ಕೆಸಿಆರ್ ಪಕ್ಷವು ಎನ್ಡಿಎ ಮೈತ್ರಿಕೂಟವನ್ನು ಸೇರಲು 2020ರಲ್ಲಿ ಬಯಸಿತ್ತು, ಆ ಬೇಡಿಕೆಗೆ ತಾನು ನಿರಾಕರಿಸಿದ್ದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು, ಪ್ರಧಾನಿ ಮೋದಿ ಅವರು ‘ವಾಟ್ಸ್ ಆ್ಯಪ್ ಯುನಿವರ್ಸಿಟಿಯ ಕುಲಪತಿ’ ಎಂದು ತಿರುಗೇಟು ನೀಡಿದ್ದಾರೆ.
”ಪಿಎಂ ಮೋದಿಯವರ ಬಿಜೆಪಿ ದೊಡ್ಡ ‘ಸುಳ್ಳುʼ ಮತ್ತು ‘ಮೋಸʼದ ಫ್ಯಾಕ್ಟರಿಯಾಗಿದ್ದು, ಅದು ಹಸಿ ಸುಳ್ಳುಗಳನ್ನು ಹೇಳುತ್ತದೆ. ಮೋದಿಯಂತಹ ಮೋಸಗಾರರ ಜೊತೆ ಎಂದಿಗೂ ಬೆರೆಯದ ಹೋರಾಟಗಾರ ಕೆಸಿಆರ್” ಎಂದು ಟ್ವೀಟ್ ಮಾಡಿದ್ದಾರೆ.
”ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಪೂರ್ಣ ಸುಳ್ಳು ಹೇಳುವ ಮೂಲಕ ತಮ್ಮ ಸ್ಥಾನಮಾನದ ಬೆಲೆಯನ್ನು ಕುಗ್ಗಿಸಿಕೊಂಡಿದ್ದಾರೆ” ಎಂದು ಕೆಟಿಆರ್ ಟೀಕಿಸಿದರು.
”ಮಾನಸಿಕ ಸ್ಥಿಮಿತ ಕಳೆದುಕೊಂಡು ಎನ್ಡಿಎ ಸೇರಲು, ನಾವು ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡಿಲ್ಲ. ನಮ್ಮ ಪಕ್ಷ ಮತ್ತು ಅದರ ನಾಯಕತ್ವವು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಿಮ್ಮ ಅನುಮತಿ ಏಕೆ ಬೇಕು?” ಎಂದು ಕೆಟಿಆರ್ ಪ್ರಶ್ನಿಸಿದ್ದಾರೆ.
”ಪ್ರಧಾನಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವಾಗ, ಬಿಸಿಸಿಐ ಕಾರ್ಯದರ್ಶಿ ಸ್ಥಾನದಲ್ಲಿ ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸುತ್ತಿರುವ ಜಯ್ ಶಾ ಅವರ ನೇಮಕದ ಬಗ್ಗೆಯೂ ಕೇಳಬೇಕು. ತೆಲಂಗಾಣಕ್ಕೆ ಭೇಟಿ ನೀಡಲು ಬಿಜೆಪಿ ಪ್ರವಾಸಿಗರಿಗೆ ಸ್ವಾಗತವಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿತ್ತು ಮತ್ತು ಈ ಬಾರಿ 110 ಸ್ಥಾನಗಳಲ್ಲಿ ಠೇವಣಿ ಕಳೆದುಕೊಳ್ಳುತ್ತದೆ, ಬಿಜೆಪಿ ಇಲ್ಲಿ ಒಂದು ಸಂಸದ ಸ್ಥಾನವನ್ನು ಸಹ ಗೆಲ್ಲುವುದಿಲ್ಲ” ಎಂದು ಕೆಟಿಆರ್ ಹೇಳಿದರು.
ಮುಂಬರುವ ತೆಲಂಗಾಣದ ರಾಜ್ಯ ಚುನಾವಣೆಗಾಗಿ ಬಿಜೆಪಿ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಕಳೆದ ಮೂರು ದಿನಗಳಲ್ಲಿ ಮೋದಿಯವರು ತಮ್ಮ ಎರಡನೇ ಸಾರ್ವಜನಿಕ ಸಭೆಯನ್ನು ನಡೆಸಿದರು. ಆಗಸ್ಟ್ನಲ್ಲಿ ಬಿಆರ್ಎಸ್ ರಾಜ್ಯದ 119 ಸ್ಥಾನಗಳ ಪೈಕಿ 115 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎರಡೂ ಪಕ್ಷಗಳ ನಡುವೆ ಪಕ್ಷಾಂತರದ ಅಲೆ ಆರಂಭವಾಗಿದೆ. ಮುಂದಿನ 10 ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಪಕ್ಷಗಳು ಎನ್ಡಿಎ ತೊರೆದಿವೆ ಎಂದು ಕೆಟಿಆರ್ ಮಂಗಳವಾರ ಹೇಳಿದ್ದಾರೆ. ”ಶಿವಸೇನೆ, ಟಿಡಿಪಿ (ತೆಲುಗು ದೇಶಂ ಪಕ್ಷ), ಜೆಡಿಯು (ಜನತಾ ದಳ-ಯುನೈಟೆಡ್), ಶಿರೋಮಣಿ ಅಕಾಲಿದಳದಂತಹ ಪಕ್ಷಗಳು ಈಗಾಗಲೇ ಎನ್ಡಿಎ ತೊರೆದಿವೆ ಮತ್ತು ಪ್ರಸ್ತುತ ಸಿಬಿಐ, ಇಡಿ ಮತ್ತು ಐಟಿ ಮಾತ್ರ ಎನ್ಡಿಎ ಭಾಗವಾಗಿದೆ” ಎಂದು ಅವರು ಹೇಳಿದರು.
”ತೆಲಂಗಾಣ ಜನತೆಯ ಆಶೀರ್ವಾದದೊಂದಿಗೆ ಬಿಆರ್ಎಸ್ ಪ್ರಜಾಸತ್ತಾತ್ಮಕವಾಗಿ ಎರಡು ಬಾರಿ ಆಯ್ಕೆಯಾಗಿ ಸರ್ಕಾರ ರಚಿಸಿದೆ. ಈ ಟ್ರೆಂಡ್ ಮುಂದುವರಿಯಲಿದ್ದು, ಕೆಸಿಆರ್ ಶೀಘ್ರದಲ್ಲೇ ಹ್ಯಾಟ್ರಿಕ್ ಸಿಎಂ ಆಗಲಿದ್ದಾರೆ. ಸಿಎಂ ಕೆಸಿಆರ್ ಒಬ್ಬ ಹೋರಾಟಗಾರ, ಅವರು ಸುಳ್ಳು ಹೇಳಲು ಹೆಸರಾದ ಮೋದಿಯಂತಹ ಮೋಸಗಾರರೊಂದಿಗೆ ಯಾವುದೇ ರೀತಿಯ ಸಹವಾಸವನ್ನು ಹೊಂದಲು ಬಯಸುವುದಿಲ್ಲ” ಎಂದು ಎಂದು ಕೆಟಿಆರ್ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ ಪಾಲಿನ 15,000 ಕೋಟಿ ಬಿಡುಗಡೆಗೆ ದೆಹಲಿಯಲ್ಲಿ ಧರಣಿ ಕುಳಿತ ಟಿಎಂಸಿ ಸಂಸದರು