ಕಾಂಗ್ರೆಸ್ನ ಭಾರತ್ ಜೋಡೋ ನ್ಯಾಯ ಯಾತ್ರೆ 4ನೇ ದಿನಕ್ಕೆ ಕಾಲಿಟ್ಟಿದ್ದು, ನಾಗಾಲ್ಯಾಂಡ್ನ ಮೊಕೊಕ್ಚುಂಗ್ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಬೈಕ್ ಸವಾರರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. ಇದಲ್ಲದೆ ಮೋದಿ ವಿರುದ್ದ ವಾಗ್ಧಾಳಿಯನ್ನು ನಡೆಸಿದ್ದಾರೆ. ಮೋದಿ ನಾಗಾಲ್ಯಾಂಡ್ ಜನತೆಗೆ 9 ವರ್ಷಗಳ ಹಿಂದೆ ನಾಗಾ ಒಪ್ಪಂದ ಬಗ್ಗೆ ಸುಳ್ಳು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅಸ್ಸಾಂನ ಬೈಕ್ ಸವಾರ ಶಹವರ್ ಹುಸೇನ್ ಅವರು ರಾಹುಲ್ ಗಾಂಧಿ ಜೊತೆ ಸಮಾಲೋಚನೆ ನಡೆಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನಾವು ಇಬ್ಬರು ಬೈಕ್ಗಳ ಬಗ್ಗೆ ಮಾತ್ರ ಮಾತನಾಡಿದ್ದೇವೆ. ಅವರು ಬೈಕ್ ಸವಾರಿ ಮಾಡುತ್ತಾರೆ. ನಾನು ಬೈಕ್ ರೈಡರ್, ನಾವು ಅವರ ಲಡಾಖ್ ರೈಡಿಂಗ್ ಬಗ್ಗೆಯೂ ಮಾತನಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಆಗಸ್ಟ್ 20 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಸ್ಮರಣಾರ್ಥವಾಗಿ ಕಾಂಗ್ರೆಸ್ ನಾಯಕ ಕಳೆದ ವರ್ಷ ಲಡಾಖ್ನ ಪಾಂಗಾಂಗ್ ಸರೋವರಕ್ಕೆ ಬೈಕ್ ರೈಡ್ ಕೈಗೊಂಡಿದ್ದರು.
ಭಾರತ್ ಜೋಡೋ ನ್ಯಾಯ ಯಾತ್ರೆಯ 4ನೇ ದಿನ ಮೊಕೊಕ್ಚುಂಗ್ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈಶಾನ್ಯ ರಾಜ್ಯಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಭಾರತದ ಇತರ ಭಾಗಗಳಂತೆ ಈಶಾನ್ಯ ರಾಜ್ಯಗಳು ಮುಖ್ಯವಾಗಿದೆ ಎಂಬ ಸಂದೇಶವನ್ನು ನಾವು ಕಳುಹಿಸಲು ಬಯಸಿದ್ದೇವೆ. ಜನಸಂಖ್ಯೆ ಕಡಿಮೆಯಿದ್ದರೂ ಪರವಾಗಿಲ್ಲ, ಆದರೆ ಪ್ರಾಮುಖ್ಯತೆಯು ಒಂದೇ ಆಗಿರಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ನಾಗಾ ಒಪ್ಪಂದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ನಾಗಾಲ್ಯಾಂಡ್ ಜನತೆಗೆ ನೀಡಿದ ಭರವಸೆಗಳನ್ನು ಪ್ರಧಾನಿ ಈಡೇರಿಸಿಲ್ಲ. ನಾಗಾ ಶಾಂತಿ ಒಪ್ಪಂದದ ಕುರಿತಂತೆ ಪ್ರಧಾನಿ ಮೋದಿ ನಾಗಾಲ್ಯಾಂಡ್ ಜನರಿಗೆ ಸುಳ್ಳು ಭರವಸೆ ನೀಡಿ ದ್ರೋಹ ಮಾಡಿದ್ದಾರೆ. ನಿಮ್ಮ ಬಳಿ ಸಮಸ್ಯೆಗೆ ಪರಿಹಾರವಿಲ್ಲದಿದ್ದರೆ ಇದೆ ಎನ್ನುವ ಹಾಗೆ ನಾಟಕ ಮಾಡಬೇಡಿ. ನಮ್ಮ ಪ್ರಧಾನಿ ಮಣಿಪುರಕ್ಕೆ ಹೋಗದಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ಅಸ್ಸಾಂ ಅಭಿವೃದ್ಧಿಯಿಂದ ದೂರ ಉಳಿದಿವೆ. ಇವುಗಳನ್ನು ಮುನ್ನೆಲೆಗೆ ತರುವುದೇ ಕಾಂಗ್ರೆಸ್ನ ಆಶಯವಾಗಿದೆ ಎಂದು ಹೇಳಿದರು.
ನಾಗಾಲ್ಯಾಂಡ್ನ ಕೈಗಾರಿಕೆಗಳ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ವಿದ್ಯುತ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಒಂದು ಮಗುವಿನ ಜೊತೆ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ನಾಗಾಲ್ಯಾಂಡ್ನ ಒಂದು ಮಗು ಸ್ಪರ್ಧಿಸಲು ಸಾಧ್ಯವೇ? ಇಬ್ಬರು ಮಾತ್ರ ದೇಶವನ್ನು ನಡೆಸುತ್ತಿದ್ದಾರೆ. ದೇಶದಲ್ಲಿರುವ 500 ದೊಡ್ಡ ಕಂಪನಿಗಳಲ್ಲಿ ಒಂದೇ ಒಂದು ನಾಗಾಲ್ಯಾಂಡ್ನ ಜನರಿಗೆ ಸೇರಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ದೇಶದ ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಆಚಾರಗಳನ್ನು ಅಗೌರವಿಸುತ್ತಿದ್ದಾರೆ. ನೀವು (ನಾಗಾಲ್ಯಾಂಡ್ನ ಜನರು) ಏನು ತಿನ್ನುತ್ತೀರಿ ಮತ್ತು ನೀವು ಯಾವ ಧರ್ಮವನ್ನು ನಂಬುತ್ತೀರಿ ಎಂಬುದು ನಿಮ್ಮ ವೈಯಕ್ತಿಕ ಆಯ್ಕೆಯಾಗಿದೆ. ಅದರ ಮೇಲೆ ದಾಳಿ ಮಾಡುವುದು ಸರಿಯಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಾಗಾಲ್ಯಾಂಡ್ನ ರಸ್ತೆಗಳ ಸ್ಥಿತಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಒಂಬತ್ತು ವರ್ಷಗಳ ಹಿಂದೆ ನಾಗಾಲ್ಯಾಂಡ್ ಮತ್ತು ನಾಗಾ ಜನರಿಗೆ ನೀಡಿದ ಒಂದೇ ಒಂದು ಭರವಸೆಯನ್ನು ನರೇಂದ್ರ ಮೋದಿ ಈಡೇರಿಸಿಲ್ಲ, ನಾಗಾಲ್ಯಾಂಡ್ನ ರಸ್ತೆಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ. ಬಿಜೆಪಿಯ ರಾಜಕೀಯ ಕುತಂತ್ರದಿಂದ ಮಣಿಪುರ ಛಿಧ್ರವಾಗಿದೆ. ದಂಗೆ ಎಬ್ಬಿಸುವ ಮೂಲಕ ಇಡೀ ರಾಜ್ಯವನ್ನೇ ಸುಟ್ಟು ಹಾಕಲಾಯಿತು. ಆದರೆ ಆ ರಾಜ್ಯಕ್ಕೆ ಕಾಲಿಡಲು ಪ್ರಧಾನಿಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ನಾವು ಭಾರತ್ ಜೋಡೋ ಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದೇವೆ. ವಿಭಿನ್ನ ಧರ್ಮಗಳು, ವಿಭಿನ್ನ ಭಾಷೆಗಳು, ವಿಭಿನ್ನ ಸಂಸ್ಕೃತಿಗಳು ಮತ್ತು ವಿಭಿನ್ನ ಆಲೋಚನೆಗಳಿರುವ ಜನರನ್ನು ನಾವು ಒಟ್ಟಿಗೆ ಸೇರಿಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
VIDEO | Bharat Jodo Nyay Yatra: "Last year, we walked from Kanyakumari to Kashmir in the Bharat Jodo Yatra to bring the people of India together – different religions, different languages, different cultures and different ideas, and we brought them together. We thought that we… pic.twitter.com/9WJjM88NTH
— Press Trust of India (@PTI_News) January 17, 2024
ಇದನ್ನು ಓದಿ: ‘ಹಿಂದುತ್ವ ವಾಚ್’ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ!