ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮ ಭೂಮಿ ಕುರಿತು ತೀರ್ಪು ನೀಡಿದ್ದ ಐವರು ಜಡ್ಜ್ಗಳಿಗೆ ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನವನ್ನು ನೀಡಲಾಗಿತ್ತು. ಇದೀಗ ಐವರು ಜಡ್ಜ್ಗಳಲ್ಲಿ ಓರ್ವರು ರಾಮ್ ಲಲ್ಲಾ ಪ್ರತಿಷ್ಠಾಪನೆ ಸಮಾರಂಭಕ್ಕೆ ಹಾಜರಾಗುವುದನ್ನು ಖಚಿತಪಡಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ಅಯೋಧ್ಯೆ ಭೂವಿವಾದದ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ನ ನ್ಯಾಯಾಮೂರ್ತಿಗಳ ತಂಡದಲ್ಲಿದ್ದ ಅಶೋಕ್ ಭೂಷಣ್ ಅವರು ಜನವರಿ 22, 2024ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಪ್ರಸ್ತುತ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್ಸಿಎಲ್ಎಟಿ) ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಅಶೋಕ್ ಭೂಷಣ್ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾನುವಾರ ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ.
ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಪೀಠದ ನೇತೃತ್ವ ವಹಿಸಿದ್ದ ಮತ್ತು ಪ್ರಸ್ತುತ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿರುವ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಜ.22ರಂದು ತಮ್ಮ ತಾಯಿ ಪ್ರಾರಂಭಿಸಿದ ಎನ್ಜಿಒ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನಾಳೆ ಸುಪ್ರೀಂಕೋರ್ಟ್ನಲ್ಲಿ ಇರಲಿದ್ದಾರೆ. ಸುಪ್ರೀಂಕೋರ್ಟ್ ಕಾರ್ಯ ಕಲಾಪಗಳು ನಾಳೆ ಎಂದಿನಂತೆ ನಡೆಯಲಿದೆ. ನಾಗ್ಪುರದಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ದೇವಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಆಂಧ್ರಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು ಪೂರ್ವ ನಿಗದಿತ ಕಾರ್ಯಕ್ರಮ ಇರುವ ಕಾರಣ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ರಂಜನ್ ಗೊಗಯ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ದಶಕಗಳಷ್ಟು ಹಳೆಯದಾದ ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ಬಗ್ಗೆ ತೀರ್ಪು ನೀಡಿತ್ತು. ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಎ ಬೊಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರಿದ್ದರು. ಪೀಠವು ಅಯೋಧ್ಯೆ-ಬಾಬರಿ ಮಸೀದಿ ಜಮೀನಿನ ಒಡೆತನದ ಬಗ್ಗೆ ನ.9, 2019ರಂದು ತೀರ್ಪು ನೀಡಿತ್ತು. ವಿವಾದಿತ 2.77 ಎಕರೆ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಜಮೀನನ್ನು ಸಂಪೂರ್ಣವಾಗಿ ಟ್ರಸ್ಟ್ ವಶಕ್ಕೆ ನೀಡಬೇಕು. ಇದರ ಹೊಣೆ ಸರ್ಕಾರದ್ದು ಎಂದು ಸೂಚಿಸಿತ್ತು. ಇದೇ ವೇಳೆ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಬೋರ್ಡ್ಗೆ 5 ಎಕರೆ ಪರ್ಯಾಯ ಭೂಮಿ ನೀಡಲು ಸೂಚಿಸಿತ್ತು. ಇದಲ್ಲದೆ 2010ರಲ್ಲಿ ಇದೇ ವಿವಾದದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯವು ರದ್ದುಪಡಿಸಿತ್ತು. ರಾಮ್ ಲಲ್ಲಾ, ನಿರ್ಮೋಹಿ ಅಖಾಡಾ ಮತ್ತು ಸುನ್ನಿ ವಕ್ಫ್ ಬೋರ್ಡ್ಗೆ ವಿವಾದಿತ ಜಾಗವನ್ನು ಅಲಹಾಬಾದ್ ಹೈಕೋರ್ಟ್ ಸಮನಾಗಿ ಹಂಚಿಕೆ ಮಾಡಿರುವುದನ್ನು ರದ್ದುಪಡಿಸಿತ್ತು.
ರಾಮ ಅಲ್ಲಿಯೇ ಜನಿಸಿದ ಎಂಬುದು ಹಿಂದುಗಳ ನಂಬಿಕೆ. ನಂಬಿಕೆಯು ವೈಯಕ್ತಿಕ ವಿಷಯ, ಹಿಂದೂಗಳು ಅಯೋಧ್ಯೆಯನ್ನು ರಾಮನ ಜನ್ಮಸ್ಥಾನ ಅಂತ ನಂಬಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಧಾರ್ಮಿಕ ಭಾವನೆಗಳಿವೆ. ಮುಸ್ಲಿಮರು ಆ ಜಾಗ ಬಾಬ್ರಿ ಮಸೀದಿಯದ್ದು ಅಂತಾರೆ. ಆದರೆ ರಾಮ ಅಲ್ಲಿ ಜನಿಸಿದ್ದ ಎಂಬ ಹಿಂದುಗಳ ನಂಬಿಕೆ ವಿವಾದರಹಿತವಾದದ್ದು. ಆದರೆ ಈ ಭೂಮಿ ಯಾರಿಗೆ ಸೇರಿದ್ದೆಂಬ ವ್ಯಾಜ್ಯವು ಸಂಪೂರ್ಣವಾಗಿ ಕಾನೂನಿಗೆ ಸಂಬಂಧಿಸಿದ್ದು. ಮಸೀದಿಗೆ ಹಾನಿ ಮಾಡಿದ್ದು, ಕಾನೂನು ಕೈಗೆ ತೆಗೆದುಕೊಂಡಿದ್ದೂ ಸರಿಯಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಬಾಬರಿ ಮಸೀದಿ- ರಾಮಮಂದಿರ ಭೂ ವಿವಾದದ ಬಗ್ಗೆ ಅಂತಿಮ ತೀರ್ಪು ನೀಡಿದ್ದ ಪೀಠದಲ್ಲಿದ್ದ ಎಲ್ಲಾ ಜಡ್ಜ್ಗಳು ಕೂಡ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಅಂದಿನ ಸಿಜೆಐ ರಂಜನ್ ಗೊಗಯ್ ಅವರನ್ನು ರಾಜ್ಯಸಭೆಗೆ ಬಿಜೆಪಿ ನಾಮನಿರ್ದೇಶನ ಮಾಡಿತ್ತು. ಎಸ್ಎ ಬೋಬ್ಡೆ ಅವರು ನವೆಂಬರ್ 2019ರಿಂದ ಏಪ್ರಿಲ್ 2021ರ ನಡುವೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಡಿವೈ ಚಂದ್ರಚೂಡ್ ಅವರು ಭಾರತದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಪೀಠದಲ್ಲಿದ್ದ ಇನ್ನೋರ್ವ ಜಡ್ಜ್ ಅಬ್ದುಲ್ ನಜೀರ್ ಅವರು ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದಾರೆ.
ಇದನ್ನು ಓದಿ: ರಂಜನ್ ಗೊಗೊಯ್ಗೆ ‘ಅತ್ಯುನ್ನತ ನಾಗರಿಕ ಪ್ರಶಸ್ತಿ’: ‘ರಾಮ ಮಂದಿರ’ ಸ್ಥಾಪನೆಯಾಗಿದ್ದರೆ…..