Homeಮುಖಪುಟಪಿಎಫ್‌ಐ, ಜನಸಂಖ್ಯಾ ಹೆಚ್ಚಳ ಕುರಿತು ಸುಳ್ಳು ಸುದ್ದಿ ಪ್ರಸಾರ; ಟೈಮ್ಸ್‌ ನೌ, ಝೀ ನ್ಯೂಸ್‌ ವಿರುದ್ಧ...

ಪಿಎಫ್‌ಐ, ಜನಸಂಖ್ಯಾ ಹೆಚ್ಚಳ ಕುರಿತು ಸುಳ್ಳು ಸುದ್ದಿ ಪ್ರಸಾರ; ಟೈಮ್ಸ್‌ ನೌ, ಝೀ ನ್ಯೂಸ್‌ ವಿರುದ್ಧ ಎನ್‌ಬಿಡಿಎಸ್‌ಎ ಆದೇಶ

ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ‘ನ್ಯೂಸ್ 18 ಇಂಡಿಯಾ’ ಹಿಂದಿ ಸುದ್ದಿ ವಾಹಿನಿಗೆ ದಂಡ ವಿಧಿಸಲಾಗಿದೆ

- Advertisement -
- Advertisement -

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪ್ರತಿಭಟನೆ ಮತ್ತು ದೇಶದ ಜನಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೋಮು ಬಣ್ಣ ಕಟ್ಟಿ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಕಾರಣ ‘ಟೈಮ್ಸ್ ನೌ’ ಮತ್ತು ‘ಝೀ ನ್ಯೂಸ್’ ವಿರುದ್ಧ ‘ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ’ (ಎನ್‌ಬಿಡಿಎಸ್‌ಎ) ಸೋಮವಾರ ಆದೇಶ ಹೊರಡಿಸಿದೆ.

ಮುಂದಿನ ದಿನಗಳಲ್ಲಿ ಇಂತಹ ವಿಷಯಗಳ ಕುರಿತು ವರದಿ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂದು ಟೈಮ್ಸ್‌ ನೌ ಚಾನೆಲ್‌ಗೆ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಪ್ರಸಾರದ ವೀಡಿಯೊ ಮತ್ತು ಅದರ ಎಲ್ಲಾ ಹೈಪರ್‌ಲಿಂಕ್‌ಗಳನ್ನು ತೆಗೆದುಹಾಕುವಂತೆ ನಿರ್ದೇಶನವನ್ನೂ ನೀಡಿದೆ.

ಸೆಪ್ಟೆಂಬರ್ 24 ರಂದು ಚಾನೆಲ್ ಪ್ರಸಾರ ಮಾಡಿದ ಸುದ್ದಿ ವರದಿಗೆ ಸಂಬಂಧಿಸಿದಂತೆ ಎನ್‌ಬಿಡಿಎಸ್‌ಎ ಈ ಆದೇಶವನ್ನು ನೀಡಿದೆ.

ಇಸ್ಲಾಮಿಕ್ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಪುಣೆಯಲ್ಲಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಲಾಗಿದೆ ಎಂದು ಸುದ್ದಿ ಪ್ರಸಾರ ಮಾಡಲಾಗಿತ್ತು. ಆದರೆ ನಂತರದಲ್ಲಿ ಸತ್ಯಾಂಶ ಹೊರಬಿದ್ದಿತ್ತು.

ದೂರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಟೈಮ್ಸ್‌ ನೌ ಚಾನೆಲ್‌, “ಎಎನ್‌ಐ, ಪಿಟಿಐ ಸುದ್ದಿ ಸಂಸ್ಥೆಗಳು ಸೇರಿದಂತೆ ವಿವಿಧ ಮೂಲಗಳಿಂದ, ಸ್ವತಂತ್ರ ವರದಿಗಾರರಿಂದ ಪಡೆದ ಮಾಹಿತಿಯನ್ನು ಆಧರಿಸಿ ನಾವು ಸುದ್ದಿ ಪ್ರಕಟಿಸಿದ್ದೇವೆ. ನಮ್ಮ ಸಂಸ್ಥೆಯ ವರದಿಗಾರ ಸ್ಥಳದಲ್ಲಿ ಇರಲಿಲ್ಲ” ಎಂದು ಸಮರ್ಥನೆ  ನೀಡಿದೆ.

ಆದರೆ ಸೆ.24ರ ಬೆಳಗ್ಗೆ 10.06ರ ಸಮಯದಲ್ಲಿ ಸುದ್ದಿ ಪ್ರಸಾರವಾಗಿದ್ದು, “ಈ ಕುರಿತು ವರದಿ ಮಾಡಿರುವುದು ನಾವೇ ಮೊದಲು” ಎಂದು ಟೈಮ್ಸ್‌ ನೌ ತನ್ನ ತನ್ನ ವರದಿಯಲ್ಲಿ ಹಾಗೂ ವಿಚಾರಣೆ ವೇಳೆ ಒಪ್ಪಿಕೊಂಡಿದೆ ಎಂದು ಸುದ್ದಿ ನಿಯಂತ್ರಣ ಸಂಸ್ಥೆ ಉಲ್ಲೇಖಿಸಿದೆ.

“ಹಲವಾರು ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ಗಳು ಮಾಡಿರುವ ವರದಿಗಳನ್ನು ಪರಿಶೀಲಿಸಿದ್ದೇವೆ. ಅಂದು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಪಿಎಫ್‌ಐ ಕೂಗಿಲ್ಲ. ‘ಪಿಎಫ್‌ಐ ಜಿಂದಾಬಾದ್’ ಎಂಬ ಘೋಷಣೆಗಳನ್ನು ಪ್ರತಿಭಟನೆಯ ಸಮಯದಲ್ಲಿ ಕೂಗಲಾಗಿದೆ” ಎಂದು ತನ್ನ ಆದೇಶದಲ್ಲಿ ಎನ್‌ಬಿಡಿಎಸ್‌ಎ ಸ್ಪಷ್ಟಪಡಿಸಿದೆ.

“News Break Here First ‘Pakistan Zindabad’ slogans at PFI stir” (ಪಿಎಫ್‌ಐನಿಂದ ಪಾಕಿಸ್ತಾನ್‌ ಜಿಂದಾಬಾದ್‌, ನಮ್ಮಲ್ಲೇ ಮೊದಲು), “Pak slogans by PFI workers” (ಪಿಎಫ್‌ಐ ಕಾರ್ಯಕರ್ತರಿಂದ ಪಾಕಿಸ್ತಾನ್‌ ಜಿಂದಾಬಾದ್‌) ಮತ್ತು “Pak Zindabad slogans raised” (ಪಾಕ್‌ ಜಿಂದಾಬಾದ್‌ ಘೋಷಣೆ ಕೂಗಲಾಗಿದೆ) ಎಂಬ ಟಿಕ್ಕರ್‌ಗಳನ್ನು ಬಳಸಿದ್ದು ಮಾತ್ರವಲ್ಲದೆ, ಕಾರ್ಯಕ್ರಮ ನಿರೂಪಕರು ಇದಕ್ಕೆ ಒತ್ತು ನೀಡಿದ್ದರು ಎಂದು ತನ್ನ ಆದೇಶದಲ್ಲಿ ಪ್ರಾಧಿಕಾರ ಹೇಳಿದೆ.

ವೀಡಿಯೊದಲ್ಲಿ ತೋರಿಸಿರುವ ಘೋಷಣೆಗಳ ಬಗ್ಗೆ ಖಚಿತವಾಗಿ ತಿಳಿಯದಿದ್ದರೆ ಟೈಮ್ಸ್ ನೌ ಈ ವಿಷಯವನ್ನು ವರದಿ ಮಾಡುವಲ್ಲಿ ಜಾಗರೂಕರಾಗಿರಬೇಕು ಮತ್ತು ವೀಡಿಯೊದ ಸತ್ಯಾಸತ್ಯತೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕಿತ್ತು ಎಂದು ಸುದ್ದಿ ನಿಯಂತ್ರಣ ಸಂಸ್ಥೆ ಹೇಳಿದೆ.

ಜನಸಂಖ್ಯಾ ಸ್ಫೋಟಕ್ಕೆ ಕೋಮು ಬಣ್ಣ ನೀಡಿದ ಝೀ ನ್ಯೂಸ್: ಎನ್‌ಬಿಡಿಎಸ್‌ಎ

ದೇಶದ ಜನಸಂಖ್ಯೆ ಏರಿಕೆ ಸಂಬಂಧ ವರದಿ ಮಾಡುವಾಗ ಮುಸ್ಲಿಂ ಸಮುದಾಯವನ್ನು ‘ಝೀ ನ್ಯೂಸ್’ ಟಾರ್ಗೆಟ್ ಮಾಡಿದೆ ಮತ್ತು ಈ ವಿಷಯಕ್ಕೆ ಕೋಮು ಬಣ್ಣವನ್ನು ನೀಡಲು ಅಂಕಿಅಂಶಗಳನ್ನು ಆಯ್ದು ಪ್ರಸಾರ ಮಾಡಿದೆ ಎಂದು ಎನ್‌ಬಿಡಿಎಸ್‌ಎ ತಿಳಿಸಿದೆ.

ಈ ಸುದ್ದಿಯು ವಸ್ತುನಿಷ್ಠತೆ ಮತ್ತು ತಟಸ್ಥತೆಯನ್ನು ಹೊಂದಿಲ್ಲ. ಏಕೆಂದರೆ ಜನಸಂಖ್ಯೆಯ ಬೆಳವಣಿಗೆಗೆ ಕೇವಲ ಒಂದು ಧರ್ಮವನ್ನು ಆರೋಪಿಸಲಾಗಿದೆ. “ಮುಸ್ಲಿಮರು ಒಂದೆಡೆ ಸೇರಿದ, ವಿಷಯಕ್ಕೆ ಸಂಬಂಧವಿಲ್ಲದ ದೃಶ್ಯಗಳನ್ನು ಪ್ರಸಾರ ಮಾಡುವ ಮೂಲಕ ಮತ್ತು ಹಿಂದೂ-ಮುಸ್ಲಿಂ ಜನಸಂಖ್ಯೆಯ ಅಂಕಿಅಂಶಗಳನ್ನು ಆಯ್ದು ಹಂಚಿಕೊಳ್ಳುವ ಮೂಲಕ, ಜನಸಂಖ್ಯಾ ಸ್ಫೋಟದ ವಿಷಯಕ್ಕೆ ಕೋಮು ಬಣ್ಣ ನೀಡಲಾಗಿದೆ” ಎಂದು ತನ್ನ ಆದೇಶದಲ್ಲಿ ಎನ್‌ಬಿಡಿಎಸ್‌ಎ ಬೇಸರ ವ್ಯಕ್ತಪಡಿಸಿದೆ.

ಇದನ್ನೂ ಓದಿರಿ: ಸರ್ಕಾರದ ವಿರುದ್ಧ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಇಂದಿನಿಂದ ರಾಜ್ಯದಲ್ಲಿ ಸರ್ಕಾರಿ ಸೇವೆಗಳು ಬಹುತೇಕ ಬಂದ್

ಭವಿಷ್ಯದಲ್ಲಿ ಇಂತಹ ವರದಿಗಳನ್ನು ಪ್ರಸಾರ ಮಾಡದಂತೆ ಝೀ ನ್ಯೂಸ್‌ಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿರುವ ಸಂದೇಶವನ್ನು ಪ್ರಸಾರ ಮಾಡುವಂತೆ ಝೀ ನ್ಯೂಸ್‌ ಚಾನೆಲ್‌ಗೆ ನಿರ್ದೇಶನವನ್ನೂ ನೀಡಲಾಗಿದೆ. ಕಾರ್ಯಕ್ರಮದ ವೀಡಿಯೊ ಮತ್ತು ಅದರ ಎಲ್ಲಾ ಹೈಪರ್‌ಲಿಂಕ್‌ಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ.

ನ್ಯೂಸ್‌ 18ಗೆ ದಂಡ

ಸುದ್ದಿ ನಿರೂಪಕ ಅಮನ್ ಚೋಪ್ರಾ ಅವರು ನಡೆಸಿಕೊಟ್ಟ ನಾಲ್ಕು ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ‘ನ್ಯೂಸ್ 18 ಇಂಡಿಯಾ’ ಹಿಂದಿ ಸುದ್ದಿ ವಾಹಿನಿಗೆ ಸುದ್ದಿ ನಿಯಂತ್ರಣ ಸಂಸ್ಥೆ ಸೋಮವಾರ ದಂಡ ವಿಧಿಸಿದೆ.

ಮುಸ್ಲಿಮರನ್ನು ಸಾರ್ವಜನಿಕವಾಗಿ ಥಳಿಸುವುದನ್ನು ವೈಭವೀಕರಿಸುವುದರಿಂದ ಹಿಡಿದು, ಸಮುದಾಯದಲ್ಲಿ ಜನಸಂಖ್ಯೆ ಹೆಚ್ಚಿದೆ ಎಂದು ಆರೋಪಿಸುವವರೆಗೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...