Homeಅಂಕಣಗಳುಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

ಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

- Advertisement -
- Advertisement -

ಈನಾಡಿಗೆ ದುಃಖಕರವಾದ ಸಂಗತಿಯೊಂದು ಹೊರಬಿದ್ದಿದೆಯಲ್ಲಾ. ನಮ್ಮ ಧೀಮಂತ ನಾಯಕ ಎಡೂರಪ್ಪನವರು ವಿಧಾನಸಭಾ ಅಧಿವೇಶನದಲ್ಲಿ ತಮ್ಮ ಕಡೆಯ ಭಾಷಣವನ್ನು ಭಾವುಕವಾಗಿ ಮುಗಿಸಿ ದುಃಖತಪ್ತ ನಡಿಗೆಯಿಂದ ಹೊರನಡೆದಿದ್ದಾರೆ. ಅವರ ಜೊತೆ ಕರ್ನಾಟಕ ಕಂಡ ಅತ್ಯಂತ ದಕ್ಷ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಎಡೂರಪ್ಪನ ವಾಹನದವರೆಗೂ ಕಂಪನಿ ಕೊಟ್ಟಿರುವುದು ವಿಶೇಷ. ಎಡೂರಪ್ಪನವರ ಆಡಳಿತ ಅವಧಿಯ ದಾಖಲೆಗಳಲ್ಲಿ ಮೊದಲನೆಯದು ಯಾವುದೆಂದರೆ ತಾವು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಪಡೆದ ಚಿಲ್ಲರೆ ಕಾಣಿಕೆಯನ್ನು ಚೆಕ್ ಮುಖಾಂತರ ಪಡೆದ ಆರೋಪದಲ್ಲಿ ಜೈಲಿಗೆ ಹೋದದ್ದು ಮತ್ತು ಜೈಲಿನಿಂದ ಹೊರಬಂದದ್ದು; ಬಿಡುಗಡೆಯಾದಾಗ ಅವರ ಮನೆಯವರು ಚಪ್ಪಾಳೆ ಹೊಡೆದು ಕುಣಿದದ್ದು ಇದೇ ಬಿಜೆಪಿ ಜನರ ಸಂತಸವಾಗಿ ಪ್ರಕಟವಾಯ್ತು. ಏಕೆಂದರೆ ಎಡೂರಪ್ಪ ಮಾತ್ರ ನಮ್ಮನ್ನ ಗೆಲ್ಲಿಸಬಲ್ಲರು ಎಂದು ತಿಳಿದಿದ್ದ ಕುಲಬಾಂಧವರಿಗೆ ಅವರ ಬಿಡುಗಡೆ ಸಂಭ್ರಮವುಂಟು ಮಾಡಿದ್ದು ಸಹಜ. ಆದರೇನು ಎಡೂರಪ್ಪ ಬಿಜೆಪಿಯಿಂದ ಸಿಡಿದು ಕೆಜಿಪಿ ಮಾಡಿಕೊಂಡು ಬಿಜೆಪಿಯನ್ನ ಮಕಾಡೆ ಮಲಗಿಸಿದ್ದು ಈಗ ಇತಿಹಾಸ. ಎಡೂರಪ್ಪನವರ ಶಕ್ತಿಯರಿತ ಬಿಜೆಪಿಗಳು ಮತ್ತೆ ಪಾರ್ಟಿಗೆ ಸೇರಿಸಿಕೊಂಡು ಕಾಂಗೈ ಮತ್ತು ಜೆಡಿಎಸ್‌ನಿಂದ ಮಾರಿಕೊಂಡವರನ್ನು ಕೊಂಡು ಇತಿಹಾಸ ಕಂಡರಿಯದ ಆಡಳಿತ ನೀಡಿದ್ದು ಅಲ್ಲದೆ, ಬೊಮ್ಮಾಯಿಯವರನ್ನು ತಂದು ಕರ್ನಾಟಕದ ಮೇಲೆ ಹೇರಿದ್ದೂ ಒಂದು ದಾಖಲೆಯಂತಲ್ಲಾ, ಥೂತ್ತೇರಿ.

