ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ರೂಪಂಗಢ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ 25 ವರ್ಷದ ದಲಿತ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜಕೀಯ ಒತ್ತಡದಿಂದ ಪೊಲೀಸರು ತನ್ನ ದೂರಿನ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ‘ಡೆತ್ ನೋಟ್’ ಬರೆದಿದ್ದಾನೆ.
ಮೃತರನ್ನು ಓಂಪ್ರಕಾಶ್ ರಾಯಗಾರ್ ಎಂದು ಗುರುತಿಸಲಾಗಿದೆ. ರಾಯಗಾರ್ ಅವರ ಡೆತ್ನೋಟ್ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ತಮ್ಮ ದೈಹಿಕ ವಿಕಲಚೇತನ ತಂದೆಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ರೂಪಂಗಢ ಪೊಲೀಸರು ಮತ್ತು ಪ್ರಭಾವಿ ಸಮುದಾಯದ ಸ್ಥಳೀಯರೊಬ್ಬರು ಪ್ರಕರಣದ ವರದಿಯನ್ನು ದುರ್ಬಲಗೊಳಿಸಿದರು, ರಾಜಕೀಯ ಒತ್ತಡವನ್ನು ಸೃಷ್ಟಿಸಿದರು ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನನ್ನ ತಂದೆ ನಾರಾಯಣ್ ರಾಯಗಾರ್ ಅವರು ದೀಪಾವಳಿಯಂದು ನಮ್ಮ ಹೊಲದಲ್ಲಿ ಚೌಳೆಕಾಯಿ ಮತ್ತು ಸಜ್ಜೆ ಸಂಗ್ರಹಿಸುತ್ತಿದ್ದರು. ಆಗ ಕಿಷ್ಣರಾಮ್ ಗುರ್ಜರ್ ಎಂಬ ವ್ಯಕ್ತಿ ಮತ್ತು ಅವರ ಇಬ್ಬರು ಸೋದರಳಿಯರಾದ ಕನರಾಮ್, ನಂದರಾಮ್ ಅವರು ತಮ್ಮ ದನಗಳನ್ನು ಮೇಯಿಸಲು ಹೊಲಕ್ಕೆ ಬಂದರು. ನಮ್ಮ ತಂದೆ ವಿರೋಧಿಸಿದಾಗ ಹಲ್ಲೆ ನಡೆಸಿದರು” ಎಂದು ರಾಯಗಾರ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
“ನನ್ನ ತಂದೆ ಹೇಗೋ ಅವರಿಂದ ತಪ್ಪಿಸಿಕೊಂಡು ಊರಿನ ಕಡೆಗೆ ಓಡಿಬಂದರು. ಅವರು ನನಗೆ ಮತ್ತು ನನ್ನ ತಾಯಿಗೆ ಘಟನೆಯನ್ನು ವಿವರಿಸಿದರು. ನಾವು ಹೊಲದತ್ತ ಹೋದಾಗ, ಅವರು ನಮ್ಮನ್ನು ಸುತ್ತುವರೆದು ಜಾತಿ ನಿಂದನೆ ಮಾಡಿ ಅವಮಾನಿಸಿದರು. ಅವರು ನಮ್ಮೊಂದಿಗೆ ಪ್ರತಿ ವರ್ಷವೂ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ನಾವು ಬೆಳೆಯನ್ನು ಬೆಳೆಯುವಾಗ ನಮಗೆ ತೊಂದರೆ ನೀಡಲು ತಮ್ಮ ಕುರಿ ಮತ್ತು ಮೇಕೆಗಳನ್ನು ಹೊಲದಲ್ಲಿ ಬಿಡುತ್ತಾರೆ” ಎಂದು ರಾಯಗಾರ್ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಸಂಕಟ ವ್ಯಕ್ತಪಡಿಸಿದ್ದಾರೆ.
Omprakash Raigar, a resident of village-nosal Rupangarh Ajmer, committed suicide after being tortured by the feudalists and the police. It is not a suicide, it is a murder, this incident happened due to the police not taking action and the police collusion with the feudalists. pic.twitter.com/fRCRK3r21Q
— Gareeb Mohmmad somana (@GAREEBMOHMADASP) November 1, 2022
ಅವರು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದರು. ರಾಯಗಾರ್ ಕುಟುಂಬದ ವಿವರಗಳನ್ನು ಕೇಳುತ್ತಿದ್ದ ಅಧಿಕಾರಿಗೆ ಪ್ರಕರಣವನ್ನು ದಾಖಲಿಸಬೇಡಿ ಎಂಬ ಸೂಚನೆಯೊಂದು ಕರೆಯ ಮೂಲಕ ಬಂದು. ರಾಯಗಾರ್ ಅವರ ಕುಟುಂಬವನ್ನು ವೈದ್ಯಕೀಯ ಪರೀಕ್ಷೆ ಮಾಡಿದ ನಂತರ ಮನೆಗೆ ಕಳುಹಿಸಲಾಯಿತು. ಮರುದಿನ ಬರುವಂತೆ ಪೊಲೀಸರು ಹೇಳಿದ್ದರು.
“ನಾವು ಮರುದಿನ ಹೋದಾಗ, ಮತ್ತೆ ಮರುದಿನ ಬರಲು ಹೇಳಲಾಯಿತು. ನಾಳೆ ಬನ್ನಿ ಎಂದು ಹೇಳುವ ಮೂಲಕ ಪೊಲೀಸರು ವಿಳಂಬ ಮಾಡಿದರು. ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಪೊಲೀಸರಿಗೆ ಹೇಳಿದಾಗ ಅವರು ಎಫ್ಐಆರ್ ದಾಖಲಿಸಿದರು. ಆದರೆ ಪ್ರಕರಣವನ್ನು ದುರ್ಬಲಗೊಳಿಸಿದರು” ಎಂದು ಆತ್ಮಹತ್ಯೆ ಪತ್ರದಲ್ಲಿ ದೂರಲಾಗಿದೆ.
“…ನಮ್ಮ ಗ್ರಾಮದ ಮಾಜಿ ಸರಪಂಚ್ ರಂಜಿತ್ ಸಿಂಗ್ ರಾಥೋಡ್ ಮತ್ತು ಠಾಣಾಧಿಕಾರಿ ಅಯೂಬ್ ಖಾನ್ ಅವರು ನನ್ನ ಕಿರಿಯ ಸಹೋದರ ರಾಹುಲ್ ಮತ್ತು ನನ್ನ ಚಿಕ್ಕಪ್ಪ ಜುಗಲ್ಕಿಶೋರ್ ವಿರುದ್ಧ ನಕಲಿ ಎಫ್ಐಆರ್ ದಾಖಲಿಸಿದ್ದಾರೆ. ಇದುವರೆಗೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ರಾಯಗಾರ್ ತಿಳಿಸಿದ್ದಾರೆ.
“ತಂದೆ-ತಾಯಿಯ ಆತ್ಮಗೌರವವನ್ನು ಉಳಿಸಲಾಗಲಿಲ್ಲ. ಸಂವಿಧಾನವನ್ನು ಓದಿ ಅರ್ಥ ಮಾಡಿಕೊಂಡಿದ್ದೇನೆ. ಈ ವ್ಯವಸ್ಥೆಯಿಂದ ಏನೂ ಮಾಡಲಾಗಲಿಲ್ಲ. ಮಾಜಿ ಸರಪಂಚ್ಗೆ ರಾಜಕೀಯ ಶಕ್ತಿ ಇದೆ. ನಾನು ನೋಡುತ್ತಲೇ ಇದ್ದೆ. ಯಾವಾಗ ನಾನು ಕಾನೂನಿನ ಸಹಾಯವನ್ನು ಪಡೆಯಲು ಪ್ರಯತ್ನಿಸಿದೆನೋ, ಅವರು ನಮ್ಮ ವಿರುದ್ಧ ನಕಲಿ ಪ್ರಕರಣವನ್ನು ದಾಖಲಿಸಿದ್ದಾರೆ” ಎಂದು ವಿವರಿಸಿದ್ದಾರೆ.
ತಾನು ಇಡುತ್ತಿರುವ ಹೆಜ್ಜೆಯನ್ನು “ತಪ್ಪು” ಎಂದು ಕರೆದುಕೊಂಡಿರುವ ರಾಯಗಾರ್ ತನ್ನ ತಾಯಿಯಲ್ಲಿ ಕ್ಷಮೆಯಾಚಿಸಿದ್ದಾರೆ. ತಪ್ಪಿತಸ್ಥರನ್ನು ಸುಮ್ಮನೆ ಬಿಡದಂತೆ ಸಹೋದರಿ ನೀತೂ ಅವರಿಗೆ ಕೋರಿರುವ ರಾಯಗರ್, “… ಪಿತೂರಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಿ, ಎಲ್ಲವನ್ನೂ ಮಾರಾಟ ಮಾಡಿದರೂ ಸರಿ ಯಾರನ್ನೂ ಬಿಡಬೇಡಿ” ಎಂದು ಮನನೊಂದು ನುಡಿದಿದ್ದಾರೆ.
ಬುಧವಾರ ದಲಿತ ಜನ ಸಮೂಹವು ರಾಯಗಾರ್ ಅವರ ಕುಟುಂಬದ ಜೊತೆಗೂಡಿ ಸಮುದಾಯ ವೈದ್ಯಕೀಯ ಕೇಂದ್ರದ ಹೊರಗೆ ಧರಣಿ ನಡೆಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಿತು. ನ್ಯಾಯ ಸಿಗುವವರೆಗೂ ಶವವನ್ನು ತೆಗೆದುಕೊಳ್ಳಲು ನಿರಾಕರಿಸಲಾಯಿತು. ಭೀಮ್ ಆರ್ಮಿಯ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಕೂಡ ರೂಪಂಗಢಕ್ಕೆ ಬಂದು ಸೇರಿಕೊಂಡರು.
ರಾಯಗಾರ್ ಅವರ ಮನೆಗೆ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ ಗೋಪಾಲ್ಗಢ ಶಾಸಕ ಪುಖ್ರಾಜ್ ಗರ್ಗ್ ಭೇಟಿ ನೀಡಿದರು. ಮೃತರ ಸಂಬಂಧಿಕರಿಗೆ ಪರಿಹಾರ, ಸರ್ಕಾರಿ ನೌಕರಿ ಹಾಗೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಾಲ್ಕು ಪೊಲೀಸ್ ಠಾಣೆಗಳಿಂದ ಪೊಲೀಸ್ ತಂಡಗಳು, ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಶರ್ಮಾ ಸ್ಥಳಕ್ಕೆ ಆಗಮಿಸಿ ದಲಿತ ಸಮುದಾಯವನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಪೊಲೀಸರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ ನಂತರ, ಶವಪರೀಕ್ಷೆಗೆ ಕುಟುಂಬ ಒಪ್ಪಿದೆ.
ಇದನ್ನೂ ಓದಿರಿ: ದಲಿತರ ಮದುವೆಗೆ ಕಲ್ಯಾಣ ಮಂಟಪ ನೀಡದೆ ಅಸ್ಪೃಶ್ಯತೆ ಆಚರಣೆ: ದೂರು – ಪ್ರತಿಭಟನೆ
ಸಂತ್ರಸ್ತೆಯ ಕುಟುಂಬದವರ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಎಸ್ಪಿ ಮನೀಶ್ ಶರ್ಮಾ ತಿಳಿಸಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಇತರ ನಾಲ್ವರ ವಿರುದ್ಧ ಆರೋಪ ಮಾಡಲಾಗಿದೆ. “ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಮತ್ತು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ” ಎಂದು ಶರ್ಮಾ ಹೇಳಿದ್ದಾರೆ.
ಭೀಮ್ ಆರ್ಮಿಯ ಚಂದ್ರಶೇಖರ್ ಅವರು ಆಜಾದ್ ಪ್ರಕರಣವನ್ನು ಖಂಡಿಸಿದ್ದು, “ಓಂಪ್ರಕಾಶ್ ರಾಯಗಾರ್ ನಿಧನರಾಗಿ ಮೂರು ದಿನಗಳು ಕಳೆದರೂ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ” ಎಂದು ಎಚ್ಚರಿಸಿದ್ದಾರೆ.
अजमेर जिले के गांव नोसल में घटित हुई शर्मनाक घटना, जिसमे सामंती तत्वों और पुलिस प्रशासन द्वारा प्रताड़ित किये के जाने के बाद, भाई ओम प्रकाश रैगर ने कल आत्महत्या कर ली थी, इस घटना में पुलिस और रसूखदार लोगों के शामिल होने के कारण इसकी निष्पक्ष जांच के लिए CBI जांच करवाई जाए। pic.twitter.com/sLiQ0Ljx90
— Chandra Shekhar Aazad (@BhimArmyChief) November 2, 2022