”ರೈಲು ಅಪಘಾತ ಏಕೆ ಸಂಭವಿಸಿತು ಎಂದು ನೀವು ಭಾರತ ಸರ್ಕಾರವನ್ನು ಕೇಳಿದರೆ, ಅವರು 50 ವರ್ಷಗಳ ಹಿಂದೆ ಇದನ್ನು ಕಾಂಗ್ರೆಸ್ ಮಾಡಿತು” ಎಂದು ಹೇಳುತ್ತಾರೆ. ಅವರನ್ನು ನೀವು ಏನೇ ಕೇಳಿದರು ಅವರ ತಕ್ಷಣದ ಪ್ರತಿಕ್ರಿಯೆ ‘ಪೀಚೆ ದೇಖೋ’ ಎನ್ನುವುದಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನ್ಯೂಯಾರ್ಕ್ನಲ್ಲಿ ಭಾರತೀಯ ವಲಸಿಗರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ”ಕಾಂಗ್ರೆಸ್ ತನ್ನ ಆಳ್ವಿಕೆಯಲ್ಲಿ ಸಂಭವಿಸಿದ ರೈಲು ಅಪಘಾತಗಳಿಗೆ ಬ್ರಿಟಿಷರನ್ನು ದೂಷಿಸಲಿಲ್ಲ ಆದರೆ ಸಚಿವರು ಜವಾಬ್ದಾರಿಯನ್ನು ವಹಿಸಿಕೊಂಡರು. ಆದರೆ ಬಿಜೆಪಿ ಮತ್ತು ಆರ್ಎಸ್ಎಸ್ ಭವಿಷ್ಯವನ್ನು ನೋಡಲು ಅಸಮರ್ಥವಾಗಿವೆ, ನೀವು ಏನು ಕೇಳಿದರೂ ಅವರು ಹಿಂದೆ ನೋಡುತ್ತಾರೆ, ರೈಲು ಅಪಘಾತ ಏಕೆ ಸಂಭವಿಸಿತು ಎಂದು ನೀವು ಸರ್ಕಾರವನ್ನು ಕೇಳಿದರೆ, ಅವರು 50 ವರ್ಷಗಳ ಹಿಂದೆ ಇದನ್ನು ಕಾಂಗ್ರೆಸ್ ಮಾಡಿತು ಎಂದು ಹೇಳುತ್ತಾರೆ.
ಎನ್ಸಿಆರ್ಟಿ 10ನೇ ತರಗತಿ ಪಠ್ಯಪುಸ್ತಕದಲ್ಲಿ ನೀವು ಏಕೆ ಆವರ್ತಕ ಕೋಷ್ಟಕ ಮತ್ತು ವಿಕಸನ ಪಠ್ಯ ತಗೆದು ಹಾಕಿದೀರಿ ೆಂದು ಕೇಳಿದರೆ, ಅವರು 60 ವರ್ಷಗಳ ಹಿಂದೆ ಕಾಂಗ್ರೆಸ್ ಮಾಡಿರುವುದನ್ನು ನೋಡಿ ಎಂದು ಅವರ ತಕ್ಷಣದ ಪ್ರತಿಕ್ರಿಯೆ ‘ಪೀಚೆ ದೇಖೋ’ ಎನ್ನುವುದಾಗಿದೆ.
ಒಡಿಶಾದ ಬಾಲಸೋರ್ನಲ್ಲಿ ಬೃಹತ್ ಟ್ರಿಪಲ್-ರೈಲು ಘರ್ಷಣೆಯಲ್ಲಿ ಸುಮಾರು 270 ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡರು. ಸ್ವಾತಂತ್ರ್ಯದ ನಂತರದ ಅತ್ಯಂತ ಮಾರಕ ರೈಲು ಅಪಘಾತಗಳಲ್ಲಿ ಇದು ಒಂದಾಗಿದೆ. ಸಿಗ್ನಲಿಂಗ್ ಮಿಸ್ಟೇಕ್ನಿಂದ ಈ ರೈಲು ಅಪಘಾತ ಸಂಭವಿಸಿದೆ.
ಅಮೆರಿಕದ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅಲ್ಲಿನ ಜಾವಿಟ್ಸ್ ಸೆಂಟರ್ನಲ್ಲಿ ಭಾರತೀಯ-ಅಮೆರಿಕನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಒಡಿಶಾ ರೈಲು ದುರಂತದಲ್ಲಿ ಸಾವಿಗೀಡಾದವರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಭಾರತೀಯ ಸಮಾಜದ ಕತ್ತು ಹಿಸುಕುತ್ತಿದ್ದಾರೆ: ರಾಹುಲ್ ಗಾಂಧಿ
”ನನಗಿನ್ನೂ ನೆನಪಿದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈಲು ಅಪಘಾತವೊಂದು ನಡೆದಿತ್ತು. ”ಆಗ ರೈಲ್ವೇ ಸಚಿವರು ಈಗ ನಡೆದ ಅಪಘಾತಕ್ಕೆ ಬ್ರಿಟಿಷರು ಕಾರಣ ಎಂದು ಹೇಳಿರಲಿಲ್ಲ. ಇದರ ಸಂಪೂರ್ಣ ಹೊಣೆ ನನ್ನದು ಎಂದು ಒಪ್ಪಿಕೊಂಡು ರಾಜೀನಾಮೆ ನೀಡುತ್ತೇನೆ” ಎಂದಿದ್ದರು. ಆದರೆ ಇತ್ತೀಚೆಗೆ ಭಾರತದಲ್ಲಿ ತಪ್ಪುಗಳು ನಡೆದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಕುರಿತು ಟೀಕಿಸಿದ್ದಾರೆ.
‘ಮೋದಿ ಹಿಂಬದಿಯ ಕನ್ನಡಿ ನೋಡಿಕೊಂಡು ಕಾರು ಓಡಿಸುತ್ತಾರೆ’
”ಈಗ ಯೋಚಿಸಿ. ನೀವೆಲ್ಲರೂ ನಿಮ್ಮ ಕಾರುಗಳನ್ನು ಚಲಾಯಿಸಿಕೊಂಡು ಇಲ್ಲಿಗೆ ಬಂದಿದ್ದೀರಿ. ನೀವು ಕೇವಲ ನಿಮ್ಮ ಹಿಂಬದಿಯ ಕನ್ನಡಿ ನೋಡುತ್ತಿದ್ದರೆ ಊಹಿಸಿ. ನಿಮ್ಮ ಕಾರನ್ನು ನೀವು ಹೇಗೆ ಓಡಿಸಬಹುದೇ? ನಿಮಗೆ ಒಂದರ ನಂತರ ಒಂದರಂತೆ ಅಪಘಾತಗಳು ಸಂಭವಿಸುತ್ತವೆ. ಇದು ಸಧ್ಯದ ಭಾರತದ ವಿದ್ಯಮಾನವಾಗಿದೆ” ಎಂದರು.
”ಅವರು (ಪ್ರಧಾನಿ ಮೋದಿ) ಭಾರತವೆಂಬ ಕಾರನ್ನು ಹಿಂಬದಿ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ. ಕಾರು ಅಪಘಾತಗೊಂಡು ನಿಂತಾಗ ಅದು ಏಕೆ ಮುಂದೆ ಸಾಗುತ್ತಿಲ್ಲ ಎಂಬುವುದರ ಬಗ್ಗೆ ಅವರಿಗೆ ಅರಿವಿಲ್ಲ. ಪ್ರಧಾನಿಯಿಂದ ಹಿಡಿದು ಬಿಜೆಪಿಯ ಯಾರೊಬ್ಬರು ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಹಿಂದೆ ಆಗಿ ಹೋಗಿರುವುದರ ಬಗ್ಗೆ ಮಾತ್ರ ಮಾತನಾಡುತ್ತಾರೆ. ಭವಿಷ್ಯದ ಬಗ್ಗೆ ಯೋಚಿಸಲು ಬಿಜೆಪಿ ಮತ್ತು ಆರ್ಎಸ್ಎಸ್ ಅಸಮರ್ಥವಾಗಿವೆ. ಅವರು ಯಾವಾಗಲೂ ಹಿಂದಿನ ಬಗ್ಗೆ ಮಾತನಾಡುತ್ತಾರೆ ಮತ್ತು ಅವರು ಯಾವಾಗಲೂ ಹಿಂದಿನದಕ್ಕಾಗಿ ಯಾರನ್ನಾದರೂ ದೂಷಿಸುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದರು.
”ಭಾರತದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ/ ಆರ್ಎಸ್ಎಸ್ ಪ್ರತಿಪಾದಿಸುವ ಸಿದ್ದಾಂತಗಳ ನಡುವೆ ಹೋರಾಟ ನಡೆಯುತ್ತಿದೆ. ಒಂದು ಕಡೆ ಮಹಾತ್ಮಗಾಂಧಿ ಮತ್ತು ಇನ್ನೊಂದು ಕಡೆಯಲ್ಲಿ ನಾಥರಾಂ ಗೋಡೆ ಇದ್ದಾರೆ” ಎಂದು ಹೇಳಿದರು.