*****

ಹಾಗೆ ನೋಡಿದರೆ ಎಡೂರಪ್ಪನ ಚರಿತ್ರೆ ಇನ್ನೂ ಮುಗಿದಿಲ್ಲ. ’ನಾನು ಸಕ್ರಿಯನಾಗಿ ಈ ನಾಡನ್ನು ತಿರುಗಿ ಪಾರ್ಟಿಯನ್ನು ಪವರ್ರಿಗೆ ತರುತ್ತೇನೆ. ಅದಕ್ಕಾಗಿ ವಿರೋಧಪಕ್ಷದವರ ಸಹಕಾರ ಪಡೆಯುತ್ತೇನೆ’ ಎಂದಿದ್ದಾರೆ. ಎಡೂರಪ್ಪನ ಒಬ್ಬ ಮಗ ಸಂಸದ, ಮತ್ತೊಬ್ಬ ಕೇಸರಿ ಪಾರ್ಟಿಯ ಉಪಾಧ್ಯಕ್ಷ. ಅವರ ಭವಿಷ್ಯ ಬಹಳ ಮುಖ್ಯ ವಿಷಯ. ಇಂತಿರುವಾಗ ಬಿಜೆಪಿಗಳು ವಂಶಾಡಳಿತದ ಬಗ್ಗೆ ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಿಯೇ ಇಲ್ಲ. ಏಕೆಂದರೆ ಸತ್ಯ ಮರೆಮಾಚಿ ಸದಾ ಸುಳ್ಳು ಒದರುವಂತೆ ಆ ಪಾರ್ಟಿಯೇ ಟ್ರೇನಿಂಗ್ ಕೊಟ್ಟಿದೆ. ಆ ಪಾರ್ಟಿಯಿಂದ ಆಗಿರುವ ಪ್ರಧಾನಿಯೇ ಬಹಿರಂಗವಾಗಿ ಹೇಳಿರುವ ಸುಳ್ಳು ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದೆ. ದೆಹಲಿಯ ಕನ್ನಡ ಸಾಂಸ್ಕೃತಿಕ ವೇದಿಕೆಯೊಂದರಲ್ಲಿ, ಕರ್ನಾಟಕಕ್ಕೆ ಅತ್ಯಧಿಕ ಅನುದಾನ ಕೊಟ್ಟಿದ್ದೇನೆ ಎಂದುಬಿಟ್ಟಿದ್ದಾರೆ ಪ್ರಧಾನಿ. ಬೆಚ್ಚಿಬಿದ್ದ ದೆಹಲಿ ಕನ್ನಡಿಗರು ಪ್ರಧಾನಿಯನ್ನ ಮಿಕಮಿಕ ನೋಡಿದರಂತೆ. ಏಕೆಂದರೆ ಕರ್ನಾಟಕ ಇತಿಹಾಸದಲ್ಲೇ ಕಂಡುಕಾಣದಿದ್ದಂತಹ ಪ್ರವಾಹಕ್ಕೆ ಸಿಕ್ಕಿ ತತ್ತರಿಸಿದಾಗ ಇಲ್ಲಿನ ಸರಕಾರ ಕೇಳಿದ 35 ಸಾವಿರ ಕೋಟಿಯ ಬದಲು ಕೇಂದ್ರ ಸರ್ಕಾರ ಕೊಟ್ಟದ್ದು ಕೇವಲ ನಾಲ್ಕೈದು ಸಾವಿರ ಕೋಟಿ. ಇನ್ನು ಜಿಎಸ್‌ಟಿ ಬಾಬ್ತಿನ ದೊಡ್ಡ ಪಾಲನ್ನ ಕೊಟ್ಟೆ ಇಲ್ಲ. ಕರ್ನಾಟಕವನ್ನ ಕೊಳ್ಳೆ ಹೊಡೆದು ಇತರ ರಾಜ್ಯಗಳಿಗೆ ಹಂಚುವುದನ್ನು ವಿರೋಧಿಸಿ ಬಿಜೆಪಿಗಳೇ ಮಾತನಾಡುತ್ತಿರುವಾಗ ಸತ್ಯದ ತಲೆಮೇಲೆ ಹೊಡೆದಂತೆ ಸುಳ್ಳು ಹೇಳಿದ ಪ್ರಧಾನಿಯನ್ನು ನೋಡಿ ಬಿಜೆಪಿಗಳೇ ದಂಗುಬಡಿದು ತತ್ತರಿಸಿಹೋದರಂತಲ್ಲಾ. ಯಾರದ್ದೇನಾದರೂ ಅಗಲಿ, ನನಗೆ ನನ್ನದೇ ಚಿಂತೆ ಅಂತ, ವೇದಿಕೆ ಮೇಲೆ ಕರೆಯದಿದ್ದಕ್ಕೆ ಸಿಟ್ಟಾದ ಸಾಹಿತ್ಯ ಪರಿಷತ್ ಜೋಶಿಯ ಮಂತ್ರಿ ಸ್ಥಾನಮಾನ ವ್ಯರ್ಥವಾಗಿ ಹೋಯ್ತಂತಲ್ಲ, ಥೂತ್ತೇರಿ.

