಈ ಎರಡೂ ಸಂಸ್ಕೃತಿಗಳ ಮಿಶ್ರಣವಿದೆ.

ಇಂತಹ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಕಾರಣದಿಂದಲೇ ಕನ್ನಡದ ವೀರಶೈವ ಪರಂಪರೆ ಆರಾಧಕರು ಈಗಲೂ ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯಲ್ಲಿರುವುದನ್ನು ನಾವು ಕಾಣಬಹುದಾಗಿದೆ. ಅಲ್ಲದೆ, ತಮಿಳುನಾಡಿನಲ್ಲಿ ಮೂರು ಪ್ರಮುಖ ವೀರಶೈವ ಮಠಗಳನ್ನೂ ಸ್ಥಾಪಿಸಲಾಗಿದೆ ಎಂದರೆ ಭಕ್ತಿ ಚಳವಳಿ ಕಾಲದ ಎರಡೂ ಭಾಷೆಗಳ ಮಿಳಿತದ ಪ್ರಭಾವವನ್ನು ಊಹಿಸಬಹುದು.

ಇದೇ ಕಾರಣಕ್ಕೆ ಕನ್ನಡದಲ್ಲಿ ಪ್ರಾಚೀನವಾದ ಕೆಲವು ಅಂಶಗಳಿಗೂ ತಮಿಳಿನ ಪ್ರಾಚೀನ ಅಂಶಗಳಿಗೂ ಸಂಬಂಧವಿದೆ ಎಂದು ತಮ್ಮ ಸಂಶೋಧನೆಗಳ ಮೂಲಕ ಬಲವಾಗಿ ಕಂಡುಕೊಂಡಿದ್ದ ದಿವಂಗತ ಪ್ರಾಧ್ಯಾಪಕರಾದ ಡಾ. ಎಂ.ಎಂ. ಕಲಬುರ್ಗಿ ಅವರು ತಮಿಳಿನ ಅತ್ಯಂತ ಪ್ರಾಚೀನ ಸಾಹಿತ್ಯವಾದ ‘ಸಂಗಂ ಸಾಹಿತ್ಯ’ವನ್ನು ಕನ್ನಡಕ್ಕೆ ಅನುವಾದ ಮಾಡಲೇಬೇಕು ಎಂದು ಅಂದಿನ ಕುವೆಂಪು ಭಾಷಾ ಭಾಷಾ ಭಾರತಿ ಪ್ರಾಧಿಕಾರದ ನಿರ್ದೇಶಕರಾಗಿದ್ದ ಕೆ.ವಿ. ನಾರಾಯಣ ಅವರ ಬಳಿ ಕೇಳಿಕೊಂಡಿದ್ದರು. ಇದಕ್ಕೆ ಒಪ್ಪಿದ್ದ ಕೆ.ವಿ. ನಾರಾಯಣ ಅವರು 20 ಜನರ ತಂಡ ರಚಿಸಿ ಬೃಹತ್ ಸಂಗಂ ಸಾಹಿತ್ಯದ ಅನುವಾದಕ್ಕೆ ಯೋಜನೆ ರೂಪಿಸಿದರು. ಈ ಬೃಹತ್ ಪ್ರಾಚೀನ ಸಾಹಿತ್ಯ ಮೂರು ಭಾಗಗಳಾಗಿ ಕನ್ನಡದಲ್ಲಿ ಬಿಡುಗಡೆಯಾಗಿದ್ದು ಇಂದು ಇತಿಹಾಸ.ಇನ್ನು ಕನ್ನಡ ನವೋದಯ ಸಾಹಿತ್ಯಕ್ಕೆ ಪ್ರೇರಣೆ ನೀಡಿದವರಲ್ಲಿ ಪ್ರಮುಖರಲ್ಲಿ ಮೈಸೂರು ಅರಸರು ಕೂಡ ಸೇರಿದ್ದರು. ಆದರೆ, ಮೈಸೂರು ಅರಸರ ಕಾಲದಲ್ಲಿ ಅವರ ಆಸ್ಥಾನದಲ್ಲಿದ್ದ ಪ್ರಮುಖರು ತಮಿಳರೇ ಆಗಿದ್ದರು. ಅಂದಿನ ತಮಿಳು ಭಾಷಿಕ ಕನ್ನಡ ಸಾಹಿತಿಗಳೂ ಸಹ ನವೋದಯ ಪ್ರಕಾರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ನವೋದಯ ಕಾಲದ ಬರಹಗಾರರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜೆಪಿ ರಾಜರತ್ನಂ ಸೇರಿದಂತೆ ಅನೇಕ ಪ್ರಖ್ಯಾತ ಕವಿಗಳು-ಬರಹಗಾರರು ತಮಿಳರೇ ಆಗಿದ್ದು ಕನ್ನಡಕ್ಕೆ ಇವರು ನೀಡಿದ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ.

