ಹೈದರಾಬಾದ್ನ ಪಶುವೈದ್ಯೆಯ ಅತ್ಯಾಚಾರ, ಕೊಲೆಯ ನಾಲ್ಕು ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಪೊಲೀಸರ ವಿರುದ್ಧ ದೂರು ದಾಖಲಿಸಿ, ವಿಚಾರಣೆ ನಡೆಸುವಂತೆ ಕೋರಿ ಸುಪ್ರೀಂನಲ್ಲಿ ದೂರು ದಾಖಲಾಗಿದೆ ಎಂದು ಎನ್ಎನ್ಐ ವರದಿ ಮಾಡಿದೆ.
ಎನ್ಕೌಂಟರ್ನಲ್ಲಿ ಭಾಗಿಯಾದ ಎಲ್ಲಾ ಹತ್ತು ಪೊಲೀಸರ ಮೇಲೆ ವಯಕ್ತಿಕ ಎಫ್ಐಆರ್ ದಾಖಲಾಗಬೇಕು, ಸಮರ್ಪಕ ನ್ಯಾಯಾಂಗ ತನಿಖೆಯಾಗಬೇಕು ಮತ್ತು ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾದ ದೂರಿನಲ್ಲಿ ಮನವಿ ಮಾಡಲಾಗಿದೆ.
ಇದೇ ಸಮಯದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರು ತನಿಖೆಗಾಗಿ ಹೈದರಾಬಾದ್ಗೆ ಆಗಮಿಸಿದ್ದಾರೆ. ಕೇಂದ್ರ ಗೃಹ ಇಲಾಖೆ ಮತ್ತು ತೆಲಂಗಾಣ ಸರ್ಕಾರದ ಕಾರ್ಯದರ್ಶಿಯವರಿಂದ ಮಾಹಿತಿ ಪಡೆದಿರುವ ಅವರು ವಿಚಾರಣೆ ಆರಂಭಿಸಲಿದ್ದಾರೆ.
ನಿನ್ನೆ ಪತ್ರಿಕಾಗೋಷ್ಟಿ ನಡೆಸಿದ ಎನ್ಕೌಂಟರ್ ನಡೆಸಿದ ತಂಡದ ಪ್ರಮುಖರಾಗಿದ್ದ ಸಜ್ಜನರ್ ಕಾನೂನು ತನ್ನ ಕೆಲಸ ಮುಗಿಸಿದೆ ಎಂದು ತಿಳಿಸಿದ್ದರು. ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದರು ಮತ್ತು ನಮ್ಮ ಮೇಲೆ ಹಲ್ಲೆಗೆ ಮುಂದಾದ ಕಾರಣ ಆತ್ಮರಕ್ಷಣೆಗಾಗಿ ಎನ್ಕೌಂಟರ್ ಮಾಡಬೇಕಾಯ್ತು ಎಂದು ವಾದಿಸಿದ್ದರು.
ಎನ್ಕೌಂಟರ್ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಸಮರ್ಪಕ ವಿಚಾರಣೆ ನಡೆಸಿ ನ್ಯಾಯಾಲಯ ಶಿಕ್ಷೆ ಕೊಡಬೇಕಿತ್ತು ಎಂಬ ವಾದಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರು ತನಿಖೆ ನಡೆಸಲಿದ್ದಾರೆ.