*****

ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಬಂತು. ನರೇಂದ್ರ ಮೋದಿಯವರು ನಿಲ್ದಾಣವನ್ನು ಉದ್ಘಾಟಿಸಿದರು. ಆದರೆ ಬಿಜೆಪಿಗಳಿಗೆ ಜನ ಸೇರುವ ಅನುಮಾನ ಮೊದಲೇ ಕಾಡಿದ್ದರಿಂದ ಶಿವಮೊಗ್ಗದ ಬಡಾವಣೆಗಳಿಗೆ ಬಸ್ಸು ಕಳಿಸಿದರು. ಹಳ್ಳಿಹಳ್ಳಿಗೆ ವಾಹನಗಳನ್ನು ಕಳಿಸಿದರು. ಜೊತೆಗೆ ಕೈಗೆ ಕಾಸು ಕೊಟ್ಟು ಊಟ ಕೊಟ್ಟರು. ಆದರೆ, ಶಾಲಾ ಮಕ್ಕಳನ್ನ ತಂದು ಕುರ್ಚಿಗೆ ಕಟ್ಟಿಹಾಕಿದಂತೆ ಕೂರಿಸಿದ್ದು ಮಾತ್ರ ಅಕ್ಷಮ್ಯ ಅಪರಾಧ. ಏಕೆಂದರೆ ಶಾಲೆಯ ಮಕ್ಕಳನ್ನ ಕಳುಹಿಸಲು ಹಿಂಜರಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕ್ರಮ ಜರುಗಿಸುವುದಾಗಿ ಬೆದರಿಸಿ ಮಕ್ಕಳನ್ನ ಹಿಂಸೆಗೆ ದೂಡಿದ್ದು ಮಕ್ಕಳ ದ್ವೇಷಿಗಳು ಮಾಡಿದ ಕೆಲಸ. ಏರೊಪ್ಲೇನ್ ನೋಡಿ ಊಟಮಾಡಿ ಬರುವ ಕೆಲಸ ಕೆಲವೇ ಕೆಲವು ಮಕ್ಕಳಿಗೆ ಸಂಭ್ರಮವಾಗಿ ಕಂಡರೂ ಈ ಬಿಜೆಪಿಗಳು ಮಕ್ಕಳ ಮನಸ್ಸನ್ನು ಕೆಡಿಸಲು ಕೈಹಾಕಿರುವುದು ಮಾತ್ರ ಅಕ್ಷಮ್ಯ. ವಾಸ್ತವ ಸ್ಥಿತಿ ಏನೆಂದರೆ ಶಿವಮೊಗ್ಗ ಜಿಲ್ಲೆಯ ಹಲವು ಹಳ್ಳಿಗಳ ಕಾಡುದಾರಿಯಲ್ಲಿ ಮಕ್ಕಳು ಶಾಲೆಗಾಗಿ ನಡೆಯುತ್ತಾರೆ, ಸರಿಯಾದ ರಸ್ತೆಗಳಿಲ್ಲ, ಸರಿಯಾದ ಸಮಯಕ್ಕೆ ಬರುವ ಬಸ್ಸುಗಳಿಲ್ಲ, ಮಲೆನಾಡಿನ ಜೀವನಾಡಿಯಾಗಿದ್ದ ಸಹಕಾರ ಸಾರಿಗೆ ಕಳ್ಳರ ಕೈಗೆ ಸಿಕ್ಕ ಫಲವಾಗಿ ನೂರಾರು ಬಸ್ಸುಗಳು ನಿಂತುಹೋಗಿವೆ.

ಇದನ್ನೂ ಓದಿ: ಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

ಅವುಗಳ ಮೇಲೆ ಗಿಡ ಬೆಳೆದಿದೆ. ವಿಮಾನ ನಿಲ್ದಾಣದ ಉದ್ಘಾಟನೆಗೆ ಖರ್ಚು ಮಾಡಿದ ಕಾಲು ಭಾಗವನ್ನ ವ್ಯಯಿಸಿದ್ದರೆ ಸಹಕಾರ ಸಾರಿಗೆಗೆ ಜೀವ ಬರುತ್ತಿತ್ತು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಖರ್ಚಾದ ಅರ್ಧ ಹಣಕ್ಕೆ ವಿಐಎಸ್‌ಎಲ್ ಸ್ಟೀಲ್ ಫ್ಯಾಕ್ಟರಿ ನಡೆಯುತ್ತಿತ್ತು, ಅದರ ಕಾಲು ಭಾಗಕ್ಕೆ ಎಂಪಿಎಂ ಕಾಗದ ಕಾರ್ಖಾನೆ ಚಾಲು ಆಗುತ್ತಿತ್ತು, ಬಡವರನ್ನು ಕಂಡರಾಗದ ಬಿಜೆಪಿಗಳಿಗೆ ಇವೆಲ್ಲಾ ಹೊಳೆಯುವುದಿಲ್ಲ. ಇದೆಲ್ಲಾ ಏನಾದರಾಗಲಿ, ಇನ್ನುಮುಂದೆ ಎಡೂರಪ್ಪ, ರಾಘವೇಂದ್ರ, ವಿಜ್ಯೇಂದ್ರ, ಈಶ್ವರಪ್ಪ, ಆತನ ಮಗ ಇವರೆಲ್ಲಾ ವಿಮಾನದಲ್ಲೇ ಶಿವಮೊಗ್ಗಕ್ಕೆ ಹೋಗುವುದಂತಲ್ಲಾ, ಥೂತ್ತೇರಿ

