ದೆಹಲಿ ಚುನಾವಣೆಯ ಮತ ಎಣಿಕೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ)ವು ಬಿಜೆಪಿಗಿಂತ ಮುನ್ನಡೆ ಸಾಧಿಸುತ್ತಿದ್ದಂತೆ ಉಪ ಮುಖ್ಯಮಂತ್ರಿ ಸಿಸೋಡಿಯ “ರಾಜಕೀಯದಲ್ಲಿ ಅವಕಾಶ ಸಿಕ್ಕರೆ ಶಿಕ್ಷಣ, ಆಸ್ಪತ್ರೆ ಸುಧಾರಣೆಯಂತಹ ಮುಂತಾದ ಕೆಲಸಗಳನ್ನು ಮಾಡಬೇಕು. ಇದು ನಿಜವಾದ ದೇಶಭಕ್ತಿ ಎಂಬುದು ನಮ್ಮ ಗೆಲುವು ಸಾಬೀತುಪಡಿಸುತ್ತದೆ” ಎಂದಿದ್ದಾರೆ.
“ನಿಜವಾದ ರಾಷ್ಟ್ರೀಯತೆಯೆಂದರೆ ಜನರಿಗಾಗಿ ಕೆಲಸ ಮಾಡುವುದು” ಎಂದು ಹೇಳಿದ ಅವರು, ಆಮ್ ಆದ್ಮಿ ಪಕ್ಷವೂ ಎಣಿಕೆಯ ಮೊದಲ ಎರುಡೂವರೆ ಗಂಟೆಯಲ್ಲಿ 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.
“ಸರ್ಕಾರವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಗೆಲ್ಲಬಹುದು ಎಂದು ದೆಹಲಿ ಸಾಬೀತುಪಡಿಸುತ್ತದೆ. ನಾವು ಶಾಲೆಗಳು ಮತ್ತು ಆಸ್ಪತ್ರೆಗಳ ಬಗ್ಗೆ ಮಾತನಾಡುತ್ತಲೇ ಇದ್ದೆವು ಆದರೆ ಬಿಜೆಪಿ ಸಮಾಜದ ಸ್ಥಿತಿಯನ್ನು ಹಾಳು ಮಾಡಲು ಹಿಂದೂ-ಮುಸ್ಲಿಂ ಬಗ್ಗೆ ಮಾತ್ರ ಮಾತನಾಡುತ್ತಿತ್ತು” ಎಂದು ಉಪಮುಖ್ಯಮಂತ್ರಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಶಾಹೀನ್ ಬಾಗ್ನಲ್ಲಿ ನಡೆದ ಪ್ರತಿಭಟನೆಗಳನ್ನು “ರಾಷ್ಟ್ರ ವಿರೋಧಿ” ಎಂದು ಆರೋಪಿಸುವ ಮೂಲಕ ದೆಹಲಿಯ ಮತದಾರರನ್ನು ಧ್ರುವೀಕರಿಸಲು ಬಿಜೆಪಿ ಪ್ರಯತ್ನಿಸಿತ್ತು, ಆದರೆ ಅದು ಫಲ ನೀಡಿಲ್ಲ ಎಂದು ಎಎಪಿ ಹೇಳಿದೆ.
ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ತಮ್ಮ ಚುನಾವಣಾ ಅಭಿಯಾನವನ್ನು ಪೌರತ್ವ ಕಾನೂನನ್ನು ವಿರೋಧಿಸುವವರ ಮೇಲಿನ ದಾಳಿಗೆ ಮೀಸಲಿಟ್ಟು, ಅವರನ್ನು “ದೇಶದ್ರೋಹಿಗಳು” ಎಂದು ಹೇಳಿದ್ದರು. ಆದರೆ ಎಎಪಿ ಕಳೆದ ಐದು ವರ್ಷಗಳ ತನ್ನ ಅಭಿವೃದ್ಧಿ ಕಾರ್ಯಗಳಲ್ಲೆ ನಾವು ಸಂಪೂರ್ಣವಾಗಿ ಗೆಲ್ಲುತ್ತೇವೆ ಎಂದು ಹೇಳಿಕೊಂಡಿತ್ತು.