Homeಪುಸ್ತಕ ವಿಮರ್ಶೆಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ

ಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ

- Advertisement -
- Advertisement -

ಡಾ.ರವಿಕುಮಾರ್ ನೀಹ ಅವರ ಸಂಶೋಧನಾ ಕೃತಿಯಾದ ’ಅರಸು ಕುರನ್ಗರಾಯ’ ಮರೆತ ದಾರಿಗಳನ್ನು ಕೂಡಿಸುವ ಕೊಂಡಿಯಾಗಿದೆ. ಮೂಲತಃ ಉಪನ್ಯಾಸಕರಾದ ರವಿಕುಮಾರ್ ಸಂಶೋಧಕರೂ ಆಗಿರುವುದರಿಂದ ತಮ್ಮ ಜಿಲ್ಲೆಯ ಜಾನಪದ ನಿಧಿಯೇ ಆಗಿರುವ ಕುರನ್ಗರಾಯನ ಇತಿಹಾಸಕ್ಕೆ ಕೈಚಾಚಿದ್ದಾರೆ. ಮರೆತ ದಾರಿಗಳನ್ನು ಕೂಡಿಸುವ ಮಹತ್ಕಾರ್ಯದಲ್ಲಿ ರವಿಕುಮಾರ್ ಅವರ ಬೊಗಸೆ ತುಂಬುವಷ್ಟು ಕುರನ್ಗರಾಯ ದಕ್ಕಿದ್ದಾನೆ. ಆ ಮೂಲಕ ಕನ್ನಡ ನೆಲದ ಮಹೋನ್ನತ ಚರಿತ್ರೆಯೊಂದು ಅಕ್ಷರಗಳಲ್ಲಿ ದಾಖಲಾಗಲು ಸಾಧ್ಯವಾಗಿದೆ.

ಭಾರತದ ಚರಿತ್ರೆಯು ಉಳ್ಳವರ ಮತ್ತು ಉನ್ನತ ಜಾತಿಗಳ ’ಹೆಗ್ಗಳಿಕೆ’ಯ ದಾಖಲೆಯಷ್ಟೇ ಆಗಿದೆಯೆಂಬುದನ್ನು ಕೆಲವರಾದರೂ ಸಂಶೋಧಕರು ಕಂಡುಕೊಂಡು, ಅದು ಬದಲಾಗಬೇಕೆಂದ ಎಚ್ಚರ ವಹಿಸಿದ್ದಾರೆ. ಆದರೂ, ಇಡೀ ದೇಶದ ನೆಲದ ಮಣ್ಣಿನ ಕಣಕಣದಲ್ಲೂ ಬೆರೆತಿರುವ ನಮ್ಮ ತಳ ಸಮುದಾಯಗಳ ನಿಜದ ಚರಿತ್ರೆ ಅಕ್ಷರಕ್ಕೆ ದಕ್ಕಿಯೂ ದಕ್ಕದ ಹಾಗೆ ಸವಾಲು ಹಾಕುತ್ತಲೇ ಇದೆ. ಅಂಥಾ ನಿಜದ ಚರಿತ್ರೆ ಅರಸು ಕುರನ್ಗರಾಯನದು.

ತುಮಕೂರು ಜಿಲ್ಲೆಯಲ್ಲಿ ಗಿಡಮೂಲಿಕೆಗಳಿಗೆ ಹೆಸರಾದ ಸಿದ್ಧರಬೆಟ್ಟದ ಸುತ್ತಲಿನ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಕುರನ್ಗರಾಯನೆಂಬ ರಾಜ ಆ ಬೆಟ್ಟದ ದಕ್ಷಿಣ ದಿಕ್ಕಿನಲ್ಲೊಂದು ಕೋಟೆ ಕಟ್ಟಿಸಿ ಬಹಳಷ್ಟು ವರ್ಷಗಳ ಕಾಲ ರಾಜ್ಯಭಾರ ನಡೆಸಿದ್ದಾನೆ. ಈತ ತುಮಕೂರು, ಮಧುಗಿರಿ ಮತ್ತು ಕೊರಟಗೆರೆ ಭಾಗದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಸೇರಿದವನೆಂಬುದು ವಿಶೇಷ ಸಂಗತಿ. ಭಾರತದ ಚಾತುರ್ವರ್ಣ ವ್ಯವಸ್ಥೆಯು ಪ್ರತಿಪಾದಿಸುತ್ತಿದ್ದ ಮೌಲ್ಯಗಳಿಗೆ ವಿರುದ್ಧವಾಗಿ ಕನ್ನಡ ನೆಲದಲ್ಲಿ ನಡೆದಿರಬಹುದಾದ ಮಹತ್ ಕ್ರಾಂತಿಗಳಿಗೆ ಕುರನ್ಗರಾಯ ಒಂದು ಉದಾಹರಣೆ. ಸಿದ್ಧರಬೆಟ್ಟದ ಸುತ್ತಲಿನ ಭಾಗದಲ್ಲಿ ಕುರನ್ಗರಾಯನ ಕುರಿತ ಲಾವಣಿಗಳು ಪ್ರಚಲಿತದಲ್ಲಿವೆ ಎಂದರೆ ಅವನ ಕೀರ್ತಿ ಎಷ್ಟರಮಟ್ಟಿಗಿನದ್ದು ಎಂಬುದು ಅರ್ಥವಾಗುತ್ತದೆ.

