ಪೂಂಛ್ ಜಿಲ್ಲೆಯ ಸುರನ್ಕೋಟೆ ಬಳಿ ಸೇನೆಯ ವಶದಲ್ಲಿದ್ದ ಮೂವರು ನಾಗರಿಕರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರು ಸೇನಾಧಿಕಾರಿಗಳು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದಾಗಿ ಪೂಂಛ್ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯನ್ನು ಪಿಡಿಪಿ ಸೇರಿದಂತೆ ಹಲವು ಪಕ್ಷಗಳು ಖಂಡಿಸಿದೆ. ಇದೀಗ ಮೃತರ ಕಟುಂಬಸ್ಥರನ್ನು ಭೇಟಿಗೆ ಮುಂದಾಗಿದ್ದ ಜಮ್ಮು-ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಸುರನ್ಕೋಟೆಗೆ ಭೇಟಿ ನೀಡದಂತೆ ಬಲವಂತವಾಗಿ ಗೃಹಬಂಧನದಲ್ಲಿ ಇರಿಸಲಾಗಿದೆ. ಅವರು ಪರಿಸ್ಥಿತಿಯನ್ನು ತಿಳಿಯಲು ಮತ್ತು ಸೇನಾ ಕಸ್ಟಡಿಯಲ್ಲಿ ಕೊಲ್ಲಲ್ಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ನೀಡುವ ಗುರಿಯನ್ನು ಹೊಂದಿದ್ದರು ಎಂದು ಪಿಡಿಪಿ ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ತಿಳಿಸಿದೆ.
ಮೆಹಬೂಬಾ ಮುಫ್ತಿ ಅವರ ಅನ್ಯಾಯದ ಗೃಹಬಂಧನವನ್ನು ಪಿಡಿಪಿ ತೀವ್ರವಾಗಿ ಖಂಡಿಸುತ್ತದೆ. ಅವರ ನಿವಾಸದ ಗೇಟ್ಗಳಿಗೆ ಸೀಲ್ ಮಾಡಿರುವುದು ಮತ್ತು ಅವರ ಸುರನ್ಕೋಟೆ ಭೇಟಿಗೆ ಅಡ್ಡಿಯುಂಟುಮಾಡಿರುವುದು ಅನಗತ್ಯ. ಇದನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದು ಪಿಡಿಪಿ ಹೇಳಿಕೊಂಡಿದೆ.
ಈ ಮೊದಲು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಮೆಹಬೂಬಾ ಮುಫ್ತಿ, ಕುಟುಂಬಗಳಿಗೆ ಮಾಹಿತಿ ನೀಡದೆ ಹೆಚ್ಚಿನ ಯುವಕರನ್ನು ಭದ್ರತಾ ಪಡೆಗಳು ಬಂಧಿಸಿರುವ ಕಾರಣ ಮಧ್ಯಪ್ರವೇಶಿಸುವಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಒತ್ತಾಯಿಸಿದ್ದರು. ಸೇನೆಯು ತಾಣಮಂಡಿ ಪ್ರದೇಶದ ಬಾಂಗಿಯಾದಿಂದ ನಾಗರಿಕರನ್ನು ವಶಕ್ಕೆ ತೆಗೆದುಕೊಂಡಿದೆ ಮತ್ತು ಅವರ ಬಗ್ಗೆ ಮಾಹಿತಿಯನ್ನು ಮುಚ್ಚಿಡುತ್ತಿದೆ. ನಾಗರಿಕರಿಗೆ ಚಿತ್ರಹಿಂಸೆ ನೀಡಿದ ಹತ್ಯೆಯ ಈ ಘಟನೆ ಬಳಿಕ ಅವರ ಕುಟುಂಬಸ್ತರು ಮತ್ತಷ್ಟು ಆತಂಕಿತರಾಗಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ಅವರನ್ನು ನೋಡಲು ಅವಕಾಶ ನೀಡುತ್ತಿಲ್ಲ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಮೆಹಬೂಬಾ ಮುಫ್ತಿ ಆಗ್ರಹಿಸಿದ್ದರು.
ಇದು ಬೇರೆ ಯಾವುದೇ ಸರ್ಕಾರದ ಅಡಿಯಲ್ಲಿ ಸಂಭವಿಸಿದ್ದರೆ, ಗೋದಿ ಮಾದ್ಯ ಮವು ಪ್ರಶ್ನೆಗಳನ್ನು ಎತ್ತುತ್ತಿತ್ತು. ಅವರು ಚಿತ್ರಹಿಂಸೆಗೊಳಗಾದ 15 ಜನರನ್ನು ತಮ್ಮ ಮನೆಗಳಿಂದ ಎಳೆದುಕೊಂಡು ಹೋಗಿದ್ದರು. ಅವರಲ್ಲಿ ಮೂವರು ಈಗಾಗಲೇ ಸಾವನ್ನಪ್ಪಿದ್ದಾರೆ. ಈ ನಯಾ ಕಾಶ್ಮೀರ ಹೇಗಿದೆ? ಅಲ್ಲಿ ಸೈನಿಕರಾಗಲಿ ಅಥವಾ ಸಾಮಾನ್ಯ ಜನರಾಗಲಿ ಸುರಕ್ಷಿತವಾಗಿಲ್ಲ ಎಂದು ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದರು.
ಏನಿದು ಘಟನೆ?
ಜಮ್ಮು-ಕಾಶ್ಮೀರದ ಪೂಂಛ್ನಲ್ಲಿ ಐವರು ಯೋಧರು, ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಘಟನೆಗೆ ಸಂಬಂಧಿಸಿ ವಶಕ್ಕೆ ತೆಗೆದುಕೊಂಡ 8 ಮಂದಿಯಲ್ಲಿ ಮೂವರು ನಾಗರಿಕರು ಸೇನೆಯ ವಶದಲ್ಲಿ ಮೃತಪಟ್ಟಿದ್ದರು. ಘಟನೆಯಲ್ಲಿ ಚಿತ್ರಹಿಂಸೆಗೆ ಒಳಗಾದ ಐವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತ ಪ್ರಸಾರವಾಗುತ್ತಿರುವ ವೀಡಿಯೋಗಳು ಹತ್ಯೆಗೊಳಗದವರಿಗೆ ಚಿತ್ರಹಿಂಸೆ ನೀಡಿರುವುದನ್ನು ಬಹಿರಂಗಪಡಿಸುತ್ತದೆ.
ಸಫೀರ್ ಹುಸೇನ್ (48), ಮೊಹಮ್ಮದ್ ಶೋಕತ್ (28) ಮತ್ತು ಶಬ್ಬೀರ್ ಅಹ್ಮದ್ (25) ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತರ ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರು ಸೇನಾ ಸಿಬ್ಬಂದಿಗಳು ಥಳಿಸಿ ಹತ್ಯೆ ಮಾಡಿದ್ದಾರೆಂದು ಆರೋಪಿಸಿದ್ದು, ಸಂಸತ್ರಸ್ತರು ಸಮವಸ್ತ್ರಧಾರಿ ಸಿಬ್ಬಂದಿಗಳ ಬಳಿ ಜೀವಕ್ಕಾಗಿ ಅಂಗಲಾಚುವ ವಿಡಿಯೋಗಳನ್ನು ನೋಡಿರುವುದಾಗಿ ಹೇಳಿದ್ದಾರೆ.
ಘಟನೆ ಬಳಿಕ ಪೂಂಛ್ನಲ್ಲಿ ಭಾರೀ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಕರ್ಪ್ಯೂ ವಿಧಿಸಲಾಗಿದೆ. ಇಂಟರ್ನೆಟ್ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿ ಜಮ್ಮು-ಕಾಶ್ಮೀರದ ಆಡಳಿತವು ಸಾವಿಗೆ ಕಾರಣವನ್ನು ಹೇಳಿಲ್ಲ. ಆದರೆ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ ಮತ್ತು ಪರಿಹಾರವನ್ನು ಘೋಷಿಸಲಾಗಿದೆ ಎಂದು ಹೇಳಿದೆ. ಭಾನುವಾರ ರಾತ್ರಿ ಅಪರಿಚಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಎಫ್ಐಆರ್ನ್ನು ದಾಖಲಿಸಲಾಗಿದೆ.
PDP vehemently condemns the unjust house arrest of party chief @MehboobaMufti. The sealing of gates and restrictions obstructing her Surankote visit are unwarranted and demands strong opposition. pic.twitter.com/nLE0S9k3Ch
— J&K PDP (@jkpdp) December 25, 2023