ಇದಲ್ಲದೆ ಇಂದಿನ ಯುವ ಪೀಳಿಗೆಯ ತಮಿಳುಬರಹಗಾರರಾದ ತಮಿಳ್ ಸೆಲ್ವಿ, ಇರಯಡಿಯಾನ್ ಎಂಬ ಕಾವ್ಯನಾಮದೊಂದಿಗೆ ಖ್ಯಾತವಾಗಿರುವ ದಾಸ್, ಪಾವನ್ ಸೇರಿದಂತೆ ಅನೇಕರು ಕನ್ನಡದ ಪ್ರಮುಖ ಪುಸ್ತಕಗಳನ್ನು ತಮಿಳಿಗೆ ಭಾಷಾಂತರ ಮಾಡುವುದು ಮತ್ತು ತಮಿಳು ಪುಸ್ತಕಗಳನ್ನು ಕನ್ನಡಕ್ಕೆ ತರುವ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ಮೂಲಕ ಈಗಲೂ ಕನ್ನಡ-ತಮಿಳು ಭಾಷೆಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸಾರ್ಹ.

ಕನ್ನಡ ಶೈಕ್ಷಣಿಕ ಬೆಳವಣಿಗೆಯಲ್ಲಿ ತಮಿಳರ ಪಾತ್ರ

ಕನ್ನಡವನ್ನು ಶೈಕ್ಷಣಿಕವಾಗಿ ಬೆಳೆಸುವ ಮತ್ತು ಭಾಷೆಯ ಕುರಿತು ಸಂಶೋಧನೆ ನಡೆಸುವ ವಿಚಾರದಲ್ಲಿ ವಿಶ್ವವಿದ್ಯಾಲಯಗಳ ಪಾತ್ರವನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ, ಕರ್ನಾಟಕದಲ್ಲಿ ಮೊದಲ ವಿಶ್ವವಿದ್ಯಾಲಯ ಆರಂಭವಾದದ್ದೇ ಮೈಸೂರಿನಲ್ಲಿ ಅದೂ 1917ರಲ್ಲಿ. ಆದರೆ, ಅದಕ್ಕೂ ಹಿಂದೆ ಕನ್ನಡ ಎಂಎ ತರಗತಿಗಳು ಎಲ್ಲಿ ನಡೆಯುತ್ತಿದ್ದವು? ಎಂಬುದು ಕುತೂಹಲಕಾರಿಯಾದಂತಹ ವಿಚಾರ.

ಅಸಲಿಗೆ 1917ಕ್ಕೂ ಮುಂಚೆ ಕನ್ನಡ ಎಂಎ ತರಗತಿಗಳನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ನಡೆಸಲಾಗುತ್ತಿತ್ತು. ಅಲ್ಲಿನ ಬ್ರಿಟಿಷ್ ಅಧಿಕಾರಿಗಳು ಹಾಗೂ ತಮಿಳು ಸ್ಕಾಲರ್‌ಗಳು ಕನ್ನಡವನ್ನು ಕಲಿತು ಅಧ್ಯಯನ ಮಾಡಿ ಕನ್ನಡ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು ಎನ್ನುತ್ತದೆ ಇತಿಹಾಸದ ಉಲ್ಲೇಖಗಳು.

ಹೀಗೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಮೊದಲ ಕನ್ನಡ ಎಂಎ ಪದವಿ ಪಡೆದವರು ಪ್ರೊ. ಡಿ.ಎಲ್. ನರಸಿಂಹಾಚಾರ್. ತಮಿಳುನಾಡಿನಲ್ಲಿ ಓದಿ ನಂತರ ಮೈಸೂರು ವಿಶ್ವವಿದ್ಯಾಲಯದ ಪ್ರಾಕ್ತನ ಇಲಾಖೆಯಲ್ಲಿ ಬ್ರಿಟಿಷ್ ಅಧಿಕಾರಿ ಬಿ.ಎಲ್. ರೈಸ್ ಅವರ ಜೊತೆಗೆ ಜಂಟಿ ನಿರ್ದೇಶಕರಾಗಿ ಕೆಲಸಕ್ಕೆ ಸೇರಿದ್ದ ಡಿ.ಎಲ್. ನರಸಿಂಹಾಚಾರ್ ಕನ್ನಡದ ಅನೇಕ ಶಾಸನಗಳನ್ನು ಪತ್ತೆ ಹಚ್ಚಿ ಸಂಶೋಧನೆ ಮಾಡುವ ಮೂಲಕ ಶಾಸನ ಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಆ ಮೂಲಕ ಮೈಸೂರು ಅರಸರಿಂದ ರಾವ್ ಬಹದ್ದೂರ್ ಎಂಬ ಬಿರುದಿಗೂ ಪಾತ್ರವಾಗಿದ್ದರು.

ಇನ್ನೂ ಕನ್ನಡದ ಕಣ್ವ ಎಂದು ಹೆಸರಾಗಿದ್ದ ಬಿ.ಎಂ. ಶ್ರೀಕಂಠಯ್ಯ ಓದಿದ್ದೂ ಸಹ ಮದ್ರಾಸಿನಲ್ಲೇ. ತಮಿಳಿನಲ್ಲಿ “ತಮಿಳ್ ವಾಳ್ಗ ತಮಿಳ್ ವಳರ್ಗ” ಎಂಬ ವಾಕ್ಯವಿದೆ. ಇಂತಹ ವಾಕ್ಯವೊಂದು ಕನ್ನಡಕ್ಕೂ ಅಗತ್ಯವಿದೆ ಎಂದು ಪ್ರೇರೇಪಣೆಗೊಂಡಿದ್ದ ಕಾರಣಕ್ಕಾಗಿಯೇ ಬಿಎಂ ಶ್ರೀಕಂಠಯ್ಯ “ಸಿರಿ ಗನ್ನಡಂ ಗೆಲ್ಗೆ, ಸಿರಿ ಗನ್ನಡಂ ಬಾಳ್ಗೆ” ಎಂಬ ಧ್ಯೇಯವಾಕ್ಯವನ್ನು ಕನ್ನಡಕ್ಕೆ ನೀಡಿದ್ದರು ಎನ್ನುತ್ತವೆ ಕನ್ನಡ ಸಾಹಿತ್ಯಿಕ ಇತಿಹಾಸದ ಉಲ್ಲೇಖಗಳು.

ಶಿಲ್ಪಕಲೆಗಳಿಂದ ಅಣೆಕಟ್ಟೆಗಳವರೆಗೆ

ತಮಿಳರು ಹಾಗೂ ತಮಿಳು ಭಾಷೆ ಕನ್ನಡ ಸಾಹಿತ್ಯಿಕ ಲೋಕ ಕೊಡು-ಕೊಳ್ಳುವಿಕೆ ಒಂದು ತೂಕದ್ದಾದರೆ, ಸಾಂಸ್ಕೃತಿಕ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತೊಂದು ತೂಕ. ಇನ್ನು ಆಧುನಿಕ ಕರ್ನಾಟಕದ ನಿರ್ಮಾಣದಲ್ಲಿ ತಮಿಳರ ಶ್ರಮವನ್ನು ಹೊರಗಿಟ್ಟು ಅಧ್ಯಯನ ಮಾಡುವುದು ಅಪರಿಪೂರ್ಣವಾಗುತ್ತದೆ.
ಸಾಂಸ್ಕೃತಿಕವಾಗಿ 3ನೇ ಶತಮಾನದ ಗಂಗರ ಕಾಲದಿಂದಲೂ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಂಬಂಧವಿದೆ. ತಮಿಳುನಾಡಿನ ಪಲ್ಲವರ ಜೊತೆಗೆ ಕರ್ನಾಟಕದ ಕದಂಬರು ಹಾಗೂ ಚಾಲುಕ್ಯರು ಉತ್ತಮ ಸಂಬಂಧವನ್ನೇ ಹೊಂದಿದ್ದರು. ಇದಲ್ಲದೆ ಚಾಲುಕ್ಯರು ಮತ್ತು ತಮಿಳುನಾಡಿನ ಪ್ರಸಿದ್ಧ ಮನೆತನ ಚೋಳರ ನಡುವೆ ಪರಸ್ಪರ ಹೆಣ್ಣನ್ನು ಕೊಟ್ಟು ತೆಗೆದುಕೊಳ್ಳುವ ಸಂಪ್ರದಾಯವೂ ಚಾಲ್ತಿಯಲ್ಲಿತ್ತು.