*****

ಮುಸ್ಲಿಂ ವಿದ್ವಾಂಸರೊಬ್ಬರು ಬ್ರಾಹ್ಮಣರ ಆಳ್ವಿಕೆಯಲ್ಲಿ ಆ ದೇಶ ಬಲಿಷ್ಠವಾಗುತ್ತದೆ ಎಂದಿದ್ದಾರೆ. ಈ ಮುಸ್ಲಿಂ ವಿದ್ವಾಂಸರ ಅಭದ್ರತೆಯ ಮಾತು ಕನಿಕರವೆನಿಸುತ್ತದೆ. ಮುಸಲ್ಮಾನನೊಬ್ಬ ಬ್ರಾಹ್ಮಣನನ್ನ ಹೊಗಳುವುದು, ಬ್ರಾಹ್ಮಣನು ಮುಸ್ಲಿಮರು ಹೇಗಿರಬೇಕೆಂಬ ಸೂಚನೆ ಕೊಡುವುದೇ ಈ ದೇಶದ ದುರಂತ; ಎಂದಾದರೂ ಬ್ರಾಹ್ಮಣರ ಆಳ್ವಿಕೆಯಲ್ಲಿ ಈ ದೇಶ ಎಂದು ಬಲಿಷ್ಠವಾಗಿತ್ತೇ ಎಂಬ ಬಗ್ಗೆ ಸಾಕ್ಷ್ಯಾಧಾರ ತೋರಿದ್ದರೆ ಚೆನ್ನಾಗಿತ್ತು. ಶತಮಾನಗಳ ಕಾಲ ಜಾತಿಯ ಶ್ರೇಣಿಕರಣದಿಂದ ಬಹುಸಂಖ್ಯಾತ ಶೂದ್ರ-ದಲಿತ ಶಕ್ತಿಯ ಅಂತಃಸತ್ವವೇ ನಾಶವಾಗಿ ಅವರೆಲ್ಲಾ ಗುಲಾಮರಂತೆ ಬದುಕುವಂತಾದಾಗ ವಿದೇಶಿಯರು ಈ ದೇಶಕ್ಕೆ ದಾಳಿ ಮಾಡಿ ಆಳತೊಡಗಿದರು. ಆಗ ’ಬುದ್ಧಿವಂತ’ರಾದ ಬ್ರಾಹ್ಮಣರು ವಿದೇಶಿ ಜನರ ಆಸ್ಥಾನದಲ್ಲಿ ಮಂತ್ರಿಗಳಾಗಿ ಕರಣಿಕರಾಗಿ ಆಸ್ಥಾನದ ವಿದೂಶಕರಾಗಿ ಅರಾಮವಾಗಿರತೊಡಗಿದ್ದು ಈಗ ಇತಿಹಾಸ. ಇನ್ನು ಬ್ರಿಟಿಷರು ಬಂದಾಗ ಇಂಗ್ಲಿಷ್ ಕಲಿತುಕೊಂಡು ಡಿ.ಸಿಗಳಾಗಿ, ಎಸ್ಪಿಗಳಾಗಿ ಬ್ರಿಟಿಷರ ಆಜ್ಞೆಯಂತೆ ನಮ್ಮವರನ್ನೇ ಬಗ್ಗುಬಡಿದು ಸೆರೆವಾಸಕ್ಕೆ ದೂಡಿದವರೂ ಇವರಲ್ಲಿದ್ದರು; ಬ್ರಾಹ್ಮಣ್ಯ ಪ್ರತಿಪಾದಿಸಿದ ಧರ್ಮ, ಅಸ್ಪೃಶ್ಯತೆ ಆಚರಿಸಿದ್ದರಿಂದ, ಅದಕ್ಕೆ ಸಿಕ್ಕಿದ ಜನ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಮೀಸಲಾತಿಯಿಂದ ಅಂತಹವರನ್ನು ಮೇಲೆತ್ತಬೇಕೆಂಬ ಕಾರ್ಯಕ್ರಮಕ್ಕೆ ಕೂಡ ಬೆಂಕಿಹಚ್ಚಿ ಸದ್ದಿಲ್ಲದೆ ಹತ್ತು ಪರಸೆಂಟ್ ಮೀಸಲಾತಿಯನ್ನು ಲಪಟಾಯಿಸಿದ್ದಾರೆ; ದಲಿತರೆಂದೂ ಮೇಲೆ ಬರದಂತೆ ನೋಡಿಕೊಳ್ಳಬೇಕು, ಸರಕಾರದ ಸಹಾಯಧನ ಅಥವಾ ಮೀಸಲಾತಿ ಕೊಡಬಾರದು, ಅವರು ಮೇಲೇಳದಂತೆ ನಮ್ಮ ಪಾದ ನೋಡಿಕೊಂಡು ಬದುಕಬೇಕೆಂದು ಹೇಳಿಹೋಗಿರುವ ಆರೆಸ್ಸೆಸಿನ ಗೋಳವಲಕರ ಮುಸ್ಲಿಮರನ್ನ ಎರಡನೇ ದರ್ಜೆ ಪ್ರಜೆಗಳನ್ನಾಗಿಸಿ ಎಂದಿದ್ದಾನೆ. ನೀವು ವಿದ್ವಾಂಸರಾದರೂ ಅವರ ಭಾಗಕ್ಕೆ ಎರಡನೇ ದರ್ಜೆ ಪ್ರಜೆ ಎಂಬುದು ಗೊತ್ತಿರಲಿ. ಥೂಥೂ ಥೂತ್ತೇರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿರೀಕ್ಷಣಾ ಜಾಮೀನು ಕೋರಿ ಹೆಚ್‌.ಡಿ ರೇವಣ್ಣ ಅರ್ಜಿ: ಎಸ್‌ಐಟಿಗೆ ಕೋರ್ಟ್‌ ನೋಟಿಸ್

0
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೊದಲ ಆರೋಪಿ, ಶಾಸಕ ಹೆಚ್‌.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ನೋಟಿಸ್ ಜಾರಿ ಮಾಡಿದೆ...