ಪ್ರಧಾನಿ ಮೋದಿ ಅವರು ಅದಾನಿಗೆ ಸಂಬಂಧಿಸಿದ 16 ಲಕ್ಷ ಕೋಟಿ ರೂಪಾಯಿಗಳನ್ನು ಮನ್ನಾ ಮಾಡಿದ್ದಾರೆ, ಇದು 20 ವರ್ಷಗಳ NREGA ನಿಧಿಗೆ ಸಮಾನವಾಗಿದೆ ಎಂದು ರಾಹುಲ್ ಗಾಂಧಿ ಗ್ವಾಲಿಯರ್ನಲ್ಲಿ ಮೋದಿ ಸರಕಾರದ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯ 50ನೇ ದಿನದಲ್ಲಿ ರಾಹುಲ್ ಗಾಂಧಿ, ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಅಗ್ನಿವೀರರು ಮತ್ತು ಮಾಜಿ ಸೈನಿಕರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಮೊಬೈಲ್, ಲ್ಯಾಪ್ಟಾಪ್ ಇತ್ಯಾದಿಗಳಿಗೆ ಉತ್ತಮ ಬೆಲೆಯನ್ನು ನೀಡುವ ಭರವಸೆಯನ್ನು ಪ್ರಧಾನಿ ನೀಡುತ್ತಾರೆ. ಆದರೆ, ರೈತರು ಕನಿಷ್ಠ ಬೆಂಬಲ ಬೆಲೆಯನ್ನು ಕೇಳಿದಾಗ, ಮೋದಿ ರಸ್ತೆ ತಡೆಗಳನ್ನು ಮಾಡುತ್ತಾರೆ ಮತ್ತು ಪೊಲೀಸ್ ಬಲವನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ.
ಕೆಲವು ಕೋಟ್ಯಾಧಿಪತಿ ಕಾರ್ಪೊರೇಟ್ಗಳ ಕೈಯಲ್ಲಿ ಮಾದ್ಯಮಗಳಿದೆ. ನೀವು ಮಾದ್ಯಮ ಮಾಲಕರು ಮತ್ತು ಕಾರ್ಪೊರೇಟ್ ಜನರ ಪಟ್ಟಿಯನ್ನು ತೆಗೆದುಕೊಂಡರೆ ನೀವು ಮೇಲ್ವರ್ಗದವರನ್ನು ಮಾತ್ರ ನೋಡುತ್ತೀರಿ, ಆದರೆ ರಸ್ತೆ ಮಾಡುವವರು, ನಿರ್ಮಾಣ ಕಾರ್ಮಿಕರ ಪಟ್ಟಿಯನ್ನು ತೆಗೆದುಕೊಂಡು ಅವರು ಯಾವ ಜಾತಿಯವರು ಎಂದು ಕೇಳುತ್ತೇನೆ ಎಂದು ರಾಹುಲ್ ಗ್ವಾಲಿಯರ್ನಲ್ಲಿ ಹೇಳಿದ್ದಾರೆ.
ಆರ್ಥಿಕ, ಸಾಮಾಜಿಕ ಅನ್ಯಾಯ ದ್ವೇಷವನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ನಾವು ನಮ್ಮ ಯಾತ್ರೆಯಲ್ಲಿ ನ್ಯಾಯವನ್ನು ಸೇರಿಸಿದ್ದೇವೆ. ನಿರುದ್ಯೋಗವು 40 ವರ್ಷಗಳ ನಂತರ ಅತ್ಯಧಿಕವಾಗಿದೆ, ಇದು ಭೂತಾನ್ ಮತ್ತು ಬಾಂಗ್ಲಾದೇಶಕ್ಕಿಂತ ಹೆಚ್ಚಾಗಿದೆ. ದಲಿತರು, ಒಬಿಸಿಗಳು, ಆದಿವಾಸಿಗಳು ಶೇ.73ರಷ್ಟಿದ್ದು, ವಿವಿಧ ಕ್ಷೇತ್ರಗಳಲ್ಲಿ ಅವರ ಪ್ರಾತಿನಿಧ್ಯವನ್ನು ನೋಡಿದಾಗ ಸಾಮಾಜಿಕ ಅನ್ಯಾಯ ಗೋಚರವಾಗುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಯವರು ಭಾರತ್ ಮಾತೆಯ ಬಗ್ಗೆ ಮಾತನಾಡುತ್ತಾರೆ, ಆದರೆ ಭಾರತ್ ಮಾತಾ ಯಾರು? 73ರಷ್ಟು ಹಿಂದುಳಿದ ಜಾತಿಗಳು ಪ್ರಾತಿನಿಧ್ಯವನ್ನು ಪಡೆಯಬೇಕು ಮತ್ತು ಈ ಬಗ್ಗೆ ನಿಮಗೆ ಅರಿವು ಅತಿಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪ್ರತಿಪಕ್ಷ ಇಂಡಿಯಾ ಬಣದ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿರುವುದರಿಂದ ಭಾನುವಾರ ಯಾತ್ರೆ ಇರುವುದಿಲ್ಲ. ಪ್ರತಿಪಕ್ಷಗಳ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಗಾಂಧಿ ಪಾಟ್ನಾಗೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಮಾಧ್ಯಮ ಘಟಕದ ಮುಖ್ಯಸ್ಥ ಕೆಕೆ ಮಿಶ್ರಾ ತಿಳಿಸಿದ್ದರು. ಸೋಮವಾರ ಮಧ್ಯಪ್ರದೇಶದಲ್ಲಿ ಯಾತ್ರೆ ಪುನರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಮಣಿಪುರದಿಂದ ಆರಂಭವಾಗಿದ್ದು 15 ರಾಜ್ಯಗಳ ಮೂಲಕ 6,700 ಕಿಲೋಮೀಟರ್ಗಳಷ್ಟು ಸಾಗಿ ಮುಂಬೈನಲ್ಲಿ ಸಮಾಪ್ತಿಯಾಗಲಿದೆ.
ಇದನ್ನು ಓದಿ: 33 ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕಿದ ಬಿಜೆಪಿ