ಕುರನ್ಗರಾಯ ಆಳುತ್ತಿದ್ದ ಭೂಭಾಗ ಸಿದ್ಧರು ಬದುಕಿದ ಪ್ರದೇಶವಾಗಿತ್ತು. ಬಹುದೊಡ್ಡ ಶ್ರಮಣ ಪರಂಪರೆಯ ನೆಲೆವೀಡನ್ನು ಆಳುತ್ತಿದ್ದ ರಾಜನೊಬ್ಬ ವೈದಿಕ ಸಂಸ್ಕೃತಿಯ ಚಾತುರ್ವರ್ಣ ಪದ್ಧತಿಯಾಚೆಗೆ, ಜನರೊಪ್ಪುವ ಹಾಗೆ, ಜನರ ಬಾಯಲ್ಲಿ ಲಾವಣಿಯಾಗುವ ಹಾಗೆ ಬದುಕಿದ್ದನೆಂಬುದು ನಮ್ಮ ನೆಲವು ಒಂದು ಕಾಲಕ್ಕೆ ಅನನ್ಯವಾದ ಸೌಹಾರ್ದ ಪರಂಪರೆಯೊಂದರ ಭಾಗವೆಂಬುದನ್ನು ಅರ್ಥಮಾಡಿಸುತ್ತದೆ. ಕರ್ನಾಟಕದಲ್ಲಿ ಸಿದ್ಧರ ಕಾಲವೆಂದು ಗುರುತಿಸುವ ಹದಿನೇಳು-ಹದಿನೆಂಟನೇ ಶತಮಾನದಲ್ಲಿ ಕುರನ್ಗರಾಯ ಆಳಿರಬಹುದೆಂದು ಹಲವು ಐತಿಹಾಸಿಕ ಮತ್ತು ಪೌರಾಣಿಕ ದಾಖಲೆಗಳ ಆಧಾರದ ಮೇಲೆ ರವಿಕುಮಾರ್ ಊಹಿಸಿದ್ದಾರೆ. ಹೈದರಾಲಿಯು ಕುರನ್ಗರಾಯನ ಆಡಳಿತಾವಧಿಯಲ್ಲಿ ಸಿದ್ಧರಬೆಟ್ಟಕ್ಕೆ ಬಂದು ಸಿದ್ಧರ ದರ್ಶನ ಪಡೆದನೆಂಬುದಕ್ಕೆ ಐತಿಹ್ಯಗಳಿವೆ. ಮಾದಿಗ ಸಮುದಾಯದ ರಾಜನೊಬ್ಬ ಆಳುತ್ತಿರುವ ಪ್ರದೇಶದ ಬಗ್ಗೆ ಹೈದರಾಲಿಗೆ ಇದ್ದಿರಬಹುದಾದ ಸ್ನೇಹಪರ ಕಾಳಜಿಯ ಕುರಿತು ಆ ಪ್ರದೇಶದಲ್ಲಿ ಲಾವಣಿಗಳಿವೆ. ಆತನು ತಮ್ಮ ಪ್ರದೇಶಕ್ಕೆ ಬಂದಾಗ ದನದ ಮಾಂಸದ ಅಡುಗೆ ಮಾಡಿ ಬಡಿಸಿದ ಬಗ್ಗೆ ವಿವರಗಳಿವೆ ಎಂದರೆ ಹೈದರ್ ಮತ್ತು ಕುರನ್ಗರಾಯನ ಸ್ನೇಹಸಂಬಂಧ ಎಷ್ಟು ಸಾವಯವ ಎನ್ನುವುದು ಅರ್ಥವಾಗುತ್ತದೆ. ಅಲ್ಲದೆ ಕುರನ್ಗರಾಯ ಆ ಭಾಗದಲ್ಲಿ ಪರಿಚಯಿಸಿದ್ದ ತೊಗಲಕಾಸು (ಚರ್‍ಮದ ನಾಣ್ಯ) ಚಲಾವಣೆಯ ಬಗ್ಗೆ ಹೈದರಾಲಿ ಪ್ರಶಂಸೆಯ ಮಾತುಗಳನ್ನಾಡಿರುವ ಕುರಿತು ವಿವರಗಳು ಸಿಕ್ಕುತ್ತವೆ.

