Homeಮುಖಪುಟಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

- Advertisement -
- Advertisement -

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.

‘ಜುಂಜುನು ಎಕ್ಸ್‌ಪ್ರೆಸ್’ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ನವೀನ್ ಚೌಧರಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ಪೇಜ್‌ ಅನ್ನು ಚೌಧರಿ ಸ್ಥಳೀಯ ಸಮಸ್ಯೆಗಳ ಬಗ್ಗೆ ವಿಡಿಯೋ ಹಂಚಿಕೊಳ್ಳಲು ಬಳಸುತ್ತಿದ್ದಾರೆ. ಚೌಧರಿ ಹಂಚಿಕೊಂಡ ವಿಡಿಯೋದಲ್ಲಿ, ಜುಂಜುನು ಜಿಲ್ಲೆಯ ಮೈದಾನವೊಂದರ ಒಂದು ಬದಿಯಲ್ಲಿ ಕೆಲ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ನಿರತರಾಗಿದ್ದ ಮತ್ತು ಮತ್ತೊಂದು ಬದಿಯಲ್ಲಿ ಇನ್ನೊಂದು ಗುಂಪಿನ ಮಕ್ಕಳು ಆರ್‌ಎಸ್ಎಸ್ ತರಬೇತಿಯಲ್ಲಿ ತೊಡಗಿದ್ದ ದೃಶ್ಯವಿತ್ತು.

ವಿಡಿಯೋದಲ್ಲಿ, “ನೋಡಿ ನಾನು ಇಂದು ನಿಮಗೆ ಏನು ತೋರಿಸಲಿದ್ದೇನೆ ಎಂದರೆ… ನೀವು ಈ ಎರಡು ಮಕ್ಕಳ ಗುಂಪುಗಳನ್ನು ನೋಡಬಹುದು. ಇವರಿಬ್ಬರ ಭವಿಷ್ಯವೂ ಒಂದು ಖಾಲಿ ಪುಟದ ತರಹ ಇದೆ. ಆದರೆ ಇವರ ನಡುವೆ ಇರುವ ವ್ಯತ್ಯಾಸವೇನು ಗೊತ್ತಾ? ಈ ಎರಡು ಗುಂಪುಗಳಲ್ಲಿ ಒಂದು ಗುಂಪಿಗೆ ಮೈದಾನದಲ್ಲಿ ಬೆವರು ಹರಿಸಲು, ದೇಶಕ್ಕಾಗಿ ಪದಕಗಳನ್ನು ತರಲು ಮತ್ತು ನಮ್ಮ ತ್ರಿವರ್ಣ ಧ್ವಜವು ಹೆಮ್ಮೆ ಪಡುವಂತೆ ಮಾಡಲು ಕಲಿಸಲಾಗುತ್ತಿದೆ” ಎಂದು ಚೌಧರಿ ಹಿಂದಿಯಲ್ಲಿ ಹೇಳಿದ್ದರು.

ಮುಂದುವರಿದು, “ಮತ್ತೊಂದು ಬದಿಯಲ್ಲಿ, ಅದೇ ಸಮಯದಲ್ಲಿ ಮುಗ್ಧ ಮಕ್ಕಳಲ್ಲಿ ಧರ್ಮ ಮತ್ತು ದ್ವೇಷದ ಬೀಜವನ್ನು ಬಿತ್ತಲಾಗುತ್ತಿದೆ. ಅವರಿಗೆ ತಮ್ಮ ತಮ್ಮಲ್ಲೇ ಹೋರಾಡುವುದನ್ನು ಕಲಿಸಲಾಗುತ್ತಿದೆ. ಈಗ ನೀವೇ ಯೋಚಿಸಿ, ಮೈದಾನದಲ್ಲಿ ಬೆವರು ಹರಿಸುತ್ತಿರುವ ಮಗು ದೇಶವನ್ನು ಮುನ್ನಡೆಸುತ್ತದೆ. ಆದರೆ ಯಾರಲ್ಲಿ ದ್ವೇಷದ ಬೀಜ ಬಿತ್ತಲಾಗುತ್ತಿದೆಯೋ, ಆ ಮಗು ಭವಿಷ್ಯದಲ್ಲಿ ದೇಶಕ್ಕಾಗಿ ಏನು ಮಾಡುತ್ತದೆ?” ಎಂದಿದ್ದರು.

