ರಾಜ್ಯ ಬಿಜೆಪಿ ಸರ್ಕಾರ ಆಯೋಜಿಸುವ ಕಾರ್ಯಕ್ರಮಗಳಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕರೆತರುವ ಮೂಲಕ ಅವರ ಶಿಕ್ಷಣವನ್ನು ಕಸಿಯಲಾಗುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಇಂದು ಚಿತ್ರದುರ್ಗದಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಹಲವು ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕರೆತರಬೇಕೆಂಬ ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆಗೆ ಟೀಕೆ ವ್ಯಕ್ತವಾಗಿದೆ.
ಇಂದಿನ ಸಮಾವೇಶದ ಹಿನ್ನೆಲೆಯಲ್ಲಿ ನಿನ್ನೆ ಸಮಾಜ ಕಲ್ಯಾಣ ಇಲಾಖೆಯ ಸಹಾಐಕ ನಿರ್ದೇಶಕರು ಸುತ್ತೋಲೆ ಹೊರಡಿಸಿ “ವಿವಿಧ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮಕ್ಕೆ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಅನುದಾನಿತ, ಅನುದಾನ ರಹಿತ ಕಾಲೇಜುಗಳು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕರೆತನ್ನಿ’ ಎಂದು ಸುತ್ತೋಲೆ ಹೊರಡಿಸಿದ್ದರು.
ಪತ್ರದಲ್ಲಿ “ತಮ್ಮ ಕಾಲೇಜುಗಳು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸರ್ಕಾರದಿಂದ ಸೌಲಭ್ಯ ಪಡೆಯುತ್ತಿರುವ ಕಾರಣ ಅವರು ಸಹ ಫಲಾನುಭವಿಗಳಾಗಿದ್ದು ಪ್ರಯುಕ್ತ ತಮ್ಮ ಕಾಲೇಜು ವಿದ್ಯಾರ್ಥಿಗಳನ್ನು ದಿನಾಂಕ: 04-03-2013ರಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಖುದ್ದಾಗಿ ಕರೆದುಕೊಂಡು ಬರಲು ಹಾಗೂ ಕಾರ್ಯಕ್ರಮ ಮುಗಿದ ನಂತರ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಮ್ಮ ಕಾಲೇಜುಗಳಿಗೆ ಕರೆದುಕೊಂಡು ಹೋಗುವ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ. ಹಾಗೂ ಸಂಬಂಧಿಸಿದ ಕೌಂಟರ್ಗಳಲ್ಲಿನ ಆಸನಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಕಾರ್ಯಕ್ರಮ ಮುಗಿಯುವವರೆಗೂ ನಿಶಬ್ಧವಾಗಿ, ಸೌಜನ್ಯ, ಶಾಂತಯುತವಾಗಿ ವರ್ತಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಸಲು ಕೋರಿದೆ” ಎಂದು ಬರೆಯಲಾಗಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, “ಕಾಲೇಜು ವಿದ್ಯಾರ್ಥಿಗಳನ್ನು ಸಮಾವೇಶಗಳಿಗೆ ಕರೆತರಲು ಆದೇಶಿಸಿದ #40PercentSarkara ನೈತಿಕ ದಿವಾಳಿತನ ಪ್ರದರ್ಶಿಸಿದೆ. ಬೊಮ್ಮಾಯಿಯವರೇ, ವಿದ್ಯಾರ್ಥಿಗಳ ಶಿಕ್ಷಣ ಕಸಿಯುವ ಹಕ್ಕು ನಿಮಗಿಲ್ಲ. ವಿದ್ಯಾರ್ಥಿಗಳು ನಿಮ್ಮ ಪಕ್ಷದ ಕಾಲಾಳುಗಳಲ್ಲ. ಖಾಲಿ ಕುರ್ಚಿ ತುಂಬುವ ಗೊಂಬೆಗಳೂ ಅಲ್ಲ. ರಾಜಕೀಯದಾಟಕ್ಕೆ ವಿದ್ಯಾರ್ಥಿಗಳನ್ನು ಬಲಿ ಕೊಡಬೇಡಿ” ಎಂದು ಟ್ವೀಟ್ ಮಾಡಿದೆ.
ಕಾಲೇಜು ವಿದ್ಯಾರ್ಥಿಗಳನ್ನು ಸಮಾವೇಶಗಳಿಗೆ ಕರೆತರಲು ಆದೇಶಿಸಿದ #40PercentSarkara ನೈತಿಕ ದಿವಾಳಿತನ ಪ್ರದರ್ಶಿಸಿದೆ.@BSBommai ಅವರೇ,
ವಿದ್ಯಾರ್ಥಿಗಳ ಶಿಕ್ಷಣ ಕಸಿಯುವ ಹಕ್ಕು ನಿಮಗಿಲ್ಲ.
ವಿದ್ಯಾರ್ಥಿಗಳು ನಿಮ್ಮ ಪಕ್ಷದ ಕಾಲಾಳುಗಳಲ್ಲ.
ಖಾಲಿ ಕುರ್ಚಿ ತುಂಬುವ ಗೊಂಬೆಗಳೂ ಅಲ್ಲ.ರಾಜಕೀಯದಾಟಕ್ಕೆ ವಿದ್ಯಾರ್ಥಿಗಳನ್ನು ಬಲಿ ಕೊಡಬೇಡಿ. pic.twitter.com/ccuLzL0kKv
— Karnataka Congress (@INCKarnataka) March 4, 2023
ಕಳೆದ ವರ್ಷದ ನವೆಂಬರ್ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೂ ಸಹ ಇದೇ ರೀತಿ ವಿದ್ಯಾರ್ಥಿಗಳನ್ನು ಕರೆತರಬೇಕೆಂದು ಆದೇಶಿಸಲಾಗಿತ್ತು.
“ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕರೆತರಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು. ಒಂದು ವೇಳೆ ತಪ್ಪಿದ್ದಲ್ಲಿ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ಸಹ ನೀಡಿದ್ದರು.
ಪರೀಕ್ಷೆಗಳು ಹತ್ತಿರವಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕೆ ಹೊರತು ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಾರದು. ಈ ಎಚ್ಚರಿಕೆ ಸರ್ಕಾರ ಸೇರಿದಂತೆ ಎಲ್ಲಾ ಪಕ್ಷಗಳಿಗೂ ಇರಬೇಕಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ 6 ಸಾವಿರ ಕಾಲೇಜು ವಿದ್ಯಾರ್ಥಿಗಳನ್ನು ಕರೆತನ್ನಿ: DDPU ಸುತ್ತೋಲೆಗೆ ಕಾಂಗ್ರೆಸ್ ಆಕ್ರೋಶ