ಡಾ.ರವಿಕುಮಾರ್ ನೀಹ

ಹೈದರಾಲಿ ಮತ್ತು ಕುರನ್ಗರಾಯನ ಈ ’ಅವೈದಿಕ ಪ್ರೀತಿ’ಯ ಕಾರಣದಿಂದ ಈ ದಲಿತರಾಜನನ್ನು ಭಾರತೀಯ ಇತಿಹಾಸ ಹೊರಗೇ ಇಟ್ಟಿದೆ. ಓ.ನಾಗರಾಜ್ ಅವರು ಬರೆದಿರುವ ’ಕುರಂಗರಾಜ ವೈಭವ’ ಎನ್ನುವ ಕಾದಂಬರಿಯೊಂದಿದ್ದು, ಅದು ಕುರನ್ಗರಾಯನ ಬಗೆಗಿನ ಜನರ ನಂಬಿಕೆಗಳನ್ನು ಆಧರಿಸಿದೆ. ರವಿಕುಮಾರ್ ನೀಹ ಈ ಜನರ ನಂಬಿಕೆಗಳಿಂದಲೇ ಇತಿಹಾಸದೊಳಗೆ ಪ್ರವೇಶಿಸಿದರೂ, ಸಂಶೋಧನೆಯ ಅಧ್ಯಯನ ಕ್ರಮದಿಂದ ಬಹಳಷ್ಟು ಅಕೆಡೆಮಿಕ್ ಕೃತಿಗಳನ್ನು, ಗೆಜೆಟಿಯರ್‌ಗಳನ್ನೂ ಅಭ್ಯಸಿಸಿ ತಮ್ಮ ಕೃತಿಯನ್ನು ಬೆಳೆಸಿದ್ದಾರೆ. ಈ ಮೂಲಕ ಇತಿಹಾಸದಲ್ಲಿ ಮುಚ್ಚಿ ಹೋಗಿರುವ ದಲಿತರ ಆಡಳಿತದ ಪದರುಗಳನ್ನು ಬಿಡಿಸಲು ಕಾರಣರಾಗಿದ್ದಾರೆ. ಕ್ಷತ್ರಿಯ ಧರ್ಮವೆಂದು ತಳಜಾತಿಗಳ ರಾಜ್ಯಾಡಳಿತದ ಸಾಧ್ಯತೆಗಳನ್ನೇ ಮುಚ್ಚಿಹಾಕಿದ ವೈದಿಕ ಇತಿಹಾಸವು ಅದಲಿತ ರಾಜರ ಬಗೆಗೂ ವಸ್ತುನಿಷ್ಠ ದಾಖಲೆಗಳನ್ನು ಮಾಡಿಲ್ಲ. ಒನಕೆ ಓಬವ್ವರಂತಹ ದಲಿತ ಹೋರಾಟಗಾರ್ತಿಯ ಬಗೆಗಿನ ಪ್ರಾದೇಶಿಕ ನಂಬಿಕೆಗಳನ್ನೂ ಅಪಮಾನಿಸುವಂತೆ ’ಕೆಲಸದವಳಾಗಿ’ ಬಿಂಬಿಸಿದ ಇತಿಹಾಸ ನಮ್ಮದು. ಇದರ ಭಾಗವಾಗಿಯೇ ಕನ್ನಡಿಗರ ಮನೆಮನೆಗಳಲ್ಲಿ ಅಭಿಮಾನವಿರಿಸಿಕೊಳ್ಳಬೇಕಿದ್ದ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕುರಿತ ಇತಿಹಾಸವನ್ನು ತಿರುಚಲಾಗುತ್ತಿದೆ. ಇಂತ ಇತಿಹಾಸದ ಉಬ್ಬುಶಿಲ್ಪಗಳಂಥ ದಾಖಲೆಗಳ ಒಳನುಗ್ಗಿ ರವಿಕುಮಾರ್ ಫಲವತ್ತಾದ ಸೌಹಾರ್ದವೂ, ಅವೈದಿಕವೂ, ಸಹಿಷ್ಣುವೂ ಆದ ದಲಿತ ಪರಂಪರೆಯ ಕಾರುಣ್ಯದ ನಿಜಕತೆಯನ್ನು ಹೆಕ್ಕಿದ್ದಾರೆ ಹಾಗೂ ಸಂಶೋಧಕರಿಗೆ ಮಾದರಿಯಾದ ಒಂದು ಮೇಲ್ಪಂಕ್ತಿಯನ್ನು ಹಾಕಿದ್ದಾರೆ.

