ಬಿಹಾರದ ಹಿಸು ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಸಿಂಗ್ ಅವರಿಗೆ ಲಾಕ್ಡೌನ್ ಸಮಯದಲ್ಲಿಯೂ ಪ್ರಯಾಣದ ಪಾಸ್ ನೀಡಿದ್ದಕ್ಕಾಗಿ ಬಿಹಾರ ಸರ್ಕಾರವು ಉಪ ವಿಭಾಗ ಅಧಿಕಾರಿಯನ್ನು ಅಮಾನತು ಮಾಡಿದೆ.
ಲಾಕ್ಡೌನ್ ನಡುವೆಯು ಅದನ್ನು ನಿರ್ಲಕ್ಷಿಸಿ ಉಪ ವಿಭಾಗದ ಅಧಿಕಾರಿ ಅನುಕುಮಾರ್ ಎಂಬುವವರು ಬಿಜೆಪಿ ಶಾಸಕ ಅನಿಲ್ ಸಿಂಗ್ರವರಿಗೆ ಅಂತಾರಾಜ್ಯ ಪ್ರಯಾಣ ಸೌಲಭ್ಯದ ಪಾಸ್ ವಿತರಿಸಿದ್ದಾರೆ. ಈ ನಿರ್ಲಕ್ಷ್ಯ ಕ್ರಮಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ.
ದೇಶವೇ ಲಾಕ್ ಡೌನ್ನಲ್ಲಿರುವಾಗ ಏಪ್ರಿಲ್ 15ರಂದು ಶಾಸಕ ಅನಿಲ್ ಸಿಂಗ್ ತಮ್ಮ ಪುತ್ರಿಯನ್ನು ಕರೆತರಲು ರಾಜಸ್ಥಾನದ ಕೋಟ ನಗರಕ್ಕೆ ತೆರಳಿದ್ದರು. 17 ವರ್ಷದ ಪುತ್ರಿ ವೈದ್ಯಕೀಯ ಆಕಾಕ್ಷಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಅವಳಿಗೆ ಕೋಟ ನಗರದ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಕೊಡಿಸಲಾಗುತ್ತಿತ್ತು ಎನ್ನಲಾಗಿದೆ. ಹಾಗಾಗಿ ಅವರನ್ನು ಕರೆತರಲು ಅಂತರ್ರಾಜ್ಯ ಪ್ರಯಾಣ ಬೆಳೆಸಿದ್ದಾರೆ.
ಶಾಸಕ ಅನಿಲ್ ಸಿಂಗ್ ತಮ್ಮ ಮಗಳನ್ನು ಕರೆತರಲು ನವಾಡ ಜಿಲ್ಲೆಯ ಸಾದರ್ ಉಪ ವಿಭಾಗ ಅಧಿಕಾರಿ ಸಹಕರಿಸಿದ್ದರು. ಪಾಸ್ ನೀಡುವಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿರುವುದರಿಂದ ಅಮಾನತು ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಮಗಧ ವಿಭಾಗದ ಅಧಿಕಾರಿಗಳಿಗೆ ಶಿಪಾರಸು ಮಾಡಿದೆ. ಈ ಪ್ರಕರಣವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಲಘುವಾಗಿ ತೆಗೆದುಕೊಂಡಿದ್ದಾರೆ. ಆಡಳಿತ ಪಕ್ಷದ ಶಾಸಕರಿಗೆ ವಿಶೇಷ ಅಧಿಕಾರವನ್ನು ನೀಡಲಾಗಿದೆ ಎಂದು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಅಧಿಕಾರಿಯನ್ನು ಅಮಾನತು ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಅನಿಲ್ ಸಿಂಗ್, ತಾನು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡಿಲ್ಲ. ಪ್ರತಿಪಕ್ಷಗಳ ಆರೋಪದಲ್ಲಿ ಯಾವುದೇ ಉರುಳಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಗಳು ವೈರಸ್ ವಿರುದ್ಧ ಹೋರಾಡುತ್ತಿವೆ, ಕೇಂದ್ರವು ಕೆಲವು ರಾಜ್ಯಗಳ ವಿರುದ್ಧ ಹೋರಾಡುತ್ತಿದೆ.
also read: Amid rising COVID-19 cases, Anti-Lockdown protests in the US