ಈ ಕಾಲಮಾನದಲ್ಲಿ ಚಾಲುಕ್ಯರು ಕರ್ನಾಟಕದ ಹಲವೆಡೆ ಹತ್ತಾರು ಪ್ರಸಿದ್ಧ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಹಾವೇರಿಯ ಕಲ್ಕೇರಿಯಲ್ಲಿನ ಸೂರ್ಯನಾರಾಯಣ ದೇವಾಲಯ ಇಂದಿಗೂ ಚೋಳ ಇತಿಹಾಸದ ಕಥೆಗಳನ್ನು ಪುನರುಚ್ಚರಿಸುತ್ತಿದೆ. ಕ್ರಿ.ಶ.10ನೇ ಶತಮಾನದಲ್ಲಿ ನಿರ್ಮಾಣವಾದ ತಂಜಾವೂರಿನ ಬೃಹದೀಶ್ವರ ದೇವಾಲಯವನ್ನು ಭಾರತದ ವಾಸ್ತುಶಿಲ್ಪದ ತೊಟ್ಟಿಲು ಎಂದೇ ಕರೆಯಲಾಗುತ್ತದೆ.

ಇಲ್ಲಿನ ಶಿಲ್ಪಕೆತ್ತನೆಯ ಪರಂಪರೆಯೇ ಮುಂದೆ ಭಾರತದ ಎಲ್ಲೆಡೆ ಚದುರಿ ದೇಶದಾದ್ಯಂತ ದ್ರಾವಿಡ ಶೈಲಿಯ ಶಿಲ್ಪ ಕಲಾ ಕೆತ್ತನೆಗಳಲ್ಲಿ ತೊಡಗಿತ್ತು. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಜಗತ್ ಪ್ರಸಿದ್ಧ ಬೇಲೂರು ಹಳೆಬೀಡು ದೇವಾಲಯ ನಿರ್ಮಾಣದಲ್ಲೂ ಇದೇ ಪರಂಪರೆಯ ಶ್ರಮವಿದೆ ಎನ್ನುತ್ತದೆ ಇತಿಹಾಸ. ಇನ್ನೂ ಶ್ರವಣಬೆಳಗೊಳದಲ್ಲಿ ಆಕಾಶದೆತ್ತರಕ್ಕೆ ತಲೆ ಎತ್ತಿನಿಂತಿರುವ ಗೊಮ್ಮಟೇಶ್ವರ ವಿಗ್ರಹವನ್ನು ಕೆತ್ತನೆ ಮಾಡಿದ್ದು ಸಹ ತಮಿಳು ಭಾಷಿಕ ಸಮುದಾಯದವರೇ. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಆ ವಿಗ್ರಹದ ಕೆಳಗೆ ವಿವರಗಳನ್ನು ಕನ್ನಡದ ಜೊತೆಗೆ ತಮಿಳಿನಲ್ಲೂ ಕೆತ್ತನೆ ಮಾಡಿರುವುದನ್ನು ನಾವು ಕಾಣಬಹುದು ಎನ್ನುತ್ತಾರೆ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ತಮಿಳ್ ಸೆಲ್ವಿ.

ಇದಲ್ಲದೆ ಇಂದಿಗೂ ಸಹ ಕರ್ನಾಟಕದಲ್ಲಿ ಎಲ್ಲೇ ದೇವಾಲಯಗಳನ್ನು ನಿರ್ಮಿಸಬೇಕು ಎಂದರೂ ಶಿಲ್ಪಿಗಳನ್ನು ತಮಿಳುನಾಡಿನಿಂದ ಕರೆತರಲಾಗುತ್ತದೆ. ತಮಿಳುನಾಡಿನ ತಂಜಾವೂರು ಭಾಗದ ಶಿಲ್ಪಿಗಳಿಗೆ ದೇಶದಾದ್ಯಂತ ಈಗಲೂ ಬಹು ಬೇಡಿಕೆ ಇದೆ ಎಂಬ ವಾದಕ್ಕೆ ಕರ್ನಾಟಕದಲ್ಲಿ ತಲೆ ಎತ್ತಿ ನಿಂತಿರುವ ಅನೇಕ ದೇವಾಲಯಗಳು ಸಾಕ್ಷಿ ನುಡಿಯುತ್ತವೆ.

ಇವು ಸಾಂಸ್ಕೃತಿಕ ಕ್ಷೇತ್ರಕ್ಕೆ ತಮಿಳರು ನೀಡಿದ್ದ ಕೊಡುಗೆಯಾದರೆ, ಆಧುನಿಕ ಕರ್ನಾಟಕ ನಿರ್ಮಾಣದಲ್ಲೂ ಅವರ ಪಾತ್ರ ದೊಡ್ಡದಿದೆ. ಶತಮಾನಗಳ ಹಿಂದೆಯೇ ಮಂಡ್ಯದ ಕೆಆರ್‌ಎಸ್, ಮೈಸೂರಿನ ಕಬಿನಿ, ಹೊಸಪೇಟೆಯ ತುಂಗಭದ್ರಾ, ಶಿವಮೊಗ್ಗದ ಅವಳಿ ಅಣೆಕಟ್ಟೆಗಳಾದ ಭದ್ರ ಮತ್ತು ಗಾಜನೂರು ಅಣೆಕಟ್ಟೆ, ಸಾಗರದ ಲಿಂಗನಮಕ್ಕಿ ಅಣೆಕಟ್ಟೆಗಳ ನಿರ್ಮಾಣ ಕಾರ್ಯದಲ್ಲಿ ಅವರ ಶ್ರಮವಿದೆ.

ಕಾರ್ಖಾನೆಗಳ ನಿರ್ಮಾಣಕ್ಕೆಂದು ಕರ್ನಾಟಕಕ್ಕೆ ಆಗಮಿಸಿದ ತಮಿಳರು ನಂತರ ಇಲ್ಲೇ ನೆಲೆ ಕಂಡುಕೊಂಡರು. ಮೈಸೂರು ಮಂಡ್ಯ, ಶಿವಮೊಗ್ಗ, ಹೊಸಪೇಟೆ ಸೇರಿದಂತೆ ಅನೇಕ ಕಡೆಗಳಲ್ಲಿ ತಮಿಳರು ತಮಿಳು ಸಂಘಗಳನ್ನೂ ರಚಿಸಿಕೊಂಡಿದ್ದಾರೆ. ಹೀಗೆ ದಶಕಗಳಿಂದ ಇಲ್ಲಿಯೇ ನೆಲೆಸಿರುವ ಕನ್ನಡಿಗರ ಜೊತೆಗೆ ಕನ್ನಡಿಗರಾಗಿಯೇ ಬದುಕುತ್ತಿರುವ ತಮಿಳರನ್ನು ಅವರ ಕೊಡುಗೆಗಳನ್ನು ಕರ್ನಾಟಕದ ಚರಿತ್ರೆಯಿಂದ ಖಂಡಿತವಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಹೀಗಾಗಿ ಕನ್ನಡಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ತಮಿಳರನ್ನೂ ಒಳಗೊಳ್ಳುವುದೇ ನಿಜವಾದ ರಾಜ್ಯೋತ್ಸವ ಮತ್ತು ಕನ್ನಡ ಅಸ್ಮಿತೆ ಎಂದರೆ ತಪ್ಪಾಗಲಾರದು.

ಮಾಹಿತಿ: ತಮಿಳ್ ಸೆಲ್ವಿ ಮತ್ತು ಪ್ರೊ. ಕಾರ್ಲೋಸ್


ಇದನ್ನೂ ಓದಿ: ಕೇಳು ರಕ್ತವೇ ಕೇಳು ಹರಿಯದಿರು ನಿಲ್ಲು, ಹರಿವ ರಕ್ತವೇ ಕೇಳು ಉಕ್ಕದಿರು ನಿಲ್ಲು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...