2024ರ ಚುನಾವಣೆಯಲ್ಲಿ ಬಿಜೆಪಿ ಮಣಿಸಲು 18 ವಿರೋಧ ಪಕ್ಷಗಳು ಒಗ್ಗಟ್ಟಾಗಿ ನಡೆಸಿದ ಪಾಟ್ನಾದ ಸಭೆ ಯಶಸ್ವಿಯಾಗಿ ಮುಗಿದಿದ್ದು, ಮುಂದಿನ ಸಭೆಯನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಸಲಾಗುತ್ತದೆ ಎನ್ನಲಾಗಿದೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಡಿಸಿಎಂ ತೇಜಸ್ವಿ ಯಾದವ್ರವರ ಕರೆದಿದ್ದ ಇಂದಿನ ಸಭೆಗೆ ಸುಮಾರು 18 ಪಕ್ಷಗಳ ಮುಖಂಡರು ಭಾಗವಹಿಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಕಾಂಗ್ರೆಸ್, ಜೆಡಿಯು, ಆರ್ಜೆಡಿ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಆಪ್, ಸಮಾಜವಾದಿ ಪಕ್ಷ, ಜೆಎಂಎಂ, ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಲಿಬರೇಷನ್, ಎಎಪಿ, ಎನ್ಸಿಪಿ, ಶಿವಸೇನೆ (ಯುಬಿಟಿ), ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, SBSP ಪಕ್ಷಗಳು 2024ರಲ್ಲಿ ಒಗ್ಗೂಡಿ ಸರ್ಕಾರ ರಚಿಸಲು ಸಮ್ಮತಿ ಸೂಚಿಸಿವೆ.
ದೆಹಲಿ ಕುರಿತು ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್ ತನ್ನ ನಿಲುವು ವ್ಯಕ್ತಪಡಿಸುವಂತೆ ಆಪ್ ಅಂತಿಮ ಗಡುವು ನೀಡಿದೆ. ಕಾಂಗ್ರೆಸ್ ಪಕ್ಷವು ಮತ್ತಷ್ಟು ಸಮಯ ಕೇಳಿದ್ದು, ಸಂಸತ್ ಅಧಿವೇಶನಕ್ಕೂ ಮುನ್ನ ನಿಲುವು ಪ್ರಕಟಿಸುವುದಾಗಿ ಹೇಳಿದೆ.
ಇಂದಿನ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿ ಕಾಂಗ್ರೆಸ್ನದು ಭಾರತ್ ಜೋಡೋ ಸಿದ್ಧಾಂತವಾದರೆ, ಬಿಜೆಪಿಯದು ಭಾರತ್ ತೋಡೊ ಸಿದ್ಧಾಂತವಾಗಿದೆ. ಕರ್ನಾಟಕದಂತೆ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಚತ್ತೀಸ್ಗಢ ಚುನಾವಣೆಗಳಲ್ಲಿ ನಾವು ಗೆಲ್ಲುತ್ತೇವೆ. 2024ರಲ್ಲಿ ಬಿಜೆಪಿ ಸೋಲಿಸುವ ಶಕ್ತಿ ನಮಗಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಪಕ್ಷಗಳ ಪ್ರಮುಖರು ಮಾತನಾಡಿ, ಬಿಜೆಪಿಯ ಸರ್ವಾಧಿಕಾರಿ ವರ್ತನೆಯ ವಿರುದ್ಧ ವಿಪಕ್ಷಗಳು ಒಗ್ಗಟ್ಟಾಗಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದ್ದಾರೆ. ಮುಂದಿನ ಸಭೆಗಳಲ್ಲಿ ಸೀಟು ಹಂಚಿಕೆ ವಿಷಯ ಚರ್ಚೆಗೆ ಬರಬಹುದು ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ದು ‘ಭಾರತ್ ಜೋಡೊ’, ಬಿಜೆಪಿಯದ್ದು ಭಾರತ್ ತೋಡೊ ಸಿದ್ದಾಂತ; ಪಾಟ್ನಾ ಸಭೆಯಲ್ಲಿ ರಾಹುಲ್