“ಅವರು ನನ್ನನ್ನು ಯಾರೋ ಭಯೋತ್ಪಾದಕನಂತೆ ಕಾರಿನೊಳಗೆ ಎಳೆದುಕೊಂಡು ಹೋಗಿ, ನನ್ನ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು”

ಚೌಧರಿ ಜೂನ್ 20ರ ಸಂಜೆ ವಿಡಿಯೋ ಪೋಸ್ಟ್ ಮಾಡಿದ್ದರು. ಮರುದಿನ, ಅಂದರೆ ಜೂನ್ 21ರ ಮುಂಜಾನೆ ಅವರ ಮನೆಗೆ ಬಂದ ರಾಜಸ್ಥಾನ ಪೊಲೀಸರು, ಅವರನ್ನು ಜುಂಜುನು ಕೊತ್ವಾಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

“ಭಾನುವಾರ (ಜೂ 21) ಮುಂಜಾನೆ ವಿಡಿಯೋ ಡಿಲೀಟ್ ಮಾಡುವಂತೆ ಆರ್‌ಎಸ್ಎಸ್ ಮತ್ತು ಪೊಲೀಸರಿಗೆ ಸಂಬಂಧಿಸಿದ ಜನರಿಂದ ನನಗೆ ಬೆದರಿಕೆ ಕರೆಗಳು ಬರಲು ಪ್ರಾರಂಭವಾದವು. ನಂತರ, ಪೊಲೀಸರು ನಾಲ್ಕರಿಂದ ಐದು ಕಾರುಗಳೊಂದಿಗೆ ನನ್ನ ಮನೆಗೆ ಬಂದರು. ಅವರು ನನ್ನನ್ನು ಯಾರೋ ಭಯೋತ್ಪಾದಕನಂತೆ ಕಾರಿನೊಳಗೆ ಎಳೆದುಕೊಂಡು ಹೋಗಿ, ಕೊತ್ವಾಲಿ ಪೊಲೀಸ್ ಠಾಣೆಗೆ ಹೋಗುವ ದಾರಿಯುದ್ದಕ್ಕೂ ನನ್ನ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು. ನಿಜ ಹೇಳಬೇಕೆಂದರೆ ಪೊಲೀಸರು ನನ್ನನ್ನು ಅಪಹರಿಸಿದ್ದರು” ಎಂದು ಚೌಧರಿ ಜೂನ್ 22ರಂದು ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.

“ಠಾಣೆಯಲ್ಲಿ ನನಗೆ ಗುರುತಿಸಲು ಸಾಧ್ಯವಾಗದ ಪೊಲೀಸ್ ಅಧಿಕಾರಿಯೊಬ್ಬರು ಹೀಗೆ ಹೇಳಿದರು, ‘ನೀನು ಯಾವ ಭ್ರಮೆಯಲ್ಲಿದ್ದೀಯಾ? ನಿಮ್ಮಂತಹ ಸೊಳ್ಳೆ-ನೊಣಗಳು ಹೀಗೆ ಮಾಡುತ್ತಲೇ ಇರುತ್ತವೆ, ನಾವು ಒಂದು ದಿನ ಈ ದೇಶದಲ್ಲಿ ಕೇಸರಿ ಧ್ವಜವನ್ನು ಹಾರಿಸಿಯೇ ತೀರುತ್ತೇವೆ” ಎಂದು ಚೌಧರಿ ಆರೋಪಿಸಿದ್ದಾರೆ.

“ನನ್ನನ್ನು ಒಂದು ಸಣ್ಣ ಕೋಣೆಯಲ್ಲಿ ಇಡಲಾಗಿತ್ತು, ಫೋನ್ ವಶಪಡಿಸಿಕೊಳ್ಳಲಾಗಿತ್ತು ಮತ್ತು ಸಂಜೆಯವರೆಗೆ ಯಾರೊಂದಿಗೂ ಮಾತನಾಡಲು ಅಥವಾ ಸಹಾಯ ಕೇಳಲು ಅವಕಾಶ ನೀಡಲಿಲ್ಲ ಎಂದು ಚೌಧರಿ ಹೇಳಿದ್ದಾಗಿ ‘ದಿ ವೈರ್’ ವರದಿ ವಿವರಿಸಿದೆ.

