ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಜಾಗತಿಕ ಲಿಂಗಾಯತ ಮಹಾಸಭಾದ ಸಾಗರೋತ್ತರ ಶಾಖೆ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಾಗರೋತ್ತರ ಶಾಖೆಯ ಪದಾಧಿಕಾರಿಗಳಾದ ಚಂದ್ರಶೇಖರ ಲಿಂಗದಳ್ಳಿ (ದುಬೈ) ಮತ್ತು ಬಸವಾ ಪಾಟೀಲ (ಇಂಗ್ಲೆಂಡ್) ತಿಳಿಸಿದ್ದಾರೆ.
ವಿಶ್ವದಲ್ಲೆಡೆ ವಿವಿಧ ವೃತ್ತಿಗಳಲ್ಲಿರುವ ಲಿಂಗಾಯತ ಬಾಂಧವರನ್ನು ಒಗ್ಗೂಡಿಸಿ, ಬಸವಾದಿ ಶರಣ ಸಂಸ್ಕೃತಿಯನ್ನು ಮುನ್ನೆಡೆಸುವ ವೇದಿಕೆಯಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಸಾಗರೋತ್ತರ ಶಾಖೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಂಜೆ ಏಳು ಗಂಟೆಗೆ ಆನ್ಲೈನ್ ಮೂಲಕ ಆರಂಭವಾಗುವ ಕಾರ್ಯಕ್ರಮದಲ್ಲಿ ಗದಗ ತೋಂಟದಾರ್ಯ ಸಂಸ್ಥಾನ ಮಠದ ಮ.ನಿ.ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಲಿದ್ದು, ಕೂಡಲಸಂಗಮ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.
ಉದ್ಘಾಟನಾ ಸಂದರ್ಭದಲ್ಲಿ ಹಿರಿಯ ಲಿಂಗಾಯತ ನಾಯಕರಾದ, ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್, ಚಿಂತಕ ರಂಜಾನ್ ದರ್ಗಾ, ಸಾಹಿತಿ ವಿರಣ್ಣ ರಾಜೂರ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮತ್ತು ನಿವೃತ್ತ ಐ.ಎ.ಎಸ್ ಅಧಿಕಾರಿ ಶಿವಾನಂದ ಜಾಮದಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಆನ್ಲೈನ್ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವವರು ಜೂಮ್ ಆ್ಯಪ್ (826 0983 9254 Passcode 316453), ಫೇಸ್ಬುಕ್ (fb.com/NewsKarnataka/live) ಹಾಗೂ ಯೂಟ್ಯೂಬ್ (YouTube.com/NewsKarnataka) ಗಳಲ್ಲಿ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?