ತಮ್ಮ ತಾಯಿ ಕುರನ್ಗರಾಯನ ಕುರಿತು ಹೇಳಿದ ಒಂದು ಕತೆಯ ಜಾಡನ್ನು ಹಿಡಿದು ಆ ಪ್ರದೇಶಕ್ಕೆ ಪ್ರವೇಶಿಸಿದ ರವಿ ಕನ್ನಡ ನಾಡಿನಲ್ಲಿ ಸಮಾಧಿಯಾಗಿರಬಹುದಾದ ದಲಿತರ ಮಹತ್ತರ ಇತಿಹಾಸದ ಶೋಧನಾ ಕಾರ್ಯವನ್ನು ಉದ್ಘಾಟಿಸಿದ್ದಾರೆ. ಈಗಾಗಲೇ ಬಹಳಷ್ಟು ವಿದ್ವಾಂಸರು ಈ ರೀತಿಯ ಸಂಶೋಧನೆಯನ್ನು ಕೈಗೊಂಡಿರುವರಾದರೂ ದಲಿತ ಸಂಶೋಧಕರ ಕಣ್ಣೋಟಕ್ಕೆ ದಕ್ಕುವ ದಾಖಲೆಗಳು ಹೊಸಹಾದಿಯನ್ನು ತೋರಬಲ್ಲವು.

ಶರಣರು ಬಾಳಿ ಹೋದ ಕನ್ನಡದ ನೆಲದಲ್ಲಿ ದಲಿತ ರಾಜನೊಬ್ಬ ಯುದ್ಧ ಮಾಡದೆ, ಯಾರನ್ನೂ ಒತ್ತೆಯಾಗಿಸಿಟ್ಟುಕೊಳ್ಳದೆ, ಲೋಲುಪನಾಗದೆ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಇತಿಹಾಸವನ್ನು ಡಾ.ರವಿಕುಮಾರ್ ನೀಹ ನಮ್ಮೆದುರು ತೆರೆದಿಟ್ಟಿದ್ದಾರೆ. ಅವರು ಸಂಶೋಧನೆಗೆ ತೊಡಗಿದ ಭೂಪ್ರದೇಶದಲ್ಲಿ ಕೊರಮ ಜಾತಿಯಂತಹ ಸಣ್ಣ ಸಮುದಾಯಗಳ ರಾಜರೂ ಆಳಿರುವ ಬಗ್ಗೆ ಕುರುಹುಗಳಿವೆ. ಇದನ್ನು ರವಿಕುಮಾರ್ ಸಮರ್ಥವಾಗಿ ಗುರುತಿಸಿದ್ದಾರೆ. ಆ ಮೂಲಕ ನಿಜವಾದ ಭಾರತ ಚರಿತ್ರೆಗೆ
ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಮುಂದಡಿಯಿಟ್ಟಿದ್ದಾರೆ. ಅವರ ಸಂಶೋಧನೆಯ ’ಅರಸು ಕುರನ್ಗರಾಯ’ ಕನ್ನಡಿಗರೆಲ್ಲರೂ ಓದಲೇಬೇಕಾದ ಕೃತಿಯಾಗಿದೆ.

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ಪುಸ್ತಕ ಪರಿಚಯ; ಕಾಣೆಯಾಗಿದ್ದಾರೆ ಸಂಪಾದಕರು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...