“ಸಂಜೆಯ ವೇಳೆಗೆ ನಾನು ಹೇಗೋ ಒಂದು ಫೋನ್ ಪಡೆದು ಸಹಾಯಕ್ಕಾಗಿ ಕರೆ ಮಾಡುವಲ್ಲಿ ಯಶಸ್ವಿಯಾದೆ. ನನಗೆ ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಸಮಸ್ಯೆ ಇರುವುದರಿಂದ ಅನಾರೋಗ್ಯದ ಭಾವನೆ ಉಂಟಾಗಿತ್ತು. ನನ್ನನ್ನು ಬಂಧಿಸಲು ಅವರಿಗೆ ಯಾವುದೇ ಕಾರಣ ಸಿಗದಿದ್ದಾಗ ಸಂಜೆಯ ವೇಳೆಗೆ ಮುಂಜಾಗ್ರತಾ ಕಸ್ಟಡಿಗೆ ತೆಗೆದುಕೊಂಡರು. ಅವರು ನನ್ನಿಂದ ದಾಖಲೆಗಳಿಗೆ ಸಹಿ ಹಾಕಿಸಿಕೊಂಡರು ಮತ್ತು ನಾನು ಆ ರಾತ್ರಿಯನ್ನು ಪೊಲೀಸ್ ಠಾಣೆಯಲ್ಲೇ ಕಳೆಯಬೇಕಾಯಿತು. ಇಂದು ನನಗೆ ಜಾಮೀನು ಸಿಕ್ಕಿದೆ” ಎಂದು ಚೌಧರಿ ಹೇಳಿದ್ದಾಗಿ ಎಂದು ವರದಿ ಉಲ್ಲೇಖಿಸಿದೆ.

‘ಒಬ್ಬ ವ್ಯಕ್ತಿ ಇಂತಹ ವಿಷಯವನ್ನು ಪೋಸ್ಟ್ ಮಾಡಿದರೆ ಸಮಾಜದಲ್ಲಿ ದ್ವೇಷ ಹರಡುತ್ತದೆ’

ಈ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಜುಂಜುನು ಕೊತ್ವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶ್ರವಣ್ ಕುಮಾರ್ ಮೀಲ್ ಅವರನ್ನು ನಾವು ಸಂಪರ್ಕಿಸಿದ್ದೆವು. ಈ ವೇಳೆ ಚೌಧರಿ ಮೇಲೆ ಹಲ್ಲೆ ನಡೆಸಿರುವುದನ್ನು ಅವರು ನಿರಾಕರಿಸಿದ್ದಾರೆ ಎಂದು ದಿ ವೈರ್ ವರದಿ ಉಲ್ಲೇಖಿಸಿದೆ.

ಶಾಂತಿ ಕದಡಿದ ಆರೋಪದ ಮೇಲೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 170 ರ ಅಡಿಯಲ್ಲಿ ಚೌಧರಿ ಅವರನ್ನು ಮುಂಜಾಗ್ರತಾ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಎಚ್‌ಒ ಮೀಲ್ ತಿಳಿಸಿದ್ದಾರೆ. ಪೋಸ್ಟ್ ಯಾರ ವಿರುದ್ಧವಾಗಿದೆ ಎಂಬುದಕ್ಕಿಂತ ಸಮಾಜದಲ್ಲಿ ಹಗೆತನ ತಡೆಯುವುದು ತಮ್ಮ ಆದ್ಯತೆಯಾಗಿದ್ದು, ಹಲ್ಲೆ ಆರೋಪಗಳು ಸುಳ್ಳು ಎಂದು ಅವರು ಹೇಳಿದ್ದಾರೆ.

ಚೌಧರಿ ಅವರ ಪೋಸ್ಟ್‌ ವಿರುದ್ಧ ದೂರು ನೀಡಿದ ಜನರಿಂದ ಪೊಲೀಸರಿಗೆ ಹಲವಾರು ಫೋನ್ ಕರೆಗಳು ಬಂದಿದ್ದವು. ಚೌಧರಿ ಅವರನ್ನು ಇಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮೀಲ್ ಸೋಮವಾರ ತಿಳಿಸಿದ್ದಾಗಿ ದಿ ವೈರ್ ಉಲ್ಲೇಖಿಸಿದೆ.

ಬೆಂಬಲಕ್ಕೆ ನಿಂತ ಕಾಂಗ್ರೆಸ್

ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

“ಆರ್‌ಎಸ್‌ಎಸ್‌ನ ನಿಜವಾದ ಮುಖವನ್ನು ಬಯಲು ಮಾಡುವ ಈ ವಿಡಿಯೋ ಪೋಸ್ಟ್ ಮಾಡುವುದು ಅಪರಾಧವಾಗಿದ್ದರೆ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಈ ಅಪರಾಧವನ್ನು ಪದೇ ಪದೇ ಮಾಡುತ್ತಾನೆ. ದ್ವೇಷ ಮತ್ತು ವಿಭಜನೆಯ ನಡುವೆ ಕ್ರೀಡೆ ಹಾಗೂ ರಾಷ್ಟ್ರ ನಿರ್ಮಾಣದ ಬಗ್ಗೆ ಮಾತನಾಡುವುದು ಅಪರಾಧವಾಗಿದ್ದರೆ, ನಾವು ಈ ಅಪರಾಧವನ್ನು ಪದೇ ಪದೇ ಮಾಡುತ್ತೇವೆ” ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಅವರು ಜೂನ್ 21ರಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಜೊತೆಗೆ ಚೌಧರಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಿಂದ ಪೋಸ್ಟ್ ಮಾಡಿದ್ದ ವಿಡಿಯೋವನ್ನು ಸಹ ಹಂಚಿಕೊಂಡಿದ್ದರು.

ಜೂನ್ 22ರಂದು ಚೌಧರಿ ಬಿಡುಗಡೆಯಾದ ಬಳಿಕ ಅವರನ್ನು ಭೇಟಿಯಾದ ದೋತಾಸ್ರಾ, “ನವೀನ್ ಅವರ ಧೈರ್ಯ, ಭಯ ಮತ್ತು ದೌರ್ಜನ್ಯದ ನಡುವೆಯೂ ಸತ್ಯವನ್ನು ಮಾತನಾಡುವ ಧೈರ್ಯ ಹೊಂದಿರುವ ಎಲ್ಲಾ ಯುವಕರಿಗೆ ಒಂದು ಸ್ಫೂರ್ತಿಯಾಗಿದೆ. ಎಷ್ಟು ದಮನ ಮಾಡುತ್ತಾರೋ ಆರ್‌ಎಸ್‌ಎಸ್ ಮತ್ತು ಅದರ ದ್ವೇಷದ ನಿಜವಾದ ವಾಸ್ತವಕ್ಕೆ ಅಷ್ಟೇ ಬಲವಾದ ಪ್ರತಿಕ್ರಿಯೆ ಸಿಗುತ್ತದೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ಬೆದರಿಕೆಗಳ ಹೊರತಾಗಿಯೂ, ನಾನು ನನ್ನ ಪೇಜ್ ಮೂಲಕ ಸಾರ್ವಜನಿಕ ಹಿತಾಸಕ್ತಿಯ ಸ್ಥಳೀಯ ಸಮಸ್ಯೆಗಳನ್ನು ಎತ್ತುತ್ತಲೇ ಇರುತ್ತೇನೆ” ಎಂದು ಚೌಧರಿ ಹೇಳಿದ್ದಾರೆ.

“ಇದು ಪ್ರಜಾಪ್ರಭುತ್ವದ ಕೊಲೆ. ಯಾರು ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಪ್ರಶ್ನಿಸುತ್ತಾರೋ, ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಯಾರಾದರೂ ತಮ್ಮನ್ನು ಪ್ರಶ್ನಿಸಿದರೆ ಅವರ ಗತಿಯೂ ನನ್ನಂತೆಯೇ ಆಗುತ್ತದೆ ಎಂಬ ಸಂದೇಶವನ್ನು ಅವರು ನೀಡಲು ಬಯಸುತ್ತಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇಶದ ಕೋಮು ಸೌಹಾರ್ದತೆಯನ್ನು ಹಾಳುಮಾಡಲು ಬಯಸುತ್ತಿವೆ ಮತ್ತು ಅದಕ್ಕಾಗಿಯೇ ನಾನು ಆ ವಿಡಿಯೋವನ್ನು ಪೋಸ್ಟ್ ಮಾಡಿದ್ದೆ” ಎಂದು ಚೌಧರಿ ಹೇಳಿರುವುದಾಗಿ ‘ದಿ ವೈರ್’ ವರದಿ ತಿಳಿಸಿದೆ.

Courtesy : thewire.in



















ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...