ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಕ್ರಿಸ್ಮಸ್ ಪ್ರಯುಕ್ತ ದೇಶದಾದ್ಯಂತ ಜೈಲುಗಳಲ್ಲಿದ್ದ ಒಂದು ಸಾವಿರಕ್ಕೂ ಅಧಿಕ ಖೈದಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಅಲ್-ಜಝೀರಾ ವರದಿ ಮಾಡಿದೆ.
ಕ್ರಿಸ್ಮಸ್ ದಿನವಾದ ಇಂದು (ಡಿ.25) 1,004 ಜನರನ್ನು ದೇಶದ ವಿವಿಧ ಜೈಲುಗಳಿಂದ ಬಿಡುಗಡೆ ಮಾಡಲಾಗಿದೆ. ಇವರೆಲ್ಲ ಶಿಕ್ಷೆ ಅವಧಿ ಮುಗಿದರೂ ದಂಡ ಪಾವತಿಸಲಾಗದೆ ಜೈಲಿನಲ್ಲೇ ಉಳಿದಿದ್ದರು ಎಂದು ಜೈಲು ಆಯುಕ್ತ ಗಾಮಿನಿ ಡಿಸಾನಾಯಕೆ ತಿಳಿಸಿದ್ದಾರೆ.
ಶ್ರೀಲಂಕವು ಬೌದ್ಧ ಬಹುಸಂಖ್ಯಾತ ರಾಷ್ಟ್ರವಾಗಿದೆ. ಬುದ್ಧನ ಜನನ, ಜ್ಞಾನೋದಯ ಮತ್ತು ಮರಣವನ್ನು ಆಚರಿಸುವ ವೆಸಕ್ ದಿನದ ಪ್ರಯುಕ್ತ ಕಳೆದ ಮೇ ತಿಂಗಳಲ್ಲಿ ಇದೇ ರೀತಿ ಹಲವು ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಕ್ರಿಸ್ಮಸ್ ಮುನ್ನಾದಿನದಂದು ಕೊನೆಗೊಂಡ ಒಂದು ವಾರದ ಮಿಲಿಟರಿ-ಬೆಂಬಲಿತ ಮಾದಕ ದ್ರವ್ಯ-ವಿರೋಧಿ ಡ್ರೈವ್ನಲ್ಲಿ ಪೊಲೀಸರು ಸುಮಾರು 15,000ದಷ್ಟು ಜನರನ್ನು ಬಂಧಿಸಿದ ಬೆನ್ನಲ್ಲೇ ಖೈದಿಗಳಿಗೆ ಕ್ಷಮಾದಾನ ನೀಡಲಾಗಿದೆ.
ಮಾದಕ ದ್ರವ್ಯ-ವಿರೋಧಿ ಡ್ರೈವ್ನಲ್ಲಿ 13,666 ಶಂಕಿತರನ್ನು ಬಂಧಿಸಲಾಗಿದ್ದು, ಈ ಪೈಕಿ ಸುಮಾರು 1,100 ಖಚಿತ ಮಾದಕ ವ್ಯಸನಿಗಳನ್ನು ಮಿಲಿಟರಿ ನಡೆಸುವ ಕಡ್ಡಾಯ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಮಾದಕ ದ್ರವ್ಯ-ವಿರೋಧಿ ಡ್ರೈವ್ನ ಬಳಿಕ ದ್ವೀಪ ರಾಷ್ಟ್ರದ ಜೈಲುಗಳು ಕಿಕ್ಕಿರಿದು ತುಂಬಿವೆ. ಹಾಗಾಗಿ ಕ್ರಿಸ್ಮಸ್ ನೆಪದಲ್ಲಿ ಶಿಕ್ಷೆ ಪೂರ್ತಿಗೊಳಿಸಿದ ಖೈದಿಗಳಿಗೆ ಕ್ಷಮಾದಾನ ನೀಡಲಾಗಿದೆ.
ಕಳೆದ ಶುಕ್ರವಾರದ ಹೊತ್ತಿಗೆ, ಸುಮಾರು 11 ಸಾವಿರ ಖೈದಿಗಳನ್ನು ಇಡಲು ಸಾಮರ್ಥ್ಯವಿರು ಶ್ರೀಲಾಂಕದ ಒಟ್ಟು ಜೈಲು ವ್ಯವಸ್ಥೆಯಲ್ಲಿ 30 ಸಾವಿರಕ್ಕೂ ಅಧಿಕ ಖೈದಿಗಳು ತುಂಬಿದ್ದರು. ಇದು ಸರ್ಕಾರಕ್ಕೆ ತಲೆ ನೋವಾಗಿ ಮಾರ್ಪಟ್ಟಿತ್ತು ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ : ಗಾಝಾದಲ್ಲಿ ಇಸ್ರೇಲ್ ಮಾರಣಹೋಮ: ಯೇಸುಕ್ರಿಸ್ತನ ಜನ್ಮಸ್ಥಳದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